ಕಿಚ್ಚ ಸುದೀಪ್ ಆಕ್ಷನ್ ಕಟ್ ನಲ್ಲಿ 'ನನ್ನುಸಿರೆ' ರಾಹುಲ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ 'ರನ್ನ' ಚಿತ್ರ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಅಭಿಮಾನಿಗಳು ಈ ಚಿತ್ರವನ್ನು ನಿರೀಕ್ಷಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕಿಚ್ಚ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿರುವ ಸುದ್ದಿ ಗಾಂಧಿನಗರದಿಂದ ಬಂದಿದೆ.
ಈ ಬಾರಿ ಅವರು ತಾವೇ ಆಕ್ಷನ್ ಕಟ್ ಹೇಳಲಿದ್ದು, 'ನನ್ನುಸಿರೆ' ಖ್ಯಾತಿಯ ರಾಹುಲ್ ರನ್ನು ನಾಯಕ ನಟನನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ತಮಿಳಿನ ಸೂಪರ್ ಡೂಪರ್ ಹಿಟ್ ಚಿತ್ರ 'ಜಿಗರ್ ಥಂಡಾ' ಚಿತ್ರವನ್ನು ಕನ್ನಡಕ್ಕೆ ರೀಮೇಕ್ ಮಾಡಲಿದ್ದಾರೆ ಸುದೀಪ್. [ಕಿಚ್ಚ 'ರನ್ನ' 7ಕ್ಕೆ ಇಲ್ಲ 14ಕ್ಕೂ ಡೌಟು, ಏನು ಕಾರಣ?]

'ಮಾಣಿಕ್ಯ' ರೀಮೇಕ್ ಬಳಿಕ ಸುದೀಪ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ. ಸಿದ್ಧಾರ್ಥ, ಲಕ್ಷ್ಮಿ ಮೆನನ್, ಬಾಬ್ಬಿ ಸಿಂಹ, ನಾಸಿರ್ ಮುಂತಾದ ಕಲಾವಿದರು ಮುಖ್ಯಭೂಮಿಕೆಯಲ್ಲಿದ್ದ 'ಜಿಗರ್ ಥಂಡಾ' ಚಿತ್ರ ಎಲ್ಲರ ಮೆಚ್ಚುಗೆ ಪಾತ್ರವಾಗಿದ್ದು, ಬರೋಬ್ಬರಿ ರು.10 ಕೋಟಿ ಬಜೆಟ್ ಚಿತ್ರ. ಇದೇ ಚಿತ್ರ ತೆಲುಗಿಗೆ 'ಚಿಕ್ಕಡು ದೊರಕಡು' ಎಂದು ಡಬ್ ಆಗಿತ್ತು.
ಮೇ.14ರಂದು ಈ ಚಿತ್ರದ ಕನ್ನಡ ರೀಮೇಕ್ ಅಧಿಕೃತವಾಗಿ ಪ್ರಕಟವಾಗುವ ಸಾಧ್ಯತೆಗಳಿವೆ. ರಾಹುಲ್ ಸಹ ಬ್ರೇಕ್ ಗಾಗಿ ಕಾಯುತ್ತಿದ್ದಾರೆ. ಅದು ಕಿಚ್ಚ ಸುದೀಪ್ ಮೂಲಕ ಬ್ರೇಕ್ ಸಿಕ್ಕಿದರೆ ಅದಕ್ಕಿಂತಲೂ ಖುಷಿ ಅವರಿಗೆ ಇನ್ನೇನು ಬೇಕು.
ರಾಹುಲ್ ಅಭಿನಯಿಸಿದ್ದು ಎರಡು ಮತ್ತೊಂದು ಚಿತ್ರಗಳಲ್ಲಿ, ಆದರೆ ಎಲ್ಲೂ ಬ್ರೇಕ್ ಸಿಗಲಿಲ್ಲ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಕಿಚ್ಚನ ಕರ್ನಾಟಕ ಬುಲ್ಡೋಜರ್ಸ್ ತಂಡಲ್ಲಿ ಆಲ್ ರೌಂಡ್ ಆಟ ಆಡಿ ಎಲ್ಲರ ಗಮನಸೆಳೆದವರು. ಇದೀಗ ಮತ್ತೆ ಫಾರ್ಮ್ ಗೆ ಮರಳುವ ಸಿದ್ಧತೆಯಲ್ಲಿದ್ದಾರೆ.
ಇನ್ನು ಚಿತ್ರದ ಪಾತ್ರವರ್ಗದಲಿ ಯಾರೆಲ್ಲಾ ಇರುತ್ತಾರೆ, ನಾಯಕಿ ಯಾರು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಲಿದೆ. 'ರನ್ನ' ಚಿತ್ರದ ಕೊನೆಯ ಕ್ಷಣದ ಕೆಲಸಗಳು ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದ್ದೇನೆ ಎಂದು ಕಿಚ್ಚ ಟ್ವೀಟಿಸಿದ್ದಾರೆ. (ಏಜೆನ್ಸೀಸ್)


Click it and Unblock the Notifications











