ಭಾರತ ಕ್ರಿಕೆಟ್ ತಂಡ ಬೆಂಬಲಿಸಲು ಬಂದ ಕಿಚ್ಚ ಸುದೀಪ್
ಕಿಚ್ಚ ಸುದೀಪ್ ಕೇವಲ ನಟ ಮಾತ್ರವೇ ಅಲ್ಲ ಅವರದ್ದು ಬಹುಮುಖ ಪ್ರತಿಭೆ. ಸಿನಿಮಾ ಜೊತೆಗೆ ಕ್ರಿಕೆಟ್, ಬರವಣಿಗೆ, ಹಾಡುಗಾರಿಕೆ, ನಿರೂಪಣೆ, ಸಮಾಜ ಸೇವೆ ಹೀಗೆ ಅವರ ಆಸಕ್ತಿ ಹಲವು.
ಸುದೀಪ್ ಅವರ ಬಹು ಮೆಚ್ಚಿನ ಹವ್ಯಾಸವೆಂದರೆ ಕ್ರಿಕೆಟ್. ಸ್ವತಃ ಒಳ್ಳೆಯ ಕ್ರಿಕೆಟ್ ಆಟಗಾರರೂ ಆಗಿರುವ ಸುದೀಪ್, ಸಿನಿಮಾ ಸಂಬಂಧಿ ಕ್ರಿಕೆಟ್ ಟೂರ್ನಿಗಳಲ್ಲಿ ಕರ್ನಾಟಕ ತಂಡವನ್ನು ಹಲವು ಬಾರಿ ಮುನ್ನಡೆಸಿದ್ದಾರೆ, ಹಲವು ಪಂದ್ಯಗಳನ್ನು ಗೆದ್ದಿದ್ದಾರೆ ಸಹ.
ತಾವು ಕ್ರಿಕೆಟ್ ಆಡುವುದು ಮಾತ್ರವೇ ಅಲ್ಲದೆ ಕ್ರಿಕೆಟ್ ವೀಕ್ಷಣೆಯೂ ಸುದೀಪ್ರ ಮೆಚ್ಚಿನ ಹವ್ಯಾಸ. ಕಳೆದ ವರ್ಷ ದುಬೈಗೆ ಹೋಗಿ ಐಪಿಎಲ್ ಕ್ರಿಕೆಟ್ ಪಂದ್ಯ ನೋಡಿದ್ದರು ಸುದೀಪ್. ಇದೀಗ ಭಾರತದಲ್ಲಿಯೇ ಶ್ರೀಲಂಕಾ ವಿರುದ್ಧ ಭಾರತೀಯ ಕ್ರಿಕೆಟ್ ತಂಡ ಮ್ಯಾಚ್ ಆಡುತ್ತಿದ್ದು ಇದೀಗ ಮತ್ತೆ ಕ್ರೀಡಾಂಗಣಕ್ಕೆ ಹೋಗಿ ಭಾರತ ಕ್ರಿಕೆಟ್ ತಂಡಕ್ಕೆ ಹುರಿದುಂಬಿಸುತ್ತಿದ್ದಾರೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಿಚ್ಚ ಸುದೀಪ್
ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಕ್ರಿಕೆಟ್ ತಂಡವು ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯವನ್ನಾಡುತ್ತಿದ್ದು, ಸುದೀಪ್ ಅವರು ಸ್ಟೇಡಿಯಂನಲ್ಲಿ ಕುಳಿತು ಮ್ಯಾಚ್ ವೀಕ್ಷಿಸುತ್ತಿದ್ದಾರೆ. ಕಿಚ್ಚ ಸುದೀಪ್ ಮ್ಯಾಚ್ ವೀಕ್ಷಿಸುತ್ತಿರುವ ಹಲವು ಚಿತ್ರಗಳು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಕ್ರೀಡಾಂಗಣದಲ್ಲಿ ತಮ್ಮನ್ನು ಭೇಟಿಯಾದ ಅಭಿಮಾನಿಗಳೊಂದಿಗೆ ಚಿತ್ರಗಳನ್ನು ಸಹ ಸುದೀಪ್ ತೆಗೆದುಕೊಂಡಿದ್ದಾರೆ.

ಬ್ಯಾಟಿಂಗ್ ಮಾಡುತ್ತಿದೆ ಭಾರತ ತಂಡ
ಸುದೀಪ್ಗೆ ಟೆಸ್ಟ್ ಮ್ಯಾಚ್ ವೀಕ್ಷಣೆ ಬಹಳ ಇಷ್ಟ. ಈ ಹಿಂದೆ ಅವರೇ ಅಭಿಪ್ರಾಯ ಹಂಚಿಕೊಂಡಿದ್ದಂತೆ, ಟೆಸ್ಟ್ ಕ್ರಿಕೆಟ್ ನಿಜವಾದ ಕ್ರಿಕೆಟ್. ಇದೀಗ ಮೊದಲ ಟೆಸ್ಟ್ ಅನ್ನು ಶ್ರೀಲಂಕಾ ವಿರುದ್ಧ ಭಾರತ ಗೆದ್ದಿದ್ದು ಎರಡನೇ ಟೆಸ್ಟ್ ಅನ್ನು ಜಯಿಸುವ ವಿಶ್ವಸದಲ್ಲಿದೆ. ಟೆಸ್ಟ್ ಪಂದ್ಯದ ಮೊದಲ ದಿನವೇ ಕಿಚ್ಚ ಸುದೀಪ್ ಕ್ರೀಡಾಂಗಣದಲ್ಲಿ ಹಾಜರಿದ್ದು ಪಂದ್ಯ ವೀಕ್ಷಿಸುತ್ತಿದ್ದಾರೆ. ಇಂದಿನ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಮಾಡುತ್ತಿದೆಯಾದರೂ ಆರಂಭಿಕ ಹಿನ್ನಡೆಯನ್ನು ತಂಡ ಅನುಭವಿಸಿದೆ. 86 ರನ್ಗೆ ನಾಲ್ಕು ವಿಕೆಟ್ ಅನ್ನು ಭಾರತ ಕಳೆದುಕೊಂಡಿತ್ತು, ಬಳಿಕ ಪಂತ್ ಹಾಗೂ ಶ್ರೇಯಸ್ ಐಯ್ಯರ್ ಸಾವಧಾನದ ಆಟವಾಡುತ್ತಿದ್ದು ನಾಲ್ಕನೇ ವಿಕೆಟ್ಗೆ ಉತ್ತಮ ಜೊತೆಯಾಟ ನೀಡುತ್ತಿದ್ದಾರೆ.

1996 ವಿಶ್ವಕಪ್ ಪಂದ್ಯ ನೆನಪು ಮಾಡಿಕೊಂಡಿದ್ದ ಸುದೀಪ್
ಕಳೆದ ವರ್ಷ ದುಬೈನಲ್ಲಿ ಐಪಿಎಲ್ ನೋಡುವಾಗ ಅಲ್ಲಿನ ಸ್ಥಳೀಯ ಸುದ್ದಿ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ್ದ ಸುದೀಪ್, ತಾವು 1996 ರ ವಿಶ್ವಕಪ್ನ ಭಾರತ ಹಾಗೂ ಪಾಕಿಸ್ತಾನ ಪಂದ್ಯವನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೋಡಿದ್ದನ್ನು ನೆನಪಿಸಿಕೊಂಡಿದ್ದರು. ವೆಂಕಟೇಶ್ ಪ್ರಸಾದ್ ಹಾಗೂ ಸೋಹೆಲ್ ಅಮೀರ್ ನಡುವೆ ನಡೆದ ಐತಿಹಾಸಿಕ ಬ್ಯಾಟು-ಚೆಂಡಿನ ಕಾಳಗವನ್ನು ಕಣ್ಣಾರೆ ನೋಡಿದ್ದನ್ನು ಅದರ ರೋಚಕತೆಯನ್ನು ಸುದೀಪ್ ಹಂಚಿಕೊಂಡಿದ್ದರು. ಮತ್ತೊಮ್ಮೆ ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯವನ್ನು ಕ್ರೀಡಾಂಗಣದಲ್ಲಿ ಕುಳಿತು ನೋಡುವ ಆಸೆಯನ್ನೂ ವ್ಯಕ್ತಪಡಿಸಿದ್ದರು. ದುರಾದೃಷ್ಟವಶಾತ್ ಕಳೆದ ಟಿ20 ವಿಶ್ವಕಪ್ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದಿತು. ಆದರೆ ಸುದೀಪ್ ಆ ಪಂದ್ಯ ವೀಕ್ಷಣೆಗೆ ಹೋಗಿರಲಿಲ್ಲ.

'ವಿಕ್ರಾಂತ್ ರೋಣ' ಬಿಡುಗಡೆಗೆ ಕಾಯುತ್ತಿದ್ದಾರೆ
ಡಿಸೆಂಬರ್ 24 ರಂದು ಬಿಡುಗಡೆ ಆಗಿದ್ದ ಕ್ರಿಕೆಟ್ ಬಗೆಗಿನ ಹಿಂದಿ ಸಿನಿಮಾ '83' ಅನ್ನು ಕರ್ನಾಟಕದಲ್ಲಿ ಸುದೀಪ್ ವಿತರಣೆ ಮಾಡಿದ್ದರು. ಇದು ಅವರ ಕ್ರಿಕೆಟ್ ಪ್ರೀತಿಗೆ ಮತ್ತೊಂದು ಉದಾಹರಣೆ. ಪ್ರಸ್ತುತ ಸುದೀಪ್ ತಮ್ಮ ಮಹಾತ್ವಾಕಾಂಕ್ಷೆಯ ಸಿನಿಮಾ 'ವಿಕ್ರಾಂತ್ ರೋಣ' ಬಿಡುಗಡೆಗೆ ಕಾತರರಾಗಿದ್ದಾರೆ. ಸಿನಿಮಾವನ್ನು ವಿಶ್ವಮಟ್ಟದಲ್ಲಿ ತಲುಪಿಸಲು ಸಕಲ ಸಜ್ಜಾಗಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮಾತ್ರವೇ ಅಲ್ಲದೆ ಇಂಗ್ಲೀಷ್ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾವನ್ನು ಅನುಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಸುದೀಪ್ರ ಅತ್ಯಾಪ್ತ ಜಾಕ್ ಮಂಜು.


Click it and Unblock the Notifications











