ಈ ಜುಲೈದಿಂದ ಶುರುವಾಗಲಿದೆ ಕಿಚ್ಚ ಸುದೀಪ್ ಹೊಸ ಸಿನಿಮಾ, ಚಿತ್ರದ ಹೆಸರೇನು ? ಯಾರು ನಿರ್ದೇಶಕ ?
ಕನ್ನಡದ ಸ್ಟಾರ್ಗಳು ವರ್ಷಕ್ಕೆರಡು ಚಿತ್ರ ಮಾಡದಿದ್ದರೆ ಚಿತ್ರಮಂದಿರಕ್ಕೆ ಕನ್ನಡ ಚಿತ್ರರಂಗಕ್ಕೆ ಉಳಿಗಾಲ ಇಲ್ಲ ಎನ್ನುವ ಮಾತು ಕಳೆದ ಹಲವು ದಿನಗಳಿಂದ ಕೇಳಿ ಬರುತ್ತಲೇ ಇದೆ. ಆದರೂ ಕೂಡ ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಬದಲಿಗೆ ಡಾ.ಶಿವರಾಜ್ ಕುಮಾರ್ .. ದುನಿಯಾ ವಿಜಯ್ .. ಗಣೇಶ್ .. ಡಾಲಿ ಧನಂಜಯ್ .. ಪ್ರಜ್ವಲ್ ದೇವರಾಜ್.. ಹೊರತು ಪಡಿಸಿದರೆ ಬಹುತೇಕ..
ಬೇರೆ ಎಲ್ಲ ಸ್ಟಾರ್ಗಳು ಪ್ಯಾನ್ ಇಂಡಿಯಾ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ಸದ್ಯ ಐಸಿಯುನಲ್ಲಿರುವ ಕನ್ನಡ ಚಿತ್ರರಂಗವನ್ನು ಅಂತರಾಷ್ಟ್ರೀಯ ಹಂತಕ್ಕೆ ಕರೆದೊಯ್ಯುವ ಶಪಥ ಮಾಡಿದ್ದಾರೆ. ಇನ್ನು ಶೆಟ್ಟಿ & ಕಂಪನಿ ಕಥೆ ಎಲ್ಲರಿಗೆ ಗೊತ್ತು. ರಿಷಬ್ ಸದ್ಯ ಬಾಲಿವುಡ್ ಪಾಲಾಗಿದ್ದಾರೆ. ರಾಜ್ ಬಿ ಶೆಟ್ಟಿ ಅವರದ್ದು ಬೇರೆಯ ಹಾದಿ. ತಮ್ಮ ಮುಂದಿನ ಚಿತ್ರ ಯಾವುದು ಎನ್ನುವುದು ಖುದ್ದು ರಕ್ಷಿತ್ ಶೆಟ್ಟಿ ಅವರಿಗೆ ಗೊತ್ತಿಲ್ಲ.

ಇನ್ನು ದರ್ಶನ್ ಸದ್ಯ ಬೆಳ್ಳಿತೆರೆಯ ಮೇಲೆ ದರ್ಶನ ನೀಡಿ ಒಂದು ವರ್ಷಗಳಾಗಿವೆ. ಈ ವರ್ಷ ಡೆವಿಲ್ ಮೂಲಕ ದರ್ಶನ್ ಅಬ್ಬರಿಸುವ ಎಲ್ಲ ಸಾಧ್ಯತೆ ಇದೆ. ಪ್ಯಾನ್ ಇಂಡಿಯಾ ಚಿತ್ರ ಮಾಡಿದರೂ.. ಮಾಡದಿದ್ದರೂ ಧ್ರುವ ಸರ್ಜಾ ಅವರದ್ದು ಪಂಚ ವಾರ್ಷಿಕ ಯೋಜನೆ. ಹೀಗಾಗಿ ಮುಂದೇನು ? ಎಂದು ಎಲ್ಲರು ತಲೆ ಕೆಡಿಸಿಕೊಂಡು ಕುಂತ ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ತಮ್ಮ ವರ್ಕಿಂಗ್ ಸ್ಪೀಡ್ ಹೆಚ್ಚಿಸುತ್ತಿದ್ದಾರೆ ಎನ್ನುವ ಸುದ್ದಿಯೊಂದು ಸದ್ಯ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.
ಹೌದು, ಎಲ್ಲರಿಗೆ ಗೊತ್ತಿರುವಂತೆ ಸದ್ಯ ಕಿಚ್ಚ ಸುದೀಪ್ ಬಿಲ್ಲಾ ರಂಗ ಬಾಷಾ ಧ್ಯಾನವನ್ನು ಮಾಡುತ್ತಿದ್ದಾರೆ. ಅನೂಪ್ ಭಂಡಾರಿ ಸಾರಥ್ಯದಲ್ಲಿ ಈ ಚಿತ್ರ ಮೂಡಿ ಬರುತ್ತಿದ್ದು ಈ ಚಿತ್ರದ ಮೇಲೆ ಈಗಾಗಲೇ ನಿರೀಕ್ಷೆಗಳು ಗರಿಗೇದರಿವೆ. ಇನ್ನು ಇನ್ನು ಬಿಲ್ಲಾ ರಂಗ ಬಾಷಾ ನನ್ನ ವೃತ್ತಿ ಬದುಕಿನ ಅತಿ ದೊಡ್ಡ ಸಿನಿಮಾ ಎಂದು ಹಿಂದೊಮ್ಮೆ ಸುದೀಪ್ ಹೇಳಿದ್ದರು. ಈ ಹಿನ್ನೆಲೆ ಕನ್ನಡದಲ್ಲಿ ಮಾತ್ರವಲ್ಲ ಪ್ಯಾನ್ ಇಂಡಿಯಾ ಲೆವಲ್ನಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಬಗ್ಗೆ ಅನೇಕರಲ್ಲಿ ಕುತೂಹಲ ಇದೆ. ತೆಲುಗಿನಲ್ಲಿ ಹನುಮಾನ್ ಚಿತ್ರವನ್ನು ನಿರ್ಮಾಣ ಮಾಡಿದ್ದ ಚೈತನ್ಯ ರೆಡ್ಡಿ ಮತ್ತು ನಿರಂಜನ್ ರೆಡ್ಡಿ ಈ ಚಿತ್ರಕ್ಕೆ ಬಂಡವಾಳ ಹೂಡಿರುವುದರಿಂದ ಚಿತ್ರ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ಕೂಡ ಇವೆ.
ಹೀಗಿರುವಾಗ ಇದೀಗ ಸುದೀಪ್ ಅಭಿನಯದ ಮುಂದಿನ ಚಿತ್ರದ ಕುರಿತು ಚರ್ಚೆಗಳು ಶುರುವಾಗಿವೆ. ಹೌದು, ಒಂದು ಕಡೆ ಬಿಲ್ಲಾ ರಂಗ ಬಾಷಾ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಮತ್ತೊಂದು ಕಡೆ.. ಸುದೀಪ್ ಅಭಿನಯದ ಹೊಸ ಚಿತ್ರ ಈ ಜುಲೈದಿಂದ ಶುರುವಾಗಲಿದೆ ಎಂಬ ಮಾತು ಸದ್ಯ ಕೇಳಿ ಬರುತ್ತಿದೆ.

ಆದರೆ ಹೀಗೆ ಶುರುವಾಗಲಿರುವ ಈ ಹೊಸ ಚಿತ್ರ ಯಾವುದು ? ಯಾರದ್ದು ಎನ್ನುವುದಕ್ಕೆ ಉತ್ತರ ಸದ್ಯಕ್ಕೆ ಇಲ್ಲ. ಯಾಕೆಂದರೆ ಸುದೀಪ್ ಈಗಾಗಲೇ ಹಲವು ಕಥೆಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಮ್ಯಾಕ್ಸ್ 2.. ಚೇರನ್ ನಿರ್ದೇಶನದ ಚಿತ್ರ.. ಹೀಗೆ ಹಲವರಿಗೆ ತಮ್ಮ ಕಾಲ್ಶೀಟ್ನ ಕಿಚ್ಚ ನೀಡಿದ್ದಾರೆ. ಈ ಹಿನ್ನೆಲೆ ಈ ಜುಲೈದಿಂದ ಸುದೀಪ್ ಯಾವ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ ಎನ್ನುವ ಪ್ರಶ್ನೆ ಹಲವರಲ್ಲಿದೆ. ಹೀಗಿರುವಾಗ 'ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ಮ್ಯಾಕ್ಸ್ ಚಿತ್ರದ ನಿರ್ದೇಶಕ ವಿಜಯ್ ಕಾರ್ತಿಕೆಯನ್ ಅವರ ಜೊತೆ ಸುದೀಪ್ ಚಿತ್ರ ಮಾಡಲಿದ್ದಾರೆ ಎಂದು ವರದಿಯನ್ನು ಮಾಡಿದೆ. ಈ ಚಿತ್ರ ಮ್ಯಾಕ್ಸ್ 2 ಆಗಿರಲಿದೆಯಾ ಅಥವಾ ಹೊಸದೊಂದು ಬೇರೆ ಕಥೆಯ ಚಿತ್ರವಾಗಿರಲಿದೆಯಾ ಎನ್ನುವುದನ್ನು ಕಾದು ನೋಡಬೇಕಿದೆ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಇನ್ನು ಈ ಚಿತ್ರಕ್ಕೂ ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ ಮತ್ತು ಶೇಖರ್ ಚಂದ್ರ ಅವರ ಛಾಯಾಗ್ರಹಣ ಇರಲಿದೆ ಎಂದು ವರದಿ ಮಾಡಿರುವ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ಈ ತಿಂಗಳಾಂತ್ಯದಲ್ಲಿ ಈ ಕುರಿತು ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಕೂಡ ಹೇಳಿದೆ.


Click it and Unblock the Notifications











