'ವೀರ ಮದಕರಿ' ಚಿತ್ರದ ಬಾಲನಟಿ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ವಾಪಸ್
ಸುದೀಪ್ ನಿರ್ದೇಶಿಸಿ ನಟಿಸಿದ್ದ 'ಈ ಶತಮಾನದ ವೀರ ಮದಕರಿ' ಸಿನಿಮಾ ಹಿಟ್ ಲಿಸ್ಟ್ ಸೇರಿತ್ತು. ತೆಲುಗಿನ 'ವಿಕ್ರಮಾರ್ಕುಡು' ರೀಮೆಕ್ ಆಗಿದ್ದ ಈ ಚಿತ್ರ 2009ರಲ್ಲಿ ತೆರೆಕಂಡಿತ್ತು. ಸುದೀಪ್ ಜೊಡಿಯಾಗಿ ರಾಗಿಣಿ ದ್ವಿವೇದಿ ನಟಿಸಿದ್ದರು. ದಿನೇಶ್ ಗಾಂಧಿ ಚಿತ್ರಕ್ಕೆ ಬಂಡವಾಳ ಹೂಡಿದ್ದರು.
ಡಬಲ್ ರೋಲ್ನಲ್ಲಿ ಸುದೀಪ್ ನಟಿಸಿದ್ದರು. ಕಳ್ಳ ಮುತ್ತತ್ತಿ ಸತ್ಯರಾಜು ಹಾಗೂ ಅಸಿಸ್ಟೆಂಟ್ ಕಮೀಷನರ್ ವೀರ ಮದಕರಿ ಆಗಿ ಕಿಚ್ಚ ಅಬ್ಬರಿಸಿದ್ದರು. ತೆಲುಗಿನಲ್ಲಿ ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿ ರವಿತೇಜಾ ಹಾಗೂ ಅನುಷ್ಕಾ ಶೆಟ್ಟಿ ನಟಿಸಿದ್ದರು. 'ಮದಕರಿ' ಚಿತ್ರದಲ್ಲಿ ಸುದೀಪ್ ಮಗಳ ಪಾತ್ರದಲ್ಲಿ ಬಾಲನಟಿ ಜೆರುಶಾ ಕ್ರಿಸ್ಟೋಫರ್ ಕಾಣಿಸಿಕೊಂಡಿದ್ದರು.

'ಈ ಶತಮಾನದ ವೀರ ಮದಕರಿ' ಸಿನಿಮಾ ಬಂದು 13 ವರ್ಷಗಳಾಗಿದೆ. ಇದೀಗ ಜೆರುಶಾ ಕ್ರಿಸ್ಟೋಫರ್ ನಾಯಕಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. 'ಆಕಾಶ್', 'ಅರಸು' ಸೇರಿದಂತೆ ಕೆಲ ಹಿಟ್ ಸಿನಿಮಾಗಳನ್ನು ಕೊಟ್ಟ ಮಹೇಶ್ ಬಾಬು ನಿರ್ದೇಶನದ ಹೊಸ ಚಿತ್ರಕ್ಕೆ ಆಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಮಹೇಶ್ ಬಾಬು ಈ ಹಿಂದೆ ಕೂಡ ಕೆಲ ನಟಿಯರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಆ ಸಾಲಿಗೆ ಜೆರುಶಾ ಕ್ರಿಸ್ಟೋಫರ್ ಸೇರಿಕೊಳ್ಳುತ್ತಿದ್ದಾರೆ.
ಇನ್ನು ಹೆಸರಿಡದ ಈ ಯೂತ್ಫುಲ್ ಲವ್ ಸ್ಟೋರಿ ಚಿತ್ರದಲ್ಲಿ ಜೆರುಶಾ ಕ್ರಿಸ್ಟೋಫರ್ ನಾಯಕಿಯಾಗಿ ನಟಿಸಲಿದ್ದಾರೆ. ಸ್ಮೈಲ್ ಗುರು ರಕ್ಷಿತ್ ಹೀರೊ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ 'ಸ್ಮೈಲ್ ಗುರು' ಎನ್ನುವ ಶಾರ್ಟ್ ಫಿಲ್ಮ್ನಲ್ಲಿ ರಕ್ಷಿತ್ ನಟಿಸಿದ್ದರು. ಹಾಗಾಗಿ ಅವರ ಹೆಸರಿನ ಜೊತೆಗೆ ಸ್ಮೈಲ್ ಗುರು ಸೇರಿಕೊಂಡುಬಿಟ್ಟಿದೆ. ಹೊಸ ಪ್ರತಿಭೆಗಳನ್ನಿಟ್ಟುಕೊಂಡು ನಿರ್ದೇಶಕ ಮಹೇಶ್ ಬಾಬು ಹೊಸ ಸಿನಿಮಾ ಕೈಗೆತ್ತಿಕೊಳ್ಳುತ್ತಿದ್ದಾರೆ.
'ಈ ಶತಮಾನದ ವೀರ ಮದಕರಿ' ಚಿತ್ರದಲ್ಲಿ ಜೆರುಶಾ ಕ್ರಿಸ್ಟೋಫರ್ ಬಾಲನಟಿಯಾಗಿ ಗಮನ ಸೆಳೆದಿದ್ದರು. ಮುಗ್ಧ ಹುಡುಗಿಯಾಗಿ ಮೋಡಿ ಮಾಡಿದ್ದರು. ಇಡೀ ಕಥೆಗೆ ಟ್ವಿಸ್ಟ್ ಕೊಡುವ ಪಾತ್ರ ಅದು. ಚಂಬಲ್ನ ಅಸಿಸ್ಟೆಂಟ್ ಕಮೀಷನರ್ ವೀರ ಮದಕರಿ ಮಗಳು, ತಂದೆಯಿಂದ ದೂರಾಗಿ ತಮ್ಮ ತಂದೆ ರೀತಿಯೇ ಕಾಣುವ ಮುತತ್ತಿ ಸತ್ಯರಾಜು ಬಳಿ ಬಂದು ಸೇರುವಂತಾಗುತ್ತದೆ. ಆತನನ್ನು ಅಪ್ಪ, ಅಪ್ಪ ಎಂದು ಕರೆಯುತ್ತಿರುತ್ತಾಳೆ. ಅವಳು ಯಾರು? ಏನು? ಎಂದು ಹುಡುಕುತ್ತಾ ಹೋದಾಗ ಅಸಲಿ ಕಥೆ ಗೊತ್ತಾಗುತ್ತದೆ.

'ಮದಕರಿ' ಚಿತ್ರದಲ್ಲಿನ ನಟನೆಗಾಗಿ ಜೆರುಶಾ ಕ್ರಿಸ್ಟೋಫರ್ ಜೀ ಅತ್ಯುತ್ತಮ ಬಾಲನಟಿ ಪ್ರಶಸ್ತಿಯನ್ನು ಗೆದ್ದಿದ್ದರು. ಇದೀಗ ಲೀಡ್ ರೋಲ್ನಲ್ಲಿ ಚಿತ್ರರಂಗಕ್ಕೆ ವಾಪಸ್ ಆಗುತ್ತಿದ್ದಾರೆ. ಈ ಹಿಂದೆ 'ಮೆರವಣಿಗೆ' ಚಿತ್ರದಲ್ಲಿ ಐಂದ್ರಿತಾ ರೇ, 'ಚಿರು' ಚಿತ್ರದಲ್ಲಿ ಕೃತಿ ಕರಬಂಧ, 'ಅಜಿತ್' ಚಿತ್ರದಲ್ಲಿ ನಿಕ್ಕಿ ಗರ್ಲಾನಿ, ಕ್ರೇಜಿ ಬಾಯ್ ಚಿತ್ರದಲ್ಲಿ ಆಶಿಕಾ ರಂಗನಾಥ್ ಹೀಗೆ ಹಲವರನ್ನು ಮಹೇಶ್ ಬಾಬು ಚಿತ್ರರಂಗಕ್ಕೆ ಪರಿಚಯಿಸಿದ್ದರು. ಇದೀಗ ಜೆರುಶಾ ಕ್ರಿಸ್ಟೋಫರ್.
'ಆ ದಿನಗಳು' ಚೇತನ್ ನಟಿಸಿದ 'ಅತಿರಥ' ಸಿನಿಮಾ ಬಳಿಕ ಮಹೇಶ್ ಬಾಬು ಯಾವುದೇ ಚಿತ್ರ ಕೈಗೆತ್ತಿಕೊಂಡಿರಲಿಲ್ಲ. ಬಹಳ ದಿನಗಳ ಬಳಿಕ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚೇತನ್ ಹಾಗೂ ಅನುರಾಗ್ ಬಂಡವಾಲ ಚಿತ್ರಕ್ಕೆ ಕಥೆ ಸಿದ್ಧಪಡಿಸಿದ್ದಾರೆ. ಅನೂಪ್ ಸಿಳೀನ್ ಸಂಗೀತ ಈ ರೊಮ್ಯಾಂಟಿಕ್ ಲವ್ ಸ್ಟೋರಿಗೆ ಇರಲಿದೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ.


Click it and Unblock the Notifications











