ನನಗೆ ನಿಜ ಜೀವನದಲ್ಲಿ ದೆವ್ವ ಅಂದ್ರೆ ನಂಬಿಕೆ ಇಲ್ಲ; 'ಘೋಸ್ಟ್' ಕಿರುಚಿತ್ರದ ಬಗ್ಗೆ ಸುಧಾರಾಣಿ ಮಾತು
ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋ, ವೆಬ್ ಸೀರಿಸ್ ನಡುವೆ ಶಾರ್ಟ್ ಫಿಲ್ಮ್ಸ್ ಕ್ರೇಜ್ ಕಮ್ಮಿ ಆಗಿದ್ದಾರೆ. ಅದರಲ್ಲೂ ಸ್ಟಾರ್ ನಟ, ನಟಿಯರು ಶಾರ್ಟ್ ಫಿಲ್ಮ್ನಲ್ಲಿ ನಟಿಸುವುದು ಕಮ್ಮಿಯಾಗಿದೆ. ನಟಿ ಸುಧಾರಾಣಿ 'ಘೋಸ್ಟ್' ದಿ ದೆವ್ವ ಎಂಬ ಶಾರ್ಟ್ ಫಿಲ್ಮ್ ನಿರ್ಮಿಸಿ, ನಟಿಸಿದ್ದಾರೆ.
ದೆವ್ವ ಇದ್ಯಾ? ಇಲ್ವಾ? ಎನ್ನುವ ಚರ್ಚೆಯ ಸುತ್ತಾ ಈ ಶಾರ್ಟ್ ಫಿಲ್ಮ್ ಕಥೆ ಸಾಗುತ್ತದೆ. ಸುಧಾಕರ್ ಕೆ ರಾವ್ ನಿರ್ದೇಶಿಸಿ ನಟಿಸಿದ್ದಾರೆ. ಅವರ ಜೊತೆ ಸುಧಾರಾಣಿ ಪಾತ್ರದ ಸುತ್ತಾ ಕಥೆ ಸಾಗುತ್ತದೆ. ಸದಾ ಸುದ್ದಿ ವಾಹಿನಿ ರಿಪೋರ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಮನೆಯಲ್ಲಿ ದೆವ್ವ ಇದೆ ಎಂದು ತಿಳಿದು ಬಂದು ಪರೀಕ್ಷಿಸಲು ಮುಂದಾಗುವ ಕಲ್ಪನೆಯೊಂದಿಗೆ ಕಥೆ ಆರಂಭವಾಗುತ್ತದೆ. ಮುಂದೇನು ಎನ್ನುವುದು ಇನ್ನುಳಿದ ಕಥೆ.

ವಾರದ ಹಿಂದೆ ತಮ್ಮದೇ ಯೂಟ್ಯೂಬ್ ಚಾನಲ್ನಲ್ಲಿ 'ಘೋಸ್ಟ್' ದಿ ದೆವ್ವ ಕಿರುಚಿತ್ರವನ್ನು ಸುಧಾರಾಣಿ ಪೋಸ್ಟ್ ಮಾಡಿದ್ದಾರೆ. ಈಗಾಗಲೇ ಲಕ್ಷಕ್ಕೂ ಅಧಿಕ ವೀವ್ಸ್ ಸಾಧಿಸಿ ಅದು ಸದ್ದು ಮಾಡ್ತಿದೆ. ಸಿನಿಮಾ, ಧಾರಾವಾಹಿಗಳಲ್ಲಿ ಬಹಳ ಬ್ಯುಸಿಯಾಗಿರುವ ಸುಧಾರಾಣಿ ಶಾರ್ಟ್ ಫಿಲ್ಮ್ ನಿರ್ಮಾಣ ಮಾಡಿ ನಟಿಸಿದ್ದೇಕೆ? ಅದಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ಹೇಗಿದೆ? ಎನ್ನುವ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ.
ಶಾರ್ಟ್ ಮೂವಿ ಮಾಡುವ ಐಡಿಯಾ ಬಂದಿದ್ದೇಗೆ?
ನಾನು ಬಾಲನಟಿಯಾಗಿದ್ದಾಗಲೇ ಶಾರ್ಟ್ ಫಿಲ್ಮ್ಗಳಲ್ಲಿ ನಟಿಸಿದ್ದೆ. ಸುಧಾಕರ್ ಕೆ ರಾವ್ ಬಂದು ಕತೆ ಹೇಳಿದಾಗ ನನಗೆ ಬಹಳ ಇಷ್ಟವಾಯಿತು. ಇತ್ತೀಚೆಗೆ ಸಿನಿಮಾಗಳಲ್ಲಿ ಸ್ಪೂನ್ ಫೀಡಿಂಗ್ ಆಗಿಬಿಟ್ಟಿದೆ. ಯೋಚಿಸುವ ಅವಕಾಶ ಸಿಗುತ್ತಿಲ್ಲ. ಎಮೋಷನ್ ಕಮ್ಮಿ ಆಗಿದೆ. ಭಯ ಎನ್ನುವುದು ಕೂಡ ಎಮೋಷನ್. ಸಿನಿಮಾಗಳಿಗೆ ಓಟಿಟಿ, ಸೋಶಿಯಲ್ ಮೀಡಿಯಾ ಟ್ರೆಂಡ್ ನಡೀತಿದೆ. ಫೀಚರ್ ಫಿಲ್ಮ್ ಮಾಡುವಷ್ಟು ಶಕ್ತಿ ಇಲ್ಲ, ಹಾಗಾಗಿ ನನ್ನ ಕೈಲಾದ ಮಟ್ಟಿಗೆ ಶಾರ್ಟ್ ಫಿಲ್ಮ್ ಮಾಡೋಣ ಎಂದು ನಿರ್ಧರಿಸಿ ಮಾಡಿದ್ದು.
ನಿಜ ಜೀವನದಲ್ಲಿ ದೆವ್ವದ ಬಗ್ಗೆ ನಂಬಿಕೆ ಇದ್ಯಾ?
ಹಹ್ಹಹ. ಕಂಡಿತ ಇಲ್ಲ. ಶಾರ್ಟ್ ಮೂವಿಯನ್ನು ಒಟ್ಟಾರೆಯಾಗಿ ನೋಡಿದರೆ ಬರೀ ದೆವ್ವ ಅಲ್ಲ, ಒಟ್ಟಾರೆ ಜೀವನದಲ್ಲಿ ಪ್ರತಿ ಸನ್ನಿವೇಶವನ್ನು ನಾವು ಹೇಗೆ ಎದುರಿಸುತ್ತೇವೆ ಎನ್ನುವುದನ್ನು ಹೇಳಲಾಗಿದೆ. ಮನಷ್ಯ ಅಂದಮೇಲೆ ಬೀಳುವುದು ಸಹಜ. ಬಿದ್ದಾಗ ಹೇಗೆ ಎದ್ದು ಬರ್ತೀವಿ ಎನ್ನುವುದು ಮುಖ್ಯ. ಅದೇ ನನ್ನ ಪಾಲಿಸಿ.
ನೆಗೆಟಿವ್ ಎನರ್ಜಿ ಇದೆ ಎನ್ನುವ ಕಾನ್ಸೆಪ್ಟ್ ಒಪ್ಪುತ್ತೀರಾ?
ಪಾಸಿಟಿವ್ ರೀತಿಯಲ್ಲೇ ನೆಗೆಟಿವ್ ಎನರ್ಜಿ ಅಂದರೆ ನಾವು ಕಲ್ಪಿಸಿಕೊಳ್ಳುವುದು. ದೇವರು ಎಲ್ಲರಿಗೂ ಅವಕಾಶ ಕೊಡುತ್ತಾರೆ. ಒಳ್ಳೆಯದರ ಹಿಂದೆ ಕೆಟ್ಟದ್ದು ಮತ್ತೆ ಒಳ್ಳೆಯದ್ದು ಬಂದೇ ಬರುತ್ತದೆ. ಹೇಗೆ ಹೆದರಿಸುತ್ತೇವೆ ಎನ್ನುವುದನ್ನು ನಾವು ಶಾರ್ಟ್ ಫಿಲ್ಮ್ ಅಲ್ಲಿ ಹೇಳಿದ್ದೇವೆ. ಆಳವಾಗಿ ಗಮನಿಸಿದ್ದಾಗ ಗೊತ್ತಾಗುತ್ತದೆ.
ಎಷ್ಟು ದಿನ, ಎಲ್ಲಿ ಶೂಟಿಂಗ್ ನಡೀತು?
ಎರಡು ದಿನಗಳ ಕಾಲ ಚಿತ್ರೀಕರಣ ನಡೀತು. ಕೆಲ ಭಾಗಗಳನ್ನು ನಮ್ಮ ಸ್ನೇಹಿತರ ಮನೆಯಲ್ಲಿ ಚಿತ್ರೀಕರಿಸಿದೆವು. ಮನೆಯ ಒಳಗಿನ ಭಾಗವನ್ನು ನಮ್ಮ ಹಳೇ ಮನೆಯಲ್ಲಿ ಸೆರೆಹಿಡಿದೆವು. ಮಲ್ಲೇಶ್ವರಂ ಮನೆಯಿಂದ ಶಿಫ್ಟ್ ಆಗಿದ್ದೆ. ಆ ಮನೆ ಖಾಲಿ ಇತ್ತು. ಹಾಗಾಗಿ ಅಲ್ಲೇ ಶೂಟ್ ಮಾಡಿದೆವು.
ಇವತ್ತು ಫಾದರ್ಸ್ ಡೇ, 'ನಿನ್ನಂಥ ಅಪ್ಪ ಇಲ್ಲ' ಹಾಡನ್ನು ನೆನಪಿಸಿಕೊಳ್ಳುವುದಾದರೆ?
ಈ ಹಾಡು ನೋಡಿದಾಗಲೆಲ್ಲಾ ಅಣ್ಣಾವ್ರ ಜೊತೆ ಚಿಕ್ಕ ವಯಸ್ಸಿನಿಂದ ಕಾಲ ಕಳೆದಿದ್ದು ನೆನಪಾಗುತ್ತದೆ. ಕನ್ನಡ ಇರುವವರೆಗೂ ಆ ಹಾಡು ಅಚ್ಚಳಿಯದೇ ಉಳಿಯುತ್ತದೆ. ಅಂತಹ ಅವಕಾಶ ಸಿಕ್ಕಿದ್ದನ್ನು ಮರೆಯಲು ಸಾಧ್ಯವಿಲ್ಲ. ಅವರ ಬ್ಯಾನರ್ನಲ್ಲಿ ಅವರೊಟ್ಟಿಗೆ ಸಿನಿಮಾ ಮಾಡುವ ಅವಕಾಶ, ಅದು ಕೂಡ ನನ್ನ ವೃತ್ತಿ ಜೀವನದಲ್ಲಿ ಅಷ್ಟು ಬೇಗ ಸಿಕ್ಕಿದ್ದು ವಿಶೇಷ. ತಿಪ್ಪಗೊಂಡನಹಳ್ಳಿ ಹಾಗೂ ಕಂಠೀರವದಲ್ಲಿ ಸೆಟ್ ಹಾಕಿ ಹಾಡು ಶೂಟ್ ಮಾಡಲಾಗಿತ್ತು.


Click it and Unblock the Notifications











