‘ಬೆಂಕಿಯಲ್ಲಿ ಅರಳಿದ ಹೂವಾಗಿ’,
'ಬೆಂಕಿಯಲ್ಲಿ ಅರಳಿದ ಹೂವಾಗಿ", 'ಸುಪ್ರಭಾತ" ಹಾಡುತ್ತಾ ಕನ್ನಡ ಚಿತ್ರರಂಗದಲ್ಲಿ ಕೆಲಕಾಲ ' ಬಂಧನ"ದಲ್ಲಿದ್ದ ನಟಿ ಸುಹಾಸಿನಿ ಮತ್ತೆ ಕೆಲವು ಕಾಲ 'ಹೊಸನೀ(ರು)ರಿಗಾಗಿ" ಹುಡುಕುತ್ತಾ ಕನ್ನಡ ಚಿತ್ರರಂಗದಿಂದ ದೂರ ಬಹುದೂರ ಹೋಗಿದ್ದರು.
ಮತ್ತೆ ಸುಹಾಸಿನಿ ಕನ್ನಡ ಚಿತ್ರರಂಗಕ್ಕೆ ರೀ ಎಂಟ್ರಿ ಪಡೆದಿದ್ದಾರೆ. ಅವರ ಇತ್ತೀಚಿನ 'ಯಾರಿಗೆ ಸಾಲತ್ತೆ ಸಂಬಳ" ಬಾಕ್ಸ್ ಆಫೀಸಿನಲ್ಲಿ ಹಿಟ್ ಬೇರೆ ಆಗಿದೆ. ಅಂದ ಹಾಗೆ ಅವರ ಜ್ಞಾಪಕ ಈಗೇಕೆ ಬಂತು ಗೊತ್ತೆ? ಮೊನ್ನೆ ಮೊನ್ನೆ ಯಾರೋ ಇವರಿಗೆ ಕನ್ನಡದಲ್ಲಿ ಭಾಷಣ ಮಾಡುವಂತೆ ಕೇಳಿದರಂತೆ. ಆಗ ಸುಹಾಸಿನಿ ನೀಡಿದ ಉತ್ತರ ಏನು ಗೊತ್ತೆ : 'ನಾನು ಕನ್ನಡದಲ್ಲಿ ಭಾಷಣ ಮಾಡುವ ಮೊದಲು ಆಡಿಟೋರಿಯಂ ಬಾಗಿಲುಗಳನ್ನೆಲ್ಲಾ ಹಾಕಬೇಕು. ಇಲ್ಲವಾದರೆ ಎಲ್ಲರೂ ಎದ್ದು ಓಡಿ ಹೋಗುತ್ತಾರೆ".
ಅಂದರೆ ಸುಂದರವಾಗಿರುವ ಸುಹಾಸಿನಿ ಜನರೆಲ್ಲ ಎದ್ದು ಓಡುವಷ್ಟು ಸುಂದರವಾಗಿ ಕನ್ನಡದಲ್ಲಿ ಮಾತನಾಡುತ್ತಾರೆಯೆ? ಅದಂತೂ ನಮಗೆ ಗೊತ್ತಿಲ್ಲ. ನಾವೂ ಅವರ ಕನ್ನಡ ಭಾಷಣ ಕೇಳಿಲ್ಲ. ನೀವೇನಾದರೂ ಸುಹಾಸಿನಿಯ ಕನ್ನಡ ಭಾಷಣ ಕೇಳಲು ಇಚ್ಛಿಸುವುದಾದರೆ, ಆಡಿಟೋರಿಯಂನಲ್ಲಿ ಬಂಧಿಯಾಗಲು ಸಿದ್ಧವಿರಬೇಕು. ಇಲ್ಲ ಹಾಲ್ನಲ್ಲಿರುವವರಿಗೆಲ್ಲ ಉಪಕಾರ ಮಾಡಲು (ಕಿವಿಗಿಟ್ಟುಕೊಳ್ಳಲು) ಒಂದೆರಡು ಟನ್ ಹತ್ತಿ ತೆಗೆದುಕೊಂಡು ಹೋಗಬೇಕು.
ಬಿಡಿ ಈಗಂತೂ ಆ ಸಮಸ್ಯೆ ಇಲ್ಲ. ಸುಹಾಸಿನಿ ಕನ್ನಡದಲ್ಲಿ ಮಾತನಾಡುವ ಸಾಹಸ ಮಾಡಿಲ್ಲ. ಆದರೆ, ದೂರದರ್ಶನದಲ್ಲಿ ಬರುವ ಅವರ ಗ್ರೀನ್ ಲೇಬಲ್ ಕಾಫಿಯ ಜಾಹೀರಾತಿನಲ್ಲಿ ಅವರ ಅಭಿನಯ .... ಜಾಹೀರಾತಿನ ಕೊನೆಯಲ್ಲಿನ ಅವರ ಉದ್ಗಾರ ಕೇಳಿ ಬಹಳಷ್ಟು ಮಂದಿ ಓಡಿ ಹೋಗಿರುವುದಂತೂ ನೂರಕ್ಕೆ ನೂರು ಸತ್ಯ.


Click it and Unblock the Notifications