ವಿರಾಟ್ ಕೊಹ್ಲಿಯಂತೆ 'ಹೊಸ ಅಧ್ಯಾಯ'ವೆಂದ ಸುಮಲತಾ ಅಂಬರೀಶ್ ; ಹೌದು ಎಂದ ಬೆಂಬಲಿಗರು..!
ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಇಲ್ಲಿ ಯಾವುದು ಶಾಶ್ವತವಲ್ಲ. ಇದಕ್ಕೆ ಸುಮಲತಾ ಅಂಬರೀಶ್ ಸದ್ಯದ ತಾಜಾ ಉದಾಹರಣೆ.
ಹೌದು, 2019ರ ''ಲೋಕಸಭಾ ಚುನಾವಣೆ''ಯಲ್ಲಿ ಯಾರ ಸಹವಾಸವನ್ನೂ ಮಾಡದೇ ''ಪಕ್ಷೇತರ ಅಭ್ಯರ್ಥಿ''ಯಾಗಿ ಕಣಕ್ಕಿಳಿದವರು ಸುಮಲತಾ. ಕನ್ನಡ ಚಿತ್ರರಂಗದ ''ಜೋಡೆತ್ತು''ಗಳನ್ನ ಕರೆದುಕೊಂಡು ರಣ ಬಿಸಿಲಿನಲ್ಲಿ ಸೆರಗೊಡ್ಡಿ ''ಸ್ವಾಭಿಮಾನದ ಭಿಕ್ಷೆ''ಯನ್ನ ಬೇಡಿದ್ದ ಸುಮಲತಾ ಅಂಬರೀಶ್ ಪ್ರಚಂಡ ಗೆಲುವನ್ನ ಪಡೆದಿದ್ದು ಈಗ ಇತಿಹಾಸ.
ಇಂಥ ಸುಮಲತಾ ಅಂಬರೀಶ್, 2023ರ ''ವಿಧಾನ ಸಭಾ ಚುನಾವಣೆ''ಯ ಸಂದರ್ಭದಲ್ಲಿಯೇ ''ಬಿ.ಜೆ.ಪಿ'' ಪಕ್ಷ ಸೇರಿಕೊಳ್ಳುತ್ತಾರೆ ಎಂದು ಅಂದಾಜಿಸಲಾಗಿತ್ತು. ಆದರೆ.. ಸುಮಲತಾ, ಕೇವಲ ''ಬಾಹ್ಯ ಬೆಂಬಲ''ವನ್ನಷ್ಟೇ ನೀಡಿ ''ಕೈ'' ತೊಳೆದುಕೊಂಡಿದ್ದರು. ಆದರೆ ಈಗ ಅಧಿಕೃತವಾಗಿ ಸುಮಲತಾ ಅಂಬರೀಶ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಇನ್ನೂ ಬಿಜೆಪಿ ಪಕ್ಷಕ್ಕೆ ಬಲಗಾಲಿಟ್ಟು ಹೋದ ನಂತರ ಸುಮಲತಾ ತಮ್ಮದ ಮನದ ಮಾತನ್ನ ಹಂಚಿಕೊಂಡಿದ್ದಾರೆ. ಇದೇ ವೇಳೆ ಮೊನ್ನೆ..ಮೊನ್ನೆಯಷ್ಟೇ..''ರಾಯಲ್ ಚಾಲೆಂಜರ್ಸ್ ಬೆಂಗಳೂರು''ನ ಸ್ಟಾರ್ ಅಟ್ರ್ಯಾಕ್ಷನ್ ವಿರಾಟ್ ಕೊಹ್ಲಿ ''ಇದು ಆರ್.ಸಿ.ಬಿಯ ಹೊಸ ಅಧ್ಯಾಯ'' ಎಂದು ಹೇಳಿದಂತೆ, ''ಇದು ಹೊಸ ಅಧ್ಯಾಯ'' ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂಬ ಆಶಯದಿಂದ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ. ಮಂಡ್ಯದ ನನ್ನ ಅಭಿಮಾನಿಗಳು, ನಟ ದಿ.ಅಂಬರೀಶ್ ಅಭಿಮಾನಿಗಳು ಹಿತೈಷಿಗಳ ಹಾರೈಕೆ ಮತ್ತು ಆಶೀರ್ವಾದವಿರಲಿ ಎಂದು ಕೈ ಮುಗಿದು ವಿನಂತಿಯನ್ನೂ ಮಾಡಿಕೊಂಡಿದ್ದಾರೆ.

ಕನ್ನಡದಲ್ಲಿಯೇ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದ ಕೊಹ್ಲಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅನ್ಬಾಕ್ಸ್ ಈವೆಂಟ್ನಲ್ಲಿ ಆರ್ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ , ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದರು. ತಂಡದ ಹೆಸರು ಬದಲಾವಣೆಯ ನೆಪದಲ್ಲಿ ಮಾತನಾಡುವಾಗ ಅಚ್ಚ ಕನ್ನಡದಲ್ಲಿಯೇ ಇದು ಆರ್.ಸಿ.ಬಿಯ ಹೊಸ ಅಧ್ಯಾಯ ಎಂದು ಕನ್ನಡಿಗರ ಹೃದಯವನ್ನ ಗೆದ್ದಿದ್ದರು. ವಿರಾಟ್ ಕೊಹ್ಲಿ ಈ ಕನ್ನಡ ಪ್ರೇಮ ಆ ಕ್ಷಣಕ್ಕೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು ಕೂಡ

ಹೀಗೆ ಅವತ್ತು ಕೊಹ್ಲಿ ಆಡಿದ್ದ ಮಾತನ್ನೇ ಸುಮಲತಾ ಇಂದು ಪುನರುಚ್ಚಿಸಿದ್ದಾರೆ. ಈ ಕಾರಣಕ್ಕೆ ಥ್ರಿಲ್ ಆಗಿರುವ ಸುಮಲತಾ ಪಡೆ ಹಾಗೂ ಅವರ ಅಭಿಮಾನಿಗಳು ''ಆರ್.ಸಿ.ಬಿ'' ಈ ಬಾರಿ ''ಕಪ್'' ಗೆಲ್ಲುತ್ತೋ.. ಬಿಡುತ್ತೋ.. ಗೊತ್ತಿಲ್ಲ. ಆದರೆ ''ಮಂಡ್ಯ To ಇಂಡಿಯಾ'' ಈ ಬಾರಿ ಕಣ್ಣಾಯ್ಸಿದ ಕಡೆಯೆಲ್ಲ ಕಾಣಿಸುವುದು ''ಅಚ್ಛೇ ದಿನ್'' ಅಷ್ಟೇ ಎಂಬ ಅಭಿಪ್ರಾಯವನ್ನ ವ್ಯಕ್ತಪಡಿಸುತ್ತಿದ್ದಾರೆ. ಸುಮಲತಾ ಅಂಬರೀಶ್ ಕೂಡ ಇದನ್ನೇ ಹೇಳಿದ್ದಾರೆ. ನುಡಿದಂತೆ ನಡೆಯುವ ನಾಯಕತ್ವ ಮೋದಿಜೀ ಅವರದು. 2047ರವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಮಾಡಲು ಸಹಕರಿಸಬೇಕಿದೆ ಎಂದಿದ್ದಾರೆ.
ಒಟ್ನಲ್ಲಿ ಸುಮಲತಾ ಅಂಬರೀಶ್ ಬಿ.ಜೆ.ಪಿ ಪಕ್ಷಕ್ಕೆ ಸೇರ್ಪಡೆ ಹಿನ್ನೆಲೆ ಪಕ್ಷಕ್ಕೆ ಇನ್ನಷ್ಟು ಶಕ್ತಿ ಬಂದಿದೆ ಅನ್ನುವುದು ಸದ್ಯಕ್ಕೆ ಕೇಳಿ ಬರುತ್ತಿರುವ ಮಾತು. ಇನ್ನೂ ''ರಾಯಲ್ ಚಾಲೆಂಜರ್ಸ್ ಬೆಂಗಳೂರು'' ತಂಡಕ್ಕೆ ''ವಿರಾಟ್ ಕೊಹ್ಲಿ'' ಇದ್ದಂತೆ, ''ಬಿ.ಜೆ.ಪಿ'' ಪಕ್ಷಕ್ಕೆ ''ಸುಮಲತಾ ಅಂಬರೀಶ್'' ಅವರು ಇದ್ದಂತೆ ಎಂದು ಅಭಿಮಾನದಿಂದ ಮಾತನಾಡುತ್ತಿದ್ದಾರೆ ಸುಮಲತಾ ಅಂಬರೀಶ್ ಅವರ ಅಭಿಮಾನಿಗಳು.


Click it and Unblock the Notifications











