ದರ್ಶನ್ - ಸುದೀಪ್ ಜಗಳದ ನಡುವೆ ಸುಮಲತಾರನ್ನು ಏಳೆದು ತಂದ ಕಿಡಿಗೇಡಿಗಳು
Recommended Video
ಕುಚುಕು ಸ್ನೇಹಿತರ ಮಧ್ಯೆ ಮತ್ತೆ ಬಿರುಕು ಉಂಟಾಗಿದೆ. ದರ್ಶನ್ ಹಾಗೂ ಸುದೀಪ್ ನಡುವೆ ಮತ್ತೆ ಸ್ಟಾರ್ ವಾರ್ ನಡೆಯುತ್ತಿದೆ. ಆದರೆ, ಈ ಘಟನೆಗೆ ಈಗ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಕಿಡಿಗೇಡಿಗಳು ಏಳೆದು ತಂದಿದ್ದಾರೆ.
'ಪೈಲ್ವಾನ್' ಪೈರಸಿ ಈಗ ಬೇರೆ ರೂಪ ಪಡೆದುಕೊಂಡಿದೆ. ಪ್ರಾರಂಭದಲ್ಲಿ ಇದ್ದ ಫ್ಯಾನ್ಸ್ ವಾರ್ ಈಗ ಸ್ಟಾರ್ ವಾರ್ ಆಗಿ ಬದಲಾಗಿದೆ. ಸುದೀಪ್ ಮತ್ತು ದರ್ಶನ್ ಪರೋಕ್ಷವಾಗಿ ಟ್ವೀಟ್ ಗಳ ಮೂಲಕ ಕಿತ್ತಾಡುತ್ತಿದ್ದಾರೆ. ಸ್ಟಾರ್ ಗಳೆ ಹೀಗೆ ಮಾಡುವಾಗ ಇನ್ನು ಅಭಿಮಾನಿಗಳ ಬಗ್ಗೆ ಹೇಳುವುದೇ ಬೇಡ.
ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಕೆಸರೆರಚಾಟದಿಂದ ಶುರುವಾದ ಈ ಘಟನೆ ಈಗ ದೊಡ್ಡದಾಗಿದೆ. ಈ ಬಿಸಿ ಕಡಿಮೆ ಆಗುವ ಮುನ್ನವೇ, ಈ ಘಟನೆಯಲ್ಲಿ ಸುಮಲತಾ ಅಂಬರೀಶ್ ರನ್ನು ಕಿಡಿಗೇಡಿಗಳು ಏಳೆದು ತಂದಿದ್ದಾರೆ.

ಸುಮಲತಾ ಹೆಸರಿನಲ್ಲಿ ಸುಳ್ಳು ಸುದ್ದಿ
ನಟಿ ಸುಮಲತಾ ಹೆಸರಿನಲ್ಲಿ ನಕಲಿ ಪೇಸ್ ಬುಕ್ ಖಾತೆ ತೆರೆದ ಕಿಡಿಗೇಡಿಗಳು ಅದರ ಮೂಲಕ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಸುದೀಪ್ ಮತ್ತು ದರ್ಶನ್ ನಡುವಿನ ಗಲಾಟೆಯಲ್ಲಿ ಸುಮಲತಾ, ದರ್ಶನ್ ರಿಗೆ ಬೆಂಬಲ ನೀಡಿದ್ದಾರೆ ಎಂದು ಈ ಪೋಸ್ಟ್ ಮೂಲಕ ಬಿಂಬಿಸಲಾಗುತ್ತಿದೆ. ಈ ಮೂಲಕ ಈ ವಿವಾದವನ್ನು ಮತ್ತಷ್ಟು ಜಾಸ್ತಿ ಮಾಡಲು ತಯಾರಿ ನಡೆಸಿದ್ದಾರೆ.

ನಕಲಿ ಖಾತೆ ಮೂಲಕ ನಕಲಿ ಪೋಸ್ಟ್
''ಚಿತ್ರರಂಗದಲ್ಲಿ ಕಷ್ಟ ಪಟ್ಟು ಮೇಲೆ ಬಂದಿರುವ ನನ್ನ ಮಗ ದರ್ಶನ್ ವಿರುದ್ಧ ದುಷ್ಟ ಶಕ್ತಿಗಳು ಸಂಚು ರೂಪಿಸುತ್ತಿದೆ. ಇದರಿಂದ ವಿರೋಧಿಗಳು ಬಂಡೆಯೊಂದಿಗೆ ಯುದ್ಧಕ್ಕೆ ಇಳಿದಿದ್ದಾರೆ. - ನಿಮ್ಮ ಸುಮಲತಾ'' ಎಂಬ ಬರಹವನ್ನು ದರ್ಶನ್ ಹಾಗೂ ಸುಮಲತಾ ಫೋಟೋದೊಂದಿಗೆ ಈ ನಕಲಿ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

ಬ್ಲಾಕ್ ಮಾಡಿ ಎಂದ ಸುಮಲತಾ
ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಫೇಸ್ ಬುಕ್ ಪೇಜ್ ವಿರುದ್ಧ ಸುಮಲತಾ ಅಂಬರೀಶ್ ಟ್ವೀಟ್ ಮಾಡಿದ್ದಾರೆ. ಈ ಪೇಜ್ ನನ್ನದಲ್ಲ, ಇದರಿಂದ ಬರುವುದು ಸುಳ್ಳು ಸುದ್ದಿ. ಹೀಗಾಗಿ ಬ್ಲಾಕ್ ಮಾಡಿ ಎಂದು ತನ್ನ ಫಾಲೋವರ್ಸ್ ಗೆ ತಿಳಿಸಿದ್ದಾರೆ. ಆದರೆ, ಈಗಾಗಲೇ ಈ ಪೇಜ್ ಗೆ 38 ಸಾವಿರ ಜನರು ಲೈಕ್ ಮಾಡಿದ್ದಾರೆ. 45 ಸಾವಿರಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.

ಪದೇ ಪದೇ ಸುಮಲತಾಗೆ ಕಾಡುತ್ತಿದೆ ಈ ಸಮಸ್ಯೆ
ನಟಿ, ಸಂಸದೆ ಸುಮಲತಾಗೆ ಪದೇ ಪದೇ ಸೋಷಿಯಲ್ ಮೀಡಿಯಾದಲ್ಲಿ ಫೇಕ್ ಅಕೌಂಟ್ ಗಳ ಮೂಲಕ ಕಾಟ ನೀಡಲಾಗುತ್ತಿದೆ. ಈ ಹಿಂದೆ ಎರಡ್ಮೂರು ಬಾರಿ ಇದರ ವಿರುದ್ಧ ಸುಮಲತಾ ಧ್ವನಿ ಎತ್ತಿದ್ದಾರೆ. ಸೈಬರ್ ಕ್ರೈಂಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ. ಆದರೂ ಈಗಲೂ ಫೇಕ್ ಅಕೌಂಟ್ ಗಳ ಹಾವಳಿ ಮುಂದುವರೆದಿದೆ.


Click it and Unblock the Notifications











