Sudeep- Darshan: ಇನ್ನು ಹತ್ತಿರ ಹತ್ತಿರ.. ಕೈ ಚಾಚುತ್ತಲೇ ಇದ್ದ ಕಿಚ್ಚ: ಅಂದು ಪ್ರತಿಕ್ರಿಯಿಸಿದ್ದ ದಾಸ
"ನಾನು ಹಾಗೂ ಸುದೀಪ್ ಇನ್ಮುಂದೆ ಸ್ನೇಹಿತರಲ್ಲ" 6 ವರ್ಷಗಳ ಹಿಂದೆ ನಟ ದರ್ಶನ್ ಹೀಗೊಂದು ಟ್ವೀಟ್ ಮಾಡಿ ಶಾಕ್ ಕೊಟ್ಟಿದ್ದರು. ಇಬ್ಬರ ನಡುವೆ ಏನಾಯ್ತೋ ಏನೋ ಗೊತ್ತಿಲ್ಲ, ಆದರೆ ದರ್ಶನ್ ಟು ಬಿಟ್ಟಿದ್ದರು. ಆ ಬಳಿಕ ಇಬ್ಬರು ಎಂದು ಒಟ್ಟಿಗೆ ಕಾಣಿಸಿಕೊಳ್ಳಲೇಯಿಲ್ಲ. ಸುದೀಪ್ ಕೆಲವೊಮ್ಮೆ ದರ್ಶನ್ ಕಡೆ ಕೈಚಾಚಿದ್ದರು. ಆದರೆ ದರ್ಶನ್ ಮಾತ್ರ ಎಂದೂ ಸುದೀಪ್ ಬಗ್ಗೆ ಮಾತನಾಡಲಿಲ್ಲ. ಆದರೆ ಹೊಸಪೇಟೆ ಘಟನೆ ಬಳಿಕ ಸುದೀಪ್ ಬೆಂಬಲಕ್ಕೆ ದರ್ಶನ್ ಧನ್ಯವಾದ ತಿಳಿಸಿದ್ದರು.
ಒಂದ್ಕಾಲದಲ್ಲಿ ಬ್ರದರ್ ಫ್ರಮ್ ಅನದರ್ ಮದರ್ ಎನ್ನುವಂತಿದ್ದ ದರ್ಶನ್- ಸುದೀಪ್ ಇಬ್ಬರು ಇದ್ದಕ್ಕಿದಂತೆ ದೂರಾಗಿದ್ದರು. ಯಾವುದೋ ವೈಮನಸ್ಸಿನಿಂದ ಇಬ್ಬರ ನಡುವೆ ಕಂದಕ ಏರ್ಪಟ್ಟಿತ್ತು. ಕಿಚ್ಚ- ದಾಸ ಒಂದಾಗಬೇಕು ಎನ್ನುವುದು ಇಬ್ಬರ ಅಭಿಮಾನಿಗಳ ಆಶಯವಾಗಿತ್ತು. ಇದೀಗ ಸಂಸದೆ, ನಟಿ ಸುಮಲತಾ ಅಂಬರೀಶ್ ಬರ್ತ್ಡೇ ಪಾರ್ಟಿಯಲ್ಲಿ ಇಬ್ಬರು ಭಾಗಿ ಆಗಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋ ವೈರಲ್ ಆಗುತ್ತಿದೆ. ಪಾರ್ಟಿಯಲ್ಲಿ ಇಬ್ಬರು ಮುಖಾಮುಖಿ ಆಗಿದ್ದಾರೆ. ಆದರೆ ಇಬ್ಬರು ಒಟ್ಟಿಗೆ ಮಾತನಾಡಿದ್ರಾ? ಇಲ್ವಾ? ಅನ್ನೋದು ಮಾತ್ರ ಗೊತ್ತಾಗಿಲ್ಲ. ಇಷ್ಟು ಹತ್ತಿರವಾಗಿರುವವರು ಆದಷ್ಟು ಬೇಗ ಒಂದಾಗಲಿ, ಮತ್ತೆ ಒಬ್ಬರ ಹೆಗಲಮೇಲೆ ಮತ್ತೊಬ್ಬರು ಕೈಹಾಕಲಿ ಎನ್ನುವುದು ಅಭಿಮಾನಿಗಳ ಕೋರಿಕೆ.

ಸುದೀಪ್ ಹಾಗೂ ದರ್ಶನ್ ಒಟ್ಟೊಟ್ಟಿಗೆ ಚಿತ್ರರಂಗಕ್ಕೆ ಬಂದವರು. ಇಬ್ಬರೂ ದೊಡ್ಡ ಅಭಿಮಾನಿ ಬಳಗ ಸೃಷ್ಟಿಸಿಕೊಂಡರು. ಇಬ್ಬರ ನಡುವೆ ಸ್ನೇಹ ಶುರುವಾಗಿತ್ತು. ಕನ್ನಡ ಚಿತ್ರರಂಗದಲ್ಲಿ ವಿಷ್ಣು- ಅಂಬಿ ಬಳಿಕ ದಾಸ-ಕಿಚ್ಚ ಆಪ್ತಮಿತ್ರರು ಎನ್ನುವಂತಾಗಿತ್ತು. ಹೋದಲ್ಲಿ ಬಂದಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಕುಚಿಕು ಕುಚಿಕು ಹಾಡಿಗೆ ಹೆಜ್ಜೆ ಹಾಕಿ ರಂಜಿಸಿದ್ದರು. ಆದರೆ ಇದ್ದಕ್ಕಿದ್ದಂತೆ ಅದೊಂದು ದಿನ ಇಬ್ಬರು ದೂರಾಗಿದ್ದರು. ನಂತರ ಇಬ್ಬರು ಒಂದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿಲ್ಲ. ಸುದೀಪ್ ಭಾಗಿ ಆಗುವ ಕಾರ್ಯಕ್ರಮಕ್ಕೆ ದರ್ಶನ್ ಗೈರು, ದರ್ಶನ್ ಹಾಜರಾಗುವ ಕಾರ್ಯಕ್ರಮದಲ್ಲಿ ಕಿಚ್ಚನ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
6 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಸುಮಲತಾ ಅಂಬರೀಶ್ ಹುಟ್ಟುಹಬ್ಬದಲ್ಲಿ ದರ್ಶನ್- ಸುದೀಪ್ ಭಾಗಿ ಆಗಿದ್ದರು. ಸುಮಲತಾ ಹಾಗೂ ರಾಕ್ಲೈನ್ ವೆಂಕಟೇಶ್ ನೇತೃತ್ವದಲ್ಲಿ ಇಬ್ಬರು ಒಂದಾಗುತ್ತಾರೆ ಎನ್ನಲಾಗುತ್ತಿದೆ. ಇಬ್ಬರು ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸುವ ಬಗ್ಗೆಯೂ ಮಾತುಗಳು ಕೇಳಿಬರುತ್ತಿದೆ. ಅಂದಹಾಗೆ ಅಂದು ದರ್ಶನ್ ಮಾಡಿದ್ದ ಟ್ವೀಟ್ ಏನು? ಬಳಿಕ ಏನೆಲ್ಲಾ ಆಯಿತು ಮುಂದೆ ಓದಿ.
"ನಾನು ಹಾಗೂ ಸುದೀಪ್ ಇನ್ಮುಂದೆ ಸ್ನೇಹಿತರಲ್ಲ. ನಾವು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ನಟರು ಮಾತ್ರ. ದಯವಿಟ್ಟು ಯಾವುದೇ ಊಹಾಪೋಹಗಳು ಬೇಡ. ಇದು ಇಲ್ಲಿಗೆ ಮುಗಿಯಿತು" ಎಂದು ದರ್ಶನ್ ಅಂದು ಟ್ವೀಟ್ ಮಾಡಿದ್ದರು. ಮೊದಲಿಗೆ ಯಾರು ಕೂಡ ಈ ಟ್ವೀಟ್ ನಂಬಲಿಲ್ಲ. ಯಾರೋ ದರ್ಶನ್ ಅಕೌಂಟ್ ಹ್ಯಾಕ್ ಮಾಡಿ ಈ ರೀತಿ ಟ್ವೀಟ್ ಮಾಡಿದ್ದಾರೆ ಅಂದುಕೊಂಡಿದ್ದರು. ಆದರೆ ನಂತರ ಮತ್ತೊಂದು ಟ್ವೀಟ್ ಮಾಡಿ ದರ್ಶನ್ ಸ್ಪಷ್ಟನೆ ನೀಡಿದ್ದರು. ಅಲ್ಲಿಗೆ ಅದು ಖಚಿತವಾಗಿತ್ತು.

ದರ್ಶನ್ ಟ್ವೀಟ್ಗೆ ಸುದೀಪ್ ಪ್ರತಿಕ್ರಿಯಿಸಲಿಲ್ಲ. ತಮ್ಮ ಟ್ವೀಟ್ಗೆ ದರ್ಶನ್ ಕೊಟ್ಟ ಕಾರಣದ ಬಗ್ಗೆಯೂ ಮಾತನಾಡಲಿಲ್ಲ. ಬದಲಿಗೆ ತಮ್ಮಿಬ್ಬರ ಸ್ನೇಹದ ಬಗ್ಗೆ ಹಲವು ಬಾರಿ ಮಾತನಾಡಿದರು. ಕೆಲ ಬಾರಿ ದರ್ಶನ್ಗೆ ಬೆಂಬಲಿಸಿ ಸುದೀಪ್ ಟ್ವೀಟ್ ಸಹ ಮಾಡಿದ್ದರು. ಅಪಘಾತದಲ್ಲಿ ಗಾಯಗೊಂಡು ದರ್ಶನ್ ಆಸ್ಪತ್ರೆ ಸೇರಿದಾಗ ಶೀಘ್ರ ಚೇತರಿಕೆಗಾಗಿ ಸುದೀಪ್ ಪ್ರಾರ್ಥಿಸಿದ್ದರು. ಹೊಸಪೇಟೆಯಲ್ಲಿ ನಟ ದರ್ಶನ್ ಮೇಲೆ ಕಿಡಿಗೇಡಿ ಚಪ್ಪಲಿ ತೂರಿದ ಘಟನೆ ಬಗ್ಗೆ ಸುದೀಪ್ ಪ್ರತಿಕ್ರಿಯಿಸಿದ್ದರು. ಕಿಚ್ಚ ಸುದೀರ್ಘ ಪತ್ರ ಬರೆದು ಸ್ನೇಹಿತ ದರ್ಶನ್ ಬೆಂಬಲಕ್ಕೆ ನಿಂತಿದ್ದರು.
ಸುದೀಪ್ ಸ್ನೇಹಿತನತ್ತ ಕೈ ಚಾಚುತ್ತಲೇ ಇದ್ದರು. ಹೊಸಪೇಟೆ ಘಟನೆಗೆ ಸುದೀಪ್ ಬೆಂಬಲಕ್ಕೆ ಪ್ರತಿಕ್ರಿಯಿಸಿ ದರ್ಶನ್ ಕೂಡ ಧನ್ಯವಾದ ತಿಳಿಸಿದ್ದರು. ಅದನ್ನು ನೋಡಿ ಅಭಿಮಾನಿಗಳು ಆದಷ್ಟು ಬೇಗ ಸುದೀಪ್, ದರ್ಶನ್ ಒಂದಾಗುತ್ತಾರೆ ಎಂದುಕೊಂಡಿದ್ದರು. ನಟ ಜಗ್ಗೇಶ್ ಕೂಡ ಇದೇ ಆಶಯ ವ್ಯಕ್ತಪಡಿಸಿದ್ದರು. "ಪ್ರೀತಿಯ ದರ್ಶನ್ ಹಳೆಯ ಚಿಂತನೆಗೆ ವಿನಾಯ್ತಿ ಹೇಳಿ ಹೊಸ ಸ್ನೇಹದ ಭಾಷ್ಯಕ್ಕೆ ಮುನ್ನುಡಿ ಬರೆದು ಸುದೀಪ್ ನೀನು ಒಂದಾಗಿ ಸಹಸ್ರ ಅಭಿಮಾನಿಗಳಿಗೆ ಹರ್ಷದ ಹೊನಲುಹರಸಿ. ನೀವಿಬ್ಬರು ಒಂದಾದರೆ ಕೋಟಿಮನ ಒಂದಾಗಿ ಭಿನ್ನಾಭಿಪ್ರಾಯ ಎಂಬ ಕಾಡ್ಗಿಚ್ಚು ತಣ್ಣಗಾಗಿ ಸುಟ್ಟಜಾಗ ನಂದನವನ ಆಗುತ್ತದೆ" ಎಂದು ಟ್ವೀಟ್ ಮಾಡಿದ್ದರು.
ಸುದೀಪ್- ದರ್ಶನ್ ಒಂದಾಗುವುದು ಬಹುತೇಕ ಖಚಿತ ಎನ್ನಲಾಗ್ತಿದೆ. ಸುಮಲತಾ ಅಂಬರೀಶ್ ಬರ್ತ್ಡೇ ಪಾರ್ಟಿ ಅದಕ್ಕೆ ಮೊದಲ ಮೆಟ್ಟಿಲು ಎನ್ನುವ ಮಾತುಗಳು ಕೇಳಿಬರ್ತಿದೆ. ಕೇಕ್ ಕಟ್ಟಿಂಗ್ ವೇಳೆ ದರ್ಶನ್- ಸುದೀಪ್ ಇಬ್ಬರು ವೇದಿಕೆಯಲ್ಲಿ ಇದ್ದರು. ಕೇಟ್ ಕತ್ತರಿಸುತ್ತಿದ್ದಂತೆ ಇಳಿದು ಬರುತ್ತಿದ್ದ ಸುದೀಪ್ ಅವರನ್ನು ರಾಕ್ಲೈನ್ ವೆಂಕಟೇಶ್ ಮತ್ತೆ ಕರೆದು ನಿಲ್ಲಿಸಿದ್ದರು. ದರ್ಶನ್- ಸುದೀಪ್ ಇಬ್ಬರೂ ಸುಮಲತಾ ಅವರಿಗೆ ಕೇಕ್ ತಿನ್ನಿಸಿದ್ದಾರೆ.


Click it and Unblock the Notifications










