ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ
ಈ ಬಾರಿ ಮಂಡ್ಯ ಲೋಕಸಭೆ ಕ್ಷೇತ್ರದ ಚುನಾವಣೆ ಅಖಾಡ ಸಂಪೂರ್ಣ ಬದಲಾಗಿದೆ. 5 ವರ್ಷಗಳ ಹಿಂದಿನ ಚಿತ್ರಣಕ್ಕೂ ಈಗಿನ ಚಿತ್ರಣಕ್ಕೂ ಭಾರೀ ವ್ಯತ್ಯಾಸವಿದೆ. ಅಂದು ನಿಖಿಲ್ ಕುಮಾರಸ್ವಾಮಿ ವಿರುದ್ಧ ಸುಮಲತಾ ಅಂಬರೀಶ್ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ ಈಗ ಬಿಜೆಪಿ ಪಕ್ಷ ಹೇಳಿದರೆ ಕುಮಾರಸ್ವಾಮಿ ಪರ ಸುಮಲತಾ ಪ್ರಚಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಈ ಬಾರಿ ಮಾಜಿ ಸಿಎಂ ಕುಮಾರಸ್ವಾಮಿ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಈ ಬಾರಿ ಸ್ಟಾರ್ ಚಂದ್ರು ಹೆಚ್ಡಿಕೆಗೆ ಸವಾಲು ಹಾಕಿದ್ದಾರೆ. ಇನ್ನು ಕಳೆದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು ಸಂಸದೆಯಾಗಿದ್ದ ಸುಮಲತಾ ಅಂಬರೀಶ್ ಬಿಜೆಪಿ ಪಕ್ಷ ಸೇರಿದ್ದಾರೆ. ಇದೆಲ್ಲದರ ನಡುವೆ ನಟ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಮಂಡ್ಯದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಪರ ನಟ ದರ್ಶನ್ ಹಾಗೂ ಯಶ್ ಪ್ರಚಾರ ನಡೆಸಿದ್ದರು. ಸುಮಲತಾ ಗೆಲುವಿನಲ್ಲಿ ಇವರಿಬ್ಬರ ಪಾಲು ಇದೆ. ಈ ಬಾರಿ ಅವರಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ನಟ ದರ್ಶನ್ ಯಾರ ಪರವೂ ಪ್ರಚಾರ ಮಾಡಲ್ಲ ಎಂದು ಕೆಲವರು ಅಂದುಕೊಂಡಿದ್ದರು. ಆದರೆ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಬೇಟೆ ಆರಂಭಿಸಿ ಅಚ್ಚರಿ ಮೂಡಿಸಿದ್ದಾರೆ.
ಹಿಂದಿನ ಚುನಾವಣೆಯಲ್ಲಿ ಮಾಜಿ ಸಿಎಂ ಹೆಚ್ಡಿಕೆ ಹಾಗೂ ಸಂಸದೆ ಸುಮಲತಾ ಅಂಬರೀಶ್ ನಡುವೆ ಭಾರೀ ವಾಕ್ಸಮರ ನಡೆದಿತ್ತು. ಮಂಡ್ಯ ಕ್ಷೇತ್ರ ಗೆಲ್ಲಲು ಭಾರೀ ಕರಸತ್ತು ನಡೆಸಿದ್ದರು. ಇದೀಗ ಮೈತ್ರಿ ಅಭ್ಯರ್ಥಿಯಾಗಿಯೇ ಹೆಚ್ಡಿಕೆ ಕಣಕ್ಕಿಳಿದಿದ್ದು ಸಮಲತಾ ಅಂಬರೀಶ್ ಕೂಡ ಅವರನ್ನು ಬೆಂಬಲಿಸಬೇಕಾಗಿದೆ. ಇತ್ತೀಚೆಗೆ ಸುಮಲತಾ ಅವರ ಮನೆಗೆ ಮಾಜಿ ಸಿಎಂ ಭೇಟಿ ನೀಡಿ ಬೆಂಬಲಿಸುವಂತೆ ಮನವಿ ಮಾಡಿದ್ದರು.

ದರ್ಶನ್ ಅಮ್ಮ ಹೇಳಿದಂತೆ ಕೇಳುತ್ತೇನೆ ಎಂದಿದ್ದರು. ಇದೀಗ ಸುಮಲತಾ ಅವರ ಸಲಹೆ ಮೇರೆಗೆ ದರ್ಶನ್ ಕಾಂಗ್ರೆಸ್ ಪರ ಮಂಡ್ಯದಲ್ಲಿ ಪ್ರಚಾರ ನಡೆಸುತ್ತಿದ್ದಾರೆ ಎನ್ನುವ ಚರ್ಚೆಯೂ ನಡೆಯುತ್ತಿದೆ. ಈ ಬಗ್ಗೆ ಇದೀಗ ಖುದ್ದು ಸುಮಲತಾ ಅಂಬರೀಶ್ ಮಾತನಾಡಿದ್ದಾರೆ. "ದರ್ಶನ್ ಅವರನ್ನು ಬೇರೆ ಪಕ್ಷದ ಪರ ಪ್ರಚಾರಕ್ಕೆ ಹೋಗು ಅಥವಾ ಹೋಗಬೇಡ ಎಂದು ನಾನು ಯಾವತ್ತು ಹೇಳಲ್ಲ" ಎಂದಿದ್ದಾರೆ.
"ಒಂದು ವೇಳೆ ನಾನು ಸ್ಪರ್ಧಿಸಿದ್ದರೆ ಕಂಡಿತ ನನ್ನ ಪರವಾಗಿ ಪ್ರಚಾರ ಮಾಡುತ್ತಿದ್ದರು. ಅದು ಬಿಟ್ಟು ಬೇರೆಯವರ ರಾಜಕೀಯದ ಬಗ್ಗೆ ನಾವು ಯಾವತ್ತು ಚರ್ಚಿಸಲ್ಲ. ಪ್ರತಿದಿನ ಫೋನ ಮಾಡಿ ಯಾರ ಪರ ಹೋಗ್ತೀರಾ? ಅಂತ ಕೇಳುವ ಅಭ್ಯಾಸ ಕೂಡ ನನಗಿಲ್ಲ. ಅದು ಅವರ ಇಚ್ಛೆಗೆ ಬಿಟ್ಟಿದ್ದು. ನಾನ್ಯಾರು ಹೋಗು, ಹೋಗಬೇಡ ಅಂತ ಹೇಳೋಕೆ" ಎಂದು ಪ್ರಶ್ನಿಸಿದ್ದಾರೆ.
"ಅಸೆಂಬ್ಲಿ ಚುನಾವಣೆಯಲ್ಲಿ ಕೂಡ ದರ್ಶನ್ ಮದ್ದೂರಲ್ಲಿ ಕಾಂಗ್ರೆಸ್ ಪರ, ಶ್ರೀರಂಗಪಟ್ಟಣದಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದರು. ಪಾಂಡವಪುರದಲ್ಲಿ ದರ್ಶನ್ ಪುಟ್ಟಣ್ಣಯ್ಯ ಪರ ಮತ ಯಾಚಿಸಿದ್ದರು. ಮೊದಲಿನಿಂದಲೂ ನನಗೆ ಪಕ್ಷ ಮುಖ್ಯ ಅಲ್ಲ, ವ್ಯಕ್ತಿ ಮುಖ್ಯ ಎಂದು ಹೇಳುತ್ತಾ ಬರುತ್ತಿದ್ದಾರೆ. ಒಂದು ವೇಳೆ ನಾನು ಕಳುಹಿಸುವಂತಿದ್ದರೆ ನಾನ್ಯಾಕೆ ಬಿಜೆಪಿ ಸೇರುತ್ತಿದ್ದೆ. ನಾನು ಪಕ್ಷೇತರ. ನೇರವಾಗಿ ಬೆಂಬಲಿಸಬಹುದಿತ್ತಲ್ಲ. ನನಗೆ ಯಾರೂ ಒತ್ತಾಯ ಮಾಡೋಕೆ ಆಗಲ್ಲ. ಈ ಪಕ್ಷ ಸೇರು, ಆ ಪಕ್ಷ ಬೇಡ ಅಂತ" ಎಂದಿದ್ದಾರೆ.
"ನನ್ನ ಇಚ್ಛೆಯಿಂದ ನಾನು ಬಿಜೆಪಿಗೆ ಬಂದಿದ್ದೀನಿ. ಹಾಗಾಗಿ ಬೇರೆ ಪಕ್ಷಕ್ಕೆ ಹೋಗಿ ನೀನು ಸಪೋರ್ಟ್ ಮಾಡು ಎಂದು ನಾನು ದರ್ಶನ್ಗೆ ಹೇಳುವ ಪ್ರಶ್ನೆಯೇ ಬರಲ್ಲ" ಎಂದು ಸುಮಲತಾ ವಿವರಿಸಿದ್ದಾರೆ. ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆಸುವ ಬಗ್ಗೆಯೂ ಸುಮಲತಾ ಮಾತನಾಡಿದ್ದಾರೆ. ಪಕ್ಷ ನಿರ್ಧರಿಸಿದ ಕಡೆ ನಾನು ಪ್ರಚಾರಕ್ಕೆ ಹೋಗುತ್ತೇನೆ. ಮಂಡ್ಯದಲ್ಲಿ ಪ್ರಚಾರ ಮಾಡಬೇಕು ಅಂದ್ರು ಖಂಡಿತ ಮಾಡ್ತೀನಿ" ಎಂದು ಸ್ಪಷ್ಟನೆ ನೀಡಿದ್ದಾರೆ.


Click it and Unblock the Notifications











