10 ದಿನಕ್ಕೆ ದರ್ಶನ್, ಯಶ್ ಎಷ್ಟು ಸಂಭಾವನೆ ಪಡೀತಾರೆ, ಅದನ್ನೆಲ್ಲಾ ಬಿಟ್ಟು ಬನ್ನಿ ಅಂತ ಪದೇ ಪದೆ ಕರೆಯೋಕ್ಕಾಗಲ್ಲ
ರಾಜ್ಯದಲ್ಲಿ ಲೋಕಸಭೆ ಚುನಾವಣೆ ಕಾವು ಶುರುವಾಗುತ್ತಿದೆ. ಈಗಾಗಲೇ ಟಿಕೆಟ್ಗಾಗಿ ಭಾರೀ ಪೈಪೋಟಿ ಶುರುವಾಗಿದೆ. ಮಂಡ್ಯದಿಂದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದೆ ಸುಮಲತಾ ಅಂಬರೀಶ್ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಆದರೆ ಅದು ಸುಲಭವಾಗಿ ಸಿಗುವಂತೆ ಕಾಣುತ್ತಿಲ್ಲ. ಆದರೆ ಚುನಾವಣೆಗೆ ನಿಲ್ಲಲು ಅವರು ಭರ್ಜರಿ ಕಸರಸ್ತು ನಡೆಸುತ್ತಿದ್ದಾರೆ.
ಕಳೆದ ಬಾರಿ ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಗೆದ್ದಿದ್ದರು. ಬಳಿಕ ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸಿದ್ದರು. ಆದರೆ ಈ ಬಾರಿ ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಿದೆ. ಹಾಗಾಗಿ ಮಂಡ್ಯದಿಂದ ಯಾರಿಗೆ ಟಿಕೆಟ್ ಸಿಗುತ್ತದೆ ಎನ್ನುವ ಪ್ರಶ್ನೆ ಮೂಡಿದೆ. ಇದೆಲ್ಲದರ ನಡುವೆ ಸುಮಲತಾ ಅಂಬರೀಶ್ ಪದ ದರ್ಶನ್, ಯಶ್ ಪ್ರಚಾರ ನಡೆಸುತ್ತಾರಾ? ಎನ್ನುವ ಚರ್ಚೆ ಶುರುವಾಗಿದೆ.

ಇತ್ತೀಚೆಗೆ ಸಂಸದೆ ಸುಮಲತಾ ಅಂಬರೀಶ್ ಮನೆಯಲ್ಲಿ ನಡೆದ ಸಭೆಯಲ್ಲಿ ದರ್ಶನ್ ಭಾಗಿ ಆಗಿದ್ದರು. ಮದರ್ ಇಂಡಿಯಾ ಎಲ್ಲೇ ಸ್ಪರ್ಧಿಸಿದರೂ ಬೆಂಬಲ ಇರುತ್ತದೆ ಎಂದು ಹೇಳಿದ್ದರು. ಲೋಕಸಭೆ ಚುನಾವಣೆ ಸ್ಪರ್ಧೆ ಬಗ್ಗೆ ಸುಮಲತಾ ಮಂಡ್ಯದಲ್ಲಿ ಮಾಧ್ಯಮಗಳ ಜೊತೆ ಮತ್ತೆ ಮಾತನಾಡಿದ್ದಾರೆ. ಟಿಕೆಟ್ಗಾಗಿ ಕೇಂದ್ರ ಬಿಜೆಪಿ ನಾಯಕರ ಜೊತೆ ಯಾವುದೇ ರೀತಿಯ ಚರ್ಚೆ ನಡೆಸಿಲ್ಲ ಎಂದಿದ್ದಾರೆ.
ಇನ್ನು ಯಶ್ ತಮ್ಮ ಪರ ಪ್ರಚಾರಕ್ಕೆ ಬರುವ ಬಗ್ಗೆ ಕೇಳಿದ ಪ್ರಶ್ನೆಗೆ ಸುಮಲತಾ ಉತ್ತರಿಸಿದ್ದಾರೆ. "ಕಳೆದ ಚುನಾವಣೆ ಬಳಿಕ ಯಶ್ ಜೊತೆ ಸಾಕಷ್ಟು ಬಾರಿ ಮಾತನಾಡಿದ್ದೇನೆ. ಈ ವೇಳೆ ರಾಜಕಾರಣ ಅಂದ್ರೆ ಕಹಿ ಹೀಗಿರುತ್ತಾ? ಇಷ್ಟೆಲ್ಲಾ ಟೀಕೆ, ಕಷ್ಟ ಇರುತ್ತಾ? ಅನ್ನೋದು ಮೊದಲು ಗೊತ್ತಿರಲಿಲ್ಲ. ನಿಮ್ಮ ಚುನಾವಣೆ ವೇಳೆ ಗೊತ್ತಾಯಿತು ಎಂದು ಹಲವು ಬಾರಿ ಚರ್ಚಿಸಿದ್ದಾರೆ. ಸದ್ಯ ಈ ಅವರು ಬಹಳ ಬ್ಯುಸಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದರು. ಅವರಿಗೆ ಈಗ ನಿರೀಕ್ಷಿಸುವುದು ತಪ್ಪಾಗುತ್ತದೆ" ಎಂದು ಸುಮಲತಾ ಹೇಳಿದ್ದಾರೆ.
"ಯಶ್ ಪ್ರಚಾರಕ್ಕೆ ಬರ್ತೀನಿ ಅಂದ್ರೆ ನನ್ನಷ್ಟು ಸಂತೋಷಪಡುವವರು ಯಾರು ಇಲ್ಲ. ಬರೋಕ್ಕಾಗಲ್ಲ ಅಂದ್ರು ಏನು ಮಾಡೋಕ್ಕಾಗಲ್ಲ. ಕಳೆದ ಬಾರಿ ಕೂಡ ನಾನು ಯಾರನ್ನು ಕೇಳಿ ಬರಲಿಲ್ಲ. ಮನೆ ಮಕ್ಕಳಾಗಿ ಅಂಬರೀಶ್ ಮೇಲಿನ ಅಭಿಮಾನ, ನಮ್ಮ ಕುಟುಂಬದ ಜೊತೆಗಿನ ನಂಟಿನಿಂದ ಅವರೇ ಬಂದ್ರು. ನಾವು ಜೊತೆಗಿರ್ತೀವಿ ಅಂದ್ರು. ಈಗಲೂ ಅಷ್ಟೆ. ಅವ್ರು ಒಪ್ಪಿಗೆ ನನಗೆ ಸಂತೋಷ. ಇಲ್ಲ ಅಂದ್ರು ಪರವಾಗಿಲ್ಲ" ಎಂದಿದ್ದಾರೆ.

"ಕಳೆದ ಚುನಾವಣೆಯಲ್ಲಿ ಜೊತೆಗಿದ್ದವರು ಈ ಬಾರಿಯೂ ಜೊತೆಗಿದ್ದಾರೆ. ಕಳೆದ ಬಾರಿ ಅವರದ್ದು ಬರೀ ಬೆಂಬಲ ಅಲ್ಲ ತ್ಯಾಗ ನನಗೋಸ್ಕರ. 20-25 ದಿವಸ ಇದ್ದರು. ದಕ್ಷಿಣ ಭಾರತದ ಇಬ್ಬರೂ ಸ್ಟಾರ್ಸ್ ಒಬ್ಬ ಅಭ್ಯರ್ಥಿ ನಿಂತಿದ್ದು ಸಾಹಸ. ಪದೇ ಪದೆ ಬನ್ನಿ ಎನ್ನುವುದು ಸರೀನಾ ನೀವೇ ಹೇಳಿ. ಯಶ್, ದರ್ಶನ್ ಸಿನಿಮಾ ಮಾಡುವಾಗ ಎಷ್ಟು ಜನ ಅದರ ಮೇಲೆ ಅವಲಂಬಿತರಾಗಿರುತ್ತಾರೆ. ಹತ್ತಿಪ್ಪತ್ತು ದಿನಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ನಿಮಗೆ ಗೊತ್ತು. ಅದನ್ನೆಲ್ಲಾ ಬಿಟ್ಟು ಬನ್ನಿ ಎನ್ನುವುದು ಸರಿಯಲ್ಲ. ಬಂದರೆ ನನಗೆ ಬಲ" ಎಂದು ಸುಮಲತಾ ಹೇಳಿದ್ದಾರೆ.


Click it and Unblock the Notifications











