Don't Miss!
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂಬರೀಶ್ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಕಾರ್ಯ ಮಾಡಬೇಡಿ: ಅಭಿಮಾನಿಗಳಿಗೆ ಸುಮಲತಾ ಮನವಿ
ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ದೊರೆತಿದೆ. ಪದ್ಮ ಪ್ರಶಸ್ತಿ ನೀಡಬೇಕೆಂಬ ಒತ್ತಾಯ ಗಟ್ಟಿಯಾಗಿ ಕೇಳಿ ಬರುತ್ತಿದೆ. ಕೆಲವು ರಸ್ತೆಗಳಿಗೆ ಪುನೀತ್ ಹೆಸರು ಇಡಲಾಗಿದೆ. ''ಪುನೀತ್ಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸಲಾಗುವುದು'' ಎಂದು ಸ್ವತಃ ಮುಖ್ಯ ಮಂತ್ರಿಗಳೇ ಹೇಳಿದ್ದಾರೆ.
Recommended Video
ಆದರೆ ಪುನೀತ್ಗೆ ಗೌರವಗಳು ಅರಸಿ ಬಂದ ಬೆನ್ನಲ್ಲೇ, ಕೆಲವು ಹಿರಿಯ ನಟರ ಅಭಿಮಾನಿಗಳು ಸಣ್ಣ ಅಸಮಾಧಾನ ಹೊರಹಾಕಿದ್ದಾರೆ. ವಿಷ್ಣುವರ್ಧನ್, ಅಂಬರೀಶ್ ಅವರಿಗೆ ಸಿಗಬೇಕಾದ ಗೌರವಗಳನ್ನು ನೀಡುವಲ್ಲಿ ಸರ್ಕಾರ ಎಡವಿದೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿವೆ.
ಪುನೀತ್ ನಿಧನದ ಕೆಲವು ದಿನಗಳಲ್ಲಿಯೇ ವಿಷ್ಣುವರ್ಧನ್ ಸ್ಮಾರಕ ಮತ್ತು ವಿಷ್ಣುವರ್ಧನ್ಗೆ ಪದ್ಮ ಪ್ರಶಸ್ತಿ ಬಗ್ಗೆ ಜೋರು ಚರ್ಚೆ ಪ್ರಾರಂಭವಾಯಿತು. ಅದರ ಬಳಿಕ ಈಗ ಅಂಬರೀಶ್ ಅಭಿಮಾನಿಗಳು ದನಿಗೂಡಿಸಿದ್ದು, ತಮ್ಮ ನೆಚ್ಚಿನ ನಟನಿಗೆ ಸೂಕ್ತ ಗೌರವ ಸಲ್ಲಬೇಕೆಂದು ಒತ್ತಾಯಿಸುತ್ತಿದ್ದಾರೆ. ಅಂಬರೀಶ್ ಅವರ ಸ್ಮಾರಕ ಅಭಿವೃದ್ಧಿ, ರಸ್ತೆಗೆ ಹೆಸರು ನಾಮಕರಣ ಇತ್ಯಾದಿಗಳನ್ನು ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಆದರೆ ಇದರ ಬಗ್ಗೆ ನಟಿ ಸುಮಲತಾ ಅಂಬರೀಶ್ ಅಸಮಾಧಾನ ವ್ಯಕ್ತಪಡಿಸಿದ್ದು, ಅಂಬರೀಶ್ ಅಭಿಮಾನಿಗಳಲ್ಲಿ ವಿನಮ್ರ ಮನವಿಯೊಂದನ್ನು ಮಾಡಿದ್ದಾರೆ.
ಸುಮಲತಾ, ಅಂಬರೀಶ್ ಅಭಿಮಾನಿಗಳಿಗೆ ಬರೆದಿರುವ ಬಹಿರಂಗ ಪತ್ರ ಯಥಾವತ್ತು ಇಲ್ಲಿದೆ...
ಹೋರಾಟ ಮಾಡುವ ವಿಷಯ ಗಮನಕ್ಕೆ ಬಂದಿದೆ: ಸುಮಲತಾ
''ನನ್ನ ಮನವಿ, ನಮ್ಮ ಪ್ರೀತಿಯ ಡಾ.ಅಂಬರೀಶ್ ಅವರನ್ನು ಆರಾಧ್ಯ ದೈವದಂತೆ ಪ್ರೀತಿಸಿ, ಅವರ ನೆನಪನ್ನು ಚಿರಸ್ಥಾಯಿಯಾಗಿ ಬೆಳಗಿಸುತ್ತಿರುವ ನೆಚ್ಚಿನ ಅಭಿಮಾನಿ ಸಂಘಗಳು ಹಾಗೂ ಇನ್ನಿತರ ಸಂಘಟನೆಗಳು ಇಂದು ಅಂಬರೀಶ್ ಅವರ ಸ್ಮಾರಕ ಅಭಿವೃದ್ಧಿಗೊಳಿಸುವುದು, ಅವರ ಹೆಸರಿನಲ್ಲಿ ರಸ್ತೆಗಳನ್ನು ನಾಮಕರಣ ಮಾಡುವುದು ಮತ್ತು ಇನ್ನಿತರ ಬೇಡಿಕೆಗಳನ್ನು ಒತ್ತಾಯಿಸಿ ಹೋರಾಟ ಮಾಡುವುದಾಗಿ ಹೇಳಿರುವುದು ಸಾಮಾಜಿಕ ಜಾಲತಾಣಗಳ ಮೂಲಕ ನನ್ನ ಗಮನಕ್ಕೆ ಬಂದಿದೆ. ನಮ್ಮ ಕುಟುಂಬದೊಂದಿಗೆ ಅತಿ ಹೆಚ್ಚು ಒಡನಾಟ ಹೊಂದಿದ್ದ ಹಾಗೂ ನಮ್ಮ ಮನೆ ಮಗನಂತಿದ್ದ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡಿರುವ ಆಘಾತಕಾರಿ ಘಟನೆಯಿಂದ ನನಗಾಗಿರುವ ನೋವನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ''.
ಗಾಯದ ಮೇಲೆ ಬರೆ ಎಳೆದಂತೆ: ಸುಮಲತಾ
''ಇದರೊಂದಿಗೆ ಚಿತ್ರರಂಗ, ಅಭಿಮಾನಿಗಳು, ಹಾಗೂ ಕರ್ನಾಟಕ ರಾಜ್ಯದ ಜನತೆಗೆ ತುಂಬಲಾರದಂತ ನಷ್ಟ ಉಂಟಾಗಿದ್ದು, ಈ ಸಮಯದಲ್ಲಿ ತಾವುಗಳು ಹೋರಾಟ ಮಾಡುವ ನಿರ್ಧಾರ ಮಾಡಿರುವುದು ಎಲ್ಲರ ಹೃದಯದ ಮೇಲೆ ಆಗಿರುವ ಗಾಯದ ಮೇಲೆ ಬರೆ ಎಳೆದಂತೆ ಆಗುತ್ತದೆ. ಆದುದರಿಂದ, ಈ ಸಮಯದಲ್ಲಿ ಈ ವಿಷಯ ಪ್ರಸ್ತಾಪಿಸುವುದು ಸಮಂಜಸವಲ್ಲ. ನಿಮ್ಮ ಭಾವನೆಗಳನ್ನು ನಾನು ಗೌರವಿಸುತ್ತೇನೆ, ಆದರೆ ಪ್ರಸ್ತುತ ಸಂದರ್ಭದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುವುದರಿಂದ ಅಂಬರೀಷ್ ಅವರ ಘನತೆ ಹಾಗೂ ಗೌರವಕ್ಕೆ ಧಕ್ಕೆಯಾಗುತ್ತದೆ. ಯಾವುದೇ ಪ್ರಶಸ್ತಿಯಾದರು ಕೇಳಿ ಪಡೆಯುವುದು ಅತಿಶಯೋಕ್ತಿಯಾಗಬಾರದು''.
ಪ್ರಶಸ್ತಿಗಳನ್ನು ಮೀರಿದ ಗೌರವ ನೀಡಿದ್ದೀರಿ: ಸುಮಲತಾ
''ಎಲ್ಲಾ ಪ್ರಶಸ್ತಿಗಳನ್ನು ಮೀರಿದಂತ ಪ್ರೀತಿ ಮತ್ತು ಅಭಿಮಾನವನ್ನು ನೀವುಗಳು ನಮ್ಮ ಕುಟುಂಬಕ್ಕೆ ನೀಡಿದ್ದೀರಿ. ಅಂಬರೀಷ್ ಅವರು ತಮ್ಮ ಜೀವನದಲ್ಲಿ ಯಾವ ಪ್ರಶಸ್ತಿ, ಹುದ್ದೆ ಅಥವಾ ಸನ್ಮಾನವನ್ನು ಬಯಸಿದವರಲ್ಲ. ಹೀಗಾಗಿ ಅಂಬರೀಷ್ ಅವರ ಅಭಿಮಾನಿಗಳಾಗಿ ತಾವುಗಳು ಸಹ ಅವರ ಹಾದಿಯಲ್ಲಿ ನಡೆಯಬೇಕು ಎನ್ನುವುದು ನನ್ನ ಆಶಯ. ಆದುದರಿಂದ, ಈ ಸಮಯದಲ್ಲಿ ಪ್ರಶಸ್ತಿ ಕೋರಿ ಹೋರಾಟ ಅಥವಾ ಪ್ರತಿಭಟನೆ ನಡೆಸುವುದು ಅಂಬರೀಷ್ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ವಿಷಯವಾಗಿದೆ''.
24ನೇ ತಾರೀಕಿನಂದು ಅಂಬರೀಷ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆ
''ಆದುದರಿಂದ, ತಮ್ಮೆಲ್ಲರ ಅಭಿಮಾನ ಮತ್ತು ಪ್ರೀತಿ-ವಾತ್ಸಲ್ಯಗಳನ್ನು ಗೌರವಿಸುತ್ತ ಹಾಗೂ ನಿಮ್ಮೆಲ್ಲರ ಆಸೆಯನ್ನು ಮುಂದಿನ ದಿನಗಳಲ್ಲಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಈಡೇರಿಸುತ್ತದೆ ಎಂದು ಮಾನ್ಯ ಮುಖ್ಯಮಂತ್ರಿಗಳ ಮೇಲೆ ಭರವಸೆಯನ್ನು ಇಡುತ್ತಾ, ತಾವು ತೆಗೆದುಕೊಂಡಿರುವ ಈ ಹೋರಾಟದ ನಿರ್ಧಾರವನ್ನು ಹಿಂಪಡೆದು ನವೆಂಬರ್ 24ನೇ ತಾರೀಕಿನಂದು ಅಂಬರೀಷ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆಯನ್ನು ಶಾಂತಿಯುತವಾಗಿ ನೆರವೇರಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರೋಣ ಎಂದು ತಮ್ಮಲ್ಲಿ ಕಳಕಳಿಯಿಂದ ಪ್ರಾರ್ಥಿಸುತ್ತೇನೆ''.
ಅಂಬರೀಶ್ ಹಾಗೂ ದೊಡ್ಮನೆ ಕುಟುಂಬದ ಆತ್ಮೀಯತೆ
ಅಂಬರೀಶ್ ಹಾಗೂ ಡಾ.ರಾಜ್ಕುಮಾರ್ ಕುಟುಂಬದ ನಡುವಿನ ಆಪ್ತತೆ ಅಪ್ಯಾಯಮಾನವಾಗಿತ್ತು. ರಾಜ್ಕುಮಾರ್ ಕಾಲವಾದ ಬಳಿಕವೂ ಎರಡೂ ಕುಟುಂಬಗಳು ವಿಶ್ವಾಸದಿಂದಿದ್ದವು. ಅಂಬರೀಶ್ ಹಾಗೂ ಅಪ್ಪು ಒಟ್ಟಿಗೆ 'ದೊಡ್ಮನೆ ಹುಡ್ಗ' ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ಹಿಟ್ ಆಗಿತ್ತು. ಅಂಬರೀಶ್ ಕಾಲವಾದ ಬಳಿಕವೂ ದೊಡ್ಮನೆ ಹಾಗೂ ಅಂಬರೀಶ್ ಕುಟುಂಬಗಳ ನಡುವಿನ ಆಪ್ತತೆ ಕಡಿಮೆಯಾಗಲಿಲ್ಲ. ಸುಮಲತಾರೊಂದಿಗೆ ಆತ್ಮೀಯ ಬಂಧವನ್ನು ಪುನೀತ್ ಹೊಂದಿದ್ದರು. ಸುಮಲತಾ ಅವರಿಗಾಗಿ ಕಾರ್ಯಕ್ರಮವೊಂದರಲ್ಲಿ ಪುನೀತ್ ರಾಜ್ಕುಮಾರ್ ಹಾಡು ಹಾಡಿದ್ದ ವಿಡಿಯೋ ಇದಕ್ಕೆ ಸಾಕ್ಷಿ.
ಸುಮಲತಾರನ್ನು ಮದುವೆ ಆಗುತ್ತೇನೆಂದಿದ್ದ ಬಾಲ ಅಪ್ಪು
ಪುನೀತ್ಗೆ ಸಹ ಸುಮಲತಾ ಕಂಡರೆ ಬಹಳ ವಿಶೇಷ ಪ್ರೇಮವಿತ್ತು. ಪುನೀತ್ ಬಾಲನಟನಾಗಿದ್ದಾಗ ತಾನು ಸುಮಲತಾ ಅಂಬರೀಶ್ ಅವರನ್ನು ಮದುವೆಯಾಗುವುದಾಗಿ ಹಠ ಮಾಡುತ್ತಿದ್ದರಂತೆ. ಸುಮಲತಾ ಸಹ ಈ ವಿಷಯದ ಬಗ್ಗೆ ತಮಾಷೆಯಾಗಿ ಮಾತನಾಡಿದ್ದರು. ಇದೀಗ ಪುನೀತ್ ಸಾವಿನ ಬೆನ್ನಲ್ಲೆ ಅಂಬರೀಶ್ ಅಭಿಮಾನಿಗಳು ಪ್ರತಿಭಟನೆಗೆ ಮುಂದಾಗಿರುವುದು ಸಹಜವಾಗಿಯೇ ಸುಮಲತಾರ ಮನಸ್ಸಿಗೆ ನೋವುಂಟು ಮಾಡಿದೆ.