ಸುಮಲತಾ-ಎಚ್ಡಿಕೆ ವಾಗ್ಯುದ್ಧದ ನಡುವೆ ವಿಷ್ಣುವರ್ಧನ್ ಸ್ಮಾರಕ ವಿಚಾರ: ಸುಮಲತಾ ಹೇಳಿದ್ದೇನು?
ಸುಮಲತಾ-ಎಚ್.ಡಿ.ಕುಮಾರಸ್ವಾಮಿ ನಡುವಿನ ವಾಗ್ದಾಳಿ ಹಲವು ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಈಗಾಗಲೇ ನಿಧನ ಹೊಂದಿರುವ ವ್ಯಕ್ತಿಗಳ ಹೆಸರನ್ನು ಚರ್ಚೆಗೆ ಎಳೆದು ತರಲಾಗುತ್ತಿದೆ.
ಈ ಇಬ್ಬರ ರಾಜಕೀಯ ಭಿನ್ನಾಭಿಪ್ರಾಯಗಳು ಮಾತ್ರವೇ ಚರ್ಚೆಯಾಗದೆ ದಿವಂಗತ ಅಂಬರೀಶ್ ವಿಚಾರ, ದಿವಂಗತ ವಿಷ್ಣುವರ್ಧನ್ ಸ್ಮಾರಕ ವಿಚಾರ ಇನ್ನೂ ಹಲವು ವಿಚಾರಗಳು ಚರ್ಚೆಗೆ ಬಂದು ಅನವಶ್ಯಕ ಗೊಂದಲ ಮತ್ತು ವಿವಾದವನ್ನು ಸೃಷ್ಟಿಸುತ್ತಿವೆ.
ಸುಮಲತಾ ವಿರುದ್ಧ ನೀಡಿದ್ದ ಅವಹೇಳನಕಾರಿ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ನಂತರ ಸ್ಪಷ್ಟೀಕರಣ ನೀಡುವ ಧಾಟಿಯಲ್ಲಿ ಮಾತನಾಡುತ್ತಾ, ಅಂಬರೀಶ್ ಬಗ್ಗೆ ಟೀಕೆ ಮಾಡಿದ ಕುಮಾರಸ್ವಾಮಿ, ಮುಂದುವರೆದು ಮಾತನಾಡಿ, ''ನಾನು ಸಿಎಂ ಆಗಿದ್ದಾಗ ರಾಜ್ಕುಮಾರ್ ಸ್ಮಾರಕ ಆಯಿತು. ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಸ್ಥಳ ಮಂಜೂರು ಮಾಡಿ, ಅನುದಾನ ಬಿಡುಗಡೆ ಮಾಡಿದ್ದು ನಾನು. ಅದೇ ಬಿಜೆಪಿ ಅಧಿಕದಲ್ಲಿದ್ದಾಗ ನಿಧನ ಹೊಂದಿದ ವಿಷ್ಣುವರ್ಧನ್ ಸ್ಮಾರಕ ಏಕೆ ಇನ್ನೂ ನಿರ್ಮಾಣ ಆಗಿಲ್ಲ ಎಂಬುದನ್ನು ಸುಮಲತಾ ಅರ್ಥ ಮಾಡಿಕೊಳ್ಳಬೇಕು'' ಎಂದಿದ್ದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ವಿಷ್ಣುವರ್ಧನ್ ನಿಧನ ಹೊಂದಿದ್ದರು. ವಿಷ್ಣುವರ್ಧನ್ ಸ್ಮಾರಕಕ್ಕೆ ಸಂಬಂಧಿಸಿದಂತೆ ಜಾಗದ ವಿವಾದ ಇತ್ತು. ಹಾಗಾಗಿ ಈ ವರೆಗೆ ವಿಷ್ಣುವರ್ಧನ್ ಸ್ಮಾರಕ ಪೂರ್ಣವಾಗಿಲ್ಲ.

''ಅಂಬರೀಶ್ ಸ್ಮಾರಕ ನಿರ್ಮಾಣ ಮಾಡಲಾಗುವುದಿಲ್ಲ ಎಂದಿದ್ದರು ಎಚ್ಡಿಕೆ''
ಕುಮಾರಸ್ವಾಮಿ ಅವರು ವಿಷ್ಣುವರ್ಧನ್ ಸ್ಮಾರಕದ ಚರ್ಚೆ ಎತ್ತಿದ್ದಕ್ಕೆ ಪ್ರತಿಕ್ರಿಯಿಸಿರುವ ಸುಮಲತಾ, '' ಅಂಬರೀಶ್ ಸ್ಮಾರಕ ನಿರ್ಮಾಣ ಮಾಡಲಾಗುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದರು. ಆದರೆ ಈಗ ಅವರೇ ಸ್ಮಾರಕ ನಿರ್ಮಾಣದ ಕ್ರೆಡಿಟ್ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾರೆ'' ಎಂದು ಹೇಳಿದ್ದಾರೆ.

''ಅಂಬರೀಶ್ ಸ್ಮಾರಕಕ್ಕೂ ಮುಂಚೆ ವಿಷ್ಣು ಸ್ಮಾರಕ ಕಾರ್ಯ ಆರಂಭವಾಗಿದೆ''
''ಅಂಬರೀಶ್ ಸ್ಮಾರಕದ ವಿಚಾರವಾಗಿ ಈಗಿನ ಸಿಎಂ ಯಡಿಯೂರಪ್ಪ ಅವರು ಪೂರ್ಣ ಬೆಂಬಲದ ಭರವಸೆ ನೀಡಿದ್ದಾರೆ. ಅಷ್ಟು ಮಾತ್ರವೇ ಅಲ್ಲದೆ, ಅಂಬರೀಶ್ ಸ್ಮಾರಕ ನಿರ್ಮಾಣ ಕಾರ್ಯಕ್ಕೂ ಮೊದಲೇ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಕಾರ್ಯ ಆರಂಭವಾಗಿದ್ದಾಗಿದೆ. ಏಕೆ ಕೆಲವರು ಈ ಎರಡೂ ವಿಚಾರಗಳನ್ನಿಟ್ಟುಕೊಂಡು ಗೊಂದಲ ಮೂಡಿಸಲು ಯತ್ನಿಸುತ್ತಿದ್ದಾರೆ ಅರ್ಥವಾಗುತ್ತಿಲ್ಲ'' ಎಂದಿದ್ದಾರೆ.

''ಜಾಗದ ವಿಷಯದಲ್ಲಿ ಗೊಂದಲವಾಗಿತ್ತು, ಈಗ ಎಲ್ಲ ಸರಿ ಹೋಗಿದೆ''
''ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಜಾಗದ ವಿಷಯದಲ್ಲಿ ಗೊಂದಲ ಉಂಟಾಗಿತ್ತು. ಆದರೆ ಅದು ಈಗ ಬಹಳ ಒಳ್ಳೆಯ, ವಿಶಾಲವಾದ ಜಾಗದಲ್ಲಿ, ಕುಟುಂಬದವರ ಇಚ್ಛೆಯಂತೆಯೇ ನಿರ್ಮಾಣವಾಗುತ್ತಿದೆ. ಅದು ಅಂಬರೀಶ್ ಸ್ಮಾರಕದ ಕಾರ್ಯ ಆರಂಭವಾಗುವ ಮುನ್ನವೇ ಆರಂಭವಾಗಿದೆ. ಅಂಬರೀಶ್ ಸ್ಮಾರಕ್ಕೂ ಮುನ್ನವೇ ಅದು ಪೂರ್ಣಗೊಳ್ಳುವ ಸಾಧ್ಯತೆಯೂ ಇದೆ'' ಎಂದಿದ್ದಾರೆ ಸುಮಲತಾ.
Recommended Video

ಯಾರೇ ಸಿಎಂ ಆಗಿದ್ದರೂ ಸ್ಮಾರಕ ಮಾಡುತ್ತಿದ್ದರು: ರಾಕ್ಲೈನ್
ವಿಷ್ಣುವರ್ಧನ್ ಸ್ಮಾರಕ ವಿಚಾರವಾಗಿ ಕುಮಾರಸ್ವಾಮಿ ಆಡಿದ ಮಾತಿಗೆ ಪ್ರತಿಕ್ರಿಯೆ ನೀಡಿರುವ ರಾಕ್ಲೈನ್ ವೆಂಕಟೇಶ್, ''ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ಯಡಿಯೂರಪ್ಪ ಬಳಿ ಮಾತನಾಡಿ, ಜಗಳ ಮಾಡಿ ಅದಕ್ಕೆ ಸ್ಥಳ ಒದಗಿಸಿಕೊಡುವ ಕಾರ್ಯ ಮಾಡಿದ್ದು ಸಹ ಮಾಡಿದ್ದರು. ಅಂಬರೀಶ್ ಸ್ಮಾರಕ ನಾನು ಮಾಡಿದೆ ಎಂದು ಹೇಳುತ್ತಿದ್ದೀರಲ್ಲ. ನೀವು ಮಾತ್ರ ಅಲ್ಲ ಯಾರೇ ಸಿಎಂ ಆಗಿದ್ದರೂ ಸಹ ಅಂಬರೀಶ್ ಸ್ಮಾರಕ ನಿರ್ಮಾಣ ಮಾಡಲೇ ಬೇಕಿತ್ತು. ಅದು ಅವರ ಕರ್ತವ್ಯ'' ಎಂದಿದ್ದಾರೆ ರಾಕ್ಲೈನ್.


Click it and Unblock the Notifications











