ಕೊನೆಗೂ ನಿರ್ಧಾರ ಘೋಷಿಸಿದ ಸುಮಲತಾ: ದರ್ಶನ್-ಯಶ್ ಗೆ ಗೆಲ್ಲಿಸುವ ಜವಾಬ್ದಾರಿ
ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರು ಸ್ಪರ್ಧಿಸುವುದು ಖಚಿತವಾಗಿದ್ದು, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದಾರೆ.
ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸುಮಲತಾ ಅಂಬರೀಶ್ ''ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ'' ಎಂದು ಘೋಷಿಸಿದ್ದಾರೆ. ''ನನ್ನ ಜೊತೆ ಅಂಬರೀಶ್ ಅಭಿಮಾನಿಗಳಿದ್ದಾರೆ, ನನ್ನ ಹಿತೈಷಿಗಳಿದ್ದಾರೆ ಎಂಬ ಆತ್ಮವಿಶ್ವಾಸದಿಂದ ನಾನು ಸ್ಪರ್ಧೆ ಮಾಡುತ್ತಿದ್ದೇನೆ'' ಎಂದು ಘೋಷಿಸಿದ್ದಾರೆ.
''ಮಂಡ್ಯ ಜನರು ಅಂಬರೀಶ್ ಅವರ ಮೇಲೆ ಇಟ್ಟಿದ್ದ ಪ್ರೀತಿಯನ್ನ ನಾವು ಮರೆತಿಲ್ಲ. ಅವರು ಇದ್ದಾಗ ಇದ್ದ ಪ್ರೀತಿ ಈಗ ನಮ್ಮ ಕುಟುಂಬದ ಮೇಲೆ ತೋರಿಸುತ್ತಿದ್ದಾರೆ. ಹಾಗಾಗಿ, ಅವರ ಋಣವನ್ನ ನಾನು ತೀರಿಸಬೇಕಾಗಿದೆ'' ಎಂದು ಸುಮಲತಾ ಹೇಳಿದ್ದಾರೆ.

ಮಾರ್ಚ್ 20ಕ್ಕೆ ನಾಮಪತ್ರ ಸಲ್ಲಿಕೆ
ಇಂದು ಅಧಿಕೃತವಾಗಿ ಸ್ಪರ್ಧೆ ಬಗ್ಗೆ ಮಾಹಿತಿ ನೀಡಿದ ಸುಮಲತಾ ಅಂಬರೀಶ್ ಅವರು, ಮಾರ್ಚ್ 20 ರಂದು ಬೆಳಿಗ್ಗೆ 10 ಗಂಟೆಗೆ ಮಂಡ್ಯದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಸುಮಲತಾ ಅವರಿಗೆ ಅಂಬರೀಶ್ ಅಭಿಮಾನಿಗಳು ಮತ್ತು ಚಿತ್ರರಂಗದವರು ಸಾಥ್ ನೀಡಲಿದ್ದಾರೆ.

ದರ್ಶನ್-ಯಶ್ ಗೆ ಹೆಚ್ಚಿನ ಜವಾಬ್ದಾರಿ
ಸುಮಲತಾ ಅವರ ಪರ ಇಂಡಸ್ಟ್ರಿಯಲ್ಲಿ ಯಾರಿದ್ದಾರೆ ಎಂದು ಕೇಳುತ್ತಿದ್ದವರಿಗೆ ಇಂದು ಅಧಿಕೃತವಾಗಿ ಹೊರಬಿದ್ದಿದೆ. ನಟ ದರ್ಶನ್ ಮತ್ತು ಯಶ್ ಇಬ್ಬರು ಸುಮಲತಾ ಅವರ ಗೆಲುವಿಗಾಗಿ ಶ್ರಮಿಸಲಿದ್ದಾರೆ. ಸುಮಲತಾ ಪರ ಇವರಿಬ್ಬರ ಮಂಡ್ಯದಲ್ಲಿ ಪ್ರಚಾರ ಮಾಡಲಿದ್ದಾರೆ. ಇವರ ಜೊತೆ ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಸೇರಿದಂತೆ ಹಲವರು ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.

ಅಂಬರೀಶ್ ಋಣ ತೀರಿಸಬೇಕಿದೆ
ಸುಮಲತಾ ಅಂಬರೀಶ್ ಅವರು ರಾಜಕೀಯಕ್ಕೆ ಬರುತ್ತಿರುವುದು ಯಾವುದೇ ಲಾಭಕ್ಕಾಗಿ ಬರ್ತಿಲ್ಲ. ಅಂಬರೀಶ್ ಅವರ ಪರಂಪರೆಯನ್ನ ಮುಂದುವರಿಸುವುದು ನನ್ನ ಜವಾಬ್ದಾರಿ. ಅವರ ಪ್ರೀತಿಸುತ್ತಿದ್ದ ಜನರ ಋಣ ಮತ್ತು ಅವರ ಕಷ್ಟಗಳಲ್ಲಿ ನಾನು ಇರಬೇಕಾಗಿದೆ. ಅದಕ್ಕಾಗಿ ನಾನು ಮಂಡ್ಯದಿಂದಲೇ ಸ್ಪರ್ಧೆ ಮಾಡುತ್ತಿದ್ದೇನೆ'' ಎಂದು ಸುಮಲತಾ ಘೋಷಿಸಿದರು.

ದರ್ಶನ್-ಯಶ್ ನನ್ನ ಜೊತೆ ಇದ್ದಾರೆ
ಚಿತ್ರರಂಗವೂ ನನ್ನ ಜೊತೆ ಇದೆ. ನಟ ದರ್ಶನ್ ನನ್ನ ದೊಡ್ಡ ಮಗ ಇದ್ದಂತೆ. ಯಶ್ ಅವರು ನಮ್ಮ ಮನೆ ಮಗ. ಅಂಬರೀಶ್ ಮತ್ತು ನನ್ನ ಮೇಲಿನ ಪ್ರೀತಿಯಿಂದ ಅವರು ನನ್ನ ಜೊತೆಯಲ್ಲಿದ್ದಾರೆ'' ಎಂದು ಸುಮಲತಾ ತಿಳಿಸಿದ್ದಾರೆ.


Click it and Unblock the Notifications











