ಅಂಬಿ ಹುಟ್ಟುಹಬ್ಬ: ಸುಮಲತಾ, ಅಭಿಷೇಕ್ರಿಂದ ಸಮಾಧಿಗೆ ಪೂಜೆ, ಮಂಡ್ಯಕ್ಕೆ ಪಯಣ
ಅಂಬರೀಶ್ ಹುಟ್ಟುಹಬ್ಬದ ಪ್ರಯುಕ್ತ ಪತ್ನಿ ಸುಮಲತಾ ಹಾಗೂ ಪುತ್ರ ಅಭಿಷೇಕ್ ಇಂದು ಬೆಳಿಗ್ಗೆಯೇ ಕಂಠೀರವ ಸ್ಟುಡಿಯೋದಲ್ಲಿನ ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.
ಪೂಜೆ ಸಲ್ಲಿಸುವ ವೇಳೆ ಸುಮಲತಾ, ಅಭಿಷೇಕ್ ಜೊತೆಗೆ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ದೊಡ್ಡಣ್ಣ ಹಾಗೂ ಇತರ ಅಂಬಿ ಆಪ್ತರು ಸಹ ಇದ್ದರು. ಪೂಜೆ ಬಳಿಕ ಸುಮಲತಾ ಹಾಗೂ ಅಭಿಷೇಕ್ ಅವರುಗಳು ಮಂಡ್ಯಕ್ಕೆ ತೆರಳಿದರು. ಅಲ್ಲಿ ಅವರು ಅಂಬಿ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಿದ್ದಾರೆ.
ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಸುಮಲತಾ ಅಂಬರೀಶ್, 'ಅಂಬಿ ಹುಟ್ಟುಹಬ್ಬಕ್ಕೆ ಪ್ರತಿವರ್ಷ ರಾಜ್ಯದ ಮೂಲೆ-ಮೂಲೆಗಳಿಂದ ಅಭಿಮಾನಿಗಳು ಬಂದು ಅದ್ಧೂರಿಯಾಗಿ ಹಬ್ಬದಂತೆ ಆಚರಣೆ ಮಾಡುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದಾಗಿ ಅದು ಸಾಧ್ಯವಾಗಿಲ್ಲ' ಎಂದರು.

ಸರಳವಾಗಿ ಆಚರಣೆ ಮಾಡಿ: ಸುಮಲತಾ
'ಕೊರೊನಾ ಸಂಕಷ್ಟದ ಕಾರಣದಿಂದ ಈ ವರ್ಷವೂ ಅಂಬರೀಶ್ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಅಂಬರೀಶ್ ಅಭಿಮಾನಿಗಳು ಮನೆಗಳಲ್ಲಿಯೇ ಇದ್ದು ಅಂಬಿ ಹುಟ್ಟುಹಬ್ಬವನ್ನು ಆಚರಣೆ ಮಾಡಿ' ಎಂದ ಸುಮಲತಾ, 'ಎರಡು ವರ್ಷದಿಂದ ಅಂಬಿ ಹುಟ್ಟುಹಬ್ಬದಂದು ಮಂಡ್ಯಕ್ಕೆ ತೆರಳಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದೇನೆ' ಎಂದರು.

'ಮಂಡ್ಯದಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಲಿದ್ದೇವೆ'
'ಈಗ ಪೂಜೆ ಮುಗಿದ ಬಳಿಕ ಇಲ್ಲಿಂದ ಮಂಡ್ಯಕ್ಕೆ ತೆರಳಲಿದ್ದೇವೆ. ಅಲ್ಲಿ ಐಸಿಯು ಆನ್ವ್ಹೀಲ್ಸ್ ಉದ್ಘಾಟನೆ ಇದೆ. ಜೊತೆಗೆ ಇನ್ನಿತರ ಸಾಮಾಜಿಕ ಕಾರ್ಯಗಳಲ್ಲಿ ಇಂದು ಪಾಲ್ಗೊಳ್ಳಲಿದ್ದೇವೆ. ಇದನ್ನು ಅಂಬರೀಶ್ ಜೀವನದಿಂದ ಪ್ರೇರಣೆ ಪಡೆದು ಮಾಡುತ್ತಿದ್ದೇನೆ' ಎಂದಿದ್ದಾರೆ ಸುಮಲತಾ.

ಚಿತ್ರರಂಗಕ್ಕೆ ನೆರವು ನೀಡಬೇಕೆಂದು ಮನವಿ
ಕೊರೊನಾ ಕಾಲದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಚಿತ್ರರಂಗ ಹಾಗೂ ಚಿತ್ರರಂಗ ಕಾರ್ಮಿಕರ ಬಗ್ಗೆ ಮಾತನಾಡಿದ ಸುಮಲತಾ, 'ಚಿತ್ರರಂಗಕ್ಕೆ ನೆರವು ನೀಡುವ ಬಗ್ಗೆ ಸಿಎಂ ಯಡಿಯೂರಪ್ಪ ಅವರನ್ನು ಚಿತ್ರರಂಗದ ಗಣ್ಯರು ಕೆಲವರು ಭೇಟಿ ಮಾಡಿ ಬಂದಿದ್ದಾರೆ. ಸಂಕಷ್ಟದಲ್ಲಿರುವ ಚಿತ್ರರಂಗಕ್ಕೆ ನೆರವು ನೀಡಬೇಕು ಎಂಬುದು ನನ್ನ ಮನವಿ ಸಹ' ಎಂದಿದ್ದಾರೆ ಸುಮಲತಾ.
Recommended Video

ಸರಳವಾಗಿ ಆಚರಿಸುವಂತೆ ಮನವಿ ಮಾಡಿರುವ ಸುಮಲತಾ
ನಿನ್ನೆಯೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಸುಮಲತಾ ಅಂಬರೀಶ್, 'ನಮ್ಮೆಲ್ಲರ ಪ್ರೀತಿಯ ಅಂಬರೀಷ್ ಅವರ 69ನೇ ಜನ್ಮ ಜಯಂತಿ ಸಂಭ್ರಮದಿಂದ ಆಚರಿಸಲು ನೀವೆಲ್ಲರೂ ಕಾಯುತ್ತಿರುತ್ತೀರಿ. ಆದರೆ ಕರೊನಾ ತಡೆಯಲು ದೇಶವೆಲ್ಲ ಶ್ರಮಿಸುತ್ತಿರುವಾಗ ನಾವು ಯಾವುದೇ ಸಾರ್ವಜನಿಕ ಆಚರಣೆ ಅಥವಾ ಸಮಾರಂಭ ಮಾಡುವುದು ಬೇಡವೆಂದು ನನ್ನ ವಿನಮ್ರ ಮನವಿ. ಈ ವರ್ಷ ಅವರನ್ನು ನಮ್ಮ ಮನಸ್ಸು ಮನೆಗಳಲ್ಲೇ ಆಚರಿಸೋಣ'' ಎಂದು ಮನವಿ ಮಾಡಿದ್ದರು.


Click it and Unblock the Notifications











