ಧಾರವಾಡದ ವಿಶೇಷ ಚೇತನ ಅಭಿಮಾನಿಗೆ ಆರತಕ್ಷತೆ ಆಮಂತ್ರಣ: ಯಾರೀ ಸುಮಲತಾ ಫ್ಯಾನ್ಸ್?
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ನಿನ್ನೆಯಷ್ಟೇ ಪುತ್ರ ಅಭಿಷೇಕ್ ಅಂಬರೀಶ್ ವಿವಾಹವನ್ನು ಅದ್ಧೂರಿಯಾಗಿ ಮಾಡಿದ್ದಾರೆ. ಬೆಂಗಳೂರಿನ ಜಯಮಹಲ್ನಲ್ಲಿರುವ ಮಾಣಿಕ್ಯ ಚಾಮರ ವಜ್ರ ಕಲ್ಯಾಣ ಮಂಟಪದಲ್ಲಿ ಅವಿವಾ ಬಿದ್ದಪ್ಪ ಜೊತೆ ಅಭಿಷೇಕ್ ಸಪ್ತಪದಿ ತುಳಿದಿದ್ದಾರೆ.
ಮದುವೆ ಕೇವಲ ಆತ್ಮೀಯರು, ಕುಟುಂಬಸ್ಥರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ರಜನಿಕಾಂತ್, ಮೋಹನ್ ಬಾಬು, ವೆಂಕಯ್ಯ ನಾಯ್ಡು, ಯಶ್, ಕಿಚ್ಚ ಸುದೀಪ್, ಭಾರತಿ ವಿಷ್ಣುವರ್ಧನ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ನವ ಜೋಡಿಗೆ ಶುಭ ಕೋರಿದರು. ನಾಳೆ (ಜೂನ್ 7) ಅಭಿಷೇಕ್ ಹಾಗೂ ಅವಿವಾ ಅವರ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ವಿಶೇಷ ಕಾರ್ಯಕ್ರಮಕ್ಕೆ ಸುಮಲತಾ ಅಂಬರೀಶ್ ತಮ್ಮ ವಿಶೇಷ ಅಭಿಮಾನಿಯೊಬ್ಬರಿಗೆ ಆರತಕ್ಷತೆಗೆ ಆಹ್ವಾನ ನೀಡಿದ್ದಾರೆ. ಆಮಂತ್ರಣ ಪತ್ರಿಕೆಯನ್ನು ಕಳುಹಿಸಿದ್ದಷ್ಟೇ ಅಲ್ಲದೆ, ಫೋನ್ ಮಾಡಿ ರಿಸೆಪ್ಷನ್ಗೆ ಬರುವಂತೆ ತಿಳಿಸಿದ್ದಾರೆ. ಅಷ್ಟಕ್ಕೂ ಖುದ್ದಾಗಿ ಸುಮಲತಾ ಅವರೇ ಆಹ್ವಾನ ನೀಡಿದ ಆ ಅಭಿಮಾನಿ ಯಾರು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಧಾರವಾಡದ ವಿಶೇಷ ಅಭಿಮಾನಿಗೆ ಆಹ್ವಾನ
ಧಾರವಾಡದಲ್ಲಿರುವ ಸುಮಲತಾ ಅಂಬರೀಶ್ ಅವರ ವಿಶೇಷ ಅಭಿಮಾನಿಗೆ ಪುತ್ರನ ಆರತಕ್ಷತೆಗೆ ಆಮಂತ್ರಣ ಸಿಕ್ಕಿದೆ. ನಾಳೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದಪ್ಪ ಅವರ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಚಿತ್ರರಂಗ ಹಾಗೂ ರಾಜಕೀಯದ ಗಣ್ಯರಿಗೆ ಆಹ್ವಾನ ನೀಡಲಾಗಿದೆ.

ಇದೇ ಆರತಕ್ಷತೆಗೆ ಸುಮಲತಾ ಅಂಬರೀಶ್ ತಮ್ಮ ಧಾರವಾಡದ ವಿಶೇಷ ಅಭಿಮಾನಿ ಸೌಭಾಗ್ಯ ಯಮನೂರ್ಗೆ ಆಹ್ವಾನ ನೀಡಲಾಗಿದೆ. ಅಷ್ಟಕ್ಕೂ ಸ್ವತಃ ಸುಮಲತಾ ಅಂಬರೀಶ್ ಅವರೇ ತಮ್ಮ ಅಭಿಮಾನಿಗೆ ಕರೆ ಮಾಡಿ ಆರತಕ್ಷತೆಗೆ ಆಹ್ವಾನಿಸಿದ್ದಾರೆ. ಹಾಗಿದ್ದರೆ, ಈ ವಿಶೇಷ ಅಭಿಮಾನಿ ಯಾರು? ಅವರ ಹಿನ್ನೆಲೆಯೇನು? ಆರತಕ್ಷತೆಗೆ ಬರುತ್ತಾರಾ? ಅನ್ನುವ ಪ್ರಶ್ನೆಗೆ ಇಲ್ಲಿದೆ.
ಯಾರೀ ಸೌಭಾಗ್ಯ ಯಮನೂರ
ಹೌದು, ಖುದ್ದಾಗಿ ಸುಮಲತಾ ಅವರೇ ಕರೆ ಮಾಡಿ ಆಹ್ವಾನ ನೀಡಿರುವ ಈ ಅಭಿಮಾನಿಯ ಹೆಸರು ಸೌಭಾಗ್ಯ ಯಮನೂರ. ಈಕೆ ವಿಶೇಷ ಚೇತನ ಹೆಣ್ಣುಮಗಳು. ಇವರು ಸುಮಲತಾ ಅಂಬರೀಶ್ ಅವರ ಅಪ್ಪಟ ಅಭಿಮಾನಿ. ಪತ್ರಿಕೆಗಳಲ್ಲಿ ಬರುವ ಸುಮಲತಾ ಅಂಬರೀಶ್ ಪ್ರತಿಯೊಂದು ಫೋಟೊವನ್ನೂ ಕತ್ತರಿಸಿ, ಬುಕ್ಗೆ ಅಂಟಿಸಿಡುತ್ತಾರೆ. ಜೊತೆ ಸುಮಲತಾ ಅವರ ಅಭಿಮಾನಿ ಎಂದು ಬರೆಯುತ್ತಾರೆ.
ಹುಟ್ಟುತ್ತಲೇ ವಿಶೇಷ ಚೇತನ ಮಗುವಾಗಿ ಹುಟ್ಟಿದ ಈಕೆ ಸುಮಲತಾ ಅಭಿಮಾನಿಯಾಗಿದ್ದೇ ಇಂಟ್ರೆಸ್ಟಿಂಗ್ ಸ್ಟೋರಿ. ಅಂಬರೀಶ್ ನಿಧನರಾದಾಗ ಸುಮಲತಾ ಕಣ್ಣೀರು ಹಾಕಿದ್ದನ್ನು ಟಿವಿಯಲ್ಲಿ ನೋಡಿದ್ದರು. ಅಲ್ಲಿಂದ ಸುಮಲತಾ ಅಭಿಮಾನಿಯಾಗಿ ಕಣ್ಣಿಗೆ ಕಾಣುವ ಪ್ರತಿಯೊಂದು ಫೋಟೊವನ್ನೂ ಸಂಗ್ರಹಿಸುತ್ತಾರೆ. ಈ ವಿಷಯ ಗಮನಕ್ಕೆ ಬಂದು ಸುಮಲತಾ ಅವರಿಗೆ ವಿಶೇಷವಾಗಿ ಆಹ್ವಾನ ನೀಡಿದ್ದಾರೆ.
ಆರತಕ್ಷತೆಗೆ ಬರುತ್ತಾರಾ?
ಸುಮಲತಾ ವಿಶೇಷ ಅಭಿಮಾನಿ ಅಭಿಷೇಕ್ ಅಂಬರೀಶ್, ಅವಿವಾ ಬಿದ್ದಪ್ಪ ಆರತಕ್ಷತೆಗಾಗಿ ಬೆಂಗಳೂರಿಗೆ ಬರುತ್ತಿದ್ದಾರೆ. ಸೌಭಾಗ್ಯ ಜೊತೆ ತಂದೆ ನಿಂಗೋಜಿ ಯಮನೂರ ಹಾಗೂ ತಾಯಿ ಕೂಡ ಬೆಂಗಳೂರಿಗೆ ಬರಲಿದ್ದಾರೆ. ಈ ಮೂಲಕ ಸುಮಲತಾ ಅವರನ್ನು ಭೇಟಿ ಮಾಡುವ ಕನಸು ನನಸಾಗಲಿದೆ.
ಇದೇ ವೇಳೆ ಸುಮಲತಾ ಅವರಿಗಾಗಿ ಸೌಭಾಗ್ಯ ಧಾರವಾಡದ ವಿಶೇಷ ಸೀರೆ ಹಾಗೂ ಧಾರವಾಡ ಪೇಡಾವನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ. ವಿಶೇಷ ಅಭಿಮಾನಕ್ಕೆ ಮನಸೋತಿರುವ ಸುಮಲತಾ ನಾಳೆ ತಮ್ಮ ಅಭಿಮಾನಿಯನ್ನು ಭೇಟಿಯಾಗಲಿದ್ದಾರೆ.


Click it and Unblock the Notifications











