''ಸುದೀಪ್ ಗೆ ತೊಂದರೆ ನೀಡಲು ಇಷ್ಟ ಪಡುವುದಿಲ್ಲ'' ಕಿಚ್ಚನ ಬಗ್ಗೆ ಸುಮಲತಾ ಹೇಳಿಕೆ
Recommended Video

ನಟಿ ಸುಮಲತಾ ಅಂಬರೀಶ್ ಚುನಾವಣೆಯ ಅಖಾಡಕ್ಕೆ ಧುಮುಕಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಅವರು ಸ್ಪರ್ಧೆ ಮಾಡಲು ಬಯಸಿದ್ದಾರೆ. ಮತ್ತೊಂದು ಕಡೆ ಅದೇ ಕ್ಷೇತ್ರದಿಂದ ನಟ ನಿಖಿಲ್ ಕುಮಾರ್ ಸಹ ಸ್ಪರ್ಧೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.
ಚುನಾವಣಾ ಪ್ರಚಾರ ಬಗ್ಗೆ ಸುಮಲತಾ ಈಗಾಗಲೇ ಪ್ಲಾನ್ ಮಾಡಿದ್ದಾರೆ. ಸುಮಲತಾಗೆ ಚಿತ್ರರಂಗದ ಬೆಂಬಲ ಇದ್ದು, ಪ್ರಚಾರಕ್ಕೆ ಅದು ಸಹಾಯ ಆಗಲಿದೆ. ಸುಮಲತಾ ಅವರೇ ಹೇಳಿರುವ ಪ್ರಕಾರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟ ದರ್ಶನ್ ಹಾಗೂ ಯಶ್ ಸುಮಲತಾ ಪರ ಪ್ರಚಾರ ಮಾಡುತ್ತಿದ್ದಾರೆ.
ದರ್ಶನ್, ಯಶ್ ರೀತಿ ಸುದೀಪ್ ಸಹ ಅಂಬರೀಶ್ ಕುಟುಂಬಕ್ಕೆ ಆಪ್ತರು. ಹೀಗಿರುವಾಗ ಕಿಚ್ಚ ಕೂಡ ಪ್ರಚಾರದಲ್ಲಿ ಭಾಗಿಯಾಗುತ್ತಾರಾ ಎನ್ನುವ ಕುತೂಹಲ ಇತ್ತು. ಈ ಹಿಂದೆ ಈ ಬಗ್ಗೆ ಹೇಳಿಕೆ ನೀಡಿದ್ದ ಸುದೀಪ್ ''ದರ್ಶನ್ ಇರುವಾಗ ಬೇರೆ ಯಾರ ಅಗತ್ಯ ಇಲ್ಲ'' ಎಂದು ಹೇಳಿದ್ದರು.
ಅಂದಹಾಗೆ, ಇದೀಗ ಸುದೀಪ್ ಬಗ್ಗೆ ಸುಮಲತಾ ಅವರೇ ಮಾತನಾಡಿದ್ದಾರೆ. ಟಿವಿ ಸಂದರ್ಶನವೊಂದರಲ್ಲಿ ಸುದೀಪ್ ಬಗ್ಗೆ ಹೇಳಿಕೆ ನೀಡಿದ್ದಾರೆ. ಮುಂದೆ ಓದಿ...

ಸುದೀಪ್ ಸಪೋರ್ಟ್ ಮಾಡುತ್ತಾರಾ?
ಚುನಾವಣಾ ಪ್ರಚಾರದ ವಿಚಾರವಾಗಿ ನಟ ಸುದೀಪ್ ಬಗ್ಗೆ ಸುಮಲತಾ ಮಾತನಾಡಿದ್ದಾರೆ. ಟಿವಿ ಸಂದರ್ಶನವೊಂದರಲ್ಲಿ ಸುದೀಪ್ ಬಗ್ಗೆ ಬಂದ ಪ್ರಶ್ನೆಗೆ ಸುಮಲತಾ ಉತ್ತರ ನೀಡಿದ್ದಾರೆ. ಸುದೀಪ್ ಅವರು ನನ್ನ ಒಳ್ಳೆಯ ಫ್ರೆಂಡ್. ಅವರು ತಾವೇ ಇಷ್ಟ ಪಟ್ಟು ಪ್ರಚಾರದಲ್ಲಿ ಭಾಗಿಯಾದರೆ ನಾನು ಸ್ವಾಗತ ಮಾಡುತ್ತಾನೆ ಎಂದಿದ್ದಾರೆ.

ನಮ್ಮದು ರಾಜಕೀಯವನ್ನು ಮೀರಿದ ಸಂಬಂಧ
''ನಾನು ಸುದೀಪ್ ಅವರಿಗೆ ತೊಂದರೆ ನೀಡಲು ಇಷ್ಟ ಪಡುವುದಿಲ್ಲ. ಸುದೀಪ್ ಇಷ್ಟ ಇದ್ದರೆ ಬರಬಹುದು. ಆದರೆ, ನಮ್ಮ ಅವರ ಸಂಬಂಧ ರಾಜಕೀಯವನ್ನು ಮೀರಿದ್ದು. ನಾನು ಇದನ್ನು ರಾಜಕೀಯವಾಗಿ ನೋಡಲು ಇಷ್ಟ ಪಡುವುದಿಲ್ಲ.'' ಎಂದಿರುವ ಸುಮಲತಾ ತಮ್ಮ ಕುಟುಂಬ ಹಾಗೂ ಸುದೀಪ್ ಕುಟುಂಬದ ಒಡನಾಟವನ್ನು ನೆನೆದರು.

ತೊಂದರೆ ನೀಡಲು ಇಷ್ಟ ಪಡುವುದಿಲ್ಲ
''ಕಲಾವಿದರಾಗಿ ಮಾತ್ರವಲ್ಲದೆ ನಮ್ಮ ಮನೆಯವರ (ಅಂಬರೀಶ್) ಜೊತೆಗೆ ಸುದೀಪ್ ಗೆ ಒಳ್ಳೆಯ ಸ್ನೇಹ ಇತ್ತು. ಆದರೆ, ಈ ವಿಚಾರದಲ್ಲಿ ಯಾರಿಗೂ ತೊಂದರೆ ನೀಡಲು ನಾನು ಇಷ್ಟ ಪಡುವುದಿಲ್ಲ. ಕಲಾವಿದರ ಜವಾಬ್ದಾರಿ ಅವರಿಗೆ ತಿಳಿದಿದೆ. ಅವರಿಗೆ ಶೂಟಿಂಗ್, ಸಿನಿಮಾ ಕೆಲಸಗಳು ಇರುತ್ತದೆ. ಇದನ್ನೆಲ್ಲ ಬಿಟ್ಟು ನನ್ನ ಜೊತೆ ಇರಿ ಅಂತ ಕೇಳುವುದು ನ್ಯಾಯ ಅಲ್ಲ.'' ಎಂದು ಸುಮಲತಾ ಹೇಳಿದ್ದಾರೆ.

ಬರಲೇಬೇಕು ಅಂತ ಯಾರಿಗೂ ಕೇಳುವುದಿಲ್ಲ
''ಇಲ್ಲ... ನೀವು ಬರಲೇಬೇಕು ಅಂತ ನಾನು ಯಾರಿಗೂ ಕೇಳುವುದಿಲ್ಲ. ನನಗೆ ಯಾರಿಗೂ ತೊಂದರೆ ನೀಡಲು ಇಷ್ಟ ಇಲ್ಲ. ಅವರ ತೊಂದರೆಗಳು, ಕೆಲಸಗಳನ್ನು ನೋಡಿಕೊಂಡು ನಿಮಗೋಸ್ಕರ ಬರುತ್ತೇವೆ ಅಂದರೆ ನಾನು ಸ್ವಾಗತ ಮಾಡುತ್ತಾನೆ.'' ಎಂದು ಹೇಳುವ ಮೂಲಕ ಸುದೀಪ್ ಇಷ್ಟ ಪಟ್ಟು ಚುನಾವಣಾ ಪ್ರಚಾರ ಮಾಡುವುದಾದರೆ ಮಾಡಲಿ ಎಂದಿದ್ದಾರೆ ಸುಮಲತಾ.

ದರ್ಶನ್ ಹಾಗೂ ಯಶ್ ಬೆಂಬಲ
ಈಗಾಗಲೇ, ನಟ ದರ್ಶನ್ ಹಾಗೂ ಯಶ್ ರನ್ನು ಚುನಾವಣಾ ವಿಚಾರವಾಗಿ ನಟಿ ಸುಮಲತಾ ಭೇಟಿ ಮಾಡಿದ್ದಾರೆ. ದರ್ಶನ್ ಈ ಹಿಂದೆಯೇ ಸುಮಲತಾ ಪರ ಪ್ರಚಾರ ಮಾಡುವುದಾಗಿ ಬಹಿರಂಗವಾಗಿ ಹೇಳಿದ್ದಾರೆ. ಯಶ್ ಈ ಬಗ್ಗೆ ಹೇಳಿಕೆ ನೀಡದೆ ಇದ್ದರೂ, ಯಶ್ ಸಹ ಸುಮಲತಾ ಪರ ನಿಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ.


Click it and Unblock the Notifications











