12 ಕಿ.ಮೀ ರಸ್ತೆಗೆ ಅಪ್ಪು ಹೆಸರು; ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ ಸುಮಲತಾ
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನ ಹೊಂದಿದ ಬಳಿಕ ಅವರು ಮಾಡಿದ್ದ ಅಪಾರ ಸಮಾಜಸೇವೆ ಹಾಗೂ ಒಳ್ಳೆಯ ಕೆಲಸಗಳನ್ನು ಪರಿಗಣಿಸಿ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರ ಪ್ರತಿಷ್ಠಿತ ಕರ್ನಾಟಕ ರತ್ನ ಗೌರವವನ್ನು ನೀಡಿತ್ತು. ಅಲ್ಲದೇ ಪುನೀತ ನಮನ ಕಾರ್ಯಕ್ರಮವನ್ನು ಆಯೋಜಿಸಿ ಗೌರವ ಸಲ್ಲಿಸಲಾಗಿತ್ತು, ಅಪ್ಪು ಹೆಸರಿನಲ್ಲಿ ಹಲವಾರು ಉದ್ಯಾನವನಗಳು, ರಸ್ತೆಗಳು ಹಾಗೂ ವೃತ್ತಗಳನ್ನು ನಿರ್ಮಿಸಲಾಯಿತು.
ಹೀಗೆ ಅಗಲಿದ ಅಭಿಮಾನಿಗಳ ಆರಾಧ್ಯದೈವ ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ಜೀವಂತವಾಗಿರಿಸಲಾಗಿದ್ದು, ಇದೀಗ ಬೆಂಗಳೂರಿನ ರಿಂಗ್ ರೋಡ್ ಒಂದಕ್ಕೆ ಪುನೀತ್ ರಾಜ್ಕುಮಾರ್ ಹೆಸರನ್ನು ಇಡುವ ಮೂಲಕ ಮತ್ತೊಮ್ಮೆ ಪುನೀತ್ ರಾಜ್ಕುಮಾರ್ ಅವರಿಗೆ ದೊಡ್ಡ ಗೌರವವನ್ನು ಸಲ್ಲಿಸಿದೆ ರಾಜ್ಯ ಸರ್ಕಾರ.
ಹೌದು, ಮೈಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆಯವರೆಗಿನ 12 ಕಿಲೋಮೀಟರ್ ಉದ್ದದ ರಿಂಗ್ ರಸ್ತೆಗೆ ಪುನೀತ್ ರಾಜ್ಕುಮಾರ್ ರಸ್ತೆ ಎಂದು ಈ ಹಿಂದೆಯೇ ಹೆಸರಿಡುವುದಾಗಿ ಘೋಷಿಸಿದ್ದ ರಾಜ್ಯ ಸರ್ಕಾರ ಇಂದು ( ಫೆಬ್ರವರಿ 7 ) ಆ ರಸ್ತೆಯನ್ನು ಉದ್ಘಾಟಿಸಿದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಈ ರಸ್ತೆಯನ್ನು ಉದ್ಘಾಟಿಸಿದ್ದು, ಅಪ್ಪು ಅಭಿಮಾನಿಗಳು ಹಾಗೂ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ಇದರ ಕುರಿತು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಸಹ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದು, "ಅಪ್ಪು ಹೆಸರನ್ನು 12 ಕಿ.ಮೀ ರಿಂಗ್ ರಸ್ತೆಗೆ ಇಡುತ್ತಿರುವ ಸರಕಾರದ ನಿರ್ಧಾರವನ್ನು ಹೃತ್ಪೂರ್ವಕವಾಗಿ ಪ್ರಶಂಸಿಸುವೆ.ಅಪ್ಪು ನಮ್ಮೆಲ್ಲರ ಹೃದಯಕ್ಕೆ ಹತ್ತಿರವಾಗಿದ್ದವರು,ಇದೀಗ ನಮ್ಮ ಮನೆಗೂ ಬಂದಿದ್ದಾರೆ. ಮುಖ್ಯ ಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ, ಕಂದಾಯ ಸಚಿವರಾದ ಆರ್ ಅಶೋಕ್ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಯ ಸರ್ವರಿಗೂ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











