ಕೊಟ್ಟುಕತ್ತೀರ ಯಶೋಧ ಪ್ರಕಾಶ್ ನಿರ್ದೇಶನದಲ್ಲಿ ಸುಮನ್ ನಗರ್ಕರ್ 'ರಂಗಪ್ರವೇಶ'
ಬಾಲಿವುಡ್ ನಲ್ಲಿ ಜೋಯಾ ಅಖ್ತರ್, ಫರಾಹ್ ಖಾನ್ ಪ್ರಮುಖವಾಗಿ ಹೆಸರಿಸಬಹುದಾದ ಮಹಿಳಾ ನಿರ್ದೇಶಕಿಯರು. ಅದೇ ದಕ್ಷಿಣದಲ್ಲಿ ರೇವತಿ, ನಂದಿನಿ ರೆಡ್ಡಿ, ಸುಧಾ ಕೊಂಗರ ಪ್ರೇಕ್ಷಕರ ಮನ ಗೆಲ್ಲುವಂತ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇನ್ನು ಕನ್ನಡದಲ್ಲಿ ಹಿಂದೆ ಪ್ರೇಮಾ ಕಾರಂತ್ ಮಹಿಳಾ ನಿರ್ದೇಶಕಿಯಾಗಿ ಗಮನಸೆಳೆದಿದ್ದರು. ಅದು ಅಲ್ಲದೆ ಕನ್ನಡದಲ್ಲಿ, ರೂಪಾ ಅಯ್ಯರ್, ಕವಿತಾ ಲಂಕೇಶ್, ವಿಜಯಲಕ್ಷ್ಮಿಸಿಂಗ್ , ಸುಮನಾ ಕಿತ್ತೂರು, ಪ್ರಿಯಾ ಬೆಳ್ಳಿಯಪ್ಪ, ಪ್ರಿಯಾ ಹಾಸನ್ ಹೀಗೆ ಸಾಕಷ್ಟು ಮಹಿಳಾ ನಿರ್ದೇಶಕಿಯರು ಆಕ್ಷನ್ ಕಟ್ ಹೇಳಿದ್ದಾರೆ.
ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳಾ ನಿರ್ದೇಶಕಿಯರ ಕೊರತೆ ಕನ್ನಡ ಸಿನಿಮಾ ರಂಗವನ್ನು ಬಹುವಾಗಿ ಕಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ 'ಗಂಟುಮೂಟೆ' ಮೂಲಕ ರೂಪ ರಾವ್ ಸಾಕಷ್ಟು ಗಮನ ಸೆಳೆದಿದ್ದಾರೆ. ಇತ್ತೀಚೆಗಷ್ಟೇ ನಟಿ ಪ್ರೀತಿ ಬಾಬು ಕೂಡ ರಾಘವೇಂದ್ರ ರಾಜಕುಮಾರ್ ಅಭಿನಯದ 'ರಾಜಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈಗ ಇದೇ ಹಾದಿಯಲ್ಲಿ ಮತ್ತೊಂದು ಮಹಿಳಾ ನಿರ್ದೇಶಕಿ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಲು ಅಣಿಯಾಗಿದ್ದಾರೆ.
ಮಹಿಳಾ ನಿರ್ದೇಶಕಿ ಎಂದಾಗ ಸಹಜವಾಗಿಯೇ ಮಹಿಳೆಯರ ಭಾವನಾತ್ಮಕ ವಿಚಾರಗಳ ಬಗ್ಗೆ ಹೆಚ್ಚು ಮತ್ತು ಸೂಕ್ಷ್ಮ ರೂಪಿಯಾಗಿ ಸ್ಪಂದಿಸಲು ಸಾಧ್ಯವಿರುತ್ತದೆ. ಮಹಿಳೆಯರ ಬದುಕಿನ ನಿತ್ಯ ತುಮಲಗಳು, ಭಾವನಾತ್ಮಕ ಜೀವನಯಾನ, ಆಸೆಗಳು, ಕನಸುಗಳು, ಬದುಕಿನ ಭಾವನೆಗಳನ್ನು ಅರ್ಥಪೂರ್ಣವಾಗಿ ಗ್ರಹಿಸಿ ಅದನ್ನು ನಿರ್ದೇಶಿಸುವ ಶ್ರಮ ಮತ್ತು ಸ್ವಂತಿಕೆಯನ್ನು ಮಹಿಳಾ ನಿರ್ದೇಶಕಿಯರು ಆತ್ಮಸ್ಥೈರ್ಯದಿಂದ ಮಾಡಬಹುದು ಎಂಬುದು ಸಹಜವಾಗಿ ಇರುವಂತಹ ಒಂದು ನಂಬಿಕೆ. ಇಂತಹದೇ ಆತ್ಮಸ್ಥೈರ್ಯ ಮತ್ತು ವಿಶ್ವಾಸದಿಂದ ಆಕ್ಷನ್ ಕಟ್ ಹೇಳುವುದಕ್ಕೆ ಮುಂದಾಗಿದ್ದಾರೆ ಕೊಡವತಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್. ಅವರ ನಿರ್ದೇಶನದ ಮೊದಲ ಚಿತ್ರ 'ರಂಗಪ್ರವೇಶ', ವಾಸ್ತವದಲ್ಲಿ ಅವರು 'ರಂಗಪ್ರವೇಶ'ದ ಮೂಲಕ ಮಹಿಳಾ ನಿರ್ದೇಶಕಿಯಾಗಿ ಕನ್ನಡ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ಮಹಿಳಾ ಪ್ರಾಧಾನ್ಯತೆಯ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಸುಮನ್ ನಗರ್ಕರ್
ಮಹಿಳಾ ನಿರ್ದೇಶಕಿ ನಿರ್ದೇಶಿಸುತ್ತಿರುವ ಕಾರಣದಿಂದ ಮಹಿಳೆಯರ ಬದುಕಿನ ಸುತ್ತಲೂ ಒಂದು ವಿಭಿನ್ನ ದೃಷ್ಟಿಕೋನದ ಆಯಾಮದೊಂದಿಗೆ ರಂಗಪ್ರವೇಶ ಮೂಡಿಬರುತ್ತಿದೆ. ವಿಭಿನ್ನ ಕಥಾಹಂದರದ ಈ ಚಿತ್ರದ ಪ್ರಮುಖಪಾತ್ರದಲ್ಲಿ ಸುಮನ್ ನಗರಕರ್ ನಟಿಸುತ್ತಿದ್ದಾರೆ. ಮೂಲತಃ ಕೊಡಗಿನ ಪರಿಸರ ಮತ್ತು ಹಿನ್ನಲೆಯಿಂದ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಈಗ "ಬೆಳದಿಂಗಳ ಬಾಲೆ" ಖ್ಯಾತಿಯ ಸುಮನ್ ನಗರ್ಕರ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ "ರಂಗಪ್ರವೇಶ" ಚಿತ್ರ ನಿರ್ದೇಶಿಸುವ ಮೂಲಕ ನಿರ್ದೇಶಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ. ಅದರಲ್ಲೂ ಕೊಡಗಿನ ಪ್ರಥಮ ನಿರ್ದೇಶಕಿ ಎಂಬ ಕೀರ್ತಿ ಯಶೋಧ ಪ್ರಕಾಶ್ ಅವರಿಗೆ ಸಲ್ಲುತ್ತದೆ.

ಸೃಜನಶೀಲ ಸಿನಿಮಾ ಮಾಡುವ ಹಂಬಲ
ಇತ್ತೀಚೆಗೆ ಬೆಂಗಳೂರಿನಲ್ಲಿ ಚಿತ್ರ ಅಧಿಕೃತವಾಗಿ ಸೆಟ್ಟೇರಿದೆ. ಪ್ರಥಮ ಬಾರಿಗೆ ನಿರ್ದೇಶನ ಮಾಡುತ್ತಿರುವ ನಿರ್ದೇಶಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರು ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡುತ್ತಾ "ನಾನು ಮೊದಲಿನಿಂದಲೂ ಸೃಜನಶೀಲರು ಹಾಗೂ ಸದಭಿರುಚಿರುಚಿಯುಳ್ಳ ಸಿನಿಮಾಗಳ ಪ್ರೇಮಿ. ಈವರೆಗೆ ಕೊಡವ ಹಾಗೂ ಕನ್ನಡ ಭಾಷೆಯಲ್ಲಿ ನಾಲ್ಕಾರು ಸಾಮಾಜಿಕ ಕಳಕಳಿಯುಳ್ಳ, ಉತ್ತಮ ಸಂದೇಶಗಳಿರುವ ಚಿತ್ರಗಳನ್ನು ನಿರ್ಮಾಣ ಮಾಡಿದ್ದೇನೆ. ಈಗ ನನ್ನ ನಿರ್ಮಾಣದ ಅನುಭವ ಮತ್ತು ಸುತ್ತಲಿನ ಪರಿಸರದಲ್ಲಿ ನಡೆಯುತ್ತಿರುವ ಘಟನಾವಳಿಗಳನ್ನು ಒಟ್ಟು ಮಾಡಿ ಸ್ವತಂತ್ರವಾಗಿ ಮೊದಲ ಬಾರಿಗೆ ನಿರ್ದೇಶಕಿ ಸ್ಥಾನದಲ್ಲಿ ನಿಂತು ಆಕ್ಷನ್ ಕಟ್ ಹೇಳುತ್ತಿದ್ದೇನೆ" ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಕಾದಂಬರಿ ಆಧರಿತ ಸಿನಿಮಾ
ಇನ್ನು ಕಥಾವಸ್ತುವಿನ ಬಗ್ಗೆ ಅವರು ಹೇಳುವುದು "ಕನ್ನಡದ "ಪೃಥೆ" ಪ್ರಕಟಿತ ಕೃತಿ ಆಧಾರಿತ ಚಿತ್ರ "ರಂಗಪ್ರವೇಶ". ಜವಾಬ್ದಾರಿಯಿಂದ ಸಂಸಾರ ನಿಭಾಯಿಸುತ್ತಾ ಮಗಳ ಭರತನಾಟ್ಯ ಕಲೆಗೆ ಪ್ರೋತ್ಸಾಹಿಸುವ ಮತ್ತು ಆ ಮೂಲಕ ಮಗಳ ಉಜ್ವಲವಾದ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಶ್ರಮಿಸುವ ಒಬ್ಬ ತಾಯಿ ಹಾಗೂ ಮಗಳ ಬಾಂಧವ್ಯ ಕಟ್ಟಿಕೊಡುವ ಸ್ತ್ರೀ ಸಂವೇದನೆಯುಳ್ಳ ಕಥಾ ಹಂದರವೇ "ರಂಗಪ್ರವೇಶ" ಎಂದು ಚಿತ್ರದ ಹಿನ್ನಲೆಯ ಬಗ್ಗೆ ಹೇಳುತ್ತಾರೆ.

ಮಹಿಳಾ ನಿರ್ದೇಶಕಿಯರ ಜೊತೆ ಕೆಲಸ ಮಾಡುವುದು ಒಂದು ಸವಾಲು
ಹಿರಿಯ ಛಾಯಾಗ್ರಾಹಕರಾದ ಪಿವಿಆರ್ ಸ್ವಾಮಿಯವರು ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದಾರೆ. ಹಿಂದೆ ಅವರು ಪ್ರೀತಿ ಬಾಬು ನಿರ್ದೇಶನದ 'ರಾಜಿ' ಚಿತ್ರಕ್ಕೆ ಕೂಡ ಛಾಯಾಗ್ರಾಹಕರಾಗಿದ್ದರು. ಈ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿರುವ ಸ್ವಾಮಿಯವರು" ಪ್ರೀತಿ ಬಾಬು ಅವರ ನಿರ್ದೇಶನದ 'ರಾಜಿ' ಚಿತ್ರ ಈಗಷ್ಟೇ ಛಾಯಾಗ್ರಾಹಕನಾಗಿ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದೇನೆ. ಈಗ ಮತ್ತೊಂದು ಮಹಿಳಾ ನಿರ್ದೇಶಕಿ ಜೊತೆಯಲ್ಲಿ ಕೆಲಸ ಮಾಡುವ ಅವಕಾಶ ಒದಗಿಬಂದಿದೆ. ನಿಜ ಹೇಳಬೇಕೆಂದರೆ ಮಹಿಳಾ ನಿರ್ದೇಶಕಿರ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡುವುದು ಒಂದು ಸವಾಲಿನ ಕೆಲಸವಾಗಿರುತ್ತದೆ. ಅವರು ಆಯ್ಕೆ ಮಾಡಿಕೊಳ್ಳುವ ಕಥಾವಸ್ತುಗಳು ಅತ್ಯಂತ ಸೂಕ್ಷ್ಮ ಸಂವೇದನಾಶೀಲವಾಗಿರುತ್ತದೆ. ಭಾವನೆಗಳು ಅತ್ಯಂತ ಪ್ರಧಾನವಾದ ಪಾತ್ರವನ್ನು ವಹಿಸುತ್ತದೆ. ಭಾವನೆಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುವುದು ಯಾವುದೇ ಒಬ್ಬ ಛಾಯಾಗ್ರಾಹಕನಿಗೆ ಅತ್ಯಂತ ಸವಾಲಿನಿಂದ ಕೂಡಿರುತ್ತದೆ. 'ರಂಗಪ್ರವೇಶ' ಚಿತ್ರದಲ್ಲಿ ಕೂಡ ಅಂತಹದೇ ಭಾವನಾತ್ಮಕ ದೃಶ್ಯವೈಭವವಿದ್ದು ಅದನ್ನ ನಿರ್ದೇಶಕಿಯ ದೂರದೃಷ್ಟಿತ್ವದ ಕನಸುಗಳಿಗೆ ಕ್ಯಾಮರಾ ಮೂಲಕ ರೂಪ ನೀಡುವ ಪ್ರಯತ್ನ ಮಾಡುತ್ತಿದ್ದೇನೆ" ಎಂದಿದ್ದಾರೆ

ಎಲ್ಲೆಲ್ಲಿ ಚಿತ್ರೀಕರಣ?
ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಸುಮಾರು ಹದಿನೈದು ದಿನಗಳ ಕಾಲ ಚಿತ್ರೀಕರಿಸುವ ಉದ್ಧೇಶವನ್ನು ಚಿತ್ರತಂಡ ಹೊಂದಿದ್ದು, ಚಿತ್ರದ ತಾರಾಗಣದಲ್ಲಿ 'ಬೆಳದಿಂಗಳ ಬಾಲೆ' ಖ್ಯಾತಿಯ ಸುಮನ್ ನಗರಕರ್ ಅವರ ಜೊತೆಗೆ ಎಂ ಡಿ ಕೌಶಿಕ್, ಪುಷ್ಪಸ್ವಾಮಿ, ಕು.ರೇಣುಕಾ, ವಿದುಷಿ ರೋಹಿಣಿ ಅನಂತ್, ಬಸವರಾಜ್ ಎಸ್ ಮೈಸೂರು, ಕುಮಾರ್ ಎಸ್ ಮುಂತಾದವರಿದ್ದಾರೆ. ವಿಶೇಷ ಪಾತ್ರದಲ್ಲಿ ಮಾಜಿ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್ ಮತ್ತು ಇನ್ನೂ ಅನೇಕರು ಪಾತ್ರಗಳಿಗೆ ಜೀವ ತುಂಬಲಿದ್ದಾರೆ. ತಾಂತ್ರಿಕ ವರ್ಗದಲ್ಲಿ 38 ಚಿತ್ರಗಳಿಗೂ ಹೆಚ್ಚು ಛಾಯಾಗ್ರಾಹಕರಾಗಿ, ರಾಜತಂತ್ರ ಚಿತ್ರದ ನಿರ್ದೇಶಕರಾಗಿ ಅನುಭವವಿರುವ ಪಿವಿಆರ್ ಸ್ವಾಮಿಯವರ ಛಾಯಾಗ್ರಹಣ ಮತ್ತು ತಾಂತ್ರಿಕ ಸಲಹೆ ಚಿತ್ರಕ್ಕಿದೆ.. ಪದ್ಮಶ್ರೀ ಪುರಸ್ಕೃತ ಸಾಹಿತಿ ಡಾ.ದೊಡ್ಡರಂಗೇಗೌಡರು ಹಾಗೂ ಡಾ. ಸಮತಾ ಬಿ ದೇಶಮಾನೆ ಅವರ ಗೀತ ರಚನೆ, ಇಂದು ವಿಶ್ವನಾಥ್ ಅವರ ಸಂಗೀತ, ಸ.ಹರೀಶ್ ಅವರ ಕಥೆ-ಸಂಭಾಷಣೆ, ನಾಗೇಶ್ ಎನ್, ಸಂಕಲನ ಚಿತ್ರಕ್ಕಿದೆ.ಚಿತ್ರವನ್ನು ಎಮರಾಲ್ಡ್ ಬ್ಯಾನರ್ ಅಡಿಯಲ್ಲಿ ಶ್ರೀ ಎಂ ಡಿ ಕೌಶಿಕ್ ಅವರು ನಿರ್ಮಾಣ ಮಾಡುತ್ತಿದ್ದಾರೆ.


Click it and Unblock the Notifications











