'ಬೆಳದಿಂಗಳ ಬಾಲೆ' ಸುಮನ್ ನಗರ್ ಕರ್ ಇದೀಗ 'ಬ್ರಾಹ್ಮಿ'
ಹೊಸ ಅಲೆಗಳನ್ನು ಮೂಡಿಸುತ್ತಿರುವ ಕನ್ನಡ ಚಿತ್ರರಂಗವು ಇತ್ತೀಚಿನ ದಿನಗಳಲ್ಲಿ ಬಹುತೇಕ ಪ್ರಯೋಗಾತ್ಮಕ ಚಿತ್ರಗಳನ್ನು ನಿರ್ಮಾಣ ಮಾಡಿ ಚಿತ್ರರಸಿಕರ ಮನಗೆದ್ದಿದೆ ಎಂದರೆ ತಪ್ಪಾಗಲಾರದು. ಇಂತಹದೊಂದು ಹೊಸ ಅಲೆಯ ಚಿತ್ರವನ್ನು ಖ್ಯಾತ ನಟಿ, 'ಬೆಳದಿಂಗಳ ಬಾಲೆ' ಸುಮನ್ ನಗರ್ ಕರ್ ತಮ್ಮ ಹೊಸ ನಿರ್ಮಾಣ ಸಂಸ್ಥೆ ಸುಮನ್ ನಗರ್ ಕರ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.
ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಚಿತ್ರದ ಹೆಸರು 'ಬ್ರಾಹ್ಮಿ'. ಚಿತ್ರ ನಿರ್ಮಾಣದ ಜೊತೆಗೆ ಸುಮನ್ ಅವರು ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಬ್ರಾಹ್ಮಿ ಅಂದರೆ ಸರಸ್ವತಿ, ವಿದ್ಯೆ ಮತ್ತು ಕಲೆಯ ಆರಾಧ್ಯ ದೇವತೆ. ಅದರಂತೆಯೇ ಈ ಚಿತ್ರವು ಆದ್ಯ ಎನ್ನುವ ಸಂಗೀತಗಾರ್ತಿಯ ಕಥೆ. ಸಂಗೀತವೇ ಸರ್ವಸ್ವ ಎಂದು ನಂಬಿದ್ದ ಆದ್ಯಾಳ ಬಾಳಿನಲ್ಲಿ ಬಿರುಗಾಳಿ ಬೀಸಿ ಸಂಗೀತವೇ ಅವಳಿಂದ ದೂರವಾಗುತ್ತದೆ. ಆದ್ಯಾಳ ಬಾಳಿನಲ್ಲಿ ಮತ್ತೆ ಸಂಗೀತ ವಾಪಸ್ಸಾಗುತ್ತದೆಯೇ ಎನ್ನುವುದೇ ಈ ಚಿತ್ರದ ಕಥಾವಸ್ತು.

ಆದ್ಯಾಳ ಪಾತ್ರದಲ್ಲಿ ಸುಮನ್ ನಗರ್ ಕರ್ ಕಾಣಿಸಿಕೊಳ್ಳಲಿದ್ದಾರೆ. ಇನ್ನೊಂದು ಮುಖ್ಯ ಪಾತ್ರದಲ್ಲಿ, ಆದ್ಯಾಳ ಮ್ಯಾನೇಜರ್ ಅಚ್ಚಪ್ಪನಾಗಿ ಖ್ಯಾತ ನಟ ರಮೇಶ್ ಭಟ್ ಅವರು ಅಭಿನಯಿಸಿದ್ದಾರೆ. ಬಹಳ ವರ್ಷಗಳ ನಂತರ ಈ ಇಬ್ಬರು ಕಲಾವಿದರು ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಈ ಚಿತ್ರದ ವಿಶೇಷ. ಮತ್ತೊಂದು ಮುಖ್ಯ ಪಾತ್ರದಲ್ಲಿ ನಟಿ ಅನೂಷಾ ಕೃಷ್ಣ ಅಭಿನಯಿಸಿದ್ದಾರೆ. ಸತ್ಯ ಬಿ.ಜಿ ಒಂದು ವಿಭಿನ್ನ ಪಾತ್ರದಲ್ಲಿದ್ದಾರೆ.
ಈ ಚಿತ್ರದ ಕಥೆ ಮತ್ತು ನಿರ್ದೇಶನ ಪ್ರದೀಪ್ ವರ್ಮ ಅವರದ್ದು. ಚಿತ್ರಕಥೆ ಹಾಗೂ ಸಂಭಾಷಣೆ ರಂಗಭೂಮಿ ಹಿನ್ನೆಲೆಯುಳ್ಳ ಅಭಿಷೇಕ್ ಅಯ್ಯಂಗಾರ್ ಅವರದ್ದು. ಛಾಯಾಗ್ರಹಣ ಗುರುಪ್ರಸಾದ್ ನಾರ್ನಾಡ್, ಸಂಕಲನ ಕೆಂಪರಾಜ್. ಚಿತ್ರದ ಸಂಗೀತ ನಿರ್ದೇಶಕರು ಬಿಂದುಮಾಲಿನಿ. ಸಾಹಿತ್ಯ - ಕಿರಣ್ ಕಾವೇರಪ್ಪ.


Click it and Unblock the Notifications











