ಪುನೀತ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ 'ನೀರ್ ದೋಸೆ' ಶಾರದಾ ಮಣಿ
ಕನ್ನಡ ಸಿನಿಮಾರಂಗದ ಚಿರಯುವತಿ ಸುಮನ್ ರಂಗನಾಥ್ ಈಗ ಮತ್ತೊಂದು ವಿಶೇಷ ಪಾತ್ರವನ್ನು ಮಾಡುವುದಕ್ಕೆ ಮುಂದಾಗಿದ್ದಾರೆ. 'ನೀರ್ ದೋಸೆ' ಚಿತ್ರದಲ್ಲಿ ಶಾರದಾ ಮಣಿಯಾಗಿ ಕಂಗೊಳಿಸಿದ್ದ ಬಳಿಕ ಈಗ ಮತ್ತೆ ಬಿಗ್ ಸ್ಕ್ರೀನ್ ಗೆ ಅವರು ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ.
ಸುಮನ್ ರಂಗನಾಥ್ ಸುಮ್ಮನೆ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ. ಅವರು ಸಿಕ್ಕಾಪಟ್ಟೆ ಚ್ಯೂಸಿ. ಬಂದ ಅವಕಾಶಗಳನ್ನು ಅಳೆದು ತೂಗಿ ಪಾತ್ರ ಇಷ್ಟ ಆದರೆ ಸಿನಿಮಾಗೆ ಓಕೆ ಎನ್ನುತ್ತಾರೆ. ಹೀಗಿರುವಾಗ ಪುನೀತ್ ನಿರ್ಮಾಣದ ಮೊದಲ ಸಿನಿಮಾದಲ್ಲಿ ಸುಮನ್ ನಟಿಸುತ್ತಿದ್ದಾರೆ.

ಪುನೀತ್ ಬಂಡವಾಳ ಹಾಕುತ್ತಿರುವ ಮೊದಲ ಸಿನಿಮಾ 'ಕವಲುದಾರಿ' ಚಿತ್ರದ ಮುಹೂರ್ತ ಇತ್ತೀಚಿಗಷ್ಟೆ ಅದ್ದೂರಿಯಾಗಿ ನೆರವೇರಿತ್ತು. ಇದೀಗ ಈ ಚಿತ್ರದ ಒಂದು ಪಾತ್ರದಲ್ಲಿ ಸುಮನ್ ಅವರು ಕಾಣಿಸಿಕೊಳ್ಳುವುದು ಫೈನಲ್ ಆಗಿದೆಯಂತೆ. ಈ ಚಿತ್ರದ ಕಥೆಯೊಳಗೆ ಒಂದು ಸಿನಿಮಾದ ಸನ್ನಿವೇಶ ಇದ್ದು, ಅಲ್ಲಿ ನಾಯಕಿಯ ಪಾತ್ರದಲ್ಲಿ ಸುಮನ್ ಅಭಿನಯಿಸಲಿದ್ದಾರಂತೆ.
ಇನ್ನು 'ಕವಲುದಾರಿ' ಚಿತ್ರಕ್ಕೆ 'ಗೋಧಿ ಬಣ್ಣ ಸಾಧಾರಣ ಮೈ ಕಟ್ಟು' ಖ್ಯಾತಿಯ ನಿರ್ದೇಶಕ ಹೇಮಂತ್ ರಾವ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಾಯಕ ರಿಷಿ ಕೆ.ಎಸ್.ಶ್ಯಾಮ್ ಎಂಬ ಪೊಲೀಸ್ ಅಧಿಕಾರಿಯಾಗಿ ನಟಿಸಲಿದ್ದಾರೆ. ಚಿತ್ರದ ನಾಯಕಿಯಾಗಿ ರೋಶಿನಿ ಪ್ರಕಾಶ್ ಆಯ್ಕೆ ಆಗಿದ್ದಾರೆ.


Click it and Unblock the Notifications











