ಧೋನಿಗೆ ಸಹಾಯ ಮಾಡಿದ್ದ ಅಂಬರೀಶ್: ಘಟನೆ ಸ್ಮರಿಸಿದ ಸುಮಲತಾ ಏನಂದ್ರು?
ರೆಬೆಲ್ ಸ್ಟಾರ್ ಅಂಬರೀಶ್ 'ಕಲಿಯುಗ ಕರ್ಣ' ಎಂದೇ ಗುರುತಿಸಿಕೊಂಡಿದ್ದರು. ಕಷ್ಟ ಎಂದು ಮನೆ ಬಾಗಿಲಿಗೆ ಬಂದ ಬಹಳ ಜನರಿಗೆ ಸಹಾಯಹಸ್ತ ಚಾಚಿದ್ದಾರೆ. ಚಿತ್ರರಂಗದಲ್ಲಿ ಮತ್ತು ರಾಜಕೀಯ ರಂಗದಲ್ಲಿ ಅಂಬರೀಶ್ ನೆರವು ಪಡೆದ ತುಂಬಾ ಜನರಿದ್ದಾರೆ. ಅಂಬರೀಶ್ ನಿಧನರಾದ ಸಮಯದಲ್ಲಿ ಅವರ ಮಾನವೀಯತೆ ಕೆಲಸಗಳ ಬಗ್ಗೆ ಸಾಕಷ್ಟು ವಿಚಾರಗಳು ಹೊರಬಿದ್ದವು.
ಈ ವೇಳೆ ಭಾರತೀಯ ಕ್ರಿಕಟ್ ತಂಡದ ಮಾಜಿ ಆಟಗಾರ ಹಾಗೂ 'ಕ್ಯಾಪ್ಟನ್ ಕೂಲ್' ಎಂದೇ ಖ್ಯಾತಿ ಗಳಿಸಿಕೊಂಡಿದ್ದ ಎಂ ಎಸ್ ಧೋನಿಗೆ ಈ ಹಿಂದೆಯೊಮ್ಮೆ ಅಂಬರೀಶ್ ಸಹಾಯ ಮಾಡಿದ್ದರು ಎನ್ನುವ ವಿಚಾರವೂ ಬೆಳಕಿಗೆ ಬಂದಿತ್ತು. ಕ್ರಿಕೆಟ್ ಆಡಲು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದಿದ್ದ ಧೋನಿ ಆಟ ನೋಡಿ ಮನಸೋತ ಅಂಬಿ, ಎಂಎಸ್ಡಿಯ ಕಷ್ಟದ ಬಗ್ಗೆ ತಿಳಿದು ಒಂದಿಷ್ಟು ನಗದು ನೀಡಿದ್ದಂತೆ. ಈ ವಿಚಾರ ಎಲ್ಲಿಯೂ ವರದಿಯಾಗಿರಲಿಲ್ಲ. ಚರ್ಚೆಯೂ ಆಗಿರಲಿಲ್ಲ. ನಿಧಾನವಾಗಿ ಬೆಳಕಿಗೆ ಬಂದ ವಿಚಾರ ಮಂಡ್ಯದ ಗಂಡು ಅಂಬಿಯ ದಾನಕ್ಕೆ ಸಾಕ್ಷಿಯಾಗಿತ್ತು. ಈ ವಿಚಾರದ ಬಗ್ಗೆ ಮಂಡ್ಯ ಸುಮಲತಾ ಅಂಬರೀಶ್ ಈಗ ಪ್ರತಿಕ್ರಿಯಿಸಿದ್ದಾರೆ. ಮುಂದೆ ಓದಿ...

ಭಾರತ-ಶ್ರೀಲಂಕಾ ಪಂದ್ಯ
2004ರಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಏಕದಿನ ಪಂದ್ಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅದ್ಭುತ ಆಟ ಪ್ರದರ್ಶಿಸಿದರು. ಈ ವೇಳೆ ಪಂದ್ಯ ನೋಡಲು ಹೋಗಿದ್ದ ಅಂಬರೀಶ್ಗೆ ಧೋನಿ ಆಟ ಗಮನ ಸೆಳೆಯಿತು. ಬಳಿಕ ಧೋನಿಯ ಹಿನ್ನೆಲೆ ಬಗ್ಗೆ ತಿಳಿದುಕೊಂಡು ಅಂಬರೀಶ್, ಧೋನಿ ಭೇಟಿ ಮಾಡಿ 2 ಲಕ್ಷ ರೂಪಾಯಿ ಚೆಕ್ ಕೊಟ್ಟಿದ್ದರಂತೆ. ಪ್ರತಿಭಾನ್ವಿತ ಆಟಗಾರ, ಕಷ್ಟದಲ್ಲಿದ್ದಾನೆ, ಆತನಿಗೆ ಪ್ರೋತ್ಸಾಹ ಅಗತ್ಯ ಎಂದು ಈ ನಿರ್ಧಾರ ತೆಗೆದುಕೊಂಡಿದ್ದಂತೆ. ಈ ಕುರಿತು ಅನೇಕ ಪತ್ರಿಕೆಗಳಲ್ಲಿ ತಡವಾಗಿ ವರದಿಯಾಗಿದೆ.

ದಾನ ಕರ್ಣನಿಗೆ ಸಾಟಿಯಲ್ಲ
''ಅಂಬರೀಶ್ ಅವರ ಮಾನವೀಯ ಕಾರ್ಯಗಳು ಹೆಚ್ಚಾಗಿ ತಿಳಿದಿಲ್ಲ. ಏಕಂದ್ರೆ, ಮಾಡಿದ ಕೆಲಸದ ಬಗ್ಗೆ ಅವರು ಎಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ. ಪ್ರಚಾರದಲ್ಲಿ ಅವರಿಗೆ ನಂಬಿಕೆ ಇರಲಿಲ್ಲ. ಇಂತಹ ಅನಿರೀಕ್ಷಿತ ಘಟನೆಗಳು ನನ್ನ ಗಮನಕ್ಕೆ ಬಂದಾಗ ನಿಜಕ್ಕೂ ಸರ್ಪ್ರೈಸ್ ಆಗುತ್ತದೆ. ಆದರೆ, ಇದರಲ್ಲಿ ಯಾವುದೇ ಅಚ್ಚರಿಯಿಲ್ಲ. ಅದಕ್ಕೆ ಅವರನ್ನು ಜನರು ಪ್ರೀತಿಯಿಂದ ದಾನ ಕರ್ಣ ಎಂದು ಕರೆಯುವುದು'' ಎಂದು ಸುಮಲತಾ ಅಂಬರೀಶ್ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಟಿವಿ ಸಂದರ್ಶನದಲ್ಲಿ ಹೇಳಿಕೊಂಡಿದ್ದ ಧೋನಿ
ಅಂಬರೀಶ್ ಅವರು ಧೋನಿಗೆ ಮಾಡಿದ ಸಹಾಯವನ್ನು ಕೂಲ್ ಕ್ಯಾಪ್ಟನ್ ಮರೆತಿಲ್ಲ. ಟಿವಿ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಸಮಯದಲ್ಲಿ ಅಂಬಿ ಸಹಾಯವನ್ನು ನೆನೆದಿದ್ದರು. ಅಂಬರೀಶ್ ಅವರು 50 ಸಾವಿರ ಚೆಕ್ ಕೊಟ್ಟಿದ್ದರು ಎಂದು ಹೇಳಿಕೊಂಡಿದ್ದರಂತೆ ಎಂದು ವರದಿಯಾಗಿದೆ. ಆದರೆ, ಈ ಸಂದರ್ಶನವನ್ನು ಹೆಚ್ಚು ಜನರು ನೋಡಿಲ್ಲ. ಇನ್ನು ಅಂಬರೀಶ್ ಕೊಟ್ಟಿದ್ದು 10 ಸಾವಿರ ರೂಪಾಯಿ ಎಂದವರು ಇದ್ದಾರೆ. ಕೆಲವು ಕಡೆ 2 ಲಕ್ಷ ಎಂದು ವರದಿಯಾಗಿದೆ. ಆದರೆ, ಧೋನಿ ಹೇಳಿಕೊಂಡಿರುವ ಪ್ರಕಾರ 50 ಸಾವಿರ ಎನ್ನಲಾಗಿದೆ.

2018ರಲ್ಲಿ ಅಂಬರೀಶ್ ನಿಧನ
2018 ನವೆಂಬರ್ 24 ರಂದು ರೆಬೆಲ್ ಸ್ಟಾರ್ ಅಂಬರೀಶ್ ಅವರು ಬೆಂಗಳೂರಿನಲ್ಲಿ ನಿಧನರಾದರು. ಅಂಬಿ ಇಲ್ಲದೇ ಬಹುತೇಕ ಮೂರು ವರ್ಷ ಕಳೆದಿದೆ. ಸುಮಲತಾ ಅಂಬರೀಶ್ ಮಂಡ್ಯ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದರು. ಈ ಚುನಾವಣೆ ಸಂದರ್ಭದಲ್ಲಿ ಅಂಬರೀಶ್ ಕುಟುಂಬದ ಮೇಲೆ ಸಾಕಷ್ಟು ಆರೋಪ, ಟೀಕೆಗಳು ಬಂದವು. ಆದರೆ ಈ ಎಲೆಕ್ಷನ್ನಲ್ಲಿ ಗೆಲ್ಲುವ ಮೂಲಕ ಅದಕ್ಕೆಲ್ಲಾ ಸುಮಲತಾ ಉತ್ತರ ಕೊಟ್ಟಿದ್ದರು.


Click it and Unblock the Notifications











