ಬಿಗ್ಬಿಗೂ ಮೊದ್ಲೆ ಧರ್ಮೇಂದ್ರ ಸೂಪರ್ ಸ್ಟಾರ್, ವಿಷ್ಣು ಅವರ ಸ್ಟೈಲ್ ಕಾಪಿ ಮಾಡ್ತಿದ್ರು- ಸುಂದರ್ ರಾಜ್
ಭಾರತೀಯ ಚಿತ್ರರಂಗದ ದಿಗ್ಗಜ ನಟ ಧರ್ಮೇಂದ್ರ 89ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಉಸಿರಾಟದ ತೊಂದರೆಯಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ಇತ್ತೀಚೆಗೆ ಡಿಸ್ಚಾರ್ಜ್ ಮಾಡಲಾಗಿತ್ತು. ಡಿಸೆಂಬರ್ 8 ರಂದು ಅವರಿಗೆ 90 ವರ್ಷ ತುಂಬುತ್ತಿತ್ತು. ಧರ್ಮೇಂದ್ರ ಅಗಲಿಕೆಗೆ ಚಿತ್ರರಂಗ, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಧರ್ಮೇಂದ್ರ ಮೇಲಿನ ಅಭಿಮಾನದ ಬಗ್ಗೆ ನಟ ಸುಂದರ್ ರಾಜ್ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ.
1960 ರಲ್ಲಿ 'ದಿಲ್ ಭಿ ತೇರಾ ಹಮ್ ಭಿ ತೇರೆ' ಚಿತ್ರದ ಮೂಲಕ ಧರ್ಮೇಂದ್ರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 1960 ರ ದಶಕದಲ್ಲಿ 'ಅನ್ಪಧ್', 'ಬಂದಿನಿ', 'ಅನುಪಮಾ' ಮತ್ತು 'ಆಯಾ ಸಾವನ್ ಝೂಮ್ ಕೆ' ರೀತಿಯ ಹಿಟ್ ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿದ್ದಾರೆ. ಅಮಿತಾಬ್ ಚಿತ್ರರಂಗಕ್ಕೆ ಬರುವ ಮುನ್ನವೇ ಧರ್ಮೇಂದ್ರ ಸ್ಟಾರ್ ಆಗಿಬಿಟ್ಟಿದ್ದರು. 'ಧರಮ್ ವೀರ್', 'ಚುಪ್ಕೆ ಚುಪ್ಕೆ', 'ಮೇರಾ ಗಾಂವ್ ಮೇರಾ ದೇಶ್' ಮತ್ತು 'ಡ್ರೀಮ್ ಗರ್ಲ್' ರೀತಿಯ ಚಿತ್ರಗಳಲ್ಲಿ ನಟಿಸುವ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದರು.

ಭಾರತೀಯ ಚಿತ್ರರಂಗದ ಖ್ಯಾತ ನಟ-ನಟಿಯರಿಗೆಲ್ಲಾ ಧರ್ಮೇಂದ್ರ ನೆಚ್ಚಿನ ನಟ ಆಗಿದ್ದು. ರೋಲ್ ಮಾಡೆಲ್ ಎನಿಸಿಕೊಂಡಿದ್ದರು. ಸಾಹಸಸಿಂಹ ವಿಷ್ಣುವರ್ಧನ್ ಕೂಡ ಧರ್ಮೇಂದ್ರ ಅವರ ಅಭಿಮಾನಿ ಆಗಿದ್ದರು. ಅವರು ಸಿನಿಮಾಗಳನ್ನು ನೋಡುತ್ತಾ ಬೆಳೆದು ಕೊನೆಗೆ ತಾವು ಚಿತ್ರರಂಗ ಪ್ರವೇಶಿಸಿದ್ದರು. ವಿಷ್ಣುವರ್ಧನ್ ಹಾಗೂ ಸುಂದರ್ ರಾಜ್ ಕಾಲೇಜ್ ಮೇಟ್. ಇಬ್ಬರೂ ನ್ಯಾಷನಲ್ ಕಾಲೇಜಿನಲ್ಲಿ ಓದಿದವರು. ಹಾಗಾಗಿ ಧರ್ಮೇಂದ್ರ ಮೇಲಿನ ವಿಷ್ಣು ಅಭಿಮಾನವನ್ನು ಸುಂದರ್ ರಾಜ್ ಹತ್ತಿರದಿಂದ ನೋಡಿದ್ದಾರೆ.
ಸುಂದರ್ ರಾಜ್ ಕೂಡ ಧರ್ಮೇಂದ್ರ ಅವರ ಸಿನಿಮಾಗಳನ್ನು ಚಿಕ್ಕಂದಿನಿಂದ ನೋಡುತ್ತಾ ಬೆಳೆದವರು. ಅವರ ಅಗಲಿಕೆಗೆ ನುಡಿ ನಮನ ಸಲ್ಲಿಸಿದ್ದಾರೆ. "ಧರ್ಮೇಂದ್ರ ಹಾಗೂ ವಿಷ್ಣುವರ್ಧನ್ ಅವರದ್ದು ಐಕಾನಿಕ್ ಫ್ರೆಂಡ್ಶಿಪ್. ಶಮ್ಮಿ ಕಪೂರ್ ಹಾಗೂ ಧರ್ಮೇಂದ್ರ ಇಬ್ಬರ ಅಭಿಮಾನಿಯಾಗಿದ್ದರು ವಿಷ್ಣು. ಡ್ಯಾನ್ಸ್ ಹಾಗೂ ಸ್ಟೈಲ್ ಅನ್ನು ಶಮ್ಮಿ ಕಪೂರ್ ನೋಡಿ ಕಾಪಿ ಮಾಡಿದ್ರು. ಅದೇ ರೀತಿ ಧರ್ಮೇಂದ್ರ ವಾಕಿಂಗ್ ಸ್ಟೈಲ್ ಅನ್ನು ವಿಷ್ಣು ಕಾಪಿ ಮಾಡಿದ್ರು" ಎಂದು ತಿಳಿಸಿದ್ದಾರೆ.

ಧರ್ಮೇಂದ್ರ ಅವರನ್ನು ನಾನು ಬಹಳ ಇಷ್ಟಪಡುತ್ತಿದ್ದೆ. ಜಂಟಲ್ಮನ್, ಶೋಮ್ಯಾನ್ ಅಂದ್ರೆ ಅದು ಧರ್ಮೇಂದ್ರ. ಅವರ ಎಲ್ಲಾ ಸಿನಿಮಾಗಳು ನಮಗೆ ಇಷ್ಟ. "ಧರ್ಮೇಂದ್ರ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಶೋಲೆ' ಚಿತ್ರವನ್ನು ಮರೆಯೋಕೆ ಸಾಧ್ಯವಿಲ್ಲ. ಇವತ್ತಿಗೂ ಅದು ಕಲ್ಟ್ ಸಿನಿಮಾ. ಅವರ ಜೀವಶೈಲಿ ಬಹಳ ನೀಟ್ ಆಗಿತ್ತು. ವಯಸ್ಸಾಗಿದ್ದರೂ ತಮ್ಮ ತೋಟದಲ್ಲಿ ಕೆಲಸ ಮಾಡಿಕೊಂಡಿದ್ರು. ಅಂತಹ ಧೀಮಂತ ನಟ ನಮ್ಮನ್ನು ಅಗಲಿದ್ದಾರೆ ಎನ್ನುವುದು ನೋವಿನ ಸಂಗತಿ. ನಿಜಕ್ಕೂ ಅವರೂ ನಮಗೆಲ್ಲಾ ಸ್ಫೂರ್ತಿ" ಎಂದು ಸುಂದರ್ ರಾಜ್ ಹೇಳಿದ್ದಾರೆ.
ವಿಷ್ಣುವರ್ಧನ್ ಹಾಗೂ ಧರ್ಮೇಂದ್ರ ಅವರ ಫೋಟೊ ವೈರಲ್ ಆಗ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸುಂದರ್ ರಾಜ್ "ನನಗೆ ಸರಿಯಾಗಿ ಗೊತ್ತಿಲ್ಲ. ಯಾವ ಸಮಯದ ಫೋಟೊ ಅಂತ. ಬಹುಶಃ ಕ್ರಿಕೆಟ್ ಟೂರ್ನಿಗೆ ಬಾಲಿವುಡ್ ತಾರೆಯರೆಲ್ಲಾ ಬಂದಿದ್ದರು. ಆಗ ವಿಷ್ಣು ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೊ ಇರಬಹುದು. ನಾನು ಆ ದಿನ ಅಲ್ಲಿಗೆ ಹೋಗಿರಲಿಲ್ಲ. ನನಗಿಂತ ಮುಂಚೆ ವಿಷ್ಣು ಹೀರೊ ಆಗಿಬಿಟ್ಟಿದ್ರು. ಕಾಲೇಜಿನಲ್ಲಿ ಒಟ್ಟಿಗೆ ಓದಿದ್ರು, ಅವ್ರು ಬೇಗ ಚಿತ್ರರಂಗಕ್ಕೆ ಬಂದು ಗೆದ್ರು. ನಾನು ರಂಗಭೂಮಿ ನಟನೆ, ಆರ್ಟ್ ಸಿನಿಮಾಗಳಲ್ಲಿ ನಟಿಸಿ ತಡವಾಗಿ ಬಂದೆ" ಎಂದಿದ್ದಾರೆ.
ನಾನು ಬಾಂಬೆ ಫಿಲ್ಮ್ ಫೆಸ್ಟಿವಲ್ನಲ್ಲಿ ಧರ್ಮೇಂದ್ರ ಅವರನ್ನು ಭೇಟಿ ಮಾಡಿ ಮಾತನಾಡಿಸಿದ್ದೆ. "ಅಭಿಮಾನ ಎನ್ನುವುದು ಯಾಕೆ ಬರುತ್ತದೆ ಎಂದು ಹೇಳುವುದು ಕಷ್ಟ. ಯಾವತ್ತೂ ಧರ್ಮೇಂದ್ರ ಜಿಮ್ಗೆ ಹೋದವರಲ್ಲ. ಆದರೆ ಕಟ್ಟುಮಸ್ತು ದೇಹ. ಮೂಲತಃ ಪಂಜಾಬಿ. ಎಲ್ಲೆ ಇದ್ರು ಎದ್ದು ನಿಂತು ಗೌರವ ಕೊಡಬೇಕು ಎನಿಸುವಂತಹ ಒಳ್ಳೆ ಪರ್ಸನಾಲಿಟಿ ಅವ್ರದ್ದು. ಅಮಿತಾಬ್ ಬಚ್ಚನ್ಗಿಂತ ಸೀನಿಯರ್ ನಟ ಧರ್ಮೇಂದ್ರ. ನಾವು 60ರ ದಶಕದಲ್ಲೇ ಧರ್ಮೇಂದ್ರ ಸಿನಿಮಾಗಳಲ್ಲಿ ನಟಿಸಿದ್ದರು" ಎಂದು ಮೆಲುಕು ಹಾಕಿದ್ದಾರೆ.
ಧರ್ಮೇಂದ್ರ ಹಾಗೂ ಮೀನಾ ಕುಮಾರಿ ಅವರ ಸಿನಿಮಾ ಪೋಸ್ಟರ್ಗಳನ್ನು ನೋಡಿ ನಾವೆಲ್ಲಾ ಆಕರ್ಷಿತರಾಗಿದ್ದೆವು. "ಧರ್ಮೇಂದ್ರ ಅವರನ್ನು ನೋಡಿ ನಾವೆಲ್ಲಾ ಜಿಮ್ಗೆ ಹೋಗ್ತಿದ್ವಿ. ನ್ಯಾಷನಲ್ ಕಾಲೇಜಿನಲ್ಲಿ ಅವರ ಫೋಟೊ ನೋಡ್ತಾ ನಾನು ಜಿಮ್ನಲ್ಲಿ ಕರಸತ್ತು ಮಾಡ್ತಿದ್ದೆ. ನಾವು ಹಿಂಗೆ ಆಗಬೇಕು ಎಂದು ಭಾವಿಸುತ್ತಿದ್ದೆವು. ಸ್ಫೂರ್ತಿ ಪಡೆದೆವು. ಅಮಿತಾಬ್ಗಿಂತ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸಿದ್ದರು. ರಾಜ್ಕಪೂರ್ ಅವರಿಗೂ ಆತ್ಮೀಯರಾಗಿದ್ದರು. ರಾಜೇಶ್ ಖನ್ನಾ ಸೂಪರ್ ಸ್ಟಾರ್ ಆಗಿದ್ದರೂ ನಮಗೆಲ್ಲಾ ಧರ್ಮೇಂದ್ರ ಇಷ್ಟವಾಗುತ್ತಿದ್ರು" ಎಂದು ಸುಂದರ್ ರಾಜ್ ವಿವರಿಸಿದ್ದಾರೆ.


Click it and Unblock the Notifications











