ಕುಂಭಕರ್ಣ ನಿದ್ದೆ ಕಳೆದೆದ್ದ ಸುಂದರಕಾಂಡ
ನಳನಳಿಸಲು ಸಿದ್ಧವಾಗುತ್ತಿದೆ.
ಹನ್ನೆರಡು ವರ್ಷಗಳ ಹಿಂದಿನ ಮಾತದು. ಪ್ರೇಮಲೋಕ, ರಣಧೀರ, ಅಂಜದಗಂಡು... ಹೀಗೆ ಸಾಲು ಸಿನಿಮಾಗಳ ಯಶಸ್ಸಿನಿಂದ ರವಿ ಯಶಸ್ಸಿನ ತುತ್ತತುದಿಯಲ್ಲಿದ್ದ ದಿನಗಳವು. ನಿರ್ಮಾಪಕ ಗಂಗಾಧರ್ ಅವರು ರವಿಚಂದ್ರನ್ರನ್ನು ನಾಯಕರನ್ನಾಗಿಸಿ ಸುಂದರಕಾಂಡ ಎನ್ನುವ ಅದ್ದೂರಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದರು. ಶೇ.60 ರಷ್ಟು ಚಿತ್ರೀಕರಣವೂ ಮುಗಿದಿತ್ತು . ಆ ಹೊತ್ತಿನಲ್ಲಿ ರವಿ- ಗಂಗಾಧರ್ ನಡುವೆ ವೈಮನಸ್ಯ ಹೊತ್ತಿಕೊಂಡಿತು ನೋಡಿ, ಸುಂದರಕಾಂಡ ಮಗುಚಿಬಿತ್ತು.
ಆದರೆ, ಅರ್ಧಕ್ಕೆ ನಿಂತ ಕಾಂಡವನ್ನು ಪುನರುಜ್ಜೀವನಗೊಳಿಸುವ ಗಂಗಾಧರ್ ಕನಸಿಗೆ ಮಾತ್ರ ಗೆದ್ದಲು ಹತ್ತಿರಲಿಲ್ಲ . ಅದು ಕಾರ್ಯರೂಪಕ್ಕೆ ಬರಲು ಹನ್ನೆರಡು ವರ್ಷ ಬೇಕಾಯಿತು. ಇದೊಂದು ರೀತಿಯ ವನವಾಸ. ಗಂಗಾಧರ್ ಡಬ್ಬಾಗಳಿಂದ ರೀಲನ್ನು ಎತ್ತಿ ಧೂಳು ಒರೆಸುತ್ತಿದ್ದಾರೆ.
ಅರ್ಧಕ್ಕೆ ನಿಂತ ಸುಂದರಕಾಂಡವನ್ನು ನಿರ್ದೇಶಿಸುವ ಹೊಣೆಯನ್ನು ಆರ್.ಸಿ.ರಂಗಾ ಹೊತ್ತಿದ್ದಾರೆ. ಈಶ್ವರ್ ಹಾಗೂ ಮಿಸ್ಟರ್ ಹರಿಶ್ಚಂದ್ರ ಚಿತ್ರಗಳನ್ನು ನಿರ್ದೇಶಿಸಿದ ಅನುಭವ ಇವರದು. ಈ ಮುನ್ನ ಚಿತ್ರೀಕರಿಸಿದ ದೃಶ್ಯಗಳನ್ನು ಉಳಿಸಿಕೊಂಡು, ಪ್ರಸ್ತುತಕ್ಕೆ ಹೊಂದುವಂತೆ ಉಳಿದ ಕಥೆಯನ್ನು ಹೊಸೆಯುವ ಹೊಣೆಯನ್ನು ಮೋಹನ್ ಹೊತ್ತುಕೊಂಡ್ದಿದಾರೆ. ಗಂಗಾಧರ್ ಅವರ ಅಚ್ಚುಮೆಚ್ಚಿನ ಹುಡುಗನಾದ ಈ ಹುಡುಗ, ಕಥೆ ಬರೆಯುವುದರಲ್ಲಿ ಮಾತ್ರವಲ್ಲದೆ ನಟಿಸುವುದರಲ್ಲೂ ಈಚಿನ ದಿನಗಳಲ್ಲಿ ಹೆಸರು ಮಾಡುತ್ತಿರುವವರು.
ಕೊನೆಮಾತು : ಸುಂದರಕಾಂಡ ಸಿನಿಮಾಕ್ಕೇನೋ ಮುಕ್ತಿ ಸಿಗುತ್ತಿದೆ. ಆದರೆ, ಶಿವರಾಜ್ ಅಭಿನಯದ ಸುಂದರಕಾಂಡ ಇನ್ನೇನು ತೆರೆಗೆ ಕಾಣಲು ಸಿದ್ಧವಾಗುತ್ತಿದೆ. ಹಾಗಾದರೆ ಗಂಗಾಧರ್ ತಮ್ಮ ಚಿತ್ರದ ಹೆಸರನ್ನು ಬದಲಿಸುತ್ತಾರಾ?


Click it and Unblock the Notifications