'ಟೀಕಿಸುವುದು, ದೂಷಿಸುವುದು ಬಿಡಿ, ಜನರು ಜವಾಬ್ದಾರಿಯಿಂದ ವರ್ತಿಸಿ'
'ಕೊರೊನಾ ವೈರಸ್ ಇಲ್ಲ ಎನ್ನುವುದು ಮೊದಲು ಬಿಡಿ, ಸರ್ಕಾರವನ್ನು, ವಿರೋಧ ಪಕ್ಷದವರನ್ನು ಅಥವಾ ಇನ್ನೊಬ್ಬರನ್ನು ದೂಷಿಸುವುದು ಬಿಡಿ, ಜನರು ಜವಾಬ್ದಾರಿಯಿಂದ ವರ್ತಿಸಿ, ನಿಮ್ಮ ನಿರ್ಲಕ್ಷ್ಯದಿಂದಲೇ ಇಂತಹ ಪರಿಸ್ಥಿತಿ ತಲುಪಿದೆ'' ಎಂದು ಸುನೇತ್ರಾ ಮತ್ತು ರಮೇಶ್ ಪಂಡಿತ್ ಬೇಸರ ವ್ಯಕ್ತಪಡಿಸಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಸುನೇತ್ರಾ ಪಂಡಿತ್ ಅವರು ತಮ್ಮ ಸಹೋದರಿಯನ್ನು ಕಳೆದುಕೊಂಡಿದ್ದರು. ಕೊರೊನಾ ಸೋಂಕಿಗೆ ತುತ್ತಾಗಿದ್ದ ಸುನೇತ್ರಾ ಅಕ್ಕನಿಗೆ ಸೂಕ್ತ ಚಿಕಿತ್ಸೆ ಸಿಗದ ಕಾರಣ ಸಾವನ್ನಪ್ಪಿದ್ದರು. ಐಸಿಯು ವ್ಯವಸ್ಥೆ ಮತ್ತು ಆಕ್ಸಿಜನ್ ವ್ಯವಸ್ಥೆ ಇಲ್ಲದೇ ಕಾರಣ ಜೀವ ಕಳೆದುಕೊಂಡರು ಎಂದು ಚಿತಾಗಾರದ ಬಳಿ ತಾರಾ ದಂಪತಿ ಕಣ್ಣೀರಿಟ್ಟಿದ್ದರು.
ಇದೇ ವಿಚಾರವಾಗಿ ಟಿವಿ ಮಾಧ್ಯಮದ ಜೊತೆ ಮಾತನಾಡಿರುವ ಸುನೇತ್ರಾ ಮತ್ತು ರಮೇಶ್ ಪಂಡಿತ್ ದಂಪತಿ ''ಜನರು ಜವಾಬ್ದಾರಿಯಿಂದ ವರ್ತಿಸಿದ್ದರೆ ಇಂತಹ ದುಸ್ಥಿತಿ ಬರ್ತಿರಲಿಲ್ಲ'' ಎಂದು ಆಕ್ರೋಶ ಹೊರಹಾಕಿದ್ದಾರೆ. ಮುಂದೆ ಓದಿ...

ಸರಿಯಾಗಿ ಸ್ಪಂದಿಸಿದ್ದರೆ ಜೀವ ಉಳಿಯುತ್ತಿತ್ತು
'ಕೊರೊನಾ ಪಾಸಿಟಿವ್ ಬಂದ್ಮೇಲೂ ನಮ್ಮ ಅಕ್ಕಗೆ ಯಾವುದೇ ತೊಂದರೆ ಇರಲಿಲ್ಲ. ಆದರೂ ಮುನ್ನೆಚ್ಚರಿಕೆ ಉದ್ದೇಶದಿಂದ ಮನೆಯ ಇತರೆ ಸದಸ್ಯರಿಗೆ ತೊಂದರೆಯಾಗುವುದು ಬೇಡ ಎಂಬ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಿದ್ದು. ಬಿಬಿಎಂಪಿ ಸೂಚಿಸಿದ ಆಸ್ಪತ್ರೆಗೆ ಸೇರಿಸಿದ್ವಿ. ಆಗಲೇ ಆಸ್ಪತ್ರೆಯವರು ಐಸಿಯು, ಆಕ್ಸಿಜನ್ ವ್ಯವಸ್ಥೆ ಇಲ್ಲ ಅಂತ ಹೇಳಿದ್ರೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗ್ತಿದ್ವಿ. ಇದ್ದಕ್ಕಿದ್ದಂತೆ ಮಧ್ಯರಾತ್ರಿ ಆರೋಗ್ಯದಲ್ಲಿ ಎಮರ್ಜೆನ್ಸಿ ಆದ್ಮೇಲೆ ಹೇಳಿದ್ರೆ ಎಲ್ಲಿಗೆ ಹೋಗುವುದು. ಅಷ್ಟೊತ್ತಲ್ಲಿ ಯಾರೂ ಸ್ಪಂದಿಸಲ್ಲ. ಕೈ ಮೀರಿ ಹೋಗಿತ್ತು' ಎಂದು ಘಟನೆ ವಿವರಿಸಿದರು.

ಜನರ ನಿರ್ಲಕ್ಷ್ಯದಿಂದಲೇ ಇಂತಹ ಸ್ಥಿತಿ ಬಂದಿದೆ
'ಕೊರೊನಾ ಇಲ್ಲ, ನಮಗೆ ಏನೂ ಆಗಲ್ಲ ಎಂಬ ಉದ್ಧಟತನದ ಧೋರಣೆಯಿಂದಲೇ ಈ ಸ್ಥಿತಿ ನಿರ್ಮಾಣವಾಗಿದೆ. ಒಬ್ಬರಿಂದ ಮತ್ತೊಬ್ಬರಿಗೆ ತೊಂದರೆಯಾಗುತ್ತಿದೆ ಎಂದು ಗೊತ್ತಿದ್ದರೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಅವರ ಮನೆಗಳಲ್ಲಿ ಇಂತಹ ಸಾವು, ನೋವು ಆದಾಗ ಮಾತ್ರ ಅದರ ಪರಿಣಾಮ ಗೊತ್ತಾಗುತ್ತೆ' ಎಂದು ಕಿಡಿಕಾರಿದ್ದಾರೆ.

ದುಡ್ಡು ತಗೊಂಡು ಚಿತಾಗಾರದಲ್ಲಿ ಕಣ್ಣೀರಿಟ್ಟಿಲ್ಲ
''ನಮ್ಮ ಅಕ್ಕ ಕೊರೊನಾಗೆ ಬಲಿಯಾದಳು ಅಂತ ನಾವು ಕಣ್ಣೀರಿಟ್ಟಿದ್ದು, ನಮ್ಮ ನೋವು ಬೇರೆಯವರಿಗೆ ಅರ್ಥವಾಗಲಿ. ನಮ್ಮನ್ನು ನೋಡಿಯಾದರೂ ಎಚ್ಚೆತ್ತುಕೊಳ್ಳಲಿ ಎಂದು ನಾವು ಹೇಳಿದ್ದು. ಅದಕ್ಕೂ ಟೀಕೆ ಮಾಡ್ತಾರೆ. ಬಿಜೆಪಿ ಪರವಾಗಿ ಎಷ್ಟು ದುಡ್ಡು ತಗೊಂಡು ಆಕ್ಟಿಂಗ್ ಮಾಡಿದ್ರಿ ಅಂತಾರೆ. ಕೊರೊನಾ ಇಲ್ಲ ಅಂತಾರೆ, ಹಾಗಾದ್ರೆ ಸೋಂಕಿತರನ್ನು ತಮ್ಮ ಮನೆಯಲ್ಲಿಟ್ಟುಕೊಂಡು, ಅವರ ಜೊತೆಯೇ ಇರಲಿ ನೋಡೋಣ? ಸುಮ್ಮನೆ ಮಾತಾಡೋದು ಅಲ್ಲ'' ಎಂದು ಆಕ್ರೋಶ ಹೊರಹಾಕಿದ್ದಾರೆ.
Recommended Video

ಬೇರೆಯವರ ಬಗ್ಗೆ ಟೀಕಿಸುವುದು ಬಿಡಿ
''ನಾವು ಸರ್ಕಾರದ ಮೇಲೆ ಏಕೆ ಅವಲಂಬಿತವಾಗಬೇಕು, ನಮ್ಮ ಬುದ್ದಿ ನಮಗಿಲ್ವಾ, ನಮ್ಮ ತಂದೆ-ತಾಯಿಗಳು ಹೇಳಿಕೊಟ್ಟಿಲ್ವಾ. ಹೌದು, ಆರ್ಥಿಕವಾಗಿ ಸಂಕಷ್ಟದಲ್ಲಿದ್ದವರು ಬಿಬಿಎಂಪಿ ಹಾಗೂ ಸರ್ಕಾರದ ಮೇಲೆ ಅವಲಂಬಿತವಾಗಿದ್ದಾರೆ. ಸರ್ಕಾರದಿಂದಲೂ ಅನೇಕರಿಗೆ ಸಹಾಯವಾಗಿದೆ. ಇಲ್ಲಿ ಎರಡು ಕಡೆಯೂ ತಪ್ಪಿದೆ. ಸರ್ಕಾರದ ಕಡೆ ತಪ್ಪಿದ್ದರೆ ಜನರ ಮೇಲೆ ಹೇಳುವುದು, ಜನರ ಕಡೆ ತಪ್ಪಿದ್ದರೆ ಸರ್ಕಾರದ ಮೇಲೆ ದೂಷಿಸುವುದು. ಬೇರೆಯವರ ಬಗ್ಗೆ ಟೀಕಿಸುವುದು, ಇನ್ನೊಬ್ಬರ ಪರಿಸ್ಥಿತಿ ಹೀಯಾಳಿಸುವುದು ಬಿಡಿ'' ಎಂದು ಮನವಿ ಮಾಡಿದ್ದಾರೆ.


Click it and Unblock the Notifications











