ಅಹೋರಾತ್ರನ ವಿರುದ್ಧ ಗುಡುಗಿದ ಸುನೀಲ್ ಕುರಿಬಾಂಡ್
ಕನ್ನಡ ನಟ ಕಿಚ್ಚ ಸುದೀಪ್ ಅವರ ಬಗ್ಗೆ ವೈಯಕ್ತಿಕವಾಗಿ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬರಹಗಾರ ಅಹೋರಾತ್ರ ವಿರುದ್ಧ ಸುನೀಲ್ ಕುರಿಬಾಂಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಹೋರಾತ್ರ ಮತ್ತು ಸುದೀಪ್ ಅಭಿಮಾನಿಗಳ ನಡುವಿನ ವಾಗ್ವಾದಕ್ಕೆ ಸಂಬಂಧಿಸಿದಂತೆ ವಿಡಿಯೋ ಮಾಡಿರುವ ಸುನೀಲ್ ಕುರಿಬಾಂಡ್, ಅಹೋರಾತ್ರರ ವಿರುದ್ಧ ಕಿಡಿಕಾರಿದ್ದಾರೆ.
'25 ವರ್ಷದಿಂದ ಚಿತ್ರಜಗತ್ತಿನಲ್ಲಿ ಕಲಾಸೇವೆ ಮಾಡಿಕೊಂಡು ಬಂದಿರುವ ಒಬ್ಬ ಮೇರು ಕಲಾವಿದನ ಬಗ್ಗೆ ಏಕವಚನದಲ್ಲಿ ಹೀಯಾಳಿಸುವುದು ಸರಿಯಲ್ಲ, ನಿನಗೆ ತಾಕತ್ ಇದ್ದರೆ, ಧೈರ್ಯ ಇದ್ದರೆ ಬೇರೆ ಸಮಸ್ಯೆಗಳ ಬಗ್ಗೆ ಪ್ರಶ್ನಿಸಬೇಕಿತ್ತು. ಅದನ್ನು ಬಿಟ್ಟು ಯಾವಾಗಲೂ ಸುದೀಪ್ ಅವರ ಬಗ್ಗೆಯೇ ನಿನ್ನ ವಿರೋಧ ಏಕೆ' ಎಂದು ಪ್ರಶ್ನಿಸಿದ್ದಾರೆ.

'ಬಾಲಿವುಡ್ ನಟಿ ಬಿಪಾಶ ಬಸು ಕಾಂಡೋಮ್ ಕುರಿತು ಜಾಹೀರಾತು ಮಾಡಿದ್ದಾರೆ, ಮತ್ತೊಬ್ಬ ನಟ ಅಂಡರ್ ವೇರ್ ಬಗ್ಗೆ ಜಾಹೀರಾತು ಮಾಡಿದ್ದಾರೆ, ಅವರ ಬಗ್ಗೆ ಏಕೆ ನೀನು ಮಾತಾಡಿಲ್ಲ. ಸುದೀಪ್ ಮಾತ್ರ ನಿನ್ನ ಕಣ್ಣಿಗೆ ಬೀಳ್ತಾರಾ' ಎಂದು ಕಿಡಿಕಾರಿದ್ದಾರೆ.
'ನೀನೊಬ್ಬ ರೈಟರ್ ಅಥವಾ ವೈಟರ್...ದೊಡ್ಡ ಅಭಿಮಾನಿಗಳ ಬಳಗ ಇದೆ, ಅವರ ಬಗ್ಗೆ ಮಾತಾಡಿದ್ರೆ ಅವರ ಫ್ಯಾನ್ಸ್ ರೊಚ್ಚಿಗೇಳುವುದು ಸಹಜ. ಬರಿ ಅವರ ಅಭಿಮಾನಿಗಳು ಮಾತ್ರವಲ್ಲ, ಬೇರೆ ನಟರ ಬಗ್ಗೆ ಕೀಳಾಗಿ ಮಾತಾಡಿದ್ರೆ ಅವರ ಫ್ಯಾನ್ಸ್ ಹಾಗೆ ಮಾಡ್ತಾರೆ. ಅದು ಅವರ ಅಭಿಮಾನ'' ಎಂದು ಎಚ್ಚರಿಕೆ ನೀಡಿದ್ದಾರೆ.
''ಕಿಚ್ಚ ಸುದೀಪ್ ಅರೆಸ್ಟ್ ಆಗಬೇಕು, ಸುದೀಪ್ ಅರೆಸ್ಟ್ ಆಗಬೇಕು ಅಂತ ಹೇಳ್ತಿಯಾ, ಅವರು ಏಕೆ ಅರೆಸ್ಟ್ ಆಗಬೇಕು. ನೀನು ಅರೆಸ್ಟ್ ಆಗಬೇಕು. ಅವರ ಬಗ್ಗೆ ಸುಳ್ಳು ಪ್ರಚಾರ ಮಾಡ್ತಿದ್ದೀಯಾ ನೀನು ಅರೆಸ್ಟ್ ಆಗಬೇಕು. ಕಂಪನಿ ಮತ್ತು ನಟನ ನಡುವೆ ಜಾಹೀರಾತು ಒಪ್ಪಂದ ಆಗಿರುತ್ತದೆ, ಅವರು ಮಾಡಿದ್ದಾರೆ. ಅದರಲ್ಲಿ ತಪ್ಪೇನು?'' ಎಂದು ಸುನೀಲ್ ಕುರಿ ಬಾಂಡ್ ವಿಡಿಯೋ ಮೂಲಕ ಅಹೋರಾತ್ರನಿಗೆ ಟಾಂಗ್ ನೀಡಿದ್ದಾರೆ.

ಸುದೀಪ್ ಅವರ ಬಗ್ಗೆ ಕೀಳಾಗಿ ಮಾತನಾಡಿದ್ದರು ಎಂಬ ಕಾರಣಕ್ಕೆ ಕಿಚ್ಚನ ಅಭಿಮಾನಿಗಳು ಅಹೋರಾತ್ರನ ನಿವಾಸಕ್ಕೆ ದಾಳಿ ಮಾಡಿದ್ದ ಘಟನೆ ಇತ್ತೀಚಿಗಷ್ಟೆ ವರದಿಯಾಗಿದೆ. ಈ ಸಂಬಂಧ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ.


Click it and Unblock the Notifications











