ಪ್ರೇಕ್ಷಕರ ಕಿವಿಗೆ ಮತ್ತೊಮ್ಮೆ ಗುಲಾಬಿ ಹೂ ಇಟ್ಟ ಪ್ರೇಮ್
ಈ ಮೂಲಕ ಕನ್ನಡಕ್ಕೆ ಸನ್ನಿ ಬರಲಿದ್ದಾರೆ ಎಂಬ ಸುದ್ದಿ ಕೇವಲ ಪ್ರಚಾರದ ಗಿಮಿಕ್ ಅಷ್ಟೇ ಎಂಬುದು ಪಕ್ಕಾ ಆಗಿದೆ. ಪ್ರೇಮ್ ಚಿತ್ರಗಳೆಂದರೆ ಈ ರೀತಿಯ ಗಿಮಿಕ್ಗಳು ಹೊಸದೂ ಅಲ್ಲ ಹಳೆಯದೂ ಅಲ್ಲ ನಿತ್ಯನೂತನ. ಕನ್ನಡಕ್ಕೆ ಸನ್ನಿ ಬರುತ್ತಾರೆ ಅದರಲ್ಲೂ ಪ್ರೇಮ್ ಅಡ್ಡ ಚಿತ್ರಕ್ಕೆ ಎಂದಾಗಲೆ ಕೆಲವರು ಮುಸಿಮುಸಿ ನಕ್ಕಿದ್ದರು.
ಈ ಬಗ್ಗೆ ಟ್ವೀಟಿಸಿರುವ ಸನ್ನಿ, "ಸದ್ಯಕ್ಕೆ ನಾನು ಯಾವುದೇ ಐಟಂ ಸಾಂಗ್ನಲ್ಲಿ ಅಭಿನಯಿಸುತ್ತಿಲ್ಲ" ಎಂದಿದ್ದಾರೆ. ಪ್ರೇಮ್ ಅಡ್ಡ ಚಿತ್ರದಲ್ಲಿ ಐಟಂ ಸಾಂಗ್ ಮಾಡಲಿರುವ ಸುದ್ದಿಯನ್ನೂ ತಳ್ಳಿ ಹಾಕಿದ್ದಾರೆ. "ಈ ವರ್ಷ ನಾನು ಸಹಿ ಹಾಕಿರುವುದು ಎರಡೇ ಎರಡು ಚಿತ್ರಗಳಿವೆ. ಒಂದು 'ಜಿಸ್ಮ್ 2' ಹಾಗೂ 'ರಾಗಿಣಿ'...ಇವರೆಡು ಚಿತ್ರಗಳು ಬಿಟ್ಟು ಇನ್ಯಾವುದರಲ್ಲೂ ನಾನು ಅಭಿನಯಿಸುತ್ತಿಲ್ಲ" ಎಂದಿದ್ದಾರೆ.
"ಯಾರ್ಯಾರೋ ಹಬ್ಬಿಸುವ ಗಾಸಿಪ್ ಸುದ್ದಿಗಳನ್ನು ನಂಬಬೇಡಿ. ಸದ್ಯಕ್ಕೆ ಯಾವ ಐಟಂ ಹಾಡಿನಲ್ಲೂ ಅಭಿನಯಿಸುವ ಪ್ಲಾನ್" ಇಲ್ಲ ಎಂದಿದ್ದಾರೆ. ಹಾಗಾಗಿ ಪ್ರೇಮ್ ಹಾಗೂ ನಿರ್ದೇಶಕ ಮಹೇಶ್ ಬಾಬು ಇಬ್ಬರೂ ಪ್ರೇಕ್ಷಕರ ಕಿವಿಗೆ ಚೆಂಡು ಹೂವಿಟ್ಟಿ ಚೆಂಡಾಡ ಆಡಿರುವುದು ಗ್ಯಾರಂಟಿಯಾಗಿದೆ.
ಕಿವಿಗೆ ಹೂ ಮುಡಿಸುವುದರಲ್ಲಿ ಎಕ್ಸ್ಪರ್ಟ್ ಆಗಿರುವ ಪ್ರೇಮ್, ಈ ಹಿಂದೆಯೂ ಹಲವಾರು ಬಾರಿ ಇದೇ ರೀತಿಯ ಪ್ರಯೋಗಗಳನ್ನು ಬಡಪಾಯಿ ಪ್ರೇಕ್ಷಕರ ಮೇಲೆ ಪ್ರಯೋಗಿಸಿದ್ದಾರೆ. ಈ ಹಿಂದೊಮ್ಮೆ 'ಜೋಗಯ್ಯ' ಚಿತ್ರವನ್ನು ತ್ರಿಡಿಯಲ್ಲಿ ನೋಡಿ ಆನಂದಿಸಿ ಎಂದು ಕಿವಿಗೆ ಗಣೇಶ ಬೀಡಿ ಸಿಕ್ಕಿಸಿದ್ದು ನೆನಪಿರಬಹುದು.
ಚಿತ್ರದ ನಿರ್ದೇಶಕ ಮಹೇಶ್ ಬಾಬು ಅವರು ಈ ಹಿಂದೆ ಉತ್ತಮ ಚಿತ್ರಗಳನ್ನು ಕೊಟ್ಟಂತಹವರು. ಅವರ ನಿರ್ದೇಶನದ ಆಕಾಶ್, ಅರಸು ಚಿತ್ರಗಳು ಬಾಕ್ಸಾಫೀಸಲ್ಲಿ ಸದ್ದು ಮಾಡಿವೆ. ಆದರೆ ಅವರೂ ಪ್ರೇಮ್ ಜೊತೆ ಧ್ವನಿಗೂಡಿಸಿದ್ದು ದುರದೃಷ್ಟಕರ.
ಮಹೇಶ್ ಬಾಬು ಇನ್ನೂ ಒಂದು ಹೆಜ್ಜೆ ಮುಂದೆ ಹಾಕಿ ಸನ್ನಿ ಐಟಂ ಡಾನ್ಸ್ಗೆ ಉಡುಗೆ ತೊಡುಗೆ ಬಗ್ಗೆಯೂ ಮಹೇಶ್ ಹೇಳಿಕೊಂಡಿದ್ದರು. ಆಕೆಗೆ ಎಷ್ಟು ಹಣ ಕೊಡಲಾಗುತ್ತಿದೆ ಎಂಬ ಮಾಹಿತಿಯನ್ನೆಲ್ಲಾ ನೀಡಿ ಹಳ್ಳಕ್ಕೆ ಬೀಳಿಸಿದ್ದರು.
ಪ್ರೇಮ್ ಅವರು 'ಜೋಗಯ್ಯ' ಚಿತ್ರದ ನಾಯಕಿ ಪ್ರಿಯಾಂಕಾ ಚೋಪ್ರಾ ಎಂದು ಹೇಳಿಕೊಂಡಿದ್ದರು. ಚಿತ್ರದ ಅತಿಥಿ ಪಾತ್ರದಲ್ಲಿ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸುತ್ತಿದ್ದಾರೆ ಎಂದೂ ತಮ್ಮ ಚಿತ್ರಕ್ಕೆ ಇಲ್ಲಸಲ್ಲದ ಬಿಲ್ಡಪ್ ನೀಡಿದ್ದರು. ಬಳಿಕ ಏನಾಯಿತು ಎಂದು ಎಲರಿಗೂ ಗೊತ್ತೇ ಇದೆ. (ಏಜೆನ್ಸೀಸ್)


Click it and Unblock the Notifications












