ಕೇರಳ ಪೊಲೀಸರಿಂದ ವಿಚಾರಣೆ: ವಂಚನೆ ಆರೋಪದ ಬಗ್ಗೆ ಸನ್ನಿ ಲಿಯೋನ್ ಹೇಳಿಕೆ
ವಂಚನೆ ಪ್ರಕರಣದ ಬಗ್ಗೆ ಕೆಲವು ದಿನಗಳ ಹಿಂದಷ್ಟೆ ನಟಿ ಸನ್ನಿ ಲಿಯೋನ್ ಅವರನ್ನು ಕೇರಳ ಪೊಲೀಸರು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಕೇರಳದ ಕಾರ್ಯಕ್ರಮ ಆಯೋಜಕರೊಬ್ಬರಿಗೆ 29 ಲಕ್ಷ ರೂಪಾಯಿ ಹಣ ಮೋಸ ಮಾಡಿದ್ದಾರೆ ಎಂಬ ಆರೋಪ ಸನ್ನಿ ಲಿಯೋನ್ ಮೇಲಿದೆ.
ಕಾರ್ಯಕ್ರಮಕ್ಕೆ ಬರುತ್ತೇನೆಂದು ಹೇಳಿ 29 ಲಕ್ಷ ಹಣ ಪಡೆದು ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ ಎಂದು ಆರೋಪಿಸಿ ಎರ್ನಾಕುಲಂ ಪೊಲೀಸ್ ಠಾಣೆಯಲ್ಲಿ ಶಿಯಾಸ್ ಎಂಬುವರು ಈ ಹಿಂದೆ ದೂರು ನೀಡಿದ್ದರು. ಕೆಲವು ದಿನಗಳ ಹಿಂದಷ್ಟೆ ಚಿತ್ರೀಕರಣಕ್ಕೆ ಕೇರಳಕ್ಕೆ ತೆರಳಿದ್ದ ಸನ್ನಿ ಲಿಯೋನ್ ಅನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದರು.

ಈ ಬಗ್ಗೆ ಮಾಧ್ಯಮದೊಟ್ಟಿಗೆ ಮಾತನಾಡಿರುವ ಸನ್ನಿ ಲಿಯೋನ್, 'ಆಯೋಜಕರಿಂದ ಹಣ ಪಡೆದಿರುವುದು ನಿಜ ಆದರೆ ವಂಚನೆ ಮಾಡುವ ಉದ್ದೇಶ ನನಗೆ ಇರಲಿಲ್ಲ. ಆಯೋಜಕರು ಹೇಳಿದ ಸಮಯಕ್ಕೆ ಹಣ ನಿಡಲಿಲ್ಲ. ಹಾಗಾಗಿ ನಿಗದಿಯಾದ ದಿನ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ' ಎಂದಿದ್ದಾರೆ ಸನ್ನಿ ಲಿಯೋನ್.
'ಅವರಿಗಾಗಿ ನಾನು ಸಾಕಷ್ಟು ಸಮಯ ನೀಡಿದ್ದೆ. ಆದರೆ ಅವರು ಕಾರ್ಯಕ್ರಮದ ದಿನಾಂಕ ನಿಗದಿಪಡಿಸಲು ಸೋತರು. ಕೊನೆಗೆ ಅವರು ನಿಗದಿಪಡಿಸಿದ ದಿನಕ್ಕೆ ನನಗೆ ಬೇರೆ ಕಾರ್ಯಕ್ರಮಗಳಿದ್ದವು. ಸಾಮಾನ್ಯವಾಗಿ ಮೊದಲೇ ಅಡ್ವಾನ್ಸ್ ಕೊಟ್ಟು ದಿನಾಂಕ ನಿಗದಿ ಮಾಡಿಕೊಳ್ಳುವುದು ವಾಡಿಕೆ. ಆದರೆ ಇವರು ಈ ಮೊದಲು ನಿಗದಿ ಮಾಡಿದ್ದ ದಿನಾಂಕದ ಕೊನೆಯ ನಿಮಿಷದ ವರೆಗೆ ಅಡ್ವಾನ್ಸ್ ಕೊಟ್ಟಿರಲಿಲ್ಲ' ಎಂದಿದ್ದಾರೆ ಸನ್ನಿ ಲಿಯೋನ್.
'ನಾನು ಕಲಾವಿದೆ. ನನಗೆ ಕೆಲಸವೇ ದೇವರು. ನಾನು ಸಮಯ ನೀಡಿ ಆ ಸಮಯಕ್ಕೆ ಹಾಜರಾಗದೇ ಇರಲು ಸಾಧ್ಯವೇ ಇಲ್ಲ. ನಾನೊಬ್ಬ ವೃತ್ತಿಪರ ನಟಿ. ದಯವಿಟ್ಟು ಮಾಧ್ಯಮಗಳು ಅರ್ಧ ಮಾಹಿತಿ ಇಟ್ಟುಕೊಂಡು ಇಲ್ಲದ ವರದಿಗಳನ್ನು ಮಾಡಬಾರದು' ಎಂದು ನಟಿ ಸನ್ನಿ ಲಿಯೋನ್ ಮನವಿ ಮಾಡಿದ್ದಾರೆ.
ಪೊಲೀಸರ ಬಳಿ ನನ್ನ ಸಂಪೂರ್ಣ ಹೇಳಿಕೆಯನ್ನು ನಾನು ನೀಡಿದ್ದೇನೆ. ಅವರು ತನಿಖೆ ನಡೆಸಲಿದ್ದಾರೆ, ನನಗೆ ಭರವಸೆ ಇದೆ ಎಂದಿದ್ದಾರೆ ನಟಿ ಸನ್ನಿ ಲಿಯೋನ್.


Click it and Unblock the Notifications











