ನನ್ ಹೆಸ್ರು ಸಲ್ಮಾನ್ ಅಹ್ಮದ್, ಹೆಸ್ರು ಕೇಳಿದ ಕೂಡಲೇ ಗೊಂದಲ ಸೃಷ್ಟಿಯಾಗಬಹುದು
'ಕಾಂತಾರ- 1' ಚಿತ್ರದಲ್ಲಿ ರಿಷಬ್ ಶೆಟ್ಟಿ ಕನ್ನಡ ಪ್ರತಿಭೆಗಳಿಗೆ ಹೆಚ್ಚು ಅವಕಾಶ ಕೊಟ್ಟಿದ್ದಾರೆ. ಮಲಯಾಳಂ ನಟ ಜಯರಾಂ ಬಿಟ್ಟರೆ ಉಳಿದವರೆಲ್ಲಾ ಕನ್ನಡ ಕಲಾವಿದರು, ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಎನ್ನುವ ಕಾರಣಕ್ಕೆ ಪರಭಾಷೆಯ ಸ್ಟಾರ್ ನಟರನ್ನು ಆಯ್ಕೆ ಮಾಡಿಕೊಳ್ಳುವ ಪ್ರಯತ್ನ ಮಾಡಲಿಲ್ಲ.
ಚಿತ್ರದಲ್ಲಿ ಎಲ್ಲಾ ಪಾತ್ರಗಳಿಗೂ ಅವಕಾಶ ಮಾಡಿಕೊಟ್ಟಿದ್ದಾರೆ. ತಮ್ಮ ಅದ್ಭುತ ನಟನೆಯಿಂದ ರಿಷಬ್ ನೋಡುಗರ ಮನಸೂರೆಗೊಂಡರೂ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ, ರಾಕೇಶ್ ಪೂಜಾರಿ ಸೇರಿ ಎಲ್ಲಾ ಕಲಾವಿದರು ಚಿತ್ರದಲ್ಲಿ ಮಿಂಚಿದ್ದಾರೆ. ಒಳ್ಳೆ ಅಂಕ ಗಿಟ್ಟಿಸಿಕೊಂಡಿದ್ದಾರೆ. ಸಣ್ಣ ಪಾತ್ರದಲ್ಲಿ ಬರುವ ಸಲ್ಮಾನ್ ಅಹಮದ್ ಕೂಡ ನೆನಪಿನಲ್ಲಿ ಉಳಿಯುತ್ತಾರೆ.

ರಿಷಬ್ ಶೆಟ್ಟಿ ಆಪ್ತ ಬಳಗದಲ್ಲಿ ಸಲ್ಮಾನ್ ಅಹಮದ್ ಗುರ್ತಿಸಿಕೊಂಡಿದ್ದಾರೆ. 'ಕಿರಿಕ್ ಪಾರ್ಟಿ' ಚಿತ್ರದ ಸಣ್ಣ ಪಾತ್ರದಲ್ಲಿ ಅವರು ನಟಿಸಿದ್ದರು. ಸದ್ಯ 'ಕಾಂತಾರ- 1' ರೀತಿ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಅವಕಾಶ ಸಿಕ್ಕ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಲ್ಮಾನ್ ಪೋಸ್ಟ್ ಮಾಡಿದ್ದಾರೆ. "ಕಿರಿಕ್ ಪಾರ್ಟಿಯಿಂದ ಕಾಂತಾರ ಚಾಪ್ಟರ್- 1 ರವರೆಗೆ. ಸುಮಾರು ಹತ್ತು ವರ್ಷಗಳ ಪಯಣ, ನಿರಂತರ ಪಯಣ. ಈ ಪಯಣದಲ್ಲಿ ರಿಷಬ್ ಅಣ್ಣನ ಕುಟುಂಬದಲ್ಲಿ ನಾನು ಒಬ್ಬ ಇದ್ದೀನಿ ಅನ್ನುವುದೇ ಖುಷಿ" ಎಂದು ಬರೆದುಕೊಂಡಿದ್ದಾರೆ.
ತಮ್ಮ ಸಿನಿಮಾಗಳಲ್ಲಿ ರಿಷಬ್ ಅವಕಾಶ ಕೊಡುತ್ತಾ ಬರುತ್ತಿರುವುದಕ್ಕೆ ಸಲ್ಮಾನ್ ಧನ್ಯವಾದ ತಿಳಿಸಿದ್ದಾರೆ. "ಕಿರಿಕ್ ಪಾರ್ಟಿ, 'ಕಾಂತಾರ'ದಲ್ಲೂ ಕೂಡ ಜನ ಗುರುತಿಸುವ ನಿಟ್ಟಿನಲ್ಲಿ, ಜನರ ಹೃದಯದಲ್ಲಿ ನನಗೂ ಸ್ಥಾನ ಸಿಗುವ ಹಾಗೆ ಮಾಡಿದ್ದು ರಿಷಬ್ ಅಣ್ಣ. ನನ್ ಹೆಸರು ಸಲ್ಮಾನ್ ಅಹಮದ್, ಹೆಸರು ಕೇಳಿದ ಕೂಡಲೇ, ಸಾಕಷ್ಟು ಗೊಂದಲಗಳು ಸೃಷ್ಟಿಯಾಗಬಹುದು ಕೆಲವರಿಗೆ. ಒಂದಂತೂ ಸತ್ಯ ರಿಷಬ್ ಅಣ್ಣ ಜಾತಿ ಧರ್ಮ ಮತ ಪಂಥಗಳೆಲ್ಲವನ್ನ ಮೀರಿ ಮನುಷ್ಯತ್ವದ ಹಾದಿಲಿ ಸಾಗುವವರು, ನನ್ನಂತ ಕಲಾವಿದನಿಗೆ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಒಂದು ಒಳ್ಳೆ ಪಾತ್ರ ನೀಡಿದ್ದಕ್ಕೆ ಅವರಿಗೆ ಯಾವತ್ತಿಗೂ ಚಿರಋಣಿ" ಎಂದಿದ್ದಾರೆ.
ಅಂದಹಾಗೆ 'ಕಾಂತಾರ- 1' ಚಿತ್ರದಲ್ಲಿ ಅರಬ್ಬಿ ಆಗಿ ಸಲ್ಮಾನ್ ಅಹಮದ್ ನಟಿಸಿದ್ದಾರೆ. ಒಂದೆರಡು ಸನ್ನಿವೇಶಗಳಲ್ಲಿ ಬಂದು ಹೋಗುವ ಪಾತ್ರ ಅದು. ಆದರೆ ತೆರೆಮೇಲೆ ಇದ್ದಷ್ಟು ಹೊತ್ತು ಗಮನ ಸೆಳೆಯುತ್ತಾರೆ. ಬಾಂಗ್ರಾದ ಬಂದರಿನಲ್ಲಿ 'ಕಾಂತಾರ'ದ ಬೆರ್ಮೆ ಮತ್ತು ಪಟಾಲಂ ವ್ಯಾಪಾರ ಮಾಡಲು ಮುಂದಾಗುವ ಸಮಯದಲ್ಲಿ ಈ ಪಾತ್ರ ಬರುತ್ತದೆ. ಬೆಂಗಳೂರಿನಲ್ಲಿ ನಡೆದ ಚಿತ್ರದ ಸುದ್ದಿಗೋಷ್ಠಿಯಲ್ಲಿ ಕೂಡ ಸಲ್ಮಾನ್ ಅಹಮನ್ ಭಾಗಿ ಆಗಿದ್ದರು.
ಚಿತ್ರದಲ್ಲಿ ನಟಿಸಿದ್ದ ಕಲಾವಿದರು ಹಾಗೂ ತಂತ್ರಜ್ಞರು ಈಗ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಚಿತ್ರದ ಮೇಕಿಂಗ್ ಫೋಟೊ, ವೀಡಿಯೋ ಹಂಚಿಕೊಳ್ಳುತ್ತಿದ್ದಾರೆ. ಸಿನಿಮಾ ಚಿತ್ರೀಕರಣದ ವೇಳೆ ಸೆಟ್ನಿಂದ ಯಾವುದೇ ಫೋಟೊ, ವೀಡಿಯೊ ಹೊರ ಬರದಂತೆ ಚಿತ್ರತಂಡ ಎಚ್ಚರಿಕೆ ವಹಿಸಿತ್ತು. ಕಲಾವಿದರು, ತಂತ್ರಜ್ಞರು ಫೋಟೊ, ವಿಡಿಯೋ ಸೆರೆ ಹಿಡಿದರೂ ಹಂಚಿಕೊಳ್ಳದಂತೆ ತಾಕೀತು ಮಾಡಲಾಗಿತ್ತು. ಈಗ ಸಿನಿಮಾ ಬಿಡುಗಡೆಯಾಗಿದ್ದು ಎಲ್ಲರೂ ಮಾತನಾಡುತ್ತಿದ್ದಾರೆ. ಚಿತ್ರದ ಭಾಗವಾಗಿದ್ದಕ್ಕೆ ಸಂತಸ ಹಂಚಿಕೊಳ್ಳುತ್ತಿದ್ದಾರೆ.
ಚಿತ್ರಮಂದಿರಗಳಲ್ಲಿ 'ಕಾಂತಾರ- 1' ಗೆಲುವಿನ ಓಟ ಮುಂದುವರೆದಿದೆ. ದೇಶ ವಿದೇಶಗಳಲ್ಲಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸೋಮವಾರದ ಅಗ್ನಿ ಪರೀಕ್ಷೆಯಲ್ಲಿ ಕೂಡ ಸಿನಿಮಾ ಪಾಸ್ ಆಗಿದೆ. ಬುಕ್ಮೈ ಶೋನಲ್ಲಿ ಲಕ್ಷ ಲಕ್ಷ ಟಿಕೆಟ್ ಸೇಲ್ ಆಗ್ತಿದೆ. ಈಗಾಗಲೇ 60 ಲಕ್ಷಕ್ಕೂ ಹೆಚ್ಚು ಜನ ಸಿನಿಮಾ ನೋಡಿದ್ದಾರೆ.


Click it and Unblock the Notifications











