ದರ್ಶನ್ ಜೈಲು.. ಉಪ್ಪು ತಿಂದವ್ರು ನೀರು ಕುಡಿಬೇಕು ಎಂದ ಪ್ರಿಯಾ; ಸರ್ಕಾರಕ್ಕೆ ನಷ್ಟ ಎಂದ ಬಣಕರ್
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ಈ ಬಗ್ಗೆ ಸಿನಿಮಾ ತಾರೆಯರು ಒಬ್ಬೊಬ್ಬರಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಎಂದಿದ್ದಾರೆ. ದರ್ಶನ್ ಜೈಲಿನಲ್ಲಿ ಇದ್ದರೆ ಚಿತ್ರರಂಗಕ್ಕೆ, ಸರ್ಕಾರಕ್ಕೆ ನಷ್ಟ ಎನ್ನುವವರು ಇದ್ದಾರೆ.
ಜಾಮೀನು ರದ್ದು ಬೆನ್ನಲ್ಲೇ ಆರೋಪಿ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುತ್ತಾರೆ ಎನ್ನುವ ಊಹಾಪೋಹ ಕೂಡ ಶುರುವಾಗಿದೆ. ಕಳೆದ ವರ್ಷ ಜೂನ್ 11ರಂದು ದರ್ಶನ್ ಬಂಧನವಾಗಿತ್ತು. ಆರೋಗ್ಯ ಸಮಸ್ಯೆ ನೆಪವೊಡ್ಡಿ ಮಧ್ಯಂತರ ಜಾಮೀನು ಪಡೆದು ಅಕ್ಟೋಬರ್ 30ರಂದು ದರ್ಶನ್ ಬಿಡುಗಡೆ ಆಗಿತ್ತು. ತಿಂಗಳ ಬಳಿಕ ಪ್ರಕರಣದ ಎಲ್ಲಾ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿತ್ತು.

ದರ್ಶನ್ ಬಹಳ ಪ್ರಭಾವಿ ಹಾಗಾಗಿ ಅವರಿಗೆ ಜಾಮೀನು ನೀಡಿ ಬಿಡುಗಡೆ ಮಾಡಿದ್ದು ಸರಿಯಲ್ಲ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ದರ್ಶನ್ ಜಾಮೀನು ರದ್ದು ಮಾಡಬೇಕು ಎಂದು ಆಗ್ರಹಿಸಿತ್ತು. ಅರ್ಜಿನ ವಿಚಾರಣೆ ನಡೆಸಿ 7 ಮಂದಿ ಆರೋಪಿಗಳ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ಹಾಗಾಗಿ ಅಷ್ಟು ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ. ಇದು ದರ್ಶನ್ ಅಭಿಮಾನಿಗಳಿಗೆ ಬೇಸರ ತಂದಿದೆ.
ಜಾಮೀನು ರದ್ದಾಗಿ ದರ್ಶನ್ ಮತ್ತೆ ಜೈಲು ಸೇರಿರುವ ಬಗ್ಗೆ ನಟಿ, ನಿರ್ಮಾಪಕಿ ಪ್ರಿಯಾ ಹಾಸನ್ ಮಾತನಾಡಿದ್ದಾರೆ. ಟಿವಿ9 ವಾಹಿನಿ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. "ಸಮಯ ಸಂದರ್ಭ. ದರ್ಶನ್ ತಪ್ಪು ಮಾಡಿರುವುದು ಸಾಬೀತಾಗಿದೆ. ಉಪ್ಪು ಕುಡಿದಮೇಲೆ ನೀರು ಕುಡಿಯಬೇಕು ಎನ್ನುವಂತೆ ತಪ್ಪು ಮಾಡಿದ ಮೇಲೆ ಶಿಕ್ಷೆ ಅನುಭವಿಸಬೇಕು. ಕಾನೂನನ್ನು ಯಾರು ಕೈಗೆ ತಗೊಳಕ್ಕೆ ಆಗಲ್ಲ. ಕಾನೂನಿಗೆ ತಲೆ ಬಾಗಬೇಕು. ರೇಣುಕಾಸ್ವಾಮಿ ಕೆಟ್ಟ ಮೆಸೇಜ್ ಮಾಡಿದ್ದಕ್ಕೆ ದರ್ಶನ್ ಈ ನಿರ್ಧಾರಕ್ಕೆ ಬಂದರು. ದರ್ಶನ್ ಅಭಿಮಾನಿಗಳು ಈಗ ಇದೇ ತಪ್ಪು ಮಾಡ್ತಿದ್ದಾರೆ. ಈ ವಿಚಾರದಲ್ಲಿ ರಮ್ಯಾ ನಡೆಯನ್ನು ಮೆಚ್ಚುತ್ತೇನೆ" ಎಂದಿದ್ದಾರೆ.

ದರ್ಶನ್ ಜೈಲು ಸೇರಿರುವ ಬಗ್ಗೆ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕರ್ ಮಾತನಾಡಿದ್ದಾರೆ. "ದರ್ಶನ್ ಒಂದು ಸಿನಿಮಾ ಮಾಡಿದ್ರೆ, ಸಾಕಷ್ಟು ಜನರಿಗೆ ಕೆಲಸ ಸಿಗುತ್ತದೆ. ಅವರಿಲ್ಲದೇ ಸಮಸ್ಯೆ ಆಗುತ್ತದೆ. ದರ್ಶನ್ ಚಿತ್ರರಂಗದ ಆಸ್ತಿ. ಅವರು ಯಾವಾಗ ಹೊರಗೆ ಬರ್ತಾರೆ ಎನ್ನುವುದು ಗೊತ್ತಿಲ್ಲ. ದರ್ಶನ್ 1 ವರ್ಷ ಹೊರಗೆ ಬರದಿದ್ದರೆ ಚಿತ್ರರಂಗಕ್ಕೆ ನಷ್ಟವಾಗುತ್ತದೆ. ಚಿತ್ರರಂಗದ ಉಳಿವು, ಕಾರ್ಮಿಕರ ಬದುಕು, ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಬರುವ ವರಮಾನಕ್ಕೂ ಪೆಟ್ಟು ಬೀಳುತ್ತದೆ" ಎಂದು ಉಮೇಶ್ ಬಣಕರ್ ಹೇಳಿದ್ದಾರೆ.
ಇತ್ತೀಚೆಗೆ ಹಿರಿಯ ನಟಿ ಉಮಾಶ್ರೀ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದರು. "ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸಬೇಕು. ಎದುರಾಡಲು ಸಾಧ್ಯವಿಲ್ಲ. ಎಲ್ಲರೂ ಎಚ್ಚರಿಕೆ ವಹಿಸಬೇಕು, ಸೆಲೆಬ್ರೆಟಿ ಎನ್ನುವವರು ಇನ್ನು ಹುಷಾರ್ ಆಗಿ ಇರಬೇಕು. ಲಾಭದಾಯಕ ಸಿನಿಮಾಗಳನ್ನು ಕೊಟ್ಟಿರುವ ನಟ ದರ್ಶನ್. ಅವರಿಲ್ಲದೇ ಇರುವುದು ಚಿತ್ರರಂಗಕ್ಕೆ ನಷ್ಟ. ಈ ಸಮಸ್ಯೆ ಇಲ್ಲದಿದ್ದರೆ ಮತ್ತಷ್ಟು ಸಿನಿಮಾಗಳು ಬಂದು ಸಾಕಷ್ಟು ಜನರಿಗೆ ಕೆಲಸ ಸಿಗುತ್ತಿತ್ತು" ಎಂದಿದ್ದಾರೆ.
ನಟಿ ರಮ್ಯಾಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದ ಕಿಡಿಗೇಡಿಗಳ ಬಗ್ಗೆ ಕೂಡ ಉಮಾಶ್ರೀ ಮಾತನಾಡಿದ್ದಾರೆ. ಮೊದಲಿನಿಂದಲೂ ಫ್ಯಾನ್ಸ್ ವಾರ್ ಇತ್ತು. ಸೋಶಿಯಲ್ ಮೀಡಿಯಾ ಬಂದಮೇಲೆ ಹೀಗೆ ಕೆಟ್ಟದಾಗಿ ಮಾತನಾಡುವುದು ಹೆಚ್ಚಾಗಿ ಸಮಸ್ಯೆ ಆಗುತ್ತಿದೆ. ಇದು ಆಗಬಾರದು. ಪ್ರಕರಣದ ಇನ್ನು ಕೋರ್ಟ್ನಲ್ಲಿದೆ. ತೀರ್ಪು ಬಂದ ಬಳಿಕ ಯಾರಿಗೆ ನ್ಯಾಯ ಸಿಕ್ತು, ಅನ್ಯಾಯ ಆಯ್ತು ಎನ್ನುವುದನ್ನು ಹೇಳಲು ಸಾಧ್ಯವಿಲ್ಲ" ಎಂದು ಉಮಾಶ್ರೀ ವಿವರಿಸಿದ್ದಾರೆ.


Click it and Unblock the Notifications











