ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಅಂಬಿ ಪುತ್ರನ 'ಬ್ಯಾಡ್ ಮ್ಯಾನರ್ಸ್' ಆರಂಭ
ದುನಿಯಾ ಸೂರಿ ನಿರ್ದೇಶನ ಮತ್ತು ಅಭಿಷೇಕ್ ಅಂಬರೀಶ್ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ "ಬ್ಯಾಡ್ ಮ್ಯಾನರ್ಸ್" ಸಿನಿಮಾದ ಮುಹೂರ್ತ ಇಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆರವೇರಿತು.
Recommended Video
ಸಿನಿಮಾ ಚಿತ್ರೀಕರಣ ಶುರುವಾದ ಹಿನ್ನೆಲೆಯಲ್ಲಿ ನಟ ಅಭಿಷೇಕ್ ಅಂಬರೀಶ್ ಹಾಗೂ ಸಂಸದೆ ಸುಮಲತಾ ಅಂಬರೀಶ್ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು. ಈ ವೇಳೆ ನಿರ್ದೇಶಕ ಸೂರಿ ಹಾಗೂ ಇತರರು ಹಾಜರಿದ್ದರು.
ಸಿನಿಮಾದ ಮುಹೂರ್ತ ಫೋಟೋಗಳನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಸುಮಲತಾ ಅಂಬರೀಶ್ ''ಅಭಿ ನಟನೆಯ "ಬ್ಯಾಡ್ ಮ್ಯಾನರ್ಸ್" ಸಿನಿಮಾದ ಮುಹೂರ್ತ ಇಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆರವೇರಿತು. ಎಂದಿನಂತೆ ಅಭಿ ಮತ್ತು ತಂಡಕ್ಕೆ ನಿಮ್ಮ ಪ್ರೀತಿ, ಹಾರೈಕೆ, ಆಶೀರ್ವಾದ ಇರಲಿ'' ಎಂದಿದ್ದಾರೆ.

ಅಂದ್ಹಾಗೆ, ಮಂಡ್ಯ ಹಾಗೂ ಮೈಸೂರಿನ ಸುತ್ತಮುತ್ತಲೂ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಸುಮಾರು 12 ದಿನಗಳ ಕಾಲ ಬ್ಯಾಡ್ ಮ್ಯಾನರ್ಸ್ ತಂಡ ಸಕ್ಕರೆನಾಡಿನಲ್ಲಿ ಕೆಲಸ ಮಾಡಲಿದೆ. ಅದಕ್ಕಾಗಿ ಅಗತ್ಯ ಶೂಟಿಂಗ್ ಲೋಕೇಶನ್ಗಳನ್ನು ಗುರುತಿಸಲಾಗಿದ್ದು, ಪೂರ್ವ ತಯಾರಿ ಸಹ ನಡೆದಿದೆ.
ಆರಂಭದಲ್ಲಿ ಸಾಹಸ ನಿರ್ದೇಶಕ ರವಿವರ್ಮ ಅವರ ಸಾರಥ್ಯದಲ್ಲಿ ಆಕ್ಷನ್ ದೃಶ್ಯಗಳ ಶೂಟಿಂಗ್ ನಡೆಯಲಿದ್ದು, ಹಿರಿಯ ನಟಿ ತಾರಾ, ಶರತ್ ಲೋಹಿತಾಶ್ವ ಸೇರಿದಂತೆ ಹೆಚ್ಚು ಜೂನಿಯರ್ ಕಲಾವಿದರು ಪಾಲ್ಗೊಳ್ಳಲಿದ್ದಾರೆ.

'ಅಮರ್' ಸಿನಿಮಾ ಬಳಿಕ ಅಭಿಷೇಕ್ ಮಾಡುತ್ತಿರುವ ಎರಡನೇ ಸಿನಿಮಾ ಎಂಬ ಕಾರಣಕ್ಕೆ ಹಾಗೂ ಸುಕ್ಕು ಸೂರಿ ನಿರ್ದೇಶನ ಮಾಡುತ್ತಿರುವ ಕಾರಣಕ್ಕೆ ಈ ಪ್ರಾಜೆಕ್ಟ್ ಭಾರಿ ನಿರೀಕ್ಷೆ ಮೂಡಿಸಿದೆ.
ಈ ಚಿತ್ರಕ್ಕಾಗಿ ಅಭಿಷೇಕ್ ಅಂಬರೀಶ್ ಬಾಡಿ ಟ್ರಾನ್ಸ್ಫರ್ಮೇಶನ್ನ ಸಹ ಮಾಡಲಿದ್ದಾರೆ ಎನ್ನಲಾಗಿದೆ. ಸುಧೀರ್ ಕೆಎಂ ಈ ಚಿತ್ರ ನಿರ್ಮಾಣ ಮಾಡಲಿದ್ದು, ಚರಣ್ ರಾಜ್ ಸಂಗೀತ ಇರಲಿದೆ. ಸದ್ಯಕ್ಕೆ ಹೀರೋಯಿನ್ ಯಾರೆಂದು ಫಿಕ್ಸ್ ಆಗಿಲ್ಲ.


Click it and Unblock the Notifications











