ಸೇತುಸಮುದ್ರ,ಅಣು ಒಪ್ಪಂದ ತಪ್ಪಿಲ್ಲ: ಸ್ವಾಮಿ ಅಗ್ನಿವೇಶ್
ಚಿತ್ರದುರ್ಗ, ಅ.23 : ದೇಶವನ್ನು ಕಾಡುತ್ತಿರುವ ಎರಡು ವಿವಾದಗಳಿಗೆ ಸಂಬಂಧಿಸಿದಂತೆ ಸರ್ವಧರ್ಮ ಸಂಸತ್ ಸಂಸ್ಥಾಪಕ ಸ್ವಾಮಿ ಅಗ್ನಿವೇಶ್, ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಬಸವ ಶ್ರೀ ಪುರಸ್ಕಾರ ಸ್ವೀಕರಿಸಲು ಕರ್ನಾಟಕಕ್ಕೆ ಆಗಮಿಸಿದ್ದ ಅವರು, ಸೇತುಸಮುದ್ರಂ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರಕಾರ ಮುಂದಾಗಲಿ ಎಂದು ಸಲಹೆ ನೀಡಿದ್ದಾರೆ.
ಧರ್ಮದ ಹೆಸರಿನಲ್ಲಿ ಯೋಜನೆಯನ್ನು ತಡೆಯಬಾರದು. ರಾಮನೇನಾದರು ಇಂದು ಪ್ರಧಾನಮಂತ್ರಿ ಆಗಿದ್ದರೆ ಮೊದಲು ಈ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತಿದ್ದ. ಸೇತುಸಮುದ್ರಂ ಯೋಜನೆ ಸಮುದ್ರ ತೀರದ ಜನಕ್ಕೆ ಉಪಯೋಗವಾಗಲಿದೆ. ಒಬ್ಬ ಹಿಂದೂ ಆಗಿ ಈ ಮಾತನ್ನು ಹೇಳುತ್ತಿದ್ದೇನೆ. ಕರುಣಾನಿಧಿಯವರ ಟೀಕೆ ರಾಜಕೀಯ ಉದ್ದೇಶದ್ದು ಎಂದು ಸ್ವಾಮಿ ಅಗ್ನಿವೇಶ್ ಪ್ರತಿಕ್ರಿಯಿಸಿದ್ದಾರೆ.
ಹಾಗೆಯೇ ಭಾರತ ಅಣು ಒಪ್ಪಂದವನ್ನು ಮಾಡಿಕೊಂಡರೆ ತಪ್ಪೇನು ಇಲ್ಲ. ಚೀನಾ ಈಗಾಗಲೇ ಅಣು ಒಪ್ಪಂದವನ್ನು ಮಾಡಿಕೊಂಡು ಸ್ವತಂತ್ರ ಅಧಿಕಾರವನ್ನು ಹೊಂದಿ ಲಾಭಪಡೆಯುತ್ತಿದೆ. ಭಾರತವೂ ಅಣು ಒಪ್ಪಂದವನ್ನು ಮಾಡಿಕೊಳ್ಳುವುದು ಒಳಿತು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಜಾಗತೀಕರಣದ ಭಾಗವಾದ ವಿಶೇಷ ಆರ್ಥಿಕ ವಲಯದ ಅಗತ್ಯವಿದೆ. ಆದರೆ ಸರಕಾರ ರೈತರ ಮಾತಿಗೆ ಬೆಲೆಕೊಡಬೇಕು. ಅವರನ್ನು ಕಡೆಗಣಿಸಬಾರದು. ಭೂಮಿಯ ಹಕ್ಕನ್ನು ಬಹುರಾಷ್ಟ್ತೀಯ ಕಂಪನಿಗಳ ಬದಲಾಗಿ ರೈತನಿಗೇ ನೀಡಬೇಕು. ಆಗಷ್ಟೇ ರೈತರ ಜಮೀನು ರೈತರಿಗೆ ದಕ್ಕುತ್ತದೆ. ಸೆಜ್ಗಾಗಿ ಕೃಷಿಯೇತರ ಮತ್ತು ಬಂಜರು ಭೂಮಿಯನ್ನು ಮಾತ್ರ ಮಂಜೂರು ಮಾಡಬೇಕು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
(ದಟ್ಸ್ಕನ್ನಡ ವಾರ್ತೆ)


Click it and Unblock the Notifications