'ನಾಲ್ಕು ಜನ್ಮಕ್ಕಾಗುಷ್ಟು ಪ್ರತಿಭೆ' ಮಂಡ್ಯ ರವಿ ಪ್ರತಿಭಾವಂತ ಕಲಾವಿದ: ಗಣ್ಯರ ಸಂತಾಪ
ಮಗಳು ಜಾನಕಿ, ಮುಕ್ತ ಮುಕ್ತ ಧಾರಾವಾಹಿ ಖ್ಯಾತಿಯ ಮಂಡ್ಯ ರವಿ(42) ನಿನ್ನೆ(ಸೆಪ್ಟೆಂಬರ್ 14)ರಂದು ವಿಧಿವಶರಾಗಿದ್ದಾರೆ. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ನಿನ್ನೆ(ಸೆಪ್ಟೆಂಬರ್ 14) ಸಂಜೆ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಕಿರುತೆರೆಯಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಮಂಡ್ಯ ರವಿ ಅವರು ಕಿರುತೆರೆ ಹಾಗೂ ಹಿರಿತೆರೆಯ ಕಲಾವಿದರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಮಂಡ್ಯ ರವಿ ಅವರ ನಿಧನ ಪ್ರತಿಯೊಬ್ಬರಿಗೂ ಆಘಾತಕಾರಿ ಸುದ್ದಿಯಾಗಿದೆ. ರವಿ ಅವರ ಅಗಲಿಕೆಗೆ ಖ್ಯಾತ ನಿರ್ದೇಶಕ ಟಿ.ಎನ್ ಸೀತಾರಾಮ್ ಸೇರಿದಂತೆ ಅನೇಕ ಕಲಾವಿದರು ಸಂತಾಪ ಸೂಚಿಸಿದ್ದಾರೆ.

ನಾಲ್ಕು ಜನ್ಮಕ್ಕಾಗುಷ್ಟು ಪ್ರತಿಭೆ: ಟಿ.ಎನ್ ಎನ್ ಸೀತಾರಾಮ್ ಕಂಬನಿ
ಟಿ.ಎನ್ ಸೀತಾರಾಮ್ ಅವರ ನೆಚ್ಚಿನ ನಟರಾಗಿದ್ದ ಮಂಡ್ಯ ರವಿ ಬಹುತೇಕ ಅವರ ಎಲ್ಲಾ ಧಾರಾವಾಹಿ ಹಾಗೂ ಕಾಫಿತೋಟ ಚಿತ್ರದಲ್ಲಿ ನಟಿಸಿದ್ದರು. ರವಿ ಅವರ ಅಕಾಲ ಅಗಲಿಕೆ ಟಿ.ಎನ್ ಸೀತಾರಾಮ್ ಅವರಿಗೂ ಅಘಾತದ ಸುದ್ದಿಯಾಗಿದ್ದು, ಇನ್ನೂ 42, ನಾಲ್ಕು ಜನ್ಮಕ್ಕಾಗುಷ್ಟು ಪ್ರತಿಭೆ, ಮಗಳು ಜಾನಕಿ ಚಂದು ಭಾರ್ಗಿ ರವಿ ಅಸ್ತಂಗತ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡು ಕಂಬನಿ ಮಿಡಿದಿದ್ದಾರೆ.

ಮಂಡ್ಯ ರವಿ ನೋಟ, ಧ್ವನಿಯನ್ನು ಇಷ್ಟಪಡುತ್ತಿದ್ದ ಟಿ.ಎನ್ ಸೀತಾರಾಮ್
ಮಂಡ್ಯ ರವಿ ಅವರ ಮಾತು, ನೋಟ, ಧ್ವನಿಯನ್ನು ಇಷ್ಟಪಡುತ್ತಿದ್ದ ಟಿ.ಎನ್ ಸೀತಾರಾಮ್, ರವಿ ಲುಕ್ನಲ್ಲೇ ಇನ್ನೊಬ್ಬರನ್ನ ತಿಂದಾಕಿಬಿಡುತ್ತಾನೆ. ಮಂಡ್ಯ ರವಿ ತರ ನಟ ನನಗೆ ಮತ್ಯಾರು ಸಿಗಲ್ಲ ಎಂದು ಸಹ ಕಲಾವಿದರೊಂದಿಗೆ ಮಂಡ್ಯ ರವಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದರು.

ಇದು ನನ್ನೂರ ಪ್ರತಿಭೆ- ನಟ ರವಿ ಶಂಕರ್ ಗೌಡ ಬೇಸರ
ಇನ್ನು ಮಂಡ್ಯ ರವಿ ಅವರೊಂದಿಗೆ ಆತ್ಮೀಯರಾಗಿದ್ದ ನಟ ರವಿ ಶಂಕರ್ ಗೌಡ ರವಿ ಅವರ ಅಗಲಿಕೆ ಸಂತಾಪ ಸೂಚಿಸಿದ್ದಾರೆ. ಮಂಡ್ಯದ ಪಿಇಎಸ್ ಕಾಲೇಜಿನ ಅಚ್ಚು ಮೆಚ್ಚಿನ ಕನ್ನಡ ಅಧ್ಯಾಪಕರಾದ ಡಾ.ಹೆಚ್.ಎಸ್ ಮುದ್ದೇಗೌಡರ ಮಗ ರವಿ ತುಂಬಾ ವರ್ಷದಿಂದ ಇವರನ್ನು ಬಲ್ಲೆ, ರಂಗ ಪ್ರತಿಭೆ, ಪ್ರತಿಭಾವಂತ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಇಹಲೋಕದಿಂದ ನಿರ್ಗಮನ. ನಿಜಕ್ಕೂ ಬೇಸರ. ಇದು ನನ್ನೂರ ಪ್ರತಿಭೆ ಎಂದು ಫೇಸ್ಬುಕ್ನಲ್ಲಿ ಭಾವನಾತ್ಮಕ ಪೋಸ್ವೊಂದನ್ನು ಶೇರ್ ಮಾಡಿದ್ದಾರೆ.

ನಿಮ್ಮ ಅದ್ಭುತ ಅಭಿನಯ ತಂಡದವರನ್ನ ಮೂಕರನ್ನಾಗಿಸಿತ್ತು
ಮಂಡ್ಯ ರವಿ ಅವರ ಜೊತೆ ನಟಿಸಿರುವ ನಟಿ ನಿರೂಪಕಿ ರೂಪ ಗುರು ರಾಜ್ ಅವರೊಂದಿಗೆ ಕಳೆದ ಕ್ಷಣದ ಬಗ್ಗೆ ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ. ಇತ್ತೀಚೆಗಷ್ಟೇ ಮರಳಿ ಮನಸಾಗಿದೆ ಎನ್ನುವ ಚಿತ್ರದಲ್ಲಿ ಮಂಡ್ಯ ರವಿ ಅವರ ಜೊತೆ ನನ್ನ ಪಾತ್ರ ಎಂದಾಗ ಕೈಕಾಲು ತಣ್ಣಗಾಗಿತ್ತು. ಇಂತಹ ದಿಗ್ಗಜರ ಜೊತೆ ಜೊತೆಯಾಗಿ ನಟಿಸಲು ಸಾಧ್ಯವೇ ಎನ್ನುವ ಅಳುಕು. ಮೊದಲ ಬಾರಿ ವರ್ಕ್ಶಾಪ್ನಲ್ಲಿ ಇವರನ್ನು ನೋಡಿದಾಗ ಅವರ ಸ್ನೇಹಮಯ ವ್ಯಕ್ತಿತ್ವ, ಅದ್ಭುತ ಅಭಿನಯ ತಂಡದವರನ್ನು ಮೂಕರನ್ನಾಗಿಸಿತ್ತು. ಅವರ ಸಜ್ಜನ ನಡವಳಿಕೆ, ನಿರರ್ಗಳ ಅಭಿನಯ ಎಲ್ಲವನ್ನು ಕಣ್ತುಂಬಿಕೊಂಡು ಮುಂದಿನ ಶೂಟಿಂಗ್ ಗೆ ಸಿದ್ಧವಾಗುತ್ತಿರುವಾಗಲೇ ಕರುಳು ಹಿಂಡುವ ಸುದ್ದಿ ಬಂದಿದೆ. ನಿಮ್ಮಂಥ ಕಲಾವಿದರನ್ನು, ತೆರೆಯ ಮೇಲೆ ಅಭಿಮಾನಿಸಿ, ಇಷ್ಟು ಹತ್ತಿರದಿಂದ ನೋಡಿ ಸ್ವಲ್ಪ ದಿನ ಒಡನಾಡಿದ್ದಕ್ಕೇ ನಮಗಿಷ್ಟು ಸಂಕಟವಾಗುತ್ತಿದೆ. ನಿಮ್ಮ ಮನೆಯವರ ಗತಿಯೇನು? ನಿಮ್ಮ ಅಪಾರ ಅಭಿಮಾನಿ ಬಳಗದ ಗತಿಯೇನು? ಎಂದು ಭಾವನಾತ್ಮಕ ಪೋಸ್ಟ್ ಶೇರ್ ಮಾಡಿದ್ದಾರೆ.


Click it and Unblock the Notifications











