ಶರವಣ ನಿರ್ಮಾಣದಲ್ಲಿ ಸ್ಯಾಂಡಲ್ ವುಡ್ ಗೆ 2 ಚಿತ್ರ
ಪ್ರಸಕ್ತ ಲೋಕಸಭಾ ಚುನಾವಣೆಯ ಮುನ್ನೆಲೆಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳ ಮಧ್ಯೆಯೂ ಜೆಡಿಎಸ್ ಪಕ್ಷದ ಮುಖಂಡ, ಶ್ರೀ ಸಾಯಿ ಗೋಲ್ಡ್ ಪ್ಯಾಲೆಸ್ ಮಾಲೀಕ ಡಾ. ಟಿ.ಎ. ಶರವಣ ಅವರು ಕನ್ನಡ ಚಿತ್ರೋದ್ಯಮದತ್ತ ದೃಷ್ಟಿ ಹಾಯಿಸಿದ್ದಾರೆ.
ಬೆಂಗಳೂರು ದಕ್ಷಿಣದಿಂದ ಶರವಣ ಅವರು ಕಣಕ್ಕಿಳಿಯುವ ಸಾಧ್ಯತೆಯಿದೆ ಎಂಬ ಮಾತು ಕೊನೆಯ ಘಳಿಗೆಯವರೆಗೂ ಕೇಳಿಬಂದಿತ್ತು. ಆದರೆ ರಾಜ್ಯಾದ್ಯಂತ ಪಕ್ಷದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡರು ಸೂಚಿಸಿರುವ ಹಿನ್ನೆಲೆಯಲ್ಲಿ ಶರವಣ ಅವರು ಪಕ್ಷದ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಬಂಗಾರದ ಮನುಷ್ಯ ಟಿಎ ಶರವಣ ಗಾಂಧಿನಗರಕ್ಕೆ: ಈ ಮಧ್ಯೆ, ಸ್ಯಾಂಡಲ್ ವುಡ್ ಗೆ ಗಮನಾರ್ಹ ಕೊಡುಗೆ ನೀಡಬೇಕೆಂದು ನಿರ್ಧರಿಸಿರುವ ಶರವಣ, ಎರಡು ಚಿತ್ರಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. 'ರುದ್ರತಾಂಡವ' ಮತ್ತು 'ವ್ಯೂಹ' ಚಿತ್ರಗಳು ಶರವಣ ನಿರ್ಮಾಣದಲ್ಲಿ ತೆರೆ ಕಾಣಲು ಸಿದ್ಧವಾಗುತ್ತಿವೆ. ತನ್ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. (ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ ಶರವಣಗೆ ಡಾಕ್ಟರೇಟ್)
'ರುದ್ರತಾಂಡವ ಸಿನಿಮಾದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಮತ್ತು ಚಿರಂಜೀವಿ ಸರ್ಜಾ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು, ವ್ಯೂಹ ಚಿತ್ರದಲ್ಲಿ ಪ್ರಿಯಾಮಣಿ, ರಂಗಾಯಣ ರಘು ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ' ಎಂದು ಡಾ. ಟಿ.ಎ. ಶರವಣ 'ಒನ್ಇಂಡಿಯಾಕನ್ನಡ'ಕ್ಕೆ ನೀಡಿದ ಸಂದರ್ಶನದಲ್ಲಿ ಮಂಗಳವಾರ ತಿಳಿಸಿದ್ದಾರೆ.
ಈ ಎರಡೂ ಚಿತ್ರಗಳ ನಿರ್ಮಾಣದಲ್ಲಿ ಗೆಳೆಯ ವಿನೋದ್ ಅವರು ತಮಗೆ ನೆರವು ನೀಡಲಿದ್ದಾರೆ. ವಾಣಿಜ್ಯಿಕವಾಗಿ ಹಣ ಮಾಡುವ ಉದ್ದೇಶದಿಂದ ಈ ಚಿತ್ರಗಳನ್ನು ಮಾಡುತ್ತಿಲ್ಲ. ನಮ್ಮ ಕನ್ನಡ ಚಿತ್ರೋದ್ಯಮಕ್ಕೆ ಒಳ್ಳೆದ ಸಂದೇಶವಿರುವ ಸದಭಿರುಚಿ ಚಿತ್ರಗಳನ್ನು ನೀಡಲೆಂದು ನಿರ್ಮಾಣ ಕಾರ್ಯದಲ್ಲಿ ತೊಡಗುತ್ತಿರುವುದಾಗಿ ಶರವಣ ಹೇಳಿದ್ದಾರೆ.



Click it and Unblock the Notifications











