ಸೂರಿ ಕೈಯಲ್ಲಿ 'ಟಗರು-2' ಭವಿಷ್ಯ; ನಿರ್ಮಾಪಕ ಶ್ರೀಕಾಂತ್ ಮಾತು
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಹತ್ತು ಹಲವು ಸಿನಿಮಾಗಳ ಬಗ್ಗೆ ಹೊಸ ಪೋಸ್ಟರ್ ಬಂದಿದೆ. ಈಗಾಗಲೇ ಗೊತ್ತಿದ್ದ ಒಂದಷ್ಟು ಸಿನಿಮಾಗಳ ಹೊಸ ಪೋಸ್ಟರ್ ಜೊತೆಗೆ ಮುಂದೆ ಶಿವಣ್ಣ ನಟಿಸಲಿರುವ ಕೆಲ ಚಿತ್ರಗಳ ಬಗ್ಗೆಯೂ ಅಪ್ಡೇಟ್ ಸಿಕ್ಕಿದೆ. ಆದರೆ ವೀನಸ್ ಎಂಟರ್ಟೆನರ್ಸ್ ಬ್ಯಾನರ್ನಲ್ಲಿ ಬಂದ ಆ ಪೋಸ್ಟರ್ ಕುತೂಹಲ ಮೂಡಿಸಿದೆ.
ಹೌದು ಕೆ. ಪಿ ಶ್ರೀಕಾಂತ್ 'ಟಗರು' ಬಳಿಕ ಮತ್ತೆ ಶಿವರಾಜ್ಕುಮಾರ್ ಕಾಂಬಿನೇಷನ್ನಲ್ಲಿ ಮತ್ತೊಂದು ಸಿನಿಮಾ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಟಗರು ಶಿವ ಕಂಕುಳಲ್ಲಿ ಲಾಂಗ್ ಸಿಕ್ಕಿಸಿಕೊಂಡು ನಲ್ಲಿ ನೀರಿನಲ್ಲಿ ರಕ್ತ ಮೆತ್ತಿದ ಕೈ ತೊಳೆದುಕೊಳ್ಳುತ್ತಿರುವ ಪೋಸ್ಟರ್ ಅದು. 'ಟಗರು' ಸಿನಿಮಾ ಕ್ಲೈಮ್ಯಾಕ್ಸ್ನಲ್ಲೇ ಸೀಕ್ವೆಲ್ ಮಾಡುವ ಬಗ್ಗೆ ಸುಳಿವು ಕೊಟ್ಟಿತ್ತು ಚಿತ್ರತಂಡ. ಸಣ್ಣದೊಂದು ಟೀಸರ್ ಸಹ ಶೂಟ್ ಮಾಡಿ 'ಟಗರು-2' ಎಂದು ಹೇಳಿದ್ದರು. ಬಳಿಕ ಶಿವಣ್ಣ, ಸೂರಿ ಹಾಗೂ ಶ್ರೀಕಾಂತ್ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿಬಿಟ್ಟರು.

ಅಭಿಮಾನಿಗಳು ಪದೇ ಪದೆ 'ಟಗರು-2' ಸಿನಿಮಾ ಮಾಡುವಂತೆ ಕೇಳುತ್ತಲೇ ಇದ್ದಾರೆ. ಮೂವರು ಈ ಬಗ್ಗೆ ಪ್ರತಿಕ್ರಿಯಿಸಿ ಕಂಡಿತ ಮಾಡ್ತೀವಿ, ಯಾವಾಗ ಎಂದು ಗೊತ್ತಿಲ್ಲ ಎನ್ನುತ್ತಲೇ ಬರ್ತಿದ್ದಾರೆ. ಇದೆಲ್ಲದರ ನಡುವೆ ಈಗ ಶಿವಣ್ಣನ ಹುಟ್ಟುಹಬ್ಬ ಸಂಭ್ರಮದಲ್ಲಿ ಕೆ. ಪಿ ಶ್ರೀಕಾಂತ್ ಹೊಸ ಪೋಸ್ಟ್ ರಿಲೀಸ್ ಮಾಡಿದ್ದಾರೆ. ಮೇಲ್ನೋಟಕ್ಕೆ 'ಟಗರು- 2' ಎನ್ನುವ ಕುತೂಹಲ ಮೂಡಿಸಿದರೂ ಆ ಬಗ್ಗೆ ಖಚಿತ ಮಾಹಿತಿ ಇಲ್ಲ. ಈ ಬಗ್ಗೆ ಸ್ವತಃ ನಿರ್ಮಾಪಕ ಕೆ. ಪಿ ಶ್ರೀಕಾಂತ್ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯಿಸಿದ್ದಾರೆ.
7 ವರ್ಷಗಳ ಹಿಂದೆ ಬಂದಿದ್ದ 'ಟಗರು' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಟಗರು ಶಿವನಾಗಿ ಶಿವಣ್ಣದ ಆರ್ಭಟ ನೋಡಿ ಸಿನಿರಸಿಕರು ಫಿದಾ ಆಗಿದ್ದರು. ಸೂರಿ ಟೇಕಿಂಗ್, ಶಿವಣ್ಣ ಆಕ್ಟಿಂಗ್, ಧನು- ವಸಿಷ್ಠ ಆರ್ಭಟ, ಚರಣ್ ರಾಜ್ ಮ್ಯೂಸಿಕ್ ಎಲ್ಲಾ ಸೇರಿ ಸಿನಿಮಾ ತೆರೆಮೇಲೆ ಮ್ಯಾಜಿಕ್ ಮಾಡಿತ್ತು. ಮಾಸ್ ಪ್ರೇಕ್ಷಕರಿಗೆ ಸಿನಿಮಾ ಸಖತ್ ಮಜಾ ಕೊಟ್ಟಿತ್ತು. ಆರಂಭದಲ್ಲಿ ಅಲ್ಲೊಂದು ಇಲ್ಲೊಂದು ಸನ್ನಿವೇಶ, ಗೊಂದಲಮಯವಾಗಿ ಶುರುವಾಗುವ ಕಥೆ ಕೊನೆಗೆ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸಿತ್ತು.
ಸೂರಿ ನಾನ್ ಲೀನಿಯರ್ ಸ್ಕ್ರೀನ್ಪ್ಲೇ, ಎಸಿಪಿ ಶಿವಕುಮಾರ್ ಆಗಿ ಸೆಂಚುರಿ ಸ್ಟಾರ್ ಖಡಕ್ ಪರ್ಫಾರ್ಮನ್ಸ್ ಕಿಕ್ ಕೊಟ್ಟಿತ್ತು. ಇನ್ನು ಡಾಲಿಯಾಗಿ ಧನಂಜಯ್ ಸರ್ಪ್ರೈಸ್ ಚಿತ್ರದ ಹೈಲೆಟ್ ಎನಿಸಿಕೊಂಡಿತ್ತು. ಚಿತ್ರದ ಡೈಲಾಗ್ಸ್, ಲಾಂಗ್ ಹಿಡಿದ ಶಿವಣ್ಣನ ದರ್ಬಾರ್ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿತ್ತು. ಸಾಂಗ್ಸ್ ಮಾತ್ರವಲ್ಲ ತಮ್ಮ ವಿಭಿನ್ನ ಬಿಜಿಎಂನಿಂದಲೂ ಚರಣ್ ರಾಜ್ ಗಮನ ಸೆಳೆದಿದ್ದರು.

ಟೈಟಲ್ ರೀತಿಯಲ್ಲೇ ಖಡಕ್ ಮನರಂಜನೆ ಕೊಟ್ಟು 'ಟಗರು' ಸಿನಿಮಾ ಗೆದ್ದಿತ್ತು. ಬಾಕ್ಸಾಫೀಸ್ನಲ್ಲಿ ಕೂಡ ಸಿನಿಮಾ ದರ್ಬಾರ್ ನಡೆಸಿತ್ತು. 'ಕಡ್ಡಿಪುಡಿ' ಚಿತ್ರದಿಂದ ಶಿವಣ್ಣ- ಸೂರಿ ಜೋಡಿಗೆ ದೊಡ್ಡ ಗೆಲುವು ಸಿಕ್ಕಿರಲಿಲ್ಲ. ಆದರೆ 'ಟಗರು' ಬ್ಲಾಕ್ಬಸ್ಟರ್ ಹಿಟ್ ಲಿಸ್ಟ್ ಸೇರಿತು. ಇದೇ ಕಾರಣಕ್ಕೆ ಅಭಿಮಾನಿಗಳು ಸೀಕ್ವೆಲ್ ನೋಡಲು ಚಾತಕ ಪಕ್ಷಿಗಳಂತೆ ಕಾಯುತ್ತಿರುವುದು. ಆದರೆ ಅದಕ್ಕೆ ಸರಿಯಾದ ಕಥೆ ಬೇಕಲ್ಲವೇ?
ಒಂದು ಸಿನಿಮಾ ಹಿಟ್ ಆಗಿದೆ. ಸೀಕ್ವೆಲ್ ಬಗ್ಗೆ ನಿರೀಕ್ಷೆಯಿದೆ. ಹಾಗಾಗಿ ಸಿನಿಮಾ ಮಾಡಿಬಿಟ್ಟರೆ ಗೆಲ್ಲಲ್ಲ. ಅದಕ್ಕೆ ಸರಿಯಾದ ಕಥೆ ಬೇಕು. ಇದೇ ಲೆಕ್ಕಾಚಾರದಲ್ಲಿ ಸೂರಿ ಕೂಡ ಇದ್ದಾರೆ. ನಿರ್ಮಾಪಕ ಕೆ. ಪಿ ಶ್ರೀಕಾಂತ್ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸಿದ್ದಾರೆ. ಉಪೇಂದ್ರ ಕಾಂಬಿನೇಷನ್ನಲ್ಲಿ 'ಯುಐ' ಸಿನಿಮಾ ಮಾಡಿ ಅವರು ಸಕ್ಸಸ್ ಕಂಡಿದ್ದಾರೆ. ಸದ್ಯ ಯುವರಾಜ್ಕುಮಾರ್ ನಟನೆಯ ಚಿತ್ರವನ್ನು ದುನಿಯಾ ಸೂರಿ ಕೈಗೆತ್ತಿಕೊಂಡಿದ್ದಾರೆ. ಆ ಸಿನಿಮಾ ಬಳಿಕ ಕೆ. ಪಿ ಶ್ರೀಕಾಂತ್ ಗಾಗೂ ಶಿವಣ್ಣನ ಸಿನಿಮಾ.
ಮೂವರು ಮತ್ತೊಂದು ಸಿನಿಮಾ ಮಾಡಲು ಸಿದ್ಧರಿದ್ದಾರೆ. ಆದರೆ ಅದು 'ಟಗರು- 2' ಆಗುತ್ತಾ? ಎನ್ನುವುದೇ ಎಲ್ಲರ ಪ್ರಶ್ನೆ. ಅದಕ್ಕೆಲ್ಲಾ ಉತ್ತರ ದುನಿಯಾ ಸೂರಿ ಕೊಡಬಲ್ಲರು. ಇದೇ ವಿಚಾರದ ಬಗ್ಗೆ ಕೆ. ಪಿ ಶ್ರೀಕಾಂತ್ ಮಾತನಾಡಿ "ಟಗರು-2 ಮಾಡುವ ಪ್ರಯತ್ನವೇ ನಡೀತಿದೆ. ಸೂರಿ ಅವರು ಈಗ ಯುವರಾಜ್ಕುಮಾರ್ ಅವರ ಸಿನಿಮಾ ಮಾಡ್ತಿದ್ದಾರೆ. ನಂತರ ನಮ್ಮ ಸಿನಿಮಾ ಇದೆ. 'ಟಗರು- 2' ಅಥವಾ ಬೇರೆ ಕಥೆನಾ ಎನ್ನುವುದನ್ನು ಸೂರಿ ಅವ್ರೇ ನಿರ್ಧರಿಸುತ್ತಾರೆ" ಎಂದು ಹೇಳಿದ್ದಾರೆ.
ಮಾತು ಮುಂದುವರೆಸಿರುವ ಕೆ. ಪಿ ಶ್ರೀಕಾಂತ್ "ಸೂರಿಯವರ ಬಳಿ ನಾವು ಕೂಡ ಟಗರು ಸೀಕ್ವೆಲ್ ಮಾಡಲು ಮನವಿ ಮಾಡುತ್ತಿದ್ದೇವೆ. ಖಂಡಿತ ಮಾಡೋಣ ಎಂದು ಹೇಳುತ್ತಿದ್ದಾರೆ. ಪ್ರೇಕ್ಷಕರು ಕೂಡ ಆ ಸಿನಿಮಾ ನೋಡಲು ಸಿದ್ಧರಿದ್ದಾರೆ. 'ಟಗರು- 2' ಬಗ್ಗೆ ಕ್ರೇಜ್ ಇದೆ, ಮಾಡಿದ್ರೆ ನೋಡ್ತಾರೆ. ಆ ಕಥೆಗೆ ಕಂಟೀನ್ಯೂಟಿ ಹೊಳೆದರೆ ಖಂಡಿತ ಮಾಡೋಣ ಅಣ್ಣ ಅಂತ ಸೂರಿ ಹೇಳ್ತಿದ್ದಾರೆ. ಹಾಗಾಗಿ ನಾನು ಹೆಚ್ಚು ಒತ್ತಡ ಹಾಕ್ತಿಲ್ಲ. ಸಿನಿಮಾ ಮಾಡೋ ಬಗ್ಗೆ ನಾವಿಬ್ಬರು ಶಿವಣ್ಣ ಜೊತೆ ಮಾತನಾಡಿದ್ದೇವೆ" ಎಂದು ಶ್ರೀಕಾಂತ್ ಮಾಹಿತಿ ನೀಡಿದ್ದಾರೆ.
ನಾವು ಮೂವರು ಒಟ್ಟಿಗೆ ಸಿನಿಮಾ ಮಾಡುವುದು ಖಚಿತ. ಆದರೆ ಇನ್ನು ಯಾವುದು ಫೈನಲ್ ಆಗಿಲ್ಲ, ಅದಕ್ಕೆ 'ಟಗರು- 2' ಅಂತ ಆಗಲಿ, ಪೋಸ್ಟರ್ನಲ್ಲಿ ನಿರ್ದೇಶಕ ಸೂರಿ ಹೆಸರನ್ನಾಗಲಿ ನಾವು ಹಾಕಲಿಲ್ಲ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡುತ್ತಾ ನಟ ಶಿವರಾಜ್ಕುಮಾರ್ ಕೂಡ 'ಟಗರು-2' ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಕಥೆ ಇನ್ನು ಸಿದ್ಧವಾಗಿಲ್ಲ. ಮುಂದೆ ನೋಡೋಣ" ಎಂದಿದ್ದರು. ದುನಿಯಾ ಸೂರಿ ಈಹಿಂದೆ ಕರ್ನಾಟಕ ಟಿವಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಸೀಕ್ವೆಲ್ ಸಿನಿಮಾ ಮಾಡುವ ಬಗ್ಗೆ ವಿಭಿನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದರು.
"ನಾನು ಒಮ್ಮೆ ನಡೆದ ಯಾವುದೇ ಹಳೇ ನೆನಪುಗಳಿಗೆ ಹೋಗಲ್ಲ. ಹಳೆಯದಕ್ಕೆ ಹೋಗಿ ಏನಾದರೂ ತಪ್ಪು ಮಾಡಿದ್ದರೆ ಅದನ್ನು ಸರಿಮಾಡುವ ಪ್ರಯತ್ನ ಮಾಡಲ್ಲ. 'ಟಗರು- 2' ಅಂದಾಗ ಆಗ ಎಲ್ಲಿಗೆ ನಿಲ್ಲಿಸಿದ್ದೆ ಆದಾದಮೇಲೆ ಏನು ಎಂದು ನಾನು ಯೋಚಿಸಲ್ಲ. ಯಾವುದೇ ಸಿನಿಮಾ ಮಾರ್ನಿಂಗ್ ಶೋ ಮುಗಿದ ತಕ್ಷಣ ಅದನ್ನು ಮರೆತುಬಿಡ್ತೀನಿ. ಬಳಿಕ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಜನ ಕೇಳ್ದಾಗ ಮಾಡ್ತೀವಿ ಎಂದು ಹೇಳ್ತೀವಿ. ಆದರೆ ಗೊತ್ತಿಲ್ಲ. ಯಾವಾಗ ಅಂತ" ಎಂದಿದ್ದರು.
'ದುನಿಯಾ' ಸಿನಿಮಾ ನೋಡಿ ರಜನಿಕಾಂತ್ ಸರ್ ತಂಡವನ್ನು ಮನೆಗೆ ಕರೆದಿದ್ದರು. ನಾವು ಚೆನ್ನೈಗೆ ಹೋಗಿದ್ದೆವು. ಮಾತುಕತೆ ಮುಗಿದ ಮೇಲೆ ಅದೇ ಚಿತ್ರವನ್ನು ಧನುಷ್ ಕಾಂಬಿನೇಷನ್ನಲ್ಲಿ ಮಾಡೋಕೆ ಹೇಳಿದ್ರು. ಆದರೆ ನಾನು ಆಗಲ್ಲ ಅಂದೆ. ಒಮ್ಮೆ ಸಿನಿಮಾ ಮಾಡಿದ ಮೇಲೆ ಮುಗೀತು. ಮತ್ತೆ ಅದನ್ನೇ ಮಾಡಬೇಕು ಎಂದರೆ ಕಷ್ಟ. ನನಗಂತೂ ಅದು ಸಾಧ್ಯವಿಲ್ಲ" ಎಂದು ಸೂರಿ ವಿವರಿಸಿದ್ದಾರೆ.
ಒಟ್ಟಾರೆ 'ಟಗರು- 2' ಸಿನಿಮಾ ಮಾಡೋದು ನಿರ್ದೇಶಕ ಸೂರಿ ಕೈಯಲ್ಲಿದೆ. ಶಿವಣ್ಣನ ಜೊತೆ ಮತ್ತೊಂದು ಸಿನಿಮಾ ಅಂತೂ ಮಾಡ್ತಾರೆ. ಕೆ. ಪಿ ಶ್ರೀಕಾಂತ್ ಚಿತ್ರ ನಿರ್ಮಾಣ ಮಾಡಲಿದ್ದಾರೆ. ಆದರೆ ಕಥೆ ಏನು? ಎನ್ನುವುದು ಮಾತ್ರ ಯಾರಿಗೂ ಗೊತ್ತಿಲ್ಲ.


Click it and Unblock the Notifications











