ಅಭಿಮಾನಿಗಳ ಅಭಿಯಾನಕ್ಕೆ ಸಿಕ್ತು ಜಯ: ಉಳೀತು 'ಟಗರು ಪಲ್ಯ' 7 ಸ್ಟಾರ್ ಸುಲ್ತಾನನ ಜೀವ!
ನಟ ಡಾಲಿ ಧನಂಜಯ ನಿರ್ಮಾಣದ 'ಟಗರು ಪಲ್ಯ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಟೈಟಲ್ನಿಂದಲೇ ಈ ಸಿನಿಮಾ ಕುತೂಹಲ ಕೆರಳಿಸಿರುವುದು ಸುಳ್ಳಲ್ಲ. ನಾಗಭೂಷಣ್ ಹಾಗೂ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಉಮೇಶ್ ಕೆ ಕೃಪ ನಿರ್ದೇಶನದ ಈ ಚಿತ್ರದಲ್ಲಿ 7 ಸ್ಟಾರ್ ಸುಲ್ತಾನ ಹೆಸರಿನ ಟಗರುವೊಂದು ಕಾಣಿಸಿಕೊಂಡಿದೆ.
'ಟಗರು ಪಲ್ಯ' ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ. ಇನ್ನು ಚಿತ್ರದ ಟಗರು ಕಾಳಗದಲ್ಲಿ ಗೆದ್ದು ಬೀಗಿರುವ 7 ಸ್ಟಾರ್ ಸುಲ್ತಾನನನ್ನು ಈ ಬಾರಿ ಬಕ್ರೀದ್ ಹಬ್ಬಕ್ಕೆ ಕುರ್ಬಾನಿ ಕೊಡಲು ಮಾಲೀಕ ತೀರ್ಮಾನಿಸಿದ್ದರು. ಆದರ ಈ ವಿಷಯ ಗೊತ್ತಾಗಿ ಆ ಟಗರನ್ನು ಬಲಿ ಕೊಡದಂತೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಅಭಿಯಾನ ಶುರುವಾಗಿತ್ತು. ಈ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಎಲ್ಲರ ಒತ್ತಾಯ ಹಾಗೂ ಮನವಿಗೆ ಮಣಿದ ಮಾಲೀಕ 7 ಸ್ಟಾರ್ ಸುಲ್ತಾನನನ್ನು ಕುರ್ಬಾನಿ ಕೊಡದಿರಲು ತೀರ್ಮಾನಿಸಿದ್ದಾರೆ.

ಇದು ಬಾಗಲಕೋಟೆ ಮೂಲದ ಟಗರು. ಸುತಗುಂಡಾರ ಗ್ರಾಮದ ಮಾಲೀಕ ಯುನೀಸ್ ಗಡೇದ್ ಬಕ್ರೀದ್ ಹಬ್ಬಕ್ಕೆ ಕುರ್ಬಾನಿ ಕೊಡಲೆಂದೇ ಇದನ್ನು ಖರೀದಿಸಿದ್ದರು. ಬರೋಬ್ಬರಿ 1 ಲಕ್ಷ 88 ಸಾವಿರದ ಐನೂರು ರೂಪಾಯಿಗೆ ಆಗ ಇದನ್ನು ಖರೀದಿಸಲಾಗಿತ್ತು. ಆದರೆ ಕುರ್ಬಾನಿಗೂ ಮುನ್ನ ಟಗರು ಕಾಳಗಗಳಲ್ಲಿ ಭಾಗವಹಿಸಿದ್ದ ಈ ಟಗರು ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಹೀಗಾಗಿ ಮಾಲೀಕ ಯುನೀಸ್ ಈ ಟಗರಿಗೆ 7 ಸ್ಟಾರ್ ಸುಲ್ತಾನ ಎಂದು ಹೆಸರಿಟ್ಟರು.
ಹಲವು ಬಹುಮಾನ ಗೆದ್ದ ಟಗರು
ಈಗಾಗಲೇ 34 ಟಗರು ಕಾಳಗ ಕಣಗಳಲ್ಲಿ 7 ಸ್ಟಾರ್ ಸುಲ್ತಾನ ಪ್ರಥಮ ಬಹುಮಾನ ಗಳಿಸಿದ್ದು ಸುಮಾರು 20 ಲಕ್ಷದಷ್ಟು ಹಣ, ಬೆಳ್ಳಿ, ಬಂಗಾರ, ಬೈಕ್ಗಳನ್ನು ಗೆದ್ದು ಬೀಗಿದೆ. ಟಗರಿಗೆ ವಯಸ್ಸಾಯಿತು ಎನ್ನುವ ಕಾರಣಕ್ಕೆ ಈ ಬಾರಿಯ ಬಕ್ರೀದ್ ಹಬ್ಬಕ್ಕೆ ಕುರ್ಬಾನಿ ನೀಡಲು ನಿರ್ಧರಿಸಿದ್ದರು. ಆದರೆ ಇಂತಹ ಟಗರನ್ನು ಕುರ್ಬಾನಿ ಮಾಡದಂತೆ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿತ್ತು. ಹೀಗಾಗಿ ಅಭಿಮಾನಿಗಳ ಒತ್ತಾಸೆಗೆ ಮಣಿದು 7 ಸ್ಟಾರ್ ಸುಲ್ತಾನನನ್ನು ಕುರ್ಬಾನಿ ಕೊಡದಿರಲು ಮಾಲೀಕ ಯುನೀಸ್ ನಿರ್ಧರಿಸಿದ್ದಾರೆ.

ಹೊಸ ಪ್ರತಿಭೆಗಳ 'ಟಗರು ಪಲ್ಯ'
ಡಾಲಿ ಪಿಕ್ಚರ್ಸ್ ಬ್ಯಾನರ್ನಲ್ಲಿ ಧನಂಜಯ್ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಮುಂದಾಗಿದ್ದಾರೆ. ಈ ಸಂಸ್ಥೆಯ 3ನೇ ಸಿನಿಮಾ 'ಟಗರು ಪಲ್ಯ'. ಧನಂಜಯ್ ಆಪ್ತ 'ಇಕ್ಕಟ್', 'ಬಡವ ರಾಸ್ಕಲ್' ಸಿನಿಮಾಗಳ ಖ್ಯಾತಿಯ ನಾಗಭೂಷಣ್ ಚಿತ್ರದಲ್ಲಿ ನಾಯಕನಾಗಿ ನಟಿಸ್ತಿದ್ದಾರೆ. ನಾಯಕಿಯಾಗಿ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಮಂಡ್ಯ ಹಳ್ಳಿಗಳಲ್ಲಿ ನಡೆಯುವ ಆಚರಣೆ ಸುತ್ತಾ ಇಡೀ ಸಿನಿಮಾವನ್ನು ಕಟ್ಟಿಕೊಡಲಾಗಿದೆ.
ಕುತೂಹಲ ಕೆರಳಿಸಿರುವ ಸಿನಿಮಾ
'ಟಗರು ಪಲ್ಯ' ಚಿತ್ರದಲ್ಲಿ ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಸೇರಿದಂತೆ ದೊಡ್ಡ ತಾರಾಗಣವಿದೆ. ವಾಸುಕಿ ವೈಭವ್ ಸಂಗೀತ, ಎಸ್. ಕೆ ರಾವ್ ಛಾಯಾಗ್ರಹಣ ಚಿತ್ರಕ್ಕಿದೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಶೀಘ್ರದಲ್ಲೇ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತಿದೆ.


Click it and Unblock the Notifications











