BIFFESನಿಂದ ಅನ್ಯಾಯ: ಫಿಲ್ಮಿಬೀಟ್ಗೆ ನಿರ್ದೇಶಕ ಕೃಪಾಕರ್ ಕೊಟ್ಟ ಉತ್ತರವೇನು?
"ಚಲನಚಿತ್ರ ಅಕಾಡೆಮಿ ಸದಸ್ಯರಾಗಿರುವ ಅಶೋಕ್ ಕಶ್ಯಪ್ 'ತಲೆದಂಡ' ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ ಎಂಬ ಕಾರಣಕ್ಕೆ ಬೆಂಗಳೂರು ಚಿತ್ರೋತ್ಸವದಲ್ಲಿ ನಮ್ಮ ಸಿನಿಮಾ ಅವಕಾಶ ಕೊಡುತ್ತಿಲ್ಲ. ನಮ್ಮ ಸಿನಿಮಾ ಮಾಡುವ ವೇಳೆ ಕಶ್ಯಪ್ ಅಕಾಡೆಮಿ ಸದಸ್ಯರೇ ಆಗಿರಲಿಲ್ಲ ಎನ್ನುವ ಬಗ್ಗೆ ಅಕಾಡೆಮಿ ಅವರು ಗಮನ ಕೊಡಬೇಕಾಗಿದೆ" ಎಂದು ತಲೆದಂಡ ಚಿತ್ರದ ನಿರ್ದೇಶಕ ಕೃಪಾಕರ್ ಫಿಲ್ಮಿಬೀಟ್ ಕನ್ನಡಕ್ಕೆ ತಿಳಿಸಿದ್ದಾರೆ.
ಅಕಾಡೆಮಿ, ಚಲನಚಿತ್ರೋತ್ಸವ ಸಮಿತಿ, ಜ್ಯೂರಿ ತಂಡದಲ್ಲಿರುವ ಸದಸ್ಯರು ತೊಡಗಿಕೊಂಡಿರುವ ಚಿತ್ರಗಳನ್ನು ಸ್ಪರ್ಧಾ ವಿಭಾಗಕ್ಕೆ ಆಯ್ಕೆ ಮಾಡಲಾಗುವುದಿಲ್ಲ. ಈ ಹಿನ್ನೆಲೆ ಅಶೋಕ್ ಕಶ್ಯಪ್ ಛಾಯಾಗ್ರಹಣ ಮಾಡಿರುವ ತಲೆದಂಡ ಚಿತ್ರವನ್ನು 2021ನೇ ಸಾಲಿನ ಬೆಂಗಳೂರು ಚಿತ್ರೋತ್ಸವದಿಂದ ಕೈ ಬಿಡಲಾಗಿದೆ.
ಅಕಾಡೆಮಿಯ ಈ ನಿರ್ಧಾರದ ಬಗ್ಗೆ ನಟ ಸಂಚಾರಿ ವಿಜಯ್ ಅಸಮಾಧಾನಗೊಂಡಿದ್ದರು. 'ಸಮಾಜಕ್ಕೆ ಒಂದೊಳ್ಳೆ ಸಂದೇಶ ರವಾನಿಸುವ ಚಿತ್ರ ಇದಾಗಿದೆ, ಬಹಳ ಕಷ್ಟ ಪಟ್ಟು ಸಿನಿಮಾ ಮಾಡಲಾಗಿದೆ. ಜ್ಯೂರಿಗಳು ಸಿನಿಮಾನೇ ನೋಡದೇ ಈ ನಿರ್ಧಾರ ಮಾಡಿರುವುದು ಖಂಡನೀಯ' ಎಂದಿದ್ದರು.
ಇದೀಗ, ಅಕಾಡೆಮಿಯ ನಿರ್ಧಾರ ಪ್ರಶ್ನಿಸಿ ತಲೆದಂಡ ಚಿತ್ರತಂಡ ಹೋರಾಟ ಮುಂದುವರಿಸಲು ನಿರ್ಧರಿಸಿದೆ. ಈ ಕುರಿತು ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ ನಿರ್ದೇಶಕ ಕೃಪಾಕರ್ ಮುಂದಿನ ಸಾಧ್ಯತೆ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂದೆ ಓದಿ...

ನಮ್ಮ ಸಿನಿಮಾ ಮಾಡಿದಾಗ ಕಶ್ಯಪ್ ಸಮಿತಿಯಲ್ಲಿರಲಿಲ್ಲ
''ತಲೆದಂಡ ಸಿನಿಮಾ ಮಾಡುವ ವೇಳೆ ಅಶೋಕ್ ಕಶ್ಯಪ್ ಚಲನಚಿತ್ರ ಅಕಾಡೆಮಿ ಸಮಿತಿಯಲ್ಲಿ ಇರಲಿಲ್ಲ. 2020 ಫೆಬ್ರವರಿ ತಿಂಗಳಲ್ಲಿ ನಾವು ಶೂಟಿಂಗ್ ಮುಗಿಸಿದ್ದೆವು. 2020 ಸೆಪ್ಟೆಂಬರ್ ತಿಂಗಳಲ್ಲಿ ಕಶ್ಯಪ್ ಸಮಿತಿಗೆ ಆಯ್ಕೆಯಾದರು. ನಾವು ಚಿತ್ರೋತ್ಸವಗಳನ್ನು ಗುರಿಯಾಗಿಸಿಕೊಂಡು ಸಿನಿಮಾ ಮಾಡುವುದು. ಈಗ ಅದರಲ್ಲೇ ಅವಕಾಶ ಸಿಕ್ಕಿಲ್ಲ ಅಂದ್ರೆ ನಮ್ಮ ಕಥೆ ಏನಾಗಬೇಕು'' ಎಂದು ನಿರ್ದೇಶಕ ಕೃಪಾಕರ್ ಪ್ರಶ್ನಿಸಿದ್ದಾರೆ.

ವ್ಯಕ್ತಿಗಿಂತ ಸಿನಿಮಾ ಮುಖ್ಯವಾಗುತ್ತದೆ
''ಇಂತಹ ಸಂದರ್ಭಗಳಲ್ಲಿ ವ್ಯಕ್ತಿಗಿಂತ ಸಿನಿಮಾ ಮುಖ್ಯವಾಗುತ್ತದೆ. ರಾಜ್ಯ ಪ್ರಶಸ್ತಿ ಮತ್ತು ರಾಷ್ಟ್ರ ಪ್ರಶಸ್ತಿ ಆಯ್ಕೆ ವೇಳೆಯೂ ಇದು ಅನ್ವಯವಾಗುತ್ತದೆ. ನಮ್ಮ ಸಿನಿಮಾಗೆ ಅವಕಾಶ ನೀಡುವ ಕಾರಣಕ್ಕಾಗಿ ಕಶ್ಯಪ್ ಅವರೇ ಆಕಾಡೆಮಿಯಿಂದ ಹಿಂದೆ ಸರಿಯಲು ಸಿದ್ದರಿದ್ದಾರೆ. ಆದರೆ, ಅಕಾಡೆಮಿ ಅವರನ್ನು ಬಿಡಲು ಸಿದ್ದವಿಲ್ಲ. ಕಶ್ಯಪ್ ನಮ್ಮ ಸಿನಿಮಾದಲ್ಲಿ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ಇಲ್ಲಿ ಕಶ್ಯಪ್ ಅವರ ನಿರ್ಧಾರಕ್ಕಿಂತ ಅಕಾಡೆಮಿ ಅಧ್ಯಕ್ಷರು ನಿರ್ಧಾರ ಮುಖ್ಯವಾಗುತ್ತದೆ'' ಎಂದು ತಿಳಿಸಿದ್ದಾರೆ.

ಬೇರೆ ಆಯ್ಕೆಯಿಲ್ಲ ಎಂದ ಆಕಾಡೆಮಿ
ತಲೆದಂಡ ವಿಚಾರದಲ್ಲಿ ಬೇರೆ ಆಯ್ಕೆಯಿಲ್ಲ. ಸ್ಪರ್ಧೆ ವಿಭಾಗದಲ್ಲಿ ಅವಕಾಶ ಕೊಡಲಾಗಲ್ಲ. ಆದರೆ, ಪ್ರದರ್ಶನ ವಿಭಾಗದಲ್ಲಿ ಭಾಗಿಯಾಗಬಹುದು ಎಂದು ಆಕಾಡೆಮಿ ಕಡ್ಡಿ ಮುರಿದಂತೆ ತಿಳಿಸಿದೆ. ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ ಸಂಪರ್ಕಕ್ಕೆ ಸಿಗುತ್ತಿಲ್ಲ. ಅಕಾಡೆಮಿಯ ಈ ನಿರ್ಧಾರ ಈಗ ನಿರ್ದೇಶಕರನ್ನು ಗೊಂದಲಕ್ಕೆ ದೂಡಿದೆ. ಈ ಬಗ್ಗೆ ವಾಣಿಜ್ಯ ಮಂಡಳಿ, ನಿರ್ಮಾಪಕ ಸಂಘಕ್ಕೂ ಈ ಬಗ್ಗೆ ಮನವಿ ಮಾಡಿದ್ದೇನೆ. ತಮ್ಮ ಕೋರ್ ಕಮಿಟಿ ಜೊತೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಕೃಪಾಕರ್ ತಿಳಿಸಿದ್ದಾರೆ.
Recommended Video

ತಲೆದಂಡ ಚಿತ್ರಕ್ಕೆ ಪರಿಹಾರವೇನು?
ಚಿತ್ರೋತ್ಸವಗಳೇ ಮುಖ್ಯ ಎಂಬ ಉದ್ದೇಶದಿಂದ ಮಾಡಿರುವ ಸಿನಿಮಾಗೆ ಅವಕಾಶ ಸಿಗಬೇಕು. ಆ ಕಡೆ ನಿಮಯವೂ ಉಳಿಯಬೇಕು. ಸದ್ಯ ಅಕಾಡೆಮಿ ಹಾಗೂ ಚಿತ್ರತಂಡ ಮುಂದೆ ಎರಡು ಆಯ್ಕೆ ಇದೆ. ಕಶ್ಯಪ್ ಅವರನ್ನು ಸಮಿತಿಯಿಂದ ಕೈಬಿಟ್ಟು ತಲೆದಂಡ ಚಿತ್ರಕ್ಕೆ ಅವಕಾಶ ಮಾಡಿಕೊಡುವುದು. ನಿರ್ದೇಶಕ ಕೃಪಾಕರ್ ಅವರೇ ಹೇಳಿರುವ ಕಶ್ಯಪ್ ಸಮಿತಿಯಿಂದ ಹಿಂದೆ ಸರಿಯಲು ಸಿದ್ಧರಿದ್ದಾರೆ. ಅಥವಾ ನ್ಯಾಯಾಲಯ ಮೂಲಕ ಪರಿಹಾರ ಕಂಡುಕೊಳ್ಳುವುದು. ಏಕಂದ್ರೆ ಅಕಾಡೆಮಿ ಅದಾಗಲೇ ನಿರ್ಧಾರ ತಿಳಿಸಿದೆ.


Click it and Unblock the Notifications











