ಜನ್ಮದಿನದಂದು ನಟ ಸೃಜನ್ ಲೋಕೇಶ್ ಮಾಡಿದ ಮಹತ್ವದ ಕಾರ್ಯ 'ಇದು'.!
Recommended Video

'ಮಜಾ ಟಾಕೀಸ್' ಕಾರ್ಯಕ್ರಮದ ಮೂಲಕ ಕರ್ನಾಟಕದ ಮನೆ ಮನಗಳಲ್ಲಿ 'ಟಾಕಿಂಗ್ ಸ್ಟಾರ್' ಆಗಿ ಜನಪ್ರಿಯತೆ ಗಳಿಸಿರುವ ಸೃಜನ್ ಲೋಕೇಶ್ ರವರಿಗಿಂದು ಹುಟ್ಟುಹಬ್ಬದ ಸಂಭ್ರಮ.
ಬೆಂಗಳೂರಿನ ಶ್ರೀನಗರದಲ್ಲಿರುವ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ಇಂದು ತಮ್ಮ ಜನ್ಮದಿನವನ್ನು ಸೃಜನ್ ಲೋಕೇಶ್ ಆಚರಿಸಿಕೊಂಡರು. ಬಂಡೆ ಮಹಾಕಾಳಮ್ಮನ ಆಶೀರ್ವಾದ ಪಡೆದು ಅಭಿಮಾನಿಗಳ ಜೊತೆಗೆ ಕೇಕ್ ಕಟ್ ಮಾಡಿ ಸೃಜನ್ ಲೋಕೇಶ್ ಸಂಭ್ರಮಿಸಿದರು.
ಇದರ ಜೊತೆಗೆ ಒಂದು ಮಹತ್ವದ ಕಾರ್ಯವನ್ನೂ ಮಾಡಿ ತಮ್ಮ ಬರ್ತಡೇಯನ್ನ ಅರ್ಥಪೂರ್ಣವಾಗಿ ಆಚರಿಸಿಕೊಂಡರು ನಟ ಸೃಜನ್ ಲೋಕೇಶ್. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ ನೋಡಿರಿ...

ದೇವಸ್ಥಾನಕ್ಕಾಗಿ ಹೆಬ್ಬಾಗಿಲು ನಿರ್ಮಿಸಿದ ಸೃಜನ್
ಪ್ರತಿ ವರ್ಷ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ನಟ ಸೃಜನ್ ಲೋಕೇಶ್ ಈ ವರ್ಷ ಬಂಡೆಮಹಾಕಾಳಮ್ಮ ದೇವಸ್ಥಾನದಲ್ಲಿ ಸೆಲೆಬ್ರೇಟ್ ಮಾಡಿದರು. ದೇವಸ್ಥಾನಕ್ಕಾಗಿ ಹೆಬ್ಬಾಗಿಲನ್ನು ನಿರ್ಮಿಸಿದ್ದ ಸೃಜನ್ ಇಂದು ಅದರ ಉದ್ಘಾಟನೆ ಕಾರ್ಯವನ್ನ ನೆರವೇರಿಸಿದರು.

ಬಂಡೆಮಹಾಕಾಳಮ್ಮ ದೇವಿ ಮೇಲೆ ನಂಬಿಕೆ
''ಈ ದೇವಸ್ಥಾನಕ್ಕೆ ಬಂದು ಹೋದಾಗೆಲ್ಲ ನಾನೇನು ಅಂದುಕೊಂಡಿರುತ್ತೇನೋ, ಅದೆಲ್ಲ ಸಲೀಸಾಗಿ ನಡೆದು ಹೋಗುತ್ತದೆ. ದೇವಸ್ಥಾನಕ್ಕೆ ಏನಾದರೂ ಮಾಡಬೇಕು ಅಂತ ಅಂದುಕೊಳ್ಳುತ್ತಿದ್ದೆ. ತಾತ ಹಾಗೂ ಅಪ್ಪನ ಹೆಸರಿನಲ್ಲಿ ಶಾಶ್ವತವಾಗಿ ದೇವಸ್ಥಾನದ ಹೆಬ್ಬಾಗಿಲು ಇರಲಿ ಅಂತ ನಮ್ಮ ಸಂಸ್ಥೆಯಿಂದ ನಿರ್ಮಿಸಿ ಕೊಟ್ಟಿದ್ದೇವೆ'' ಅಂತಾರೆ ನಟ ಸೃಜನ್ ಲೋಕೇಶ್

ಗಜ ಜೊತೆಗೆ ಸೃಜ ಸಾಥ್
''ದರ್ಶನ್ ಕೂಡ ನನಗೆ ಸಾಥ್ ಕೊಟ್ಟು ಹೆಬ್ಬಾಗಿಲ ಪೇಂಟಿಂಗ್ ಜವಾಬ್ದಾರಿ ಹೊತ್ತರು. 'ಗಜ' ಹಾಗೂ 'ಸೃಜ' ಇಬ್ಬರೂ ಒಟ್ಟಿಗೆ ಸೇರಿ ಬಂಡೆಮಹಾಕಾಳಮ್ಮ ದೇವಸ್ಥಾನದ ಹೆಬ್ಬಾಗಿಲು ನಿರ್ಮಿಸಿದ್ದೇವೆ. ಇದೇ ಖುಷಿ ನನಗೆ'' ಎಂದು ಮುಗುಳ್ನಗೆ ಬೀರಿದರು ಸೃಜನ್ ಲೋಕೇಶ್

ದೇವಸ್ಥಾನದ ಆವರಣದಲ್ಲಿ ಮರ ನೆಡುವ ಕಾರ್ಯಕ್ರಮ
''ಚಿಕ್ಕವಯಸ್ಸಿನಿಂದಲೂ ಈ ದೇವಸ್ಥಾನಕ್ಕೆ ಬರ್ತಿದ್ವಿ. ಇಲ್ಲಿಗೆ ಬಂದಾಗೆಲ್ಲ ನನಗೆ ಪಾಸಿಟಿವ್ ಅನ್ಸುತ್ತೆ. ಇಲ್ಲಿನ ಪರಿಸರ ನನಗೆ ತುಂಬಾ ಇಷ್ಟ. ಹೀಗಾಗಿ ಇವತ್ತು ಇಲ್ಲಿನ ಆವರಣದಲ್ಲಿ 500 ಮರಗಳನ್ನ ನೆಡಬೇಕು ಅಂದುಕೊಂಡಿದ್ದೇವೆ. 5 ಅಡಿ ಬೆಳೆದಿರುವ ಮರಗಳನ್ನು ಅರಣ್ಯ ಇಲಾಖೆಯಿಂದ ತರಿಸಿಕೊಂಡಿದ್ದೇವೆ. ದರ್ಶನ್ ಕೂಡ ಅರಣ್ಯ ಇಲಾಖೆಗೆ ರಾಯಭಾರಿ. ಹೀಗಾಗಿ ಅವರಿಂದಲೂ 1000 ಗಿಡಗಳು ಬಂದಿವೆ'' - ಸೃಜನ್ ಲೋಕೇಶ್

ಇವತ್ತಿನ ಪ್ಲಾನ್ ಏನು.?
''ಇವತ್ತು 2500 ಗಿಡ ಹಂಚಬೇಕು ಎಂಬ ಇಚ್ಛೆ ನಮ್ಮದು. ಕತ್ರಿಗುಪ್ಪೆಯಲ್ಲಿ ಇರುವ ಒಂದೊಂದು ಮನೆಗೂ ಹೋಗಿ ಗಿಡ ಕೊಡಬೇಕು ಅಂತ ಪ್ಲಾನ್ ಇದೆ. ಇಲ್ಲಿ ಫ್ರೀ ಐ ಕ್ಯಾಂಪ್ ಕೂಡ ಮಾಡಿಸುತ್ತಿದ್ದೇವೆ. ಅರ್ಥಪೂರ್ಣವಾಗಿ ಈ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡೆ ಎಂಬ ಖುಷಿ ನನಗೆ ಇದೆ'' ಎಂದರು ನಟ ಸೃಜನ್ ಲೋಕೇಶ್.

ಎಪ್ಪತ್ತು ಸಾವಿರ ಗಿಡಗಳು
ಕಳೆದ ವರ್ಷ ಸೃಜನ್ ಹುಟ್ಟುಹಬ್ಬದಂದು ಒಂದು ಲಕ್ಷ ಗಿಡಗಳನ್ನು ನೆಡುವ ಅಭಿಯಾನಕ್ಕೆ ಚಾಲನೆ ಕೊಡಲಾಗಿತ್ತು. ಇಲ್ಲಿಯವರೆಗೂ ಒಂದು ವರ್ಷದಲ್ಲಿ ಎಪ್ಪತ್ತು ಸಾವಿರ ಗಿಡಗಳನ್ನು ಸೃಜನ್ ನೆಟ್ಟಿದ್ದಾರೆ. ಇಂದು ಕೂಡ ಗಿಡ ಹಂಚುವ ಹಾಗೂ ನೆಡುವ ಕಾರ್ಯದಲ್ಲಿಯೇ ಸೃಜನ್ ತಲ್ಲೀನರಾಗಿದ್ದಾರೆ.

ನಮ್ಮದೊಂದು ಸಲಾಂ
ತಮ್ಮ ಎಲ್ಲಾ ಶೋಗಳಲ್ಲೂ ಅತಿಥಿಗಳಿಗೆ ಗಿಡಗಳನ್ನೇ ಉಡುಗೊರೆಯಾಗಿ ಕೊಡುವ ಪದ್ಧತಿಯನ್ನ ಸೃಜನ್ ರೂಢಿಸಿಕೊಂಡಿದ್ದಾರೆ. ಪರಿಸರದ ಮೇಲಿನ ಸೃಜನ್ ಇಟ್ಟಿರುವ ಕಾಳಜಿಗೆ ನಮ್ಮದೊಂದು ಸಲಾಂ.!


Click it and Unblock the Notifications











