ಕನ್ನಡಕ್ಕೆ ಬಂದ ತಮಿಳು ನಟ ಆರ್ಯ
'ನಾನ್ ಕಡವಳ್', 'ರಾಜರಾಣಿ' ಅಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಸ್ಟಾರ್ ನಟ ಆರ್ಯ, ಈಗ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ.
ಈಗಾಗಲೇ ಈ ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಿರುವ ಆರ್ಯ ಕನ್ನಡದ ಯುವ ನಟನಿಗೆ ಸಾಥ್ ಕೊಟ್ಟಿದ್ದಾರೆ. ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಖುಷಿ ಎಂದು ಹೇಳಿರುವ ಆರ್ಯ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಅಷ್ಟಕ್ಕೂ, ಆರ್ಯ ಕನ್ನಡದಲ್ಲಿ ನಟಿಸುತ್ತಿರುವ ಚಿತ್ರ ಯಾವುದು? ಅವರ ಪಾತ್ರ ಯಾವುದು ಎಂಬುದನ್ನ ತಿಳಿದುಕೊಳ್ಳಲು ಮುಂದೆ ಓದಿ....

'ರಾಜರಥ'ವೇರಿದ ಆರ್ಯ
ತಮಿಳು ನಟ ಕನ್ನಡದಲ್ಲಿ ಅಭಿನಯಿಸುತ್ತಿರುವ ಚಿತ್ರ ರಾಜರಥ. ರಂಗಿತರಂಗ ಖ್ಯಾತಿ ನಿರೂಪ್ ಭಂಡಾರಿ ನಾಯಕನಾಗಿದ್ದು, ಅನೂಪ್ ಭಂಡಾರಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಕನ್ನಡಕ್ಕೆ ಆರ್ಯ ಎಂಟ್ರಿ ಕೊಟ್ಟಿದ್ದಾರೆ.

'ಆರ್ಯ' ಪಾತ್ರವೇನು?
ರಾಜರಥ ಕಥೆ ಮಾಡಬೇಕಾದರೇ, ಈ ಪಾತ್ರವನ್ನ ಆರ್ಯ ಅವರಿಂದಲೇ ಮಾಡಿಸಬೇಕು ಎಂಬ ಉದ್ದೇಶ ಚಿತ್ರತಂಡಕ್ಕಿತ್ತಂತೆ. ಹಾಗಾಗಿ, ಆರ್ಯ ಅವರನ್ನ ಈ ಚಿತ್ರಕ್ಕಾಗಿ ಕರೆತಂದಿದ್ದಾರೆ. ಆದ್ರೆ, ಆರ್ಯ ಅವರ ಪಾತ್ರವೇನು ಎಂಬುದು ಬಹಿರಂಗವಾಗಿಲ್ಲ.

5 ನಿಮಿಷದಲ್ಲಿ ಕಾಲ್ ಶೀಟ್ ಕೊಟ್ಟ ಆರ್ಯ
'ರಾಜರಥ' ಚಿತ್ರದಲ್ಲಿ ಅಭಿನಯಿಸುವಂತೆ ಆರ್ಯ ಅವರು 5 ನಿಮಿಷದಲ್ಲಿ ಕಾಲ್ ಶೀಟ್ ಕೊಟ್ಟರಂತೆ. ಆ ಮೊದಲೇ ರಂಗಿತರಂಗ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದ ಆರ್ಯ, ನಿರ್ದೇಶಕರು ಕೇಳಿದ ದಿನವೇ ಡೇಟ್ ಕೊಟ್ಟಿದ್ದಾರಂತೆ.

12 ದಿನಗಳ ಕಾಲ ಚಿತ್ರೀಕರಣ
ರಾಜರಥ ಚಿತ್ರದಲ್ಲಿ ಮುಖ್ಯಪಾತ್ರವನ್ನ ಆರ್ಯ ಅವರು ನಿರ್ವಹಿಸುತ್ತಿದ್ದು, 12 ದಿನಗಳ ಕಾಲ ಚಿತ್ರೀಕರಣ ಮಾಡಲಿದ್ದಾರಂತೆ. ಈಗಾಗಲೇ ಮೈಸೂರಿನಲ್ಲಿ ನಡೆಯುತ್ತಿರುವ ಶೂಟಿಂಗ್ ನಲ್ಲಿ ನಟ ಆರ್ಯ ಭಾಗವಹಿಸಿದ್ದಾರೆ.

'ರಾಜರಥ' ಚಿತ್ರದ ಬಗ್ಗೆ
'ರಂಗಿತರಂಗ' ಚಿತ್ರದ ನಂತರ ಭಂಡಾರಿ ಬ್ರದರ್ಸ್ ಈ ಚಿತ್ರವನ್ನ ಕೈಗೆತ್ತಿಕೊಂಡಿದ್ದು, ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ. ನಿರೂಪ್ ಭಂಡಾರಿಗೆ, ನಟಿ ಅವಂತಿಕಾ ಶೆಟ್ಟಿ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ.


Click it and Unblock the Notifications











