'ಕಾಂತಾರ' ಸಕ್ಸಸ್ ಸೆಲೆಬ್ರೇಟ್ ಮಾಡಿದ ತಮಿಳು ಸೂಪರ್ ಸ್ಟಾರ್: ಮತ್ತೊಂದು ಸಿನಿಮಾ ಸುಳಿವು ಕೊಡ್ತಾ ಹೊಂಬಾಳೆ?
ಇಡೀ ಭಾರತೀಯ ಚಿತ್ರರಂಗವೇ 'ಕಾಂತಾರ' ಸಿನಿಮಾ ಬಗ್ಗೆ ಮಾತಾನಾಡುತ್ತಿದೆ. ಇತ್ತೀಚೆಗೆ ಬಾಹುಬಲಿ ಪ್ರಭಾಸ್ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಇದೀಗ ತಮಿಳು ನಟ ಸಿಂಬು 'ಕಾಂತಾರ' ಸಿನಿಮಾ ನೋಡಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಈ ವಿಚಾರವನ್ನು ನಿರ್ಮಾಪಕ ಕಾರ್ತಿಕ್ ಗೌಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನೋಡಿ ಹೊಂಬಾಳೆ ಫಿಲ್ಮ್ಸ್ ಮುಂದಿನ ಸಿನಿಮಾ ಬಗ್ಗೆ ಸುಳಿವು ಕೊಟ್ಟಿದ್ದಾರೆ ಎಂದು ಕೆಲವರು ಹೇಳ್ತಿದ್ದಾರೆ.
ಕಳೆದ 6 ದಿನಗಳಿಂದ ಹೌಸ್ಫುಲ್ ಪ್ರದರ್ಶನ ಕಾಣುತ್ತಿರುವ 'ಕಾಂತಾರ' ಸಿನಿಮಾ ಇಂದು ಕೂಡ ಹೌಸ್ಫುಲ್ ಆಗುವ ಸುಳಿವು ಸಿಕ್ತಿದೆ. 7ನೇ ದಿನವೂ ಆನ್ಲೈನ್ನಲ್ಲಿ ಟಿಕೆಟ್ ಬುಕ್ಕಿಂಗ್ ಜೋರಾಗಿದ್ದು, ಎಲ್ಲೆಡೆ ಸಿನಿಮಾ ಬಗ್ಗೆ ಚರ್ಚೆ ಜೋರಾಗಿದೆ. ಬುಕ್ಮೈ ಶೋನಲ್ಲಿ 99% ರೇಟಿಂಗ್ ಪಡೆಯುವ ಮೂಲಕ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದಿದೆ. ಇನ್ನು ಬೇರೆ ಭಾಷೆಗಳಿಗೂ ಚಿತ್ರವನ್ನು ಡಬ್ ಮಾಡಿ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಹೊಂಬಾಳೆ ಸಂಸ್ಥೆ ಇದೇ ಜೋಶ್ನಲ್ಲಿ ಮತ್ತಷ್ಟು ಸಿನಿಮಾಗಳ ನಿರ್ಮಾಣಕ್ಕೆ ಮುಂದಾಗಿದೆ.
'ಕಾಂತಾರ' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿರುವುದಕ್ಕೆ ಅಭಿನಂದನೆ ತಿಳಿಸಿ, ತಮಿಳು ನಟ ಸಿಲಂಬರಸನ್ ಕೇಕ್ ಕತ್ತರಿಸಿದ್ದಾರೆ. ಇದಕ್ಕೆ ಹೊಂಬಾಳೆ ಸಂಸ್ಥೆಯ ಕಾರ್ತಿಕ್ ಗೌಡ ಧನ್ಯವಾದ ತಿಳಿಸಿದ್ದಾರೆ. ಇದನ್ನು ನೋಡಿ ಹೊಂಬಾಳೆ ಸಂಸ್ಥೆಯ ಚಿತ್ರದಲ್ಲಿ ಸಿಂಬು ನಟಿಸ್ತಾರಾ? ಎನ್ನುವ ಚರ್ಚೆ ಶುರುವಾಗಿದೆ. ಆದರೆ ಇದೆಲ್ಲಾ ಬರೀ ಗಾಳಿಸುದ್ದಿ ಎನ್ನಲಾಗ್ತಿದೆ.

ಹೊಂಬಾಳೆ ಸಂಸ್ಥೆಯಲ್ಲಿ ಸಿಂಬು ಸಿನಿಮಾ?
ಸಾಲು ಸಾಲು ಸಿನಿಮಾಗಳನ್ನು ಹೊಂಬಾಳೆ ಸಂಸ್ಥೆ ಘೋಸಿಸುತ್ತಿದೆ. 'ಸಲಾರ್' ಸಿನಿಮಾ ನಂತರ ಯುವ ರಾಜ್ಕುಮಾರ್ ಜೊತೆ ಒಂದು ಸಿನಿಮಾ ಕನ್ಫರ್ಮ್ ಆಗಿದೆ. ಪೃಥ್ವಿರಾಜ್ ಸುಕುಮಾರ್ ನಿರ್ದೇಶನ್ 'ಟೈಸನ್' ಚಿತ್ರ ನಿರ್ಮಾಣವಾಗ್ತಿದೆ. ಸುಧಾ ಕೊಂಗರ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರವನ್ನು ಘೋಷಿಸಲಾಗಿದೆ. ಫಹಾದ್ ಫಾಸಿಲ್ ನಟನೆಯ ಚಿತ್ರವೂ ಶುರುವಾಗುತ್ತಿದೆ. ಸುದೀಪ್ ಜೊತೆಗೂ ಸಿನಿಮಾ ಹೊಂಬಾಳೆ ಸಿನಿಮಾ ಮಾಡುವ ಸುಳಿವು ಸಿಕ್ತಿದೆ. ಇದೀಗ ಸಿಂಬು ಜೊತೆಗೂ ಸಿನಿಮಾ ಮಾಡ್ತಾರಾ? ಅಥವಾ ಸುಧಾ ಕೊಂಗರ ಚಿತ್ರಕ್ಕೆ ಸಿಂಬು ಹೀರೊನಾ ಎನ್ನುವ ಚರ್ಚೆ ನಡೀತಿದೆ.

'ಕಾಂತಾರ' ಬೇರೆ ಭಾಷೆಗಳಲ್ಲಿ ಡಬ್?
ಕನ್ನಡದಲ್ಲೇ ನಮ್ಮ ಸಿನಿಮಾವನ್ನು ಎಲ್ಲರೂ ನೋಡಲಿ ಎನ್ನುವ ಕಾರಣಕ್ಕೆ ಹೊಂಬಾಳೆ ಸಂಸ್ಥೆ ಮೊದಲಿಗೆ 'ಕಾಂತಾರ' ಚಿತ್ರವನ್ನು ಬೇರೆ ಭಾಷೆಗಳಿಗೆ ಡಬ್ ಮಾಡಿರಲಿಲ್ಲ. ಆದರೆ ಚಿತ್ರಕ್ಕೆ ಪರಭಾಷಿಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಸಿನಿಮಾ ಡಬ್ ಮಾಡಿ ಕೊಡುವಂತೆ ಪರಭಾಷಾ ವಿತರಕರು ಕೇಳುತ್ತಿದ್ದಾರೆ. ಹಾಗಾಗಿ ಚಿತ್ರವನ್ನು ಡಬ್ ಮಾಡಿ ರಿಲೀಸ್ ಮಾಡುವ ಬಗ್ಗೆ ಚರ್ಚೆ ನಡೆಸಲಾಗ್ತಿದೆ.

30 ಕೋಟಿ ದಾಟಿದ ಸಿನಿಮಾ ಕಲೆಕ್ಷನ್?
ಬಾಕ್ಸಾಫೀಸ್ನಲ್ಲಿ 'ಕಾಂತಾರ' ಸಿನಿಮಾ ದೊಡ್ಡದಾಗಿ ಸದ್ದು ಮಾಡುತ್ತಿದೆ. ದಿನದಿಂದ ದಿನಕ್ಕೆ ಸಿನಿಮಾ ಕಲೆಕ್ಷನ್ ಕೂಡ ಹೆಚ್ಚಾಗ್ತಿದೆ. ಆಯುಧಪೂಜೆ ಹಾಗೂ ವಿಜಯದಶಮಿ ರಜೆ ಸಮಯದಲ್ಲಿ ಕಲೆಕ್ಷನ್ ಮತ್ತಷ್ಟು ಹೆಚ್ಚಾಗಿರುವ ಲೆಕ್ಕಾಚಾರ ನಡೀತಿದ್ದು, ಸಿನಿಮಾ ಗಳಿಕೆ 30 ಕೋಟಿ ದಾಟಿರುವ ಅಂದಾಜಿದೆ.

ಕನ್ನಡದ ಹೆಮ್ಮೆಯ 'ಕಾಂತಾರ'
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ' ಚಿತ್ರದಲ್ಲಿ ಕರಾವಳಿಯ ಗ್ರಾಮ್ಯ ಭಾಷೆ, ಗ್ರಾಮೀಣ ಸೊಗಡು, ಸಂಸ್ಕೃತಿಯ ಚಿತ್ರಣವನ್ನು ನೋಡಬಹುದು. ನಿರ್ದೇಶನದ ಜೊತೆಗೆ ಅವಾರ್ಡ್ ವಿನ್ನಿಂಗ್ ಪರ್ಫಾರ್ಮೆನ್ಸ್ನಿಂದ ರಿಷಬ್ ಶೆಟ್ಟಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಪರಭಾಷಿಕರು ಕೂಡ ಸಿನಿಮಾ ನೋಡಿ ಹುಬ್ಬೇರಿಸಿದ್ದಾರೆ. ಕಿಶೋರ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.


Click it and Unblock the Notifications











