ಪುನೀತ್ ಸಮಾಧಿಗೆ ಭೇಟಿ ನೀಡಿ ಕೈಮುಗಿದ ವಿಜಯ್
ಪುನೀತ್ ರಾಜ್ಕುಮಾರ್ ಅಗಲಿ ನಾಲ್ಕು ತಿಂಗಳಾಗುತ್ತಾ ಬಂದಿದೆ. ಆದರೆ ಅವರ ನೆನಪು ತುಸುವೂ ಮಾಸಿಲ್ಲ. ಪುನೀತ್ ಸಮಾಧಿಗೆ ಭೇಟಿ ನೀಡುವವರ ಸಂಖ್ಯೆಯೂ ಕಡಿಮೆ ಆಗಿಲ್ಲ. ಸಾಮಾನ್ಯ ಜನರು ಮಾತ್ರವಲ್ಲ ಸೆಲೆಬ್ರಿಟಿಗಳು ಸಹ ಒಬ್ಬರ ನಂತರ ಒಬ್ಬರಂತೆ ಪುನೀತ್ ಸಮಾಧಿಗೆ ಭೇಟಿ ನೀಡುತ್ತಲೇ ಇದ್ದಾರೆ.
ಇಂದು (ಫೆಬ್ರವರಿ 26) ತಮಿಳಿನ ಸ್ಟಾರ್ ನಟ ವಿಜಯ್, ಕಂಠೀರವ ಸ್ಟುಡಿಯೋಕ್ಕೆ ಭೇಟಿ ನೀಡಿ ಪುನೀತ್ ರಾಜ್ಕುಮಾರ್ ಸಮಾಧಿಗೆ ಪೂಜೆ ಸಲ್ಲಿಸಿದರು.
ಪುನೀತ್ ಅಗಲಿದ ಸಮಯದಲ್ಲಿ ವಿಜಯ್ ಅಂತಿಮ ದರ್ಶನದಲ್ಲಿ ಭಾಗವಹಿಸಿರಲಿಲ್ಲ. ಈಗ ಬೆಂಗಳೂರಿಗೆ ಬಂದಿರುವ ವಿಜಯ್, ಪುನೀತ್ ಸಮಾಧಿಗೆ ಭೇಟಿ ನೀಡಿ ಸಮಾಧಿಗೆ ಪೂಜೆ ಮಾಡಿದ್ದಾರೆ.

ವಿಜಯ್ ಹಾಗೂ ಡಾ ರಾಜ್ಕುಮಾರ್ ಕುಟುಂಬದ ನಡುವೆ ಮೊದಲಿನಿಂದಲೂ ಆಪ್ತ ಬಂಧ ಇದೆ. ಶಿವರಾಜ್ ಕುಮಾರ್ ಅವರೊಂದಿಗೂ ವಿಜಯ್ಗೆ ಆಪ್ತ ಬಂಧವಿದೆ.
ತಮಿಳು ಚಿತ್ರರಂಗದ ಹಲವು ನಟರು ಈವರೆಗೆ ಅಪ್ಪು ಸಮಾಧಿಗೆ ಭೇಟಿ ನೀಡಿದ್ದಾರೆ. ಅಪ್ಪು ನಿಧನದ ಬಳಿಕ ಕೆಲವೇ ದಿನಗಳಲ್ಲಿ ನಟ ಸೂರ್ಯ ಸಮಾಧಿಗೆ ಭೇಟಿ ನೀಡಿದ್ದರು. ಮಾಧ್ಯಮಗಳೊಟ್ಟಿಗೆ ಮಾತನಾಡುತ್ತಾ ಅಪ್ಪುವನ್ನು ನೆನದು ಕಣ್ಣೀರು ಸಹ ಹಾಕಿದ್ದರು. ರಾಜ್ಕುಮಾರ್ ಕುಟುಂಬ ಹಾಗೂ ಸೂರ್ಯ ಅವರ ತಂದೆಯವರ ಕುಟುಂಬ ಚೆನ್ನೈನಲ್ಲಿ ನೆರೆಹೊರೆಯವರಾಗಿದ್ದರು.
ನಟ ಸಿದ್ಧಾರ್ಥ್ ಸಹ ಆಗಮಿಸಿ ಬಹು ಸಮಯ ಅಪ್ಪು ಸಮಾಧಿ ಪಕ್ಕ ಕುಳಿತು ಕಣ್ಣೀರು ಸುರಿಸಿ ಭಾವುಕರಾದರು. ಪುನೀತ್ ಜೊತೆ ಆತ್ಮೀಯ ಬಂಧವನ್ನು ಸಿದ್ಧಾರ್ಥ್ ಹೊಂದಿದ್ದರು. ನಟ ವಿಜಯ್ ಸೇತುಪತಿ ಸಹ ಅಪ್ಪು ಸಮಾಧಿಗೆ ಭೇಟಿ ನೀಡಿದ್ದರು.
ನಟ ವಿಶಾಲ್ ಅಪ್ಪು ಅಂತಿಮ ದರ್ಶನದಲ್ಲಿ ಭಾಗವಹಿಸಿದ್ದರು. ಅಪ್ಪು ನಮನ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದರು ಅಲ್ಲದೆ ಮೈಸೂರಿನ ಶಕ್ತಿಧಾಮದ ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅವಕಾಶ ಕೊಡಿ ಎಂದು ಮನವಿ ಮಾಡಿದರು. ಆದರೆ ಶಿವರಾಜ್ ಕುಮಾರ್ ಅವರು ತಾವೇ ಶಕ್ತಿಧಾಮವನ್ನು ನಡೆಸುವುದಾಗಿ ಹೇಳಿದರು.
ನಟ ವಿಜಯ್ರ ಸಿನಿಮಾ 'ಮಾಸ್ಟರ್' ಕಳೆದ ವರ್ಷ ಬಿಡುಗಡೆ ಆಗಿದ್ದು ದೊಡ್ಡ ಹಿಟ್ ಆಯಿತು. ಇದೀಗ ಅವರು 'ಬೀಸ್ಟ್' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿದ್ದು, ಸೆಲ್ವರಾಘವನ್, ಯೋಗಿಬಾಬು ಇತರೆ ನಟರು ಇದ್ದಾರೆ. ಸಿನಿಮಾವನ್ನು ನೆಲ್ಸನ್ ನಿರ್ದೇಶನ ಮಾಡುತ್ತಿದ್ದು, ಬಂಡವಾಳ ಹೂಡಿರುವುದು ಸನ್ ನೆಟ್ವರ್ಕ್ಸ್ನ ಕಲಾನಿಧಿ ಮಾರನ್.


Click it and Unblock the Notifications











