ಪೊಲೀಸರ ಜೊತೆ ವಾಗ್ವಾದ: ತಮಿಳು ನಟ ವಿಶಾಲ್ ಬಂಧನ.!
ತಮಿಳು ನಿರ್ಮಾಪಕರ ಸಂಘದಲ್ಲಿ ಭಿನ್ನಾಭಿಪ್ರಾಯ ತಾರಕಕ್ಕೇರಿದ ಪರಿಣಾಮ ಟಿ.ಎಫ್.ಪಿ.ಸಿ (ತಮಿಳು ಫಿಲ್ಮ್ ಪ್ರೊಡ್ಯೂಸರ್ಸ್ ಕೌನ್ಸಿಲ್) ಅಧ್ಯಕ್ಷ, ನಟ ವಿಶಾಲ್ ರನ್ನ ಇಂದು ಪಾಂಡಿ ಬಝಾರ್ ಪೊಲೀಸರು ಬಂಧಿಸಿದ್ದಾರೆ.
ಟಿ.ಎಫ್.ಪಿ.ಸಿ ಅಧ್ಯಕ್ಷ ಸ್ಥಾನಕ್ಕೆ ನಟ ವಿಶಾಲ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ನಿನ್ನೆಯಷ್ಟೇ ನಿರ್ಮಾಪಕರಾದ ಎ.ಎಲ್.ಅಳಗಪ್ಪನ್, ಜೆ.ಕೆ.ರಿತೇಶ್ ಸೇರಿದಂತೆ ಹಲವರು ಸಂಘದ ಕಛೇರಿಗೆ ಬೀಗ ಜಡಿದು, ಕೀಲಿ ಕೈಗಳನ್ನು ಕಮಿಷನರ್ ಕಛೇರಿಗೆ ತಲುಪಿಸಿದ್ದರು.
ಇಂದು ಬೆಳಗ್ಗೆ ಅಧ್ಯಕ್ಷನಾಗಿ ಟಿ.ಎಫ್.ಪಿ.ಸಿ ಕಛೇರಿಗೆ ವಿಶಾಲ್ ತೆರಳಿದಾಗ, ಅದಾಗಲೇ ಕಛೇರಿಗೆ ಬೀಗ ಜಡಿದಿದ್ದರಿಂದ, ಅದನ್ನ ಒಡೆದು ಒಳಗೆ ಹೋಗಲು ವಿಶಾಲ್ ಪ್ರಯತ್ನಿಸಿದ್ದಾರೆ. ಈ ಸಮಯದಲ್ಲಿ ಪಾಂಡಿ ಬಝಾರ್ ಪೊಲೀಸರು ಮತ್ತು ವಿಶಾಲ್ ನಡುವೆ ಮಾತಿನ ಚಕಮಕಿ ನಡೆದಿದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ವಿಶಾಲ್ ರನ್ನ ಅರೆಸ್ಟ್ ಮಾಡಲಾಗಿದೆ. ಮುಂದೆ ಓದಿರಿ...

ವಿಶಾಲ್ ಮೇಲೆ ಆರೋಪಗಳ ಸುರಿಮಳೆ
''ಸಂಘದಲ್ಲಿ ಇರುವ ಠೇವಣಿ ಮೊತ್ತದ ಬಗ್ಗೆ ಲೆಕ್ಕ ಕೇಳಿದರೆ, ಅದಕ್ಕೆ ಅಧ್ಯಕ್ಷನಾಗಿ ವಿಶಾಲ್ ಪ್ರತಿಕ್ರಿಯೆ ಕೊಡುವುದಿಲ್ಲ. ಸಂಘದ 8 ಕೋಟಿ ರೂಪಾಯಿ ಎಲ್ಲಿ ಹೋಯಿತು ಎಂಬುದರ ಬಗ್ಗೆ ಲೆಕ್ಕವೇ ಇಲ್ಲ. ಕಾರ್ಯದರ್ಶಿ ಕದಿರೇಸನ್ ''ಐಡಿಯಾ ಇಲ್ಲ'' ಅಂತಾರೆ. ಇದನ್ನೆಲ್ಲ ನೋಡಿಕೊಂಡು ಹೇಗೆ ಸುಮ್ಮನೆ ಇರುವುದು'' ಎಂದು ತಮಿಳು ನಟ ಮತ್ತು ಟಿ.ಎಫ್.ಪಿ.ಸಿ ಅಧ್ಯಕ್ಷ ವಿಶಾಲ್ ವಿರುದ್ಧ ನಿರ್ಮಾಪಕ ಎ.ಎಲ್.ಅಳಗಪ್ಪನ್ ಆರೋಪ ಮಾಡಿದ್ದಾರೆ.

ಸುಳ್ಳು ಭರವಸೆ ಕೊಟ್ಟಿದ್ರಾ ವಿಶಾಲ್.?
''ವಿಶಾಲ್ ಅಧಿಕಾರಕ್ಕೆ ಬಂದಾಗ ವಾರಾಂತ್ಯದಲ್ಲಿ ನಾಲ್ಕು ಸಿನಿಮಾಗಳು ಮಾತ್ರ ಬಿಡುಗಡೆ ಆಗುವಂತೆ ನೋಡಿಕೊಳ್ಳುತ್ತೇನೆ ಎಂಬ ಭರವಸೆ ನೀಡಿದ್ದರು. ಆದ್ರೆ, ಕಳೆದ ವಾರ ನಾಲ್ಕಕ್ಕೂ ಹೆಚ್ಚು ಚಿತ್ರಗಳು ರಿಲೀಸ್ ಆಯ್ತು. ನಾಳೆ ಏಳು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಇದರಿಂದ ನಿರ್ಮಾಪಕರಿಗೆ ಅಪಾರ ನಷ್ಟ ಆಗುತ್ತಿದೆ. ಈ ಬಗ್ಗೆ ಪ್ರಶ್ನೆ ಮಾಡಿದರೆ, ಸಾಲು ಸಾಲು ರಜೆ ಇರುವ ಕಾರಣ ಚಿತ್ರ ಬಿಡುಗಡೆ ವಿಚಾರವಾಗಿ ಸಂಘ ಮೂಗು ತೂರಿಸುವುದಿಲ್ಲ ಎಂದು ವಿಶಾಲ್ ಹೇಳುತ್ತಾರೆ'' ಎಂಬುದು ಎ.ಎಲ್.ಅಳಗಪ್ಪನ್ ಕೋಪಕ್ಕೆ ಕಾರಣವಾಗಿದೆ.

ರಾಜೀನಾಮೆ ಕೊಡಲಿ
''ಸಂಘದ ಜೊತೆ ಮಾತುಕತೆ ನಡೆಸಿ ಯಾವುದೇ ನಿರ್ಧಾರವನ್ನು ವಿಶಾಲ್ ಕೈಗೊಳ್ಳುವುದಿಲ್ಲ. ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುತ್ತಿರುವ ವಿಶಾಲ್, ಟಿ.ಎಫ್.ಪಿ.ಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸುಮಾರು 200 ನಿರ್ಮಾಪಕರು ಒಟ್ಟಾಗಿ ಆಗ್ರಹಿಸುತ್ತಿದ್ದೇವೆ. ಸಂಘದ ಕಛೇರಿಗೆ ಬೀಗ ಹಾಕಿ, ಕೀಲಿ ಕೈಗಳನ್ನು ಕಮಿಷನರ್ ಆಫೀಸ್ ಗೆ ತಲುಪಿಸಿದ್ದೇವೆ'' ಎಂದು ನಿನ್ನೆಯಷ್ಟೇ ಎ.ಎಲ್.ಅಳಗಪ್ಪನ್ ಹೇಳಿದ್ದರು.

ವಿಶಾಲ್ ಬಂಧನ
ಇಂದು ಸಂಘದ ಕಛೇರಿಗೆ ವಿಶಾಲ್ ತೆರಳಿದಾಗ ದೊಡ್ಡ ರಂಪಾಟ ನಡೆಯಿತು. ಬೀಗ ಒಡೆಯಲು ಮುಂದಾದ ವಿಶಾಲ್ ರನ್ನ ಪೊಲೀಸರು ತಡೆದಿದ್ದಾರೆ. ಈ ಸಮಯದಲ್ಲಿ ಪಾಂಡಿ ಬಝಾರ್ ಪೊಲೀಸರು ಮತ್ತು ವಿಶಾಲ್ ನಡುವೆ ಮಾತಿನ ಚಕಮಕಿ ನಡೆದಿದೆ. ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ವಿಶಾಲ್ ರನ್ನ ಬಂಧಿಸಲಾಗಿದೆ.

ಬೇಸರಗೊಂಡ ನಟ ವಿಶಾಲ್
''ಅಧ್ಯಕ್ಷನಾಗಿ ನಾನು ಸಂಘದ ಕಛೇರಿಗೆ ಹೋಗಿ, ಕೆಲಸ ಮಾಡಬೇಕು. ಅದಕ್ಕೆ ಮುಂದಾದಾಗ ಪೊಲೀಸರು ಬಂಧಿಸಿದರು. ಸಂಘಕ್ಕೆ ಸಂಬಂಧಪಡದವರು ಬೀಗ ಹಾಕಿದರೆ, ಅದಕ್ಕೆ ಪೊಲೀಸರು ಪ್ರೊಟೆಕ್ಷನ್ ಕೊಡುತ್ತಾರೆ. ಇದು ಸರಿಯಲ್ಲ'' ಎಂದು ಬೇಸರದಿಂದ ನುಡಿದರು ನಟ ವಿಶಾಲ್.

ಸದ್ಯದಲ್ಲೇ ಬಿಡುಗಡೆ.?
ಟಿ.ಎಫ್.ಪಿ.ಸಿ ಕಛೇರಿ ಬಾಗಿಲು ತೆಗೆಯಲು ವಿಶಾಲ್ ತಂಡ ಮತ್ತು ಪೊಲೀಸರ ಮಧ್ಯೆ ಮಾತುಕತೆ ನಡೆಯುತ್ತಿದೆ. ಕೆಲವೇ ಹೊತ್ತಲ್ಲಿ ನಟ ವಿಶಾಲ್ ಬಿಡುಗಡೆ ಆಗುವ ಸಾಧ್ಯತೆ ಇದೆ.


Click it and Unblock the Notifications











