ಕನ್ನಡ ಸಿನಿಮಾದ ಟ್ರೈಲರ್ ಬಿಡಗುಡೆ ಮಾಡಿದ ತಮಿಳಿನ ಸ್ಟಾರ್ ನಿರ್ದೇಶಕ ಪಾ ರಂಜಿತ್
ರಜನೀಕಾಂತ್ ನಟನೆಯ 'ಕಬಾಲಿ', 'ಕಾಲ' ಸೇರಿದಂತೆ ಹಲವು ಸೂಪರ್ ಹಿಟ್ ತಮಿಳು ಸಿನಿಮಾಗಳನ್ನು ನಿರ್ದೇಶಿಸಿರುವ ಜನಪ್ರಿಯ ನಿರ್ದೇಶಕ ಪಾ ರಂಜಿತ್, ಕನ್ನಡದ ಸಿನಿಮಾ ಒಂದರ ಟ್ರೈಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.
ತಮಿಳು ಚಿತ್ರರಂಗದಲ್ಲಿ ತಮ್ಮದೇ ಮಾದರಿಯಲ್ಲಿ 'ನೀಲಿ ಕ್ರಾಂತಿ' ಮಾಡುತ್ತಿರುವ ಪಾ ರಂಜಿತ್, ಅದೇ ಮಾದರಿಯ ಹೊಸಬರ ಕನ್ನಡ ಸಿನಿಮಾಕ್ಕೆ ಶುಭ ಹಾರೈಸಿದ್ದಾರೆ. 'ಪಾಲಾರ್' ಹೆಸರಿನ ಕನ್ನಡ ಸಿನಿಮಾದ ಟ್ರೈಲರ್ ಅನ್ನು ಪಾ ರಂಜಿತ್ ಬಿಡುಗಡೆ ಮಾಡಿದ್ದು, ಜಾತಿ ಅನಾಗರೀಕತೆಯ ವಿರುದ್ಧ ತೊಡೆತಟ್ಟಿದರ ಕತೆಯನ್ನು ಸಿನಿಮಾ ಒಳಗೊಂಡಿದೆ.
ತೆಲುಗಿನ 'ಸಿನಿಮಾ ಬಂಡಿ' ಮೂಲಕ ಗಮನ ಸೆಳೆದಿದ್ದ ನಟಿ, ಗಾಯಕಿ ಉಮಾ ವೈಜಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಕೋಲಾರ ಭಾಗದ ಕತೆಯನ್ನು ಒಳಗೊಂಡಿದ್ದು, ಸಿನಿಮಾದಲ್ಲಿ ಬಳಸಿರುವ ಭಾಷೆಯೂ ಕೋಲಾರ ಸೀಮೆಯದ್ದೇ ಆಗಿದೆ.

ಜಾತಿಯ ಕಾರಣಕ್ಕೆ ಮೇಲ್ವರ್ಗದಿಂದ ತುಳಿತಕ್ಕೊಳಗಾದ ಜನರ ಪಾಡು, ಜಾಗೃತಿ, ಹೋರಾಟಗಳ ಕಥನವನ್ನು 'ಪಾಲಾರ್' ಸಿನಿಮಾ ಒಳಗೊಂಡಿದೆ. ಕರ್ನಾಟಕದ ಪ್ರತಿಹಳ್ಳಿಯಲ್ಲೂ ನಡೆದಿರಬಹುದಾದ ಕತೆಯನ್ನು ಕಂಬಾಲಪಲ್ಲಿಯಂಥಹಾ ಜಾತಿ ಕಾರಣ ದುರ್ಘಟನೆಗಳನ್ನು ಕಂಡ ಕೋಲಾರದ ಹಳ್ಳಿಯೊಂದರಲ್ಲಿ ಸ್ಥಿತಗೊಳಿಸಿ ಅಲ್ಲಿನ ಸ್ಥಳೀಯ ಭಾಷೆ, ಸ್ಥಳೀಯ ಸಂಸ್ಕೃತಿಯ ಚೌಕಟ್ಟಿನಲ್ಲಿ ನಿರ್ದೇಶಕ ಜೀವ ನವೀನ್ ಸಿನಿಮಾ ಕಟ್ಟಿರುವುದು ಟ್ರೈಲರ್ನಿಂದ ತಿಳಿದು ಬರುತ್ತಿದೆ.
ಸಿನಿಮಾವನ್ನು ಸೌನವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ಸಿನಮಾದಲ್ಲಿ ಉಮಾ ಜೊತೆಗೆ ತಿಲಕ್ ಹಾಗೂ ಇನ್ನೂ ಅನೇಕರು ನಟಿಸಿದ್ದಾರೆ. ಬಹುತೇಕ ಹೊಸಬರೇ ಹೆಚ್ಚಿನ ಸಂಖ್ಯೆಯಲ್ಲಿರುವ ತಂಡವೊಂದು ಸಾಮಾಜಿಕ ಪಿಡುಗೊಂದರ ವಿರುದ್ಧ ಸೀಮಿತ ಬಜೆಟ್ನಲ್ಲಿ ಸಿನಿಮಾ ಕಟ್ಟಿದ್ದಾರೆ. ಸಿನಿಮಾ ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ.


Click it and Unblock the Notifications











