ಅಪ್ಪು ಕುಟ್ಟಿ ಯಾಕೆ ಇಷ್ಟು ಬೇಗ ಬಿಟ್ಟು ಹೋದೆ-ಪ್ರಭು ಗಣೇಶನ್
ಸಾಕಷ್ಟು ಕಲಾವಿದರು ಪುನೀತ್ ನಿಧನಕ್ಕೆ ಕಂಬನಿ ಮಿಡಿದ್ದಿದ್ದಾರೆ. ಕನ್ನಡ ಚಿತ್ರರಂಗ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಕಲಾವಿದರು ಅಪ್ಪು ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಗಣ್ಯಾತಿ ಗಣ್ಯರ ದಂಡೇ ಕಂಠೀರವ ಸ್ಟೇಡಿಯಂ ಬಳಿ ಇವತ್ತು ಬರುತ್ತಿದ್ದು, ಪುನೀತ್ ಸಾವನ್ನು ಅರಗಿಸಿಕೊಳ್ಳಲಾಗದೇ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಹಲವರು. ಇನ್ನು ಪುನೀತ್ ಅಂತಿಮ ದರ್ಶನಕ್ಕೆ ಬರೋದಕ್ಕೆ ಸಾಧ್ಯವಾಗದ ಒಂದಷ್ಟು ಕಲಾವಿದರು ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸುತ್ತಿದ್ದಾರೆ.
ಪುನೀತ್ ರಾಜ್ಕುಮಾರ್ ಜೊತೆ ಪವರ್ ಸಿನಿಮಾದಲ್ಲಿ ತಂದೆಯ ಪಾತ್ರ ನಿರ್ವಹಿಸಿದ್ದ ತಮಿಳು ಹಿರಿಯ ನಟ ಪ್ರಭು ಗಣೇಶನ್ ಪುನೀತ್ ಅಂತಿಮ ದರ್ಶನಕ್ಕೆ ಬರೋದಕ್ಕೆ ಸಾಧ್ಯವಾಗದೇ ವಿಶೇಷವಾಗಿ ಧ್ವನಿ ಸಂದೇಶ ಕಳುಹಿಸಿದ್ದಾರೆ. ಈ ಮೂಲಕ ಪುನೀತ್ ಮತ್ತು ತನ್ನ ನಡುವಿನ ಒಡನಾಟವನ್ನು ದುಖಃದಿಂದಲೇ ಹೇಳಿಕೊಂಡಿದ್ದಾರೆ. ದುಖಃ ಕಟ್ಟಿದ ಧ್ವನಿಯಲ್ಲಿ ಪ್ರಭು ಗಣೇಶನ್ ಪುನೀತ್ಗೆ ಶ್ರದ್ಧಾಂಜಲಿ ತಿಳಿಸಿದ್ದಾರೆ. ಈ ಧ್ವನಿ ಸಂದೇಶದಲ್ಲಿ ಹೀಗೆ ಹೇಳಿದ್ದಾರೆ ಪ್ರಭು ಗಣೇಶನ್.
" ಅಪ್ಪು..ಅಪ್ಪೂ ಕುಟ್ಟಿ.. ನನ್ನ ಕಂದನೇ.. ನಮ್ಮನ್ನೆಲ್ಲ ಬಿಟ್ಟು ಹೋಗಲು ಇಷ್ಟು ಅವಸರ ಆಗಿತ್ತಾ? ಎಷ್ಟು ಮೃದು ಸ್ವಭಾವದ ಹುಡುಗ ನೀನು. ದೊಡ್ಡ ಸ್ಟಾರ್ನ ಮಗನಾದರೂ ಒಂದಷ್ಟು ಅಹಂ ನಿನ್ನಲ್ಲಿ ಇರಲಿಲ್ಲ. ಅದೇ ಪ್ರೀತಿ, ಅದೇ ನಗು, ಅದೇ ಉತ್ಸಾಹ ಈಗ ನನ್ನ ಕಣ್ಣ ಮುಂದೆ ಬರುತ್ತಿದೆ. ಕೊನೆಯದಾಗಿ ನಿನ್ನನ್ನು ನೋಡಲು ಸಾಧ್ಯವಾಗುತ್ತಿಲ್ಲ ನನಗೆ. ಆದರೆ ನಿನ್ನ ನೆನಪು ಮತ್ತು ಪ್ರೀತಿ ಸದಾ ಹಾಗೇ ಇರುತ್ತೆ.ಎಲ್ಲರಿಗೂ ಎಲ್ಲರೊಂದಿಗೆ ಪ್ರೀತಿಯಿಂದ ಇರಲು, ಸ್ನೇಹಿತನಾಗಿರಲು ಸಾಧ್ಯವಿಲ್ಲ. ಆದರೆ ನಿನಗೆ ಮಾತ್ರ ಇದೆಲ್ಲವು ಸಾಧ್ಯವಾಗುತ್ತಿತ್ತು. ಇಂತಹ ಅದ್ಭುತ ಮನಸ್ಸುಳ್ಳ, ಹೃದಯ ಉಳ್ಳ ವ್ಯಕ್ತಿಯನ್ನೆ ದೇವರು ಬೇಗ ಕರೆದುಕೊಂಡು ಹೋಗಿದ್ದಾರೆ. ವಿಷಯ ತಿಳಿದು ನಾನು ಶಾಕ್ ಆಗಿದ್ದೇನೆ, ಎದೆ ಒಡೆದು ಹೋಗಿದೆ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ದುಖಃ ತಪ್ತರಾಗಿ ಮಾತನಾಡಿದ್ದಾರೆ.

ಈಗಾಗಲೇ ಸಾಕಷ್ಟು ಕಲಾವಿದರು ಪುನೀತ್ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಅಭಿಮಾನಿಗಳ ಜನಸಾಗರ ಇನ್ನು ಕಡಿಮೆ ಆಗಿಲ್ಲ, ನಿನ್ನೆಯಿಂದಲೂ ಕಂಠೀರವ ಸ್ಟೇಡಿಯಂಗೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿದ್ದು, ಅಪ್ಪು ಅಂತ್ಯಕ್ರಿಯೆ ಸಹ ಭಾನುವಾರಕ್ಕೆ ಮುಂದೂಡಲಾಗಿದೆ. ಈ ಬಗ್ಗೆ ಸ್ವತಃ ಸಿಎಂ ಬೊಮ್ಮಾಯಿ ತಿಳಿಸಿದ್ದು, ಅಭಿಮಾನಿಗಳು ಬಂದು ನೋಡಿಕೊಂಡು ಹೋಗಬಹುದು, ಇವತ್ತು ಸಂಪೂರ್ಣ ದಿನ ಪುನೀತ್ ಅಂತಿಮ ದರ್ಶನಕ್ಕೆ ಅವಕಾಶ ಇದೆ. ಶಾಂತ ಚಿತ್ತದಿಂದ ಅಭಿಮಾನಿಗಳು ನಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ರಾಕ್ ಲೈನ್ ವೆಂಕಟೇಶ್ ಕೂಡ ಈ ಬಗ್ಗೆ ಮಾತನಾಡಿ, "ಅಭಿಮಾನಿಗಳಿಗೊಸ್ಕರ ಅಪ್ಪು ಅಂತ್ಯಕ್ರಿಯೆ ಭಾನುವಾರ ಮಾಡಲಾಗುತ್ತಿದೆ. ಇವತ್ತು ಇಡೀ ದಿನ ಹಾಗೂ ನಾಳೆ ಬೆಳಗ್ಗೆ ವರೆಗೂ ಸಾರ್ವಜನಿಕರು ದರ್ಶನ ಮಾಡಬಹುದು. ನಾಳೆ ಎಷ್ಟು ಗಂಟೆಗೆ ಅಂತ್ಯಕ್ರಿಯೆ ಅಂತ ಇವತ್ತು ಸಂಜೆ 6 ಗಂಟೆಗೆ ತೀರ್ಮಾನವಾಗುತ್ತದೆ. ಅಂತ್ಯಕ್ರಿಯೆ ವೇಳೆ ನಾಳೆ ಕುಟುಂಬ ಹಾಗೂ ಕಲಾವಿದರಿಗೆ ಮಾತ್ರ ಅವಕಾಶವಿರುತ್ತದೆ. ಪುನೀತ್ ಮಗಳು ಈಗಾಗಲೇ ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದಾರೆ" ಎಂದು ತಿಳಿಸಿದರು.


Click it and Unblock the Notifications











