ಅಲ್ಲಿ ಭಾಷೆಗಾಗಿ ಹೋರಾಟ, ಇಲ್ಲಿ ಸ್ಟಾರ್ ಗಳ ನಡುವೆ ಕಿತ್ತಾಟ!
Recommended Video
ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಘಟನೆಗಳನ್ನು ಒಮ್ಮೆ ಗಮನಿಸಿ. ಎಲ್ಲಿ ನೋಡಿದರೂ ಬರೀ ಹೊಡೆದಾಟ, ಕಿತ್ತಾಟ, ಸ್ಟಾರ್ ಗಳ ಮುನಿಸು, ಅಭಿಮಾನಿಗಳ ನಡುವಿನ ಕದನ, ಹೀಗೆ ಸ್ಯಾಂಡಲ್ ವುಡ್ ತುಂಬ ಇವೇ ವಿಷಯಗಳು ಸದ್ದು ಮಾಡುತ್ತಿದೆ.
ಆದರೆ, ಪಕ್ಕದ ತಮಿಳುನಾಡಿನಲ್ಲಿ ಬೇರೆಯದ್ದೆ ವಾತಾವರಣ ಇದೆ. ಕಾಲಿವುಡ್ ನಲ್ಲಿ ಸದ್ಯ, ಭಾಷೆಗಾಗಿ ಹೋರಾಟ ನಡೆಯುತ್ತಿದೆ. ಅಲ್ಲಿನ ಸ್ಟಾರ್ ಗಳು ಹಿಂದಿ ಹೇರಿಕೆ ವಿರುದ್ಧ ಮಾತನಾಡುತ್ತಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್ ಹೀಗೆ ದೊಡ್ಡ ದೊಡ್ಡ ನಟರು ಭಾಷೆಯ ಬಗ್ಗೆ ಕಾಳಜಿ ತೋರುತ್ತಿದ್ದಾರೆ.
ಅಲ್ಲಿನ ನಟರು ಅಮಿತ್ ಶಾ ಹೇಳಿಕೆಗೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಹಿಂದಿ ಹೇರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಕನ್ನಡದ ನಟರು ಇಂತಹ ಗಂಭೀರ ವಿಷಯದ ಬಗ್ಗೆ ಮಾತನಾಡುತ್ತಿಲ್ಲ. ಇಲ್ಲಿ ಬೇಡದ ವಿಷಯಗಳ ಬಗ್ಗೆಯೇ ಹೆಚ್ಚು ಚರ್ಚೆ ಆಗುತ್ತಿವೆ.

ಕೇಂದ್ರಕ್ಕೆ ಕೇಳಿಸಿದ ತಮಿಳು ಸ್ಟಾರ್ ಗಳ ಕೂಗು
ಹಿಂದಿ ದಿವಸ್ ಆಚರಣೆ ಮಾಡಿದ ಕೇಂದ್ರ ಸರ್ಕಾರ ಮತ್ತೊಮ್ಮೆ ಹಿಂದಿ ಹೇರಿಕೆ ಮಾಡಲು ತಯಾರಿ ಮಾಡಿಕೊಂಡಿತ್ತು. ಬಿಜೆಪಿ ರಾಷ್ಟ್ರ ನಾಯಕ ಅಮಿತ್ ಶಾ ಭಾರತದಲ್ಲಿ ಎಲ್ಲರೂ ಹಿಂದಿ ಕಲಿಯಬೇಕು ಎಂದು ಹೇಳಿದ್ದರು. ಇದು ದೊಡ್ಡ ಚರ್ಚೆಗೆ ಕಾರಣ ಆಗಿತ್ತು. ಇದನ್ನು ತಮಿಳು ನಾಡಿನಲ್ಲಿ ಸ್ಟಾರ್ ಗಳು ದೊಡ್ಡ ಮಟ್ಟದಲ್ಲಿ ವಿರೋಧ ಮಾಡಿದರು. ಅವರ ಕೂಗು ಕೇಂದ್ರದವರೆಗೆ ಕೇಳಿಸಿತು.

ಕನ್ನಡದಲ್ಲಿ ಬರೀ ಬೇಡದಿರುವ ವಿಷಯಗಳ ಬಗ್ಗೆ ಚರ್ಚೆ
ಆದರೆ, ಕನ್ನಡ ಚಿತ್ರರಂಗದಲ್ಲಿ ಈಗ ಬರೀ ಅಭಿಮಾನಿಗಳ ಸಮರ, ಸ್ಟಾರ್ ವಾರ್, ಸೋಷಿಯಲ್ ಮೀಡಿಯಾ ಫೈಟ್ ಈ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತದೆ. ತಮಿಳು ನಾಡಿನ ರೀತಿಯಲ್ಲಿ ಇಲ್ಲಿ ಯಾರೂ ಭಾಷೆಯ ಬಗ್ಗೆ ಹೆಚ್ಚು ಮಾತಾನಾಡುತ್ತಿಲ್ಲ. ನಟ ಸುದೀಪ್ ಹಾಗೂ ದರ್ಶನ್ ಫ್ಯಾನ್ಸ್ ವಾರ್ ಬಗ್ಗೆ ಟ್ವೀಟ್ ಮಾಡಿದ್ರೆ, ವಿನಃ ಹಿಂದಿ ಹೇರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

ಕಳೆದು ಹೋದ ಶಿವಣ್ಣ, ಜಗಣ್ಣ ಮಾತು
ಹಿಂದಿ ಹೇರಿಕೆ ವಿರುದ್ಧ ಕನ್ನಡದಲ್ಲಿ ನಟ ಶಿವರಾಜ್ ಕುಮಾರ್ ಮಾತನಾಡಿದ್ದರು. ನಟ ಜಗ್ಗೇಶ್ ಕೂಡ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದರು. ಆದರೆ, ಚಿತ್ರರಂಗದ ಫ್ಯಾನ್ಸ್ ವಾರ್ ಗಲಾಟೆಗಳ ನಡುವೆ ಅವರ ಮಾತುಗಳು ಕಳೆದು ಹೋಯ್ತು. ಹಿಂದಿ ಹೇರಿಕೆ ಬಗ್ಗೆ ಧ್ವನಿ ಎತ್ತಿದ್ರೂ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಲಿಲ್ಲ. ಇವರನ್ನು ಬಿಟ್ಟರೆ ಬೇರೆ ಸ್ಟಾರ್ ಗಳು ಈ ಬಗ್ಗೆ ಬಾಯಿ ಬಿಡಲಿಲ್ಲ.

ನಾಯಕತ್ವ ಹಾಗೂ ಒಗ್ಗಟ್ಟಿನ ಕೊರತೆ ಇದೆಯೇ?
ಇದನ್ನು ನೋಡಿದರೆ, ಸ್ಯಾಂಡಲ್ ವುಡ್ ನಲ್ಲಿ ಈ ರೀತಿಯ ವಿಷಯಗಳು ಬಂದಾಗ ನಾಯಕತ್ವ ಹಾಗೂ ಒಗ್ಗಟ್ಟಿನ ಕೊರತೆ ಇದೆಯೇ ಎನ್ನುವ ಪ್ರಶ್ನೆ ಮೂಡುತ್ತದೆ. ಈ ಹಿಂದೆ ರಾಜ್ ಕುಮಾರ್ ಕಾಲದಲ್ಲಿ ಕನ್ನಡದ ಬಗ್ಗೆ ಏನೇ ಹೋರಾಟ ಇದ್ದರೂ, ಇಡೀ ಚಿತ್ರರಂಗ ಬೆಂಬಲ ನೀಡುತ್ತಿತ್ತು. ಆದರೆ, ಈಗ ಅವರವರ ಕೆಲಸಗಳಲ್ಲಿ ಅವರವರು ಬ್ಯುಸಿ ಇರುತ್ತಾರೆ. ಕೆಲವು ನಟರಂತು ಒಂದೇ ವೇದಿಕೆಯಲ್ಲಿ ನಿಲ್ಲುವುದಿಲ್ಲ.

ಕನ್ನಡ ಭಾಷೆ ಇದ್ರೆ ತಾನೇ ಕನ್ನಡ ಸಿನಿಮಾಗಳು
''ಕನ್ನಡ ಸಿನಿಮಾ ನೋಡಿ.... ಕನ್ನಡ ಚಿತ್ರರಂಗ ಬೆಳೆಸಿ...'' ಎಂದು ಕೇಳಿಕೊಳ್ಳುವ ನಟರು ಕನ್ನಡದ ವಿಷಯ ಬಂದಾಗ ಏಕೆ ಮೌನವಾಗಿದ್ದಾರೆ. ಕನ್ನಡದ ಇದ್ದರೆ, ತಾನೇ ಕನ್ನಡ ಸಿನಿಮಾಗಳು ಇರಲು ಸಾಧ್ಯ. ಇದೇಕೆ ಇಂದು ಇಲ್ಲಿನ ಸ್ಟಾರ್ ಗಳಿಗೆ ಅರ್ಥ ಆಗುತ್ತಿಲ್ಲ. ಅಲ್ಲಿನ ಸ್ಟಾರ್ ಗಳು ಗಂಭೀರ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರೆ, ಇಲ್ಲಿ ಬರೀ ಬೇಡದ ವಿಷಯಗಳು ಚರ್ಚೆ ನಡೆಯುತ್ತಿದೆ.


Click it and Unblock the Notifications











