ತಮಿಳು ಚಿತ್ರರಂಗದ ದಿಕ್ಕು ಬದಲಿಸಿದ್ದೇ ಕರುಣಾನಿಧಿಯ 'ಕ್ರಾಂತಿಕಾರಿ' ಬರಹ
Recommended Video

ಭಾರತೀಯ ರಾಜಕೀಯ ಇತಿಹಾಸದಲ್ಲಿ ಬರುವ ದಿಗ್ಗಜ ರಾಜಕಾರಣಿಗಳಲ್ಲಿ ಎಂ ಕರುಣಾನಿಧಿ ಕೂಡ ಒಬ್ಬರು. ತಮಿಳುನಾಡಿನ ರೆಬೆಲ್ ರಾಜಕಾರಣಿ. ಅಣ್ಣಾದೊರೈ ನಂತರ 'ದ್ರಾವಿಡ ಮುನ್ನೇತ್ರ ಕಳಗಮ್' (DMK) ಪಕ್ಷದ ನಾಯಕತ್ವ ವಹಿಸಿ ತಮಿಳುನಾಡಿನಲ್ಲಿ ರಾಜ್ಯಭಾರ ಮಾಡಿದ ನಾಯಕ.
ತಮಿಳುನಾಡಿನ ಮೂರನೇ ಮುಖ್ಯಮಂತ್ರಿ ಹಾಗೂ ಐದು ಬಾರಿ ಮುಖ್ಯಮಂತ್ರಿಯಾಗಿದ್ದ ಹೆಗ್ಗಳಿಕೆ ಎಂ ಕರುಣಾನಿಧಿ ಅವರದ್ದು. ಸುಮಾರು 60 ವರ್ಷಗಳ ಸುದೀರ್ಘ ರಾಜಕೀಯ ಜೀವನ ಮಾಡಿರುವ ಹಿರಿಯ ಮುತ್ಸದ್ಧಿ. ಕರುಣಾನಿಧಿ ಅವರ ನಿಧನ ಈಗ ಇಡೀ ತಮಿಳುನಾಡನ್ನ ಶೋಕಸಾಗರದಲ್ಲಿ ಮುಳುಗಿಸಿದೆ. ಇಂತಹ ನಾಯಕ ಸಿಎಂ ಆಗೋಕೂ ಮುಂಚೆ ಸಿನಿಮಾ ಕ್ಷೇತ್ರದಲ್ಲಿದ್ದರು ಎನ್ನುವುದು ವಿಶೇಷ.
ತಮಿಳುನಾಡು ಮಾಜಿ ಮುಖ್ಯಮಂತ್ರಿ 'ಕಲೈನಾರ್' ಕರುಣಾನಿಧಿ ಇನ್ನಿಲ್ಲ
ಹೌದು, ತಮಿಳುನಾಡಿನ ಮುಖ್ಯಮಂತ್ರಿಗಳಿಗೂ ಮತ್ತು ಸಿನಿಮಾ ಜಗತ್ತಿಗೂ ಅವಿನಾಭಾವ ಸಂಬಂಧ. ತಮಿಳುನಾಡಿನ ರಾಜಕೀಯ ಇತಿಹಾಸ ನೋಡಿದ್ರೆ, ಸಿನಿಮಾ ಕಲಾವಿದರೇ ಅಲ್ಲಿ ಅಧಿಕಾರ ನಡೆಸಿದ್ದಾರೆ. ಎಂ.ಜಿ ರಾಮಚಂದ್ರನ್ (MGR), ಜೆ ಜಯಲಲಿತಾ ಹಾಗೂ ಎಂ ಕರುಣಾನಿಧಿ ಪ್ರಮುಖರು. ತಮಿಳು ಸಿನಿರಂಗ ಕಂಡ ಶ್ರೇಷ್ಠ ಬರಹಗಾರ ಕರುಣಾನಿಧಿ. ಬರಹಗಾರ ಕರುಣಾನಿಧಿಯ ಇನ್ನೊಂದು ಮುಖವನ್ನ ನೋಡಲು ಮುಂದೆ ಓದಿ...

ಬರಹಗಾರನಾಗಿದ್ದ ಕರುಣಾನಿಧಿ
20 ವರ್ಷ ವಯಸ್ಸಿನಲ್ಲೇ ತನ್ನ ಬರವಣಿಗೆಯ ಶೈಲಿಯಿಂದ ಚಿತ್ರರಂಗದಲ್ಲಿ ಒಂದು ಹೊಸ ಅಲೆ ಸೃಷ್ಟಿಸಿದ ಸಾಹಿತಿ. ಅದು 1947ರ ಸಮಯ. ಡ್ರಾವಿಡ ಚಳುವಳಿಯ ಸಂದರ್ಭ. ಇಂತಹ ಸಮಯದಲ್ಲಿ ದ್ರಾವಿಡ ಪರವಾಗಿ ದನಿ ಎತ್ತುವಂತಹ ಕಥೆಗಳನ್ನ ಬರೆದು ಕರುಣಾನಿಧಿ ತಮಿಳುನಾಡಿನಲ್ಲಿ ಗುರುತಿಸಿಕೊಂಡರು.

ದ್ರಾವಿಡ ಕವಿ ಎಂಬ ಶಕ್ತಿ
ಶಿವಾಜಿ ಗಣೇಶನ್ ಮತ್ತು ಎಸ್ ಎಸ್ ರಾಜೇಂದ್ರನ್ ಅಭಿನಯದ 'ಪರಾಸಕ್ತಿ' ಚಿತ್ರಕ್ಕೆ ಕರುಣಾನಿಧಿ ಮೊದಲ ಬಾರಿಗೆ ಚಿತ್ರಕಥೆ ಬರೆದರು. ಆದ್ರೆ, ಆ ಸಿನಿಮಾ ವಿವಾದಕ್ಕೆ ಸಿಲುಕಿ ಬಿಡುಗಡೆಯಾಗಲಿಲ್ಲ. ಬ್ರಾಹ್ಮಣರ ಸಿದ್ಧಾಂತವನ್ನು ಟೀಕಿಸಿದ ಅಂಶಗಳನ್ನು ಒಳಗೊಂಡಿದೆ ಎಂಬ ಕಾರಣದಿಂದಾಗಿ, ಸಾಂಪ್ರದಾಯಿಕ ಹಿಂದೂಗಳು ಈ ಚಿತ್ರವನ್ನು ವಿರೋಧಿಸಿದರು. ನಂತರ 1952ರಲ್ಲಿ ಈ ಸಿನಿಮಾ ರಿಲೀಸ್ ಆಯ್ತು.
ಕವಿ ಹೃದಯ, ಬಂಡಾಯದ ಮನಸ್ಸಿನ 'ಕಲೈನಾರ್' ಕರುಣಾನಿಧಿ

ಸಾಮಾಜಿಕ ಕಳಕಳಿ ಹೊಂದಿದ್ದ ಬರಹಗಾರ
ಕರುಣಾನಿಧಿ ಅವರು ಬರೆದ ಚಿತ್ರಕಥೆಗಳಲ್ಲಿ ಹೆಚ್ಚು ಗಮನ ಸೆಳೆದ ಮತ್ತೆರಡು ಚಿತ್ರಗಳು 'ಪಣಮ್' ಮತ್ತು 'ಥಂಗರಥಮ್'. ಈ ಚಿತ್ರಗಳಲ್ಲಿ ವಿಧವೆ ಪುನರ್ವಿವಾಹ, ಅಸ್ಪೃಶ್ಯತೆ, ಸ್ವಾಭಿಮಾನದ ಮದುವೆಗಳು, ಜಮೀನ್ದಾರಿ ಪದ್ಧತಿ ನಿರ್ಮೂಲನೆ ಮತ್ತು ಧಾರ್ಮಿಕ ಬೂಟಾಟಿಕೆಯಂತಹ ಅಂಶಗಳನ್ನ ಪ್ರಸ್ತಾಪಿಸಲಾಗಿತ್ತು. ಕರುಣಾನಿಧಿ ಅವರು ಬರೆಯುತ್ತಿದ್ದ ಬಹುತೇಕ ಚಿತ್ರಕಥೆಗಳು ಹೀಗೆ ಇರುತ್ತಿದ್ದವು. ಹೀಗಾಗಿ, ಸಾಮಾಜಿಕವಾಗಿ ಕೂಡ ಕರುಣಾನಿಧಿ ಜನಗಳಿಗೆ ಹತ್ತಿರವಾಗಿದ್ದರು.

ಕರುಣಾನಿಧಿಯ ಬರಹಕ್ಕೆ ವಿರೋಧವಿತ್ತು
ಕರುಣಾನಿಧಿ ಅವರ ಕಥೆಗಳಲ್ಲಿ ಹೆಚ್ಚು ಸಾಮಾಜಿಕ ಸಂದೇಶಗಳಿದ್ದ ಕಾರಣ ಅವರ ಸಿನಿಮಾ ಮತ್ತು ನಾಟಕಗಳು ಹೆಚ್ಚು ಮನ್ನಣೆಗಳಿಸಿಕೊಳ್ಳುತ್ತಿತ್ತು. ಆದ್ರೆ, 1950ರ ಸಮಯದಲ್ಲಿ ಕರುಣಾನಿಧಿ ರಚಿಸಿದ್ದ ಕೆಲವು ನಾಟಕಗಳು ಇದೇ ಕಾರಣದಿಂದ ನಿಷೇಧ ಕೂಡ ಆಗಿದ್ದವು. ಅಷ್ಟರ ಮಟ್ಟಿಗೆ ಅವರ ಸಾಹಿತ್ಯ ಪರಿಣಾಮ ಬೀರಿತ್ತು. ಹಾಗಾಗಿ ಅವರನ್ನ ಸಾಮಾಜಿಕ ಬರಹಗಾರನೆಂದು ಗುರುತಿಸುತ್ತಿದರೂ, ಅವರನ್ನ ಮತ್ತು ಅವರ ಬರವಣಿಗೆಯನ್ನ ವಿರೋಧಸುವ ಬಣವೂ ಇತ್ತು.

ಸಾಹಿತ್ಯ ಲೋಕಕ್ಕೆ ಹೆಚ್ಚಿನ ಕೊಡುಗೆ
ಚಿತ್ರರಂಗದ ಜೊತೆ ಜೊತೆ ಕರುಣಾನಿಧಿ ತಮಿಳು ಸಾಹಿತ್ಯ ಲೋಕಕ್ಕೆ ಹೆಚ್ಚು ಕೊಡುಗೆ ನೀಡಿದ್ದಾರೆ. ಹಲವು ಪುಸ್ತಕಗಳು, ಕಾದಂಬರಿಗಳು, ಪದ್ಯಗಳು, ನಾಟಕಗಳು, ಜೀವನ ಚರಿತ್ರೆಗಳು, ಸಂಭಾಷಣೆ, ಚಲನಚಿತ್ರ ಗೀತೆಗಳನ್ನ ಬರೆದಿದ್ದಾರೆ. ತಿರುಕುರಲ್ ಗೆ ಕುರಲೋವಿಯಮ್, ತೋಲ್ಕಾಪ್ಪಿಯ ಪೂಂಗ, ಪೂಂಬುಕಾರ್ ಮೊದಲಾದ ಪುಸ್ತಕಗಳನ್ನೂ ಬರೆದಿದ್ದಾರೆ.

ಕರುಣಾನಿಧಿಯ ಪ್ರಮುಖ ಚಿತ್ರಗಳು
1947ರಲ್ಲಿ 'ರಾಜಕುಮಾರಿ' ಚಿತ್ರಕ್ಕೆ ಚಿತ್ರಕಥೆ ಬರೆದ ಕರುಣಾನಿಧಿ ಅಲ್ಲಿಂದ ಮಂದಿರಿ ಕುಮಾರಿ, ಮಾನಮಗನ್, ಪರಾಸಕ್ತಿ, ತಿರುಂಬಿಪಾರ್, ಮನೋಹರ, ಮಲೈ ಕಲ್ಲನ್, ರಾಜ ರಾಣಿ, ಪುದುಮೈ ಪಿತನ್, ಕುರವಂಜಿ, ಕಾಂಜಿ ತಲೈಯವನ್, ಪೂಮಾಲೈ, ಮರಕ ಮುಡಿಯುಮಾ, ಪೂಕಾರಿ, ಪಾಲೈವನ ರೋಜಕ್ಕಲ್, ಪಾಡಾಧ ತೆನೀಕ್ಕಲ್, ಪಾಸಕಿಳಿಗಲ್, ಉಲಿಯಿನ್ ಒಸೈ, ಮುಲೈ ಪಾಲ್ ಸೇರಿದಂತೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 'ಪೊನ್ನರ್ ಶಂಕರ್' ಎಂಬ ಪೌರಾಣಿಕ ಚಿತ್ರಕ್ಕೆ ಕೊನೆಯದಾಗಿ ಚಿತ್ರಕಥೆ ಬರೆದಿದ್ದರು.
ಎಂ ಕರುಣಾನಿಧಿ ಐದು ದಶಕಗಳ ರಾಜಕೀಯ ಬದುಕಿನ ಹಿನ್ನೋಟ

ಜಯಲಿಲತಾ ಪಾತ್ರಕ್ಕೆ ಜೀವ ಕೊಟ್ಟಿದ್ದ ಕರುಣಾನಿಧಿ
ತಮಿಳುನಾಡಿನ ಖ್ಯಾತ ಚಿತ್ರನಟಿ ಹಾಗೂ ಮಾಜಿ ಮುಖ್ಯಮಂತ್ರಿ ಜಯಲಲಿತಾ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗ ಕರುಣಾನಿಧಿ ಯಶಸ್ವಿ ಬರಹಗಾರರಾಗಿದ್ದರು. ಅಂದಿನ ಬಹುತೇಕ ಸ್ಟಾರ್ ಗಳ ಸಿನಿಮಾಗಳಿಗೆ ಇವರೇ ಸ್ಕ್ರಿಪ್ಟ್ ಬರೆಯುತ್ತಿದ್ದರು. 1966 ರಲ್ಲಿ ಜಯಲಲಿತಾ ಅಭಿನಯಿಸಿದ್ದ 'ಮಣಿ ಮುಗುಂಡಮ್' ಚಿತ್ರದಲ್ಲಿ ಜಯಲಲಿತಾ ಪಾತ್ರಕ್ಕೆ ಸ್ಕ್ರಿಪ್ಟ್ ಬರೆದಿದ್ದು ಇದೇ ಕರುಣಾನಿಧಿ. ನಂತರ ಇವರಿಬ್ಬರು ಎಲ್ಲೂ ಒಟ್ಟಿಗೆ ಕೆಲಸ ಮಾಡಿಲ್ಲ. ಬದ್ಧ ವೈರಿಗಳಾಗಿ ರಾಜಕೀಯ ರಂಗಕ್ಕೆ ಧುಮುಕಿದ್ದರು. ನಂತರ ಆಗಿದ್ದೆಲ್ಲಾ ಇತಿಹಾಸ.


Click it and Unblock the Notifications











