ಸ್ಯಾಂಡಲ್ವುಡ್ ನಟ, ನಿರ್ದೇಶಕ ಟಪೋರಿ ಸತ್ಯ ನಿಧನ: ಚಿತ್ರರಂಗಕ್ಕೆ ಮತ್ತೊಂದು ಆಘಾತ!
ಭಾನುವಾರ (ಏಪ್ರಿಲ್ 23) ಕನ್ನಡ ಚಿತ್ರರಂಗಕ್ಕೆ ಶಾಕ್ ಮೇಲೆ ಶಾಕ್ ಆಗುತ್ತಿದೆ. ಬೆಳಗ್ಗೆಯಷ್ಟೇ ಕಿರುತೆರೆ ಹಾಗೂ ಸಿನಿಮಾ ನಟ ಸಂಪತ್ ಜಯರಾಂ ಆತ್ಮಹತ್ಯೆಗೆ ಶರಣಾದ ವಿಷಯ ಹೊರಬಿದ್ದಿತ್ತು. ಇದರಿಂದ ಇನ್ನೂ ಚೇತರಿಸಿಕೊಳ್ಳುತ್ತಿರುವಾಗಳೇ ಕನ್ನಡದ ಚಿತ್ರರಂಗದ ಮತ್ತೊಬ್ಬ ನಟ ಹಾಗೂ ನಿರ್ದೇಶಕ ನಿಧನ ಸುದ್ದಿ ಬಂದಿದೆ.
ಸ್ಯಾಂಡಲ್ವುಡ್ನ ನಟ ಹಾಗೂ ನಿರ್ದೇಶಕ ಟಪೋರಿ ಸತ್ಯ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಇವರು ಕೆಲವು ದಿನಗಳಿಂದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಸಂಬಂಧ ಇವರನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಟಪೋರಿ ಸತ್ಯ ಅವರಿಗೆ 46 ವರ್ಷ ವಯಸ್ಸಾಗಿತ್ತು. ಲೂಸ್ ಮಾದ ಯೋಗಿ ಅಭಿನಯದ 'ನಂದ ಲವ್ಸ್ ನಂದಿತಾ' ಸಿನಿಮಾ ಸೇರಿಂದಂತೆ 30 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಬಹುತೇಕ ಪೋಷಕ ಪಾತ್ರಗಳಲ್ಲಿಯೇ ನಟಿಸಿದ್ದರು.

ನಟನೆ ಜೊತೆ ನಿರ್ದೇಶನದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಲೂಸ್ ಮಾದ ಯೋಗಿ ನಾಯಕನಾಗಿ ನಟಿಸಿದ್ದ 'ನಂದ ಲವ್ಸ್ ನಂದಿತಾ' ಇವರಿಗೆ ಜನಪ್ರಿಯತೆ ತಂದುಕೊಟ್ಟಿತ್ತು. ಈ ಸಿನಿಮಾದಲ್ಲಿ ಟಪೋರಿ ಸತ್ಯ ಕ್ವಾಟ್ರು ಅನ್ನೋ ಪಾತ್ರದಲ್ಲಿ ನಟಿಸಿದ್ದರು. ಈ ಪಾತ್ರ ಮೂಲಕ ಚಿತ್ರರಂಗದಲ್ಲಿ ಮತ್ತಷ್ಟು ಜನಪ್ರಿಯರಾಗಿದ್ದರು.
ಟಪೋರಿ ಸತ್ಯ 'ಮೇಳ' ಅನ್ನೋ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇತ್ತೀಚೆಗೆ ನಟನೆಗಿಂತ ನಿರ್ದೇಶಕನದ ಕಡೆ ವಾಲಿದ್ದು, ಹೊಸ ಸಿನಿಮಾವನ್ನು ನಿರ್ದೇಶನ ಮಾಡಲು ತಯಾರಿ ನಡೆಸಿದ್ದರು. ಅಷ್ಟರಲ್ಲೇ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ಸತ್ಯ ಅವರ ಪಾರ್ಥೀವ ಶರೀರವನ್ನು ಬನಶಂಕರಿ ಸಮೀಪದ ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದೆ.


Click it and Unblock the Notifications











