'ದಿ ಕಶ್ಮೀರ್ ಫೈಲ್ಸ್' ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಸಿಎಂ
'ದಿ ಕಶ್ಮೀರ್ ಫೈಲ್ಸ್' ಸಿನಿಮಾದ ಬಗ್ಗೆ ಚರ್ಚೆ ನಿಧಾನಕ್ಕೆ ಕಾವೇರುತ್ತಿರುವ ಹೊತ್ತಿನಲ್ಲಿಯೇ ಕರ್ನಾಟಕದಲ್ಲಿ ಸಿನಿಮಾಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ದೊರೆತಿದೆ.
ನಿನ್ನೆ (ಮಾರ್ಚ್ 13) ರಂದು ಒರಾಯನ್ ಮಾಲ್ನಲ್ಲಿ 'ದಿ ಕಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಿಸಿದ ಸಿಎಂ ಬಸವರಾಜ ಬೊಮ್ಮಾಯಿ ಸಿನಿಮಾಕ್ಕೆ ರಾಜ್ಯದ ಸಿನಿಮಾ ಮಂದಿರಗಳಲ್ಲಿ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ.
ಸಿನಿಮಾ ವೀಕ್ಷಿಸಿದ ಬಳಿಕ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ''ಈ ಸಿನಿಮಾ ನೋಡಿದ ಬಳಿಕ ನನಗೆ ಮಾತನಾಡಲು ಆಗುತ್ತಿಲ್ಲ. ಯಾವ ರೀತಿ ಕಾಶ್ಮೀರದಲ್ಲಿ ಪಂಡಿತರ ಮೇಲೆ ದಾಳಿಯಾಗಿತ್ತು ಎನ್ನುವದನ್ನು ಸಿನಿಮಾದಲ್ಲಿ ತೋರಿಸಿದ್ದಾರೆ. ಅದೆಷ್ಟೋ ಜನ ಉಗ್ರರ ಕೈಲಿ ಸಿಕ್ಕಿ ಪ್ರಾಣವನ್ನ ಬಿಟ್ಟಿದ್ದಾರೆ. ಹೀಗಾಗಿಯೇ ಅಲ್ಲಿ ಆರ್ಟಿಕಲ್ 370 ಅನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತೆರವುಗೊಳಿಸಿತು. ಇದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. ಪ್ರತಿಯೊಬ್ಬ ಭಾರತೀಯರು ಈ ಸಿನಿಮಾವನ್ನ ನೋಡಬೇಕು. ಹೀಗಾಗಿ ನಾನು ಸಿನಿಮಾದ ಸಂಪೂರ್ಣ ತೆರಿಗೆ ವಿನಾಯಿತಿ ನೀಡಿ ಅದೇಶ ಮಾಡುತ್ತೇನೆ' ಎಂದಿದ್ದಾರೆ.

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಸಿನಿಮಾಕ್ಕೆ ಕರ್ನಾಟಕದಲ್ಲಿ ಮಾತ್ರವೇ ಅಲ್ಲ, ಗುಜರಾತ್, ಹರಿಯಾಣ, ಮಧ್ಯ ಪ್ರದೇಶಗಳಲ್ಲಿಯೂ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಬಿಜೆಪಿ ಬೆಂಬಲಿಗರು, ಮುಖಂಡರುಗಳು ಈ ಸಿನಿಮಾವನ್ನು ನೋಡುತ್ತಿದ್ದಾರೆ. ನಿನ್ನೆ ಬಿಜೆಪಿ ಹಿರಿಯ ಮುಖಂಡ ಲಾಲ್ ಕೃಷ್ಣ ಅಡ್ವಾಣಿಯವರು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಿಸಿದರು.
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವು 1990 ರಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆಯ ಕುರಿತಾದ ಕತೆಯನ್ನು ಒಳಗೊಂಡಿದೆ. ಕಶ್ಮೀರಿ ಪಂಡಿತರು ಏಕೆ ಮತ್ತು ಹೇಗೆ ಜಮ್ಮು ಕಾಶ್ಮೀರ ಬಿಟ್ಟು ತೆರಳಿದರು ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ.
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು 'ಪ್ರೊಪಾಗಾಂಡ' ಎಂದೂ ಸಹ ಕರೆಯಲಾಗುತ್ತಿದೆ. ಹಿಂದು-ಮುಸ್ಲಿಂ ನಡುವೆ ದ್ವೇಷ ಹೆಚ್ಚಿಸುವ ಕಾರ್ಯವನ್ನು ಮಾಡಲೆಂದೇ ಈ ಸಿನಿಮಾ ನಿರ್ಮಿಸಲಾಗಿದೆ. ಸಿನಿಮಾದಲ್ಲಿ ಒಂದು ಕೋಮನ್ನು ಕೆಟ್ಟವರೆಂದು ಇನ್ನೊಂದು ಕೋಮನ್ನು ಅಮಾಯಕರೆಂದು ಚಿತ್ರಿಸಲಾಗಿದೆ ಎಂಬ ಆರೋಪಗಳು ಅಲ್ಲಲ್ಲಿ ಕೇಳಿ ಬರುತ್ತಿವೆ.
ಸಿನಿಮಾ ನಿರ್ದೇಶನ ಮಾಡಿರುವ ವಿವೇಕ್ ಅಗ್ನಿಹೋತ್ರಿ, ತಮ್ಮ ಸಿನಿಮಾಕ್ಕೆ ತೊಂದರೆ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ''ಕಪಿಲ್ ಶರ್ಮಾ ಶೋ ಸೇರಿದಂತೆ ಹಲವರು ತಮ್ಮ ಸಿನಿಮಾದ ಪ್ರಚಾರಕ್ಕೆ ಒಪ್ಪಲಿಲ್ಲ. ಬಳಿಕ ಅನುಪಮ್ ಚೋಪ್ರಾ ನಮ್ಮ ಸಿನಿಮಾವನ್ನು ವಿಮರ್ಶೆ ಮಾಡಲಿಲ್ಲ. ಹಲವು ಮುಖ್ಯವಾಹಿನಿ ಮಾಧ್ಯಮಗಳು ನಮ್ಮ ಸಿನಿಮಾಕ್ಕೆ ಪ್ರಚಾರ ನೀಡಲಿಲ್ಲ'' ಎಂದಿದ್ದಾರೆ. ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ಕಪಿಲ್ ಶರ್ಮಾ, ''ಕೇವಲ ಒಂದು ಕಡೆಯ ಹೇಳಿಕೆಗಳನ್ನು ಮಾತ್ರ ಕೇಳಬೇಡಿ. ಅದು ಸತ್ಯವಲ್ಲ'' ಎಂದಿದ್ದಾರೆ.
ಮತ್ತೊಂದೆಡೆ ಸಿನಿಮಾದ ವಿರುದ್ಧ ಸ್ಕ್ವಾಡ್ರನ್ ಲೀಡರ್ ರವಿ ಖನ್ನಾ ಪತ್ನಿ ದೂರು ದಾಖಲಿಸಿದ್ದಾರೆ. ಸಿನಿಮಾವು ಸತ್ಯ ಘಟನೆಯನ್ನು ತಿರುಚಿ ಮಾಡಲಾಗಿದೆ. ಅಲ್ಲದೆ ತಮ್ಮ ಪತಿಯನ್ನು ಆಕ್ಷೇಪಾರ್ಯವಾಗಿ ಸಿನಿಮಾದಲ್ಲಿ ಚಿತ್ರಿಸಲಾಗಿದೆ. ಸಿನಿಮಾಕ್ಕೂ ನಿಜ ಘಟನೆಗಳಿಗೂ ಸಂಬಂಧವಿಲ್ಲ ಎಂದು ಅವರು ಆರೋಪಿಸಿದ್ದಾರೆ. ರವಿ ಖನ್ನಾ ಪತ್ನಿಯ ದೂರಿನ ವಿಚಾರಣೆ ನಡೆಸಿರುವ ಜಮ್ಮು ಕಾಶ್ಮೀರದ ಜಿಲ್ಲಾ ನ್ಯಾಯಾಲಯ ಸಿನಿಮಾದ ಕೆಲವು ದೃಶ್ಯಗಳನ್ನು ಕತ್ತರಿಸುವಂತೆ ಆದೇಶಿಸಿದೆ.
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಅನುಪಮ್ ಖೇರ್, ಚಕ್ರವರ್ತಿ ಮಿಥುನ್, ಕನ್ನಡದ ನಟ ಪ್ರಕಾಶ್ ಬೆಳವಾಡಿ, ಪಲ್ಲವಿ ಜೋಶಿ, ದರ್ಶನ್ ಕುಮಾರ್ ಇನ್ನಿತರರು ನಟಿಸಿದ್ದಾರೆ.


Click it and Unblock the Notifications











