ಗರುಡ ಗಮನ ವೃಷಭ ವಾಹನ ಚಿತ್ರಕ್ಕೆ ಮತ್ತೊಬ್ಬ ತೆಲುಗು ನಟನಿಂದ ಮೆಚ್ಚುಗೆ!
2021ರಲ್ಲಿ ಪ್ರೇಕ್ಷಕರ ಮನಗೆದ್ದ ಸಿನಿಮಾಗಳ ಪೈಕಿ 'ಗರುಡ ಗಮನ ವೃಷಭ ವಾಹನ' ವಾಹನ ಚಿತ್ರ ಕೂಡ ಪ್ರಮುಖವಾಗಿದೆ. ರಾಜ್ ಬಿ. ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ರೌಡಿಸಂ ಲೋಕದ ಕಥೆ ಹೇಳಲಾಗಿದೆ. ನಿರ್ದೇಶನದ ಜತೆಗೆ ಪ್ರಮುಖ ಪಾತ್ರದಲ್ಲೂ ರಾಜ್ ಬಿ. ಶೆಟ್ಟಿ ನಟಿಸಿದ್ದಾರೆ. ಇನ್ನೊಂದು ಮುಖ್ಯ ಪಾತ್ರಕ್ಕೆ ರಿಷಬ್ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲೇ ಬೇರೆಯದ್ದೇ ಫೀಲ್ ಕೊಟ್ಟಿತ್ತು. ಈ ಹಿಂದೆ ನೋಡಿರದ ರೀತಿಯಲ್ಲಿ ಈ ಸಿನಿಮಾ ಮಜಾ ಕೊಟ್ಟಿತ್ತು. ಒಳ್ಳೆ ಛಾಯಾಗ್ರಹಣ, ಅದ್ಭುತ ಹಿನ್ನೆಲೆ ಸಂಗೀತ, ಕಲಾವಿದರ ಅಭಿನಯ ಎಲ್ಲವೂ ಸಖತ್ ಕಿಕ್ ಕೊಟ್ಟಿತ್ತು.
Recommended Video
ಅಷ್ಟೇ ಅಲ್ಲದೇ 'ಗರುಡ ಗಮನ ವೃಷಭ ವಾಹನ' ಚಿತ್ರವನ್ನು ಅನೇಕ ಸ್ಟಾರ್ ಸೆಲೆಬ್ರೆಟಿಗಳು ಕೂಡ ನೋಡಿ ಮೆಚ್ಚಿಕೊಂಡಿದ್ದಾರೆ. ರಾಜ್ ಬಿ ಶೆಟ್ಟಿ ನಟನೆ ಮತ್ತು ನಿರ್ದೇಶನಕ್ಕೆ ಬೆರಗಾಗಿರುವ ಹಲವರು ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ನೋಡಿ ತಮಗನ್ನಿಸಿದ ರೀತಿಯನ್ನು ಬರೆದುಕೊಳ್ಳುತ್ತಿದ್ದಾರೆ. ಈ ಮೂಲಕ 'ಗರುಡ ಗಮನ ವೃಷಭ ವಾಹನ' ಚಿತ್ರ ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದು, ಇದೀಗ ಚಿತ್ರದ ಬಗ್ಗೆ ತೆಲುಗು ನಟ ಆನಂದ್ ದೇವರಕೊಂಡ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸಿನಿಮಾ ನೋಡಿ 'ಗರುಡ ಗಮನ ವೃಷಭ ವಾಹನ' ಚಿತ್ರದ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. "ಎಂತಹ ಅದ್ಭುತ ಚಿತ್ರ ಇದು, ಪ್ರಾರಂಭದಿಂದಲೇ ರಿವರ್ಟಿಂಗ್ ಮತ್ತು ಕಚ್ಚಾವಾಗಿದೆ. ಸಂಗೀತ, ನಟನೆ ಮತ್ತು ನಿರ್ದೇಶನ ಪರದೆಯಿಂದ ನನ್ನ ಕಣ್ಣುಗಳನ್ನು ತೆಗೆಯಲಾಗಲಿಲ್ಲ. ಅತ್ಯುತ್ತಮ ಚಲನಚಿತ್ರ ನಿರ್ಮಾಣ." ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಹಲವರು ರೀ ಟ್ವೀಟ್ ಮಾಡಿದ್ದು, ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಆನಂದ್ ದೇವರಕೊಂಡ 'ಗರುಡ ಗಮನ ವೃಷಭ ವಾಹನ' ಚಿತ್ರದ ಬಗ್ಗೆ ಮಾಡಿರುವ ಟ್ವೀಟ್ಗೆ ರಾಜ್ ಬಿ ಶೆಟ್ಟಿ ಕೂಡ ಪ್ರತಿಕ್ರೀಯಿಸಿದ್ದು, "'ಗರುಡ ಗಮನ ವೃಷಭ ವಾಹನ' ಸಿನಿಮಾ ನೋಡಲು ಸಮಯ ತೆಗೆದುಕೊಂಡಿದ್ದಕ್ಕಾಗಿ ಮತ್ತು ನಿಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು" ಎಂದಿದ್ದಾರೆ.
ಈ ಹಿಂದೆ ಕೂಡ 'ಗರುಡ ಗಮನ ವೃಷಭ ವಾಹನ' ಚಿತ್ರವನ್ನು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಮನಸೂರೆಗೊಳಿಸಿದೆ. ಇಡೀ ಸಿನಿಮಾಕ್ಕೆ ಫಿದಾ ಆಗಿರುವ ಆರ್ ಜಿವಿ ನಿರ್ದೇಶಕ ರಾಜ್ ಬಿ ಶೆಟ್ಟಿಗೆ ಶಹಬ್ಬಾಸ್ಗಿರಿ ಕೊಟ್ಟಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ, ಚಿತ್ರವನ್ನು, ರಾಜ್ ಬಿ ಶೆಟ್ಟಿ ಅಭಿನಯವನ್ನು ಒಂದಷ್ಟು ವಿಜ್ಞಾನ ಪದಗಳಲ್ಲಿ ಬಣ್ಣಿಸಿದ್ದಾರೆ. ಸಿನಿಮಾ ಮತ್ತೊಂದು ಲೆವೆಲ್ನಲ್ಲಿದೆ. ರಾಜ್ ಬಿ ಶೆಟ್ಟಿ ಪಾತ್ರಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಈ ಮೂಲಕ ಅವರು ಸಂಪೂರ್ಣ ರೂಪಾಂತರ ಹೊಂದಿದ್ದಾರೆ ಎಂದಿರುವ ಆರ್ಜಿವಿ, ಇಡೀ ಚಿತ್ರ 'ಅಲ್ಟ್ರಾಸ್ಕೋಪಿಕ್' ಎಂದು ಹಾಡಿ ಹೊಗಳಿದ್ದಾರೆ. ಬಾಲಿವುವುಡ್ನ ಅನುರಾಗ್ ಕಶ್ಯಪ್ ಕೂಡ ಗರುಡ ಗಮನ ವೃಷಭ ವಾಹನ ಸಿನಿಮಾವನ್ನು ಇಷ್ಟಪಟ್ಟಿದ್ದರು..

ಕಳೆದ ನ.19ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ವಿಭಿನ್ನ ಕಥಾಹಂದರ ಹೊಂದಿದ್ದ 'ಗರುಡ ಗಮನ ವೃಷಭ ವಾಹನ' ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. 'ಹರಿ' ಪಾತ್ರದಲ್ಲಿ ನಟ ರಿಷಬ್ ಶೆಟ್ಟಿ, 'ಶಿವ' ಎಂಬ ಪಾತ್ರದಲ್ಲಿ ರಾಜ್ ಪ್ರೇಕ್ಷಕರನ್ನು ಕರಾವಳಿಯ ರೌಡಿಸಂ ಲೋಕಕ್ಕೆ ಕರೆದೊಯ್ದಿದ್ದ ಈ ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ಓಟಿಟಿ ಯಲ್ಲಿ ಬಿಡುಗಡೆಯಾಗಿತ್ತು. ಜನವರಿ 13ರಂದು ಒಟಿಟಿಯಲ್ಲಿ 'ಗರುಡ ಗಮನ ವೃಷಭ ವಾಹನ' ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗಿ ಕೇವಲ ಮೂರು ದಿನಗಳಲ್ಲಿ ಬರೋಬ್ಬರಿ 8 ಕೋಟಿ ನಿಮಿಷ ವೀಕ್ಷಣೆ ಕಂಡಿತ್ತು.


Click it and Unblock the Notifications











