ತೆಲುಗು ಖ್ಯಾತ ನಟ ಗುಂಡು ಹನುಮಂತರಾವ್ ಇನ್ನಿಲ್ಲ
ತೆಲುಗಿನ ಖ್ಯಾತ ಹಾಸ್ಯ ನಟ ಗುಂಡು ಹನುಮಂತರಾವ್ (61) ಅನಾರೋಗ್ಯದ ಹಿನ್ನೆಲೆ ಸೋಮವಾರ ಬೆಳಿಗ್ಗೆ (ಫೆಬ್ರವರಿ 19) ನಿಧನರಾಗಿದ್ದಾರೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ನಟ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಅಗಲಿದ ಹಿರಿಯ ನಟನಿಗೆ ತೆಲುಗು ಚಿತ್ರರಂಗ ಸಂತಾಪ ಸೂಚಿಸಿದೆ. ಬಾಲಕೃಷ್ಣ, ಬ್ರಹ್ಮಾನಂದಂ, ಮೋಹನ್ ಬಾಬು ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಕ್ಯಾನ್ಸರ್ ಗೆ ತುತ್ತಾಗಿದ್ದ ಹನುಮಂತರಾವ್ ಅವರ ಚಿಕಿತ್ಸೆಗೆ ಮೆಗಾಸ್ಟರ್ ಚಿರಂಜೀವಿ 2 ಲಕ್ಷ ಸಹಾಯ ಮಾಡಿದ್ದರು. ತೆಲಾಂಗಣ ಸರ್ಕಾರ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 5 ಲಕ್ಷ ಮಂಜೂರು ಮಾಡಿತ್ತು.
ದಶಕಗಳ ಕಾಲ ತೆಲುಗು ಸಿನಿ ಪ್ರಪಂಚದಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಎಲ್ಲರನ್ನ ರಂಜಿಸಿದ್ದ ನಟ ಇಂದು ಬರಿ ನೆನಪು ಮಾತ್ರ. ಗುಂಡು ಹನುಮಂತರಾವ್ ಅವರು ಸುಮಾರು 400 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಮುಖವಾಗಿ 90ರ ದಶಕದಲ್ಲಿ ಹೆಚ್ಚು ಸಿನಿಮಾ ಮಾಡಿದ್ದರು.

'ಅಹಾ ನಾ ಪೆಳ್ಳಂಟ' ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶ ಮಾಡಿದ ಹನುಮಂತರಾವ್ ಪೆಳ್ಳಾನಿಕಿ ಪ್ರೇಮಲೇಖ ಪ್ರಿಯುರಾಲುಕಿ ಶುಭಲೇಖ, ರಾಜೇಂದ್ರುಡು ಗಜೇಂದ್ರುಡು, ಜೋಡಿ ನಂ. 1, ನೇನು ಸೀತಾ ಮಹಾಲಕ್ಷ್ಮಿ, ಅಪ್ಪಾರಾವ್ ಡ್ರೈವಿಂಗ್ ಸ್ಕೂಲ್, ಕಲ್ಯಾಣಂ, ಹೈ ಸ್ಕೂಲ್, ಕಲರ್ಸ್, ಪಂಚಮುಖಿ, ಶ್ರೀ ಸಾಯಿ ಸಂಕಲ್ಪಂ, ಮನೋಬಲಂ, ಸೇರಿದಂತೆ ಹಲವು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇವರ ಅತ್ಯುತ್ತಮ ಅಭಿನಯಕ್ಕೆ ಮೂರು ಬಾರಿ ಪ್ರತಿಷ್ಠಿತ ನಂದಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಅಕ್ಟೋಬರ್ 10, 1956 ರಲ್ಲಿ ವಿಜಯವಾಡದ ಮಧ್ಯಮ ಕುಟುಂಬದಲ್ಲಿ ಜನಿಸಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ರಂಗಭೂಮಿ ಪ್ರವೇಶ ಮಾಡಿದ್ದರು. ಮೊದಲ ನಾಟಕದಲ್ಲಿ ರಾವಣ ಬ್ರಹ್ಮನ ಪಾತ್ರ ನಿರ್ವಹಿಸಿದ್ದರು.


Click it and Unblock the Notifications











